Monday, June 2, 2025

ಗೌಡ ಸಂಸ್ಕೃತಿ- ಮದುವೆ(ಭೂಮಿ ಹೆಸೆ ಬರೆಯುವುದು)

ಭೂಮಿ ಹೆಸೆ ಬರೆಯುವುದು

5 ಜನ ಮುತ್ತೈದೆಯರು ಭೂಮಿ ಹಸೆ ಬರೆಯುತ್ತೇವೆಂದು ಹೇಳಿ ಅಕ್ಕಿಯಿಂದ ಗೆರೆಹಾಕಿ ಚೌಕಟ್ಟು ಮಾಡಿ ಅದನ್ನು ಒಟ್ಟು ಸೇರಿಸಬೇಕು. ಎಡದ ಪ್ರಥಮ ಚೌಕಟ್ಟಿನೊಳಗೆ (ಮದುಮಗ ಕುಳಿತುಕೊಳ್ಳುವ ಬಲಭಾಗ) ಸೂರ್ಯ ಚಿತ್ರ, ಕೊನೆಯ ಚೌಕಟ್ಟಿನೊಳಗೆ ಚಂದ್ರ ಚಿತ್ರ ಬರೆದು ಮಣೆ ಇಡಬೇಕು. ಆ ನಂತರ ವಧು/ವರರನ್ನು ಎಣ್ಣೆ ಅರಶಿನ ಮಾಡುವುದಕ್ಕೆ ಊರು ಗೌಡರು ಒಕ್ಕಣೆಯೊಂದಿಗೆ ಕುಳ್ಳಿರಿಸುವರು.


ಮಣೆಯ ಮೇಲೆ ಒಂದು ಹರಿವಾಣದಲ್ಲಿ ಬೆಳ್ತಿಗೆ ಅಕ್ಕಿ, 5 ವೀಳ್ಯದೆಲೆ, 1 ಅಡಿಕೆ ಇನ್ನೊಂದು ಹರಿವಾಣದಲ್ಲಿ ತೆಂಗಿನ ಹಾಲು ಮತ್ತು ತೆಂಗಿನ ಎಣ್ಣೆ ಮಿಶ್ರಣದಲ್ಲಿ ಅರಿಶಿನ ಹಾಗೂ ಗರಿಕೆ (5 ಅಥವಾ 10 ತುದಿ) ತುದಿ ಇರಬೇಕು. ಮೇಲ್ಕಟ್ಟಿನಡಿಯಲ್ಲಿ ಪೂರ್ವಾಭಿಮುಖವಾಗಿ ತೂಗುದೀಪ ಉರಿಸಿ ಇಟ್ಟಿರಬೇಕು.

ವಧು/ವರರ ಸ್ನಾನದ ನಂತರ ಬಿಳಿ ವಸ್ತ್ರ ಧರಿಸಿ ದೇವರ ಕೋಣೆಗೆ ಬರುವರು. ಹಿರಿಯರು ಹಚ್ಚಿದ ದೀಪದ ಎದುರು ಮನೆಯವರು ಬಂಧುಗಳೆಲ್ಲ ಸೇರಿ ಪ್ರಾರ್ಥಿಸಿಕೊಳ್ಳುವರು. ವಧು/ವರರು ದೀಪಕ್ಕೆ ಅಕ್ಕಿ ಕಾಳು ಹಾಕಿ ನಮಸ್ಕರಿಸಿ ಹಿರಿಯರ ಪಾದಗಳಿಗೆರಗಿ ಆಶೀರ್ವಾದ ಪಡೆಯುವರು. ನಂತರ ಸೋದರ ಮಾವನಿಗೆ ತಂಬಿಗೆ ನೀರು ಕೊಟ್ಟು ಮುಹೂರ್ತದ ಮಣಿ ಕಟ್ಟಲು ಕೇಳಿಕೊಳ್ಳುವರು.

ತದನಂತರ ಒಳಗಿನಿಂದ ತಂದೆಯು ವಧು/ವರನನ್ನು ಮೇಲ್ಕಟ್ಟಿನಡಿಗೆ ಕರೆದುಕೊಂಡು ಬರುವರು. ಒಕ್ಕಣೆಯೊಂದಿಗೆ ಸೋದರಮಾವ ಅಥವಾ ಊರು ಗೌಡರು ಮುಹೂರ್ತದ ಮಣಿಯನ್ನು ಕಟ್ಟಬೇಕು. ನಂತರ ಒಕ್ಕಣೆಯೊಂದಿಗೆ ಊರು ಗೌಡರು ಎಣ್ಣೆ ಅರಿಶಿನಕ್ಕೆ ಮಣೆಯ ಮೇಲೆ ಪೂರ್ವಾಭಿಮುಖವಾಗಿ ಕುಳ್ಳಿರಿಸಿ ಹರಿವಾಣದಲ್ಲಿಟ್ಟಂತಹ 5 ವೀಳ್ಯದೆಲೆ 1 ಅಡಿಕೆಯನ್ನು ವಧು/ವರನ ಕೈಯಲ್ಲಿ ಇರಿಸುವರು. ಕನಿಷ್ಠ 5 ಜನ ಮುತ್ತೈದೆಯರು ಒಬ್ಬೊಬ್ಬರಾಗಿ ಬಂದು ದೇವರ ದೀಪಕ್ಕೆ ಅಕ್ಕಿ ಕಾಳು ಹಾಕಿ ಕೈಮುಗಿದು ವಧು/ವರನಿಗೆ ಅಕ್ಷತೆ ಹಾಕಿ ಅವರ ಕೈಯಲ್ಲಿದ್ದ ವೀಳ್ಯವನ್ನು ಪಡೆದು ಅಕ್ಕಿ ಹರಿವಾಣದಲ್ಲಿಟ್ಟು ನಂತರ ಅರಿಶಿಣವನ್ನು ಪಾದದಿಂದ ಮುಖದವರೆಗೆ ಗರಿಕೆ ತುದಿಯಿಂದ 3 ಸಲ ಸವರಿ ನಂತರ ಎರಡು ಅಂಗೈಗಳಿಂದ ಅರಿಶಿನವನ್ನು ಸಂಪೂರ್ಣ ಮೈಗೆ ಹಚ್ಚಬೇಕು. ಹರಿವಾಣದಲ್ಲಿರುವ 5 ವೀಳ್ಯದೆಲೆ 1 ಅಡಿಕೆಯನ್ನು ಮತ್ತೆ ಕೈಯಲ್ಲಿಟ್ಟು ಪರಸ್ಪರ ನಮಸ್ಕರಿಸಿಕೊಳ್ಳುವರು. ಇದೇ ಕ್ರಮವನ್ನು ಉಳಿದ ಮುತ್ತೈದೆಯರು ಅನುಸರಿಸುವರು. ಈ ಸಂಧರ್ಭದಲ್ಲಿ ಮದುಮಗನಿಗೆ ಕಾಲುಂಗುರವಿಡುವ ಕ್ರಮವಿದೆ. ಸಂಪ್ರದಾಯದಂತೆ ಕಾಲುಂಗುರವನ್ನು ಕ್ಷೌರಿಕ ಇಡಬೇಕು. (ಈಗಿನ ಕಾಲಘಟ್ಟದಲ್ಲಿ ಅದು ಆಗದೇ ಇರುವ ಕಾರಣ ಅಡೋಳಿ ಕಾಲುಂಗುರ ಇಡಬಹುದು.) ಅರಿಶಿನೆಣ್ಣೆ ಸಂಪೂರ್ಣ ಆದ ನಂತರ ಊರುಗೌಡರು ಕೈಯಲ್ಲಿದ್ದ ವೀಳ್ಯವನ್ನು ಹರಿವಾಣದಲ್ಲಿರಿಸಿ ಒಕ್ಕಣೆಯೊಂದಿಗೆ. ಅರಿಶಿನೆಣ್ಣೆಯಿಂದ ಎಬ್ಬಿಸುವರು. ಈಗ ಒಂದು ಸೂಡಿ ವೀಳ್ಯದೆಲೆ 5 ಅಡಿಕೆ ಹರಿವಾಣದಲ್ಲಿರಿಸಿ ಮೊದಲೇ ನಿರ್ಧರಿಸಿದ ಅಡೋಳಿ, ಕಂಚಿಮೆ, ಸೋಬಾನೆಯವರಿಗೆ ವೀಳ್ಯ ಕೊಡುವುದು. ನಂತರ ಅಡೋಳಿ ಸ್ನಾನಕ್ಕೆ ಕರೆದುಕೊಂಡು ಹೋಗುವರು. ಸೀಗೆ, ಮೈಸೂರು ಬಾಳೆಹಣ್ಣು ಹಚ್ಚಿ ವಧುವಿನ ಅತ್ತಿಗೆ ನಾದಿನಿಯರು ಅಥವಾ ಹುಡುಗನ ಭಾವ ಮೈದುನರು ಸ್ನಾನ ಮಾಡಿಸುವರು.

Thursday, April 24, 2025

ಗೌಡ ಸಂಸ್ಕೃತಿ- ಮದುವೆ( ಎಣ್ಣೆ ಅರಶಿನ ಮತ್ತು ಮದರಂಗಿ ಶಾಸ್ತ್ರ (ಮೇಲ್ಕಟ್ಟಿನ ಅಡಿಯಲ್ಲಿ)

 ಎಣ್ಣೆ ಅರಶಿನ ಮತ್ತು ಮದರಂಗಿ ಶಾಸ್ತ್ರ (ಮೇಲ್ಕಟ್ಟಿನ ಅಡಿಯಲ್ಲಿ) :


ಪರಿಕರಗಳು : ಕಾಲುದೀಪ, ತೂಗುದೀಪ, ಹರಿವಾಣ 2. ಬೆಳ್ಳಿಗೆ ಅಕ್ಕಿ. ವೀಳ್ಯದೆಲೆ 5 ಅಡಿಕೆ 1. ತೆಂಗಿನ ಕಾಯಿಯ ಹಾಲು, ಎಣ್ಣೆ, ಅರಶಿನ, ಗರಿಕೆ.

ಊರುಗೌಡರು ಬಂದಾಗ ಮನೆಯ ಯಜಮಾನ ತಂಬಿಗೆ ನೀರು ಕೊಟ್ಟು ಕುಳ್ಳಿರಿ ಉಪಚರಿಸಿ ನಂತರ ಸೂಡಿ ಎಲೆ, 5 ಅಡಿಕೆಯೊಂದಿಗೆ ಕಾರಕ್ರಮ ನಡೆಸಿಕೊಡು ಕೇಳಿಕೊಳ್ಳಬೇಕು. (ವಧುವಿನ ಮನೆಯಲ್ಲಿ ವರನ ಮನೆಯ ಕೊಡಿಯಾಳು ಬಂದುದನ ಖಾತರಿಪಡಿಸಿಕೊಳ್ಳುತ್ತಾರೆ.)

ವಧು/ವರರು ಭೋಜನ ಸ್ವೀಕರಿಸಿದ ನಂತರ ಮದರಂಗಿ ಶಾಸ್ತ್ರ ಮಾಡಬೇಕು. ಆಮೇಲೆ ಫಲಾಹಾರ ಮಾತ್ರ ಮಾಡಬಹುದು. (ಶೇಷೋಪಚಾರ) ಪಟ್ಟ ಭಾಸಿಂಗ ತೆಗೆದ ಮೇಲೆನೇ ಭೋಜನ ಮಾಡಬೇಕು.

ಗೌಡ ಸಂಸ್ಕೃತಿ- ಮದುವೆ( ಗುರುಕಾರಣರಿಗೆ ಬಡಿಸುವುದು ಮತ್ತು ಮದುಮಗನ ಮುಖ ಕ್ಷೌರ)

 ಗುರುಕಾರಣರಿಗೆ ಬಡಿಸುವುದು : ವೀಳ್ಯ ಶಾಸ್ತ್ರದ ನಂತರ ನಿಶ್ಚಯಿಸಿದ ದಿನದಂದು ವಧು/ವರರ ತಳಮನೆಯಲ್ಲಿ ಗುರು ಕಾರಣರಿಗೆ ಬಡಿಸುವ ಕ್ರಮವಿದೆ.


ಮದುಮಗನ ಮುಖ ಕ್ಷೌರ : ಮದರಂಗಿ ಶಾಸ್ತ್ರದ ಮೊದಲು ಕ್ಷೌರ ಮಾಡಿಸುವುದು ಕ್ರಮ. ಕ್ಷೌರಿಕನಿಗೆ ಹೇಳಿಕೆ ಕೊಟ್ಟು ಮದರಂಗಿ ಶಾಸ್ತ್ರ ದಿನ ಬರಲು ಹೇಳುವುದು ಪದ್ಧತಿ. ಮುಖ ಕ್ಷೌರ ಮಾಡಿದ ಮೇಲೆ ಕ್ಷೌರಿಕನಿಗೆ ಕೊಡುವ ಮರ್ಯಾದೆ ಕೊಟ್ಟು ಕಳುಹಿಸುವುದು ಪದ್ಧತಿ.

Tuesday, April 22, 2025

ಗೌಡ ಸಂಸ್ಕೃತಿ- ಮದುವೆ( ಮದುಮಗಳಿಗೆ ಬಳೆ ತೊಡಿಸುವ ಶಾಸ್ತ್ರ )

 ಮದುಮಗಳಿಗೆ ಬಳೆ ತೊಡಿಸುವ ಶಾಸ್ತ್ರ (ಮದರಂಗಿ ಶಾಸ್ತ್ರದ ಮೊದಲ ದಿನ) : ವಧುವಿನ

ಮನೆಯಲ್ಲಿ ಬಳೆ ತೊಡಿಸುವ ಪದ್ಧತಿಯಿರುತ್ತದೆ. ಈ ಮೊದಲೇ ಹೇಳಿಕೆ ಕೊಟ್ಟಂತೆ ಬಂದಿರುವ ಬಳೆಗಾರ್ತಿ ಚಪ್ಪರದಡಿಯಲ್ಲಿ ಹಸಿರು ಮತ್ತು ಕೆಂಪು ಬಳೆಗಳನ್ನು ತಂದು ಮದುಮಗಳಿಗೆ ತೊಡಿಸುವುದು. ಸೇರಿದ ಇಷ್ಟಪಟ್ಟ ಎಲ್ಲಾ ಹೆಂಗಳೆಯರಿಗೂ ಬಳೆ ತೊಡಿಸುವುದು ಪದ್ಧತಿ.

ಗೌಡ ಸಂಸ್ಕೃತಿ- ಮದುವೆ(ಧಾರಾ ಮಂಟಪ )

 ಧಾರಾ ಮಂಟಪ : ಮನೆಯ ಮುಂಭಾಗದಲ್ಲಿ ಪೂರ್ವಾಭಿಮುಖವಾಗಿ ನಾಲ್ಕು ಅಡಿಕೆ ಮರದ ಕಂಬಗಳನ್ನು ಉಪಯೋಗಿಸಿ ಧಾರಾ ಮಂಟಪ ರಚಿಸುವುದು. ಮಡಿವಾಳ ಮಣೆಯಿಟ್ಟ ದೀಪ ಹಚ್ಚಿ  ಬೆಂಡು ಕುಕ್ಕೆಯಲ್ಲಿ 1 ಸೇರು ಅಕ್ಕಿ, 1 ತೆಂಗಿನ ಕಾಯಿ, 5 ವೀಳ್ಯದೆಲೆ, ಅಡಿಕೆ 1 ಪಾವಲಿ ಇಟ್ಟು ಕೈ ಮುಗಿದು ಮೇಲ್ಕಟ್ಟು ಕಟ್ಟುತ್ತಾನೆ. ಮೇಲ್ಕಟ್ಟು ಕಟ್ಟಿದ ಮಧ್ಯಭಾಗಕ್ಕೆ 5 ವೀಳ್ಯದೆಲೆ, 1 ಅಡಿಕೆಯಲ್ಲಿ ನಿಯಮನುಸಾರವಾಗಿ ಒಗ್ಗಿ ಹಾಕಿದ ಜೋಡು ತೆಂಗಿನ ಕಾಯಿಯೊಂದಿಗೆ ಪೋಣಿಸಿ ಕಟ್ಟುವನು. ನಾಲ್ಕು ಕಂಬಗಳಿಗೆ ಬಿಳಿ ವಸ್ತ್ರವನ್ನು ಕಟ್ಟುವನು (ಎಣ್ಣೆ ಅರಿಶಿನ ಮಾಡಿದ ಕೈ ಉಜ್ಜಲು)

ಗೌಡ ಸಂಸ್ಕೃತಿ- ಮದುವೆ(ಚಪ್ಪರ ಹಾಕುವ ಕ್ರಮ)

 ಚಪ್ಪರ ಹಾಕುವ ಕ್ರಮ : ಮದುವೆಗೆ 4 ಅಥವಾ 5 ದಿನಗಳಿಗೆ ಮುಂಚಿತವಾಗಿ ಕುಟುಂಬಸ್ಥರಿಗೆ, ನೆರೆಕರೆಯವರಿಗೆ ಹೇಳಿಕೆ ಕೊಟ್ಟು ಚಪ್ಪರ ಹಾಕಲು ಕೇಳಿಕೊಳ್ಳುವುದು. ಊರುಗೌಡರ ನೇತೃತ್ವದಲ್ಲಿ ಮನೆಯ ಮುಂಭಾಗದಲ್ಲಿ ಚಪ್ಪರ ಹಾಕುವುದು. ಚಪ್ಪರದ ಕಂಬಗಳು ಸಮ ಸಂಖ್ಯೆಯಲ್ಲಿರಬೇಕು. ಮದುವೆಯ ಹಿಂದಿನ ದಿನ, ಮದರಂಗಿಯಂದು ವಿಶ್ವಕರ್ಮರು ನಿರ್ಮಿಸಿಕೊಟ್ಟ ಹಾಲೆಮರದ ಪಾದುಕೆಗಳನ್ನು ಪ್ರವೇಶ ದ್ವಾರದ ಅಡಿಯಲ್ಲಿ ನೆಲಕ್ಕೆ ಮರದ ಮೊಳೆಯಿಂದ ಅಳವಡಿಸುವುದು. ಚಪ್ಪರದ ಮುಖ ತೋರಣವನ್ನು ವಿಶ್ವಕರ್ಮರಿಂದ ಮಾಡಿಸಬೇಕು. ಪೂರ್ವ ಈಶಾನ್ಯದಲ್ಲಿ ದ್ವಾರ ನಿರ್ಮಿಸಿ, ಗೊನೆ ಹಾಕಿದ 2 ಕದಳಿ ಬಾಳೆ ಕಟ್ಟಿ ತಳಿರು ತೋರಣಗಳಿಂದ ಶೃಂಗರಿಸಬೇಕು. (ಚಪ್ಪರದ ನಾಲ್ಕು ಮೂಲೆಗಳಿಗೆ ಊರುಗೌಡರು ನಾನೇಲು ಸೊಪ್ಪು ಸುತ್ತಿ ಮನೆಯವರಿಗೆ ಚಪ್ಪರವನ್ನು ಒಪ್ಪಿಸುವುದು ಕ್ರಮ)

ಗೌಡ ಸಂಸ್ಕೃತಿ- ಮದುವೆ(ಗುರು ವೀಳ್ಯ ,ಸಲಾವಳಿ ವೀಳ್ಯ ಮತ್ತಿತರ ವೀಳ್ಯಗಳು)

 3) ಗುರು ವೀಳ್ಯ: 7 ಕವಳೆ ವೀಳ್ಯದೆಲೆ, 7 ಅಡಿಕೆ, ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ವೀಳ್ಯ ಬದಲಾಯಿಸಿಕೊಳ್ಳಬೇಕು. (ಒಕ್ಕಣೆಯೊಂದಿಗೆ ಹೇಳಿ ವೀಳ್ಯ ಬದಲಾಯಿಸಿಕೊಳ್ಳಬೇಕು).


4) ಸಲಾವಳಿ ವೀಳ್ಯ : 9 ಕವಳೆ ವೀಳ್ಯದೆಲೆ, 9 ಅಡಿಕೆ ಹಾಗೂ ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ಒಕ್ಕಣೆಯೊಂದಿಗೆ ವೀಳ್ಯ ಬದಲಾಯಿಸಿಕೊಳ್ಳಬೇಕು. (ಸಲಾವಳಿ ಎಂದರೆ ವಧು ವರರ ಜಾತಕಾದಿಗಳು, ಗೋತ್ರಗಳು, ನಕ್ಷತ್ರಗಳು, ದಶಕೂಟಗಳು, ಸಂಖ್ಯಾಶಾಸ್ತ್ರ ಮುಂತಾದುವುಗಳು ಒಳಗೊಂಡಿರುತ್ತವೆ.)

5) ಮಾತು ಕರಾರು ವೀಳ್ಯ : 9 ಕವಳೆ ವೀಳ್ಯದೆಲೆ, 9 ಅಡಿಕೆ ಹಾಗೂ ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ಒಕ್ಕಣೆಯೊಂದಿಗೆ ವೀಳ್ಯ ಬದಲಾಯಿಸಿಕೊಳ್ಳಬೇಕು. (ಕರಾರು ಪತ್ರ ಮಾಡಿಕೊಳ್ಳಬೇಕು. )

6) ವೀಳ್ಯ ಶಾಸ್ತ್ರದ ವೀಳ್ಯ: 9 ಅಡಿಕೆ 9ಕವಳೆ ವೀಳ್ಯದೆಲೆ ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ಒಕ್ಕಣೆಯೊಂದಿಗೆ ವೀಳ್ಯ ಬದಲಾಯಿಸಿಕೊಳ್ಳಬೇಕು. 5 ವೀಳ್ಯದೆಲೆ 1 ಅಡಿಕೆ ವರನಿಗಾಗಿ, ವರನ ಮನೆಯವರಿಗೂ, 5 ವೀಳ್ಯದೆಲೆ 1 ಅಡಿಕೆ ವಧುವಿಗಾಗಿ ವಧುವಿನ ಕಡೆಯವರಿಗೂ ಹರಿವಾಣದಲ್ಲಿಟ್ಟು ಕೊಡಬೇಕು.

7) ಲಗ್ನ ವೀಳ್ಯ : 9 ಕವಳೆ ವೀಳ್ಯದೆಲೆ, 9 ಅಡಿಕೆಯೊಂದಿಗೆ ಮಾತು ಕರಾರು ಪತ್ರ ಇಟ್ಟು ಒಕ್ಕಣೆಯೊಂದಿಗೆ ಮೇಲಿನಂತೆ ವೀಳ್ಯ ಬದಲಿಸಿಕೊಳ್ಳಬೇಕು.

8,9) ತಾಯಿ ತಂದೆ ವೀಳ್ಯ (2 ಹರಿವಾಣಗಳಿರಬೇಕು) : 9 ಕವಳೆ ವೀಳ್ಯದೆಲೆ, 9 ಅಡಿಕೆ ಹಾಗೂ ಅಡಿಕೆ ಹೋಳು ಇಟ್ಟಿರಬೇಕು. ಉಭಯ ಕಡೆಯಿಂದಲೂ ಊರುಗೌಡರ ಜೊತೆ ಒಬ್ಬರು ಎದ್ದು ಒಕ್ಕಣೆಯೊಂದಿಗೆ ವೀಳ್ಯ ಕೊಡುವುದು ಹಾಗೂ ತೆಗೆದುಕೊಳ್ಳುವುದು ಮಾಡಬೇಕು. ತಂದೆಯ ವೀಳ್ಯದಿಂದ ತಂದೆಯ ಕುಟುಂಬದವರಿಗೂ, ತಾಯಿ ವೀಳ್ಯದಿಂದ ತಾಯಿ ಕುಟುಂಬದವರಿಗೂ ಹಂಚಬೇಕು. ಹಿಂದಿನ ಕಾಲದಲ್ಲಿ ಉಭಯ ಕಡೆಯ ಕುಟುಂಬಸ್ಥರಿಗೆ ಹೀಗೆ ವೀಳ್ಯ ಕೊಟ್ಟು ಆಹ್ವಾನಿಸುತ್ತಿದ್ದರು.

ಚೌಕಿ ವೀಳ್ಯ : ಚೌಕಿ ವೀಳ್ಯವನ್ನು ಎತ್ತಿ ವಧುವಿನ ಕಡೆಯ ಊರುಗೌಡರಿಗೆ ಕಾರ್ಯಕ್ರಮ
ಚೆನ್ನಾಗಿ ಸುಧಾರಿಸಿಕೊಟ್ಟಿದ್ದೀರಿ ಎಂದು ಹೇಳಿ ವರನ ಕಡೆಯ ಊರುಗೌಡರು ನೀಡುವರು. ಹರಿವಾಣವನ್ನು ಆರಂಭದಲ್ಲಿ ಚೌಕಿ ವೀಳ್ಯದಂತೆ ಪ್ರದಕ್ಷಿಣೆ ತಂದು (ಸಾಂಕೇತಿಕವಾಗಿ ಚೌಕಿಯಲ್ಲಿರುವವರು 1 ವೀಳ್ಯದೆಲೆ, 1 ಅಡಿಕೆ ಹೋಳನ್ನು ತೆಗೆದುಕೊಳ್ಳುವರು) ವಧುವಿನ ಕಡೆಯ ಊರು ಗೌಡರು ಮಣೆಯ ಮೇಲಿಡಬೇಕು. (ಈಗ ಊರುಗೌಡರು ಸ್ಥಳ ಬದಲಾವಣೆ ಮಾಡಿಕೊಳ್ಳುವರು). ವೀಳ್ಯ ತಿನ್ನುತ್ತಾ ಮದುವೆಯ ಮುಂದಿನ ವ್ಯವಸ್ಥೆಯ ಬಗ್ಗೆ ಮಾತುಕತೆಯಾಗುತ್ತದೆ. ಮಾತುಕತೆ ಮುಗಿದ ನಂತರ ಕೈಮುಗಿದು ಎಲ್ಲರೂ ಚೌಕಿಯಿಂದ ಏಳುತ್ತಾರೆ. ಭೋಜನ ವ್ಯವಸ್ಥೆಯಾದ ನಂತರ ಹುಡುಗಿ ಮನೆಯವರ ಒಪ್ಪಿಗೆ ಪಡೆದು ವರನ ಮನೆಯವರು ತೆರಳುವರು.