Thursday, May 9, 2024

ಗೌಡ ಸಂಸ್ಕೃತಿ- ಮದುವೆ

ಗೌಡ ಸಮುದಾಯದಲ್ಲಿ ಮದುವೆಯೆನ್ನುವುದು ಬಹುಮುಖ್ಯ ಘಟ್ಟ. ಕುಟುಂಬ/ವಂಶವಾಹಿನಿ ಬೆಳೆದು ಬರಲು 'ಮದುವೆ' ಎನ್ನುವ ನಿಯೋಜಿತ ವ್ಯವಸ್ಥೆ ನಡೆಯಲೇ ಬೇಕು ಎನ್ನುವ ಕಟ್ಟಳೆ ನಮ್ಮ ಹಿರಿಯರಿಂದ ನಿರ್ಮಿತವಾದುದಾಗಿದೆ. ಈ ಮದುವೆ ಎನ್ನುವ ವ್ಯವಸ್ಥೆ ಗೌಡರಲ್ಲಿ ಬಳಿ ನೋಡುವಲ್ಲಿಂದ ಆರಂಭವಾಗುತ್ತದೆ. ಮದುವೆಯಲ್ಲಿ ಹುಡುಗಿ ನೋಡುವ ಶಾಸ್ತ್ರ, ವೀಳ್ಯ ಶಾಸ್ತ್ರ, ಮದುವೆ ದಿನದ ಕ್ರಮಗಳಲ್ಲಿ ಹಾಗೆಯೇ ನಂತರದ ಕ್ರಮಗಳಲ್ಲಿ ಹಲವು ಕಟ್ಟಳೆಗಳಿರುತ್ತವೆ. ಗೌಡರಲ್ಲಿ 'ಬಳಿ' ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. 'ಬಳಿ' ಗೌಡರಲ್ಲಿ ಸ್ವಕುಟುಂಬಿಕ ನೆಲೆಯನ್ನು ಪ್ರತಿನಿಧಿಸುತ್ತದೆಯಾದ್ದರಿಂದ ಒಂದೇ 'ಬಳಿ'ಯಲ್ಲಿ 'ಮದುವೆ' ನಡೆಯಬಾರದೆನ್ನುವ ನಿಷೇಧವನ್ನು ಇಟ್ಟುಕೊಳ್ಳಲಾಗಿದೆ. ರಕ್ತ ಸಂಬಂಧಿಗಳಲ್ಲಿ ಮದುವೆ ನಡೆಯುವುದು ಯಾವ ದೃಷ್ಟಿಯಿಂದಲೂ ಯೋಗ್ಯವಲ್ಲ ಎನ್ನುವುದನ್ನು ನಮ್ಮ ಹಿರಿಯರು ಕಂಡುಕೊಂಡಿದ್ದಾರೆನ್ನುವುದನ್ನು ಇದು ಸೂಚಿಸುತ್ತದೆ. ಹೀಗಿದ್ದೂ ತಂದೆಯ ಸಹೋದರಿ ಅಥವಾ ತಾಯಿಯ ಸಹೋದರರ ಕಡೆ 'ಬಳಿ'ಗಳಲ್ಲಿ ಮದುವೆ ನಡೆಯಬಹುದು. ಗೌಡರಲ್ಲಿ ಇರುವ ವಿಭಿನ್ನ 'ಬಳಿ'ಗಳಲ್ಲಿ 'ಮದುವೆ' ನಡೆಯುವುದು ಸಂಪ್ರದಾಯ. ಜಾತಿ ಪದ್ಧತಿ ಪ್ರಕಾರ ಅಲ್ಲದೇ ವೈದಿಕ ಕ್ರಮಗಳಲ್ಲಿ ಕೂಡಾ ಮದುವೆ ನಡೆಸಬಹುದು.

ಹುಡುಗಿ ನೋಡುವ ಕ್ರಮ : ಹುಡುಗ/ಹುಡುಗಿ ಪ್ರಾಪ್ತ ವಯಸ್ಸಿಗೆ ಬಂದಾಗ ಹಿರಿಯರು ಅವರಿಗೆ ಮದುವೆ ಮಾಡಲು ಆಲೋಚಿಸುತ್ತಾರೆ. ನೆಂಟರಿಷ್ಟರಲ್ಲಿ ಗಂಡು-ಹೆಣ್ಣನ್ನು ಹುಡುಕಲು ಹಿರಿಯರು ಸೂಚಿಸುತ್ತಾರೆ. ಶಕ್ತ ಮನೆತನದ ಸೂಕ್ತ ಬಳಿಯ ಕನ್ಯ ಗೊತ್ತಾದ ನಂತರ ಹುಡುಗಿ ನೋಡುವ ಶಾಸ್ತ್ರಕ್ಕೆ ದಿನ ನಿಗದಿ ಮಾಡುತ್ತಾರೆ.

ಹಿಂದಿನ ಕಾಲದಲ್ಲಿ ಹುಡುಗಿ ನೋಡಲು ಹುಡುಗ ಹೋಗುವ ಕ್ರಮವಿರಲಿಲ್ಲ. ಇಂದು ಹುಡುಗನೇ ನೋಡಿದ ಹುಡುಗಿಯನ್ನು ನೋಡಲು ಹಿರಿಯರು ಹೋಗುವುದು ಬಂದುಬಿಟ್ಟಿದೆ. ಮೊದಲಿನಿಂದಲೂ ಹುಡುಗ ಹುಡುಗಿಯರನ್ನು ನಿಶ್ಚಯಿಸುವಲ್ಲಿ ಉಭಯ ಕಡೆಯ ಪರಿಚಯಸ್ಥರೊಬ್ಬರು ಮಧ್ಯವರ್ತಿಯಾಗಿ ಸಹಕರಿಸುತ್ತಿದ್ದರು.

ಹುಡುಗಿ ನೋಡುವ ಶಾಸ್ತ್ರ ನಿಗದಿಯಾದ ಶುಭದಿನ ಹೇಳಿಕೆಯಾದ ಪ್ರಕಾರ ಕುಟುಂಬದ ಮತ್ತು ಬಂಧುಗಳಲ್ಲಿ 5ರಿಂದ 7ಜನ ಹಿರಿಯರು ಪೂರ್ವಾಹ್ನದ ಹೊತ್ತಿಗೆ ಹುಡುಗಿ ಮನೆ ತಲುಪಲೇಬೇಕೆನ್ನುವ ಹಿನ್ನೆಲೆಯಲ್ಲಿ ತಲುಪುತ್ತಾರೆ. (ಅಪರಾಹ್ನ ಹುಡುಗಿ ನೋಡುವ ಶಾಸ್ತ್ರ ಮಾಡಬಾರದೆನ್ನುವ ನಂಬಿಕೆ ಇದೆ.) ಹುಡುಗಿ ನೋಡುವ ಶಾಸ್ತ್ರದ ದಿನ ಹುಡುಗಿ ಮನೆಯಲ್ಲೂ ಕುಟುಂಬದ ಹಿರಿಯ ಪ್ರಮುಖರು ಸೇರುತ್ತಾರೆ. ಹುಡುಗನ ಕಡೆಯವರು ಹುಡುಗಿ ಮನೆಗೆ ಬಂದಾಗ ಕೈಕಾಲು ತೊಳೆಯಲು ನೀರು ಕೊಡುವುದು ಪದ್ಧತಿ. ಬಂದ ನೆಂಟರನ್ನು ಮನೆ ಚಾವಡಿಯಲ್ಲಿ ಕುಳ್ಳಿರಿಸಿ ಬೆಲ್ಲ-ನೀರು ಕೊಟ್ಟು ಸತ್ಕರಿಸಬೇಕು. ಮುತ್ತೈದೆಯರಿಗೆ ನೆತ್ತಿಗೆಣ್ಣೆ, ಹಣೆಗೆ ಕುಂಕುಮ, ಮುಡಿಗೆ ಹೂವು ಕೊಡಬೇಕು. ಬಂದ ಹಿರಿಯರೊಬ್ಬರಿಗೆ ಹರಿವಾಣದಲ್ಲಿ ಕವಳೆ ವೀಳ್ಯದೊಂದಿಗೆ ಅಡಿಕೆಗಳನ್ನಿಟ್ಟು ಗೌರವಿಸುವುದು ನಡೆದು ಬಂದ ಸಂಗತಿ. ಉಪಾಹಾರವನ್ನಿತ್ತು ಬಂದ ಹುಡುಗನ ಕಡೆಯವರಿಗೆ ಸತ್ಕರಿಸುವುದು

ಪರಸ್ಪರ ಕುಶಲೋಪರಿ ಬಳಿಕ ಹುಡುಗಿ ನೋಡುವ ಕ್ರಮ ಜರಗುತ್ತದೆ. ಹುಡುಗನ ಕಡೆಯಿಂದ ಬಂದ ಸ್ತ್ರೀಯರು ಮನೆಯೊಳಗೆ ಹೋಗಿ ಹುಡುಗಿಯನ್ನು ನೋಡುತ್ತಾರೆ. ಹುಡುಗಿಯನ್ನು ಮಾತಾಡಿಸುತ್ತಾರೆ. ಇದರ ಹೊರತಾಗಿಯೂ ಬಂದ ನೆಂಟರಿಗೆ ಹುಡುಗಿಯೇ ಬಾಯಾರಿಕೆ ಕೊಡುವ ನೆಪದಲ್ಲಿ ಹುಡುಗಿಯನ್ನು ನೋಡುವ ಶಾಸ್ತ್ರ ಮಾಡುವುದುಂಟು. ಪುರುಷರು ಹುಡುಗಿಯನ್ನು ನೋಡಬೇಕೆನ್ನುವ ಹಿನ್ನೆಲೆಯಲ್ಲಿ ಜೊತೆಗೆ ಹುಡುಗಿಯಲ್ಲಿ ಏನಾದರೂ ಊನ ಇದೆಯಾ ಎಂದು ಪರೀಕ್ಷಿಸುವ ದ್ರಷ್ಟಿಯಲ್ಲಿ ಹುಡುಗಿಯ ಕೈಯಲ್ಲಿ ಕೊಡಪಾನ ಕೊಟ್ಟು ನೀರು ತರ ಹೇಳುವುದೂ ಇದೆ. ಹಾಗೆಯೇ ಮನೆ ನೋಡುವೆ ನೆಪದಲ್ಲಿ ಒಳ ಹೋಗಿ ಹುಡುಗಿಯನ್ನು ಮಾತಾಡಿಸುತ್ತಾರೆ.

ಹುಡುಗಿಯ ರೂಪ ಗುಣ ನಡತೆ ಒಪ್ಪಿಗೆಯಾದರೆ, ಸತ್ಕಾರ ಸ್ವೀಕರಿಸಿ ಹೊರಟು ಬರುವ ಹುಡುಗನ ಕಡೆಯವರು ಇನ್ನು ಜಾತಕ ಕೂಡಿ ಬಂದರೆ ಹೇಳಿ ಕಳುಹಿಸುತ್ತೇವೆಂದು ಹೇಳುವುದು ವಾಡಿಕೆ ಅಥವಾ ಉಭಯಸ್ಥರು ಪಕ್ಕದ ಜೋಯಿಸರಲ್ಲಿ ಹೋಗಿ ಹುಡುಗ- ಹುಡುಗಿಯ ಜಾತಕ ತೋರಿಸುವುದುಂಟು. ಜಾತಕ ಕೂಡಿ ಬಾರದೇ ಹೋದರೆ ನೆಂಟಸ್ಥಿಗೆಮುಂದುವರಿಯುವುದಿಲ್ಲ. ಹುಡುಗಿ ನೋಡುವ ಕ್ರಮದಲ್ಲಿ ಜಾತಕ ಇಲ್ಲದಿದ್ದರೆ ಇತ್ತಂಡಗಳು ದೇವಸ್ಥಾನದಲ್ಲಿ ಅರ್ಚಕರ ಮೂಲಕ ತುಂಬೆ ಹೂವಿನಲ್ಲಿ ಪುಷ್ಪ ಪರೀಕ್ಷೆ ನಡೆಸುತ್ತಾರೆ. ಹುಡುಗನ ಕಡೆಯವರಿಗೆ ಸಂಬಂಧ ಕೂಡಿ ಬಂದರೆ ಹುಡುಗಿ ಮನೆಯವರನ್ನು ಆಹ್ವಾನಿಸುತ್ತಾರೆ. ನಿಗದಿತ ದಿನ ಹುಡುಗನ ಮನೆಗೆ ಬರುವ ಹುಡುಗಿ ಕಡೆಯವರಿಗೆ ಸಮ್ಮಾನದೂಟ ಮಾಡಿಸಿ ಕಳುಹಿಸಿ ಕೊಡಲಾಗುತ್ತದೆ. ವೀಳ್ಯಶಾಸ್ತ್ರ ನಡೆಸುವ ದಿನವನ್ನು ಪರಸ್ಪರರು ಸಂವಾದಿಸಿ ಈ ದಿನ ನಿಗದಿಪಡಿಸುತ್ತಾರೆ.

ಸೋದರ ಮಾತನಾಡಿಸುವುದು:
ಗೊತ್ತುಪಡಿಸಿದ ದಿನದಂದು ಹುಡುಗಿಯ ಕಡೆಯಿಂದ ಅವಳ ತಂದೆ-ತಾಯಿಯರು ಮತ್ತು ಹುಡುಗನ ಕಡೆಯಿಂದ ಕನಿಷ್ಟ ಒಬ್ಬರು ಹುಡುಗಿ ಸಮೇತ ಸೋದರ ಮಾವನಲ್ಲಿಗೆ ಹೋಗಿ ನಾವು ಒಂದು ಶುಭಕಾರವನ್ನು ತೆಗೆಯುವವರಿದ್ದೇವೆ. ನಿಮ್ಮಗಳ ಒಪ್ಪಿಗೆ ಕೇಳಲು ಬಂದಿದ್ದೇವೆ ಅಂತ ಹೇಳುವರು. (ಪೂರ್ವ ಪದ್ಧತಿ ಪ್ರಕಾರ ಹುಡುಗಿ ಮನೆಯಿಂದ ಒಂದು ಸೇರು ಅಕ್ಕಿ, ಒಂದು ತೆಂಗಿನಕಾಯಿ, ಒಂದು ಹೇಂಟೆ ಲಾಕಿ, ಮದ್ಯದ ಬಾಟಲಿ, ಒಂದು ಕುಡ್ತ ತೆಂಗಿನೆಣ್ಣೆ, ಸೂಡಿ ವೀಳ್ಯದೆಲೆ, ಐದು ಅಡಿಕೆಯೊಂದಿಗೆ ಸೋದರ ಮಾವನಲ್ಲಿಗೆ ಹೋಗುತ್ತಿದ್ದರು.) ತೆಗೆದುಕೊಂಡು ಹೋದ ಕೋಳಿಯನ್ನು ಅಡುಗೆ ಮಾಡಿ ರಾತ್ರಿ ಗುರು ಕಾರಣರಿಗೆ ಬಡಿಸಿ ಹಿರಿಯರ ಆಶೀರ್ವಾದ ಪಡೆಯುವುದು ರೂಢಿ. (ಪೂರ್ವ ಪದ್ಧತಿ ಪ್ರಕಾರ ಎಲ್ಲಾ ವಸ್ತುಗಳನ್ನು ಕೊಂಡು ಹೋಗುವುದು ಮಾಡದಿದ್ದರೆ ಈಗಿನ ಕಾಲ ಘಟ್ಟಕ್ಕೆ ಅನುಕೂಲವಾಗುವಂತೆ ಸೋದರ ಮಾವನಲ್ಲಿಯೇ ಸಮ್ಮಾನದ ಊಟ ಮಾಡಿ ಕಳುಹಿಸುವುದು ಮಾಡುವುದು.) ಹೀಗೆ ಸೋದರ ಮಾವನ ಒಪ್ಪಿಗೆ ಪಡೆದು ಮಾರನೇ ದಿನ ಬೆಳಿಗ್ಗೆ ವೀಳ್ಯಶಾಸ್ತ್ರಕ್ಕೆ ನಿಗದಿಪಡಿಸಿದ ದಿನದಂದು ಬರಬೇಕೆಂದು ಆಹ್ವಾನಿಸಿ ಹಿಂತಿರುಗುವುದು

Sunday, May 5, 2024

ಗೌಡ ಸಂಸ್ಕೃತಿ-- ಹುಡುಗಿ ಋತುಮತಿಯಾಗುವುದು

 ಕ್ರಮಗಳು:

1. ತಲೆಗೆ ನೀರು ಹೊಯ್ಯುವುದು

2. ಮಡಿಕೆ ಹಿಡಿಸುವುದು

3. ಋತುಶಾಂತಿ (ನೆರ್ದ ಮದುವೆ)

1. ತಲೆಗೆ ನೀರು ಹೊಯ್ಯುವುದು : ಹುಡುಗಿ ಬೆಳೆದು ದೊಡ್ಡವಳಾಗುತ್ತಾ ಶಾರೀರಿಕ ಬೆಳವಣಿಗೆಯೊಂದಿಗೆ ಒಂದು ಹಂತದಲ್ಲಿ ಋತುಮತಿಯಾಗುತ್ತಾಳೆ. ಆ ದಿನ ಹುಡುಗಿಯ ಕೈಯಲ್ಲಿ ಒಂದು ಚಿಕ್ಕ ಕತ್ತಿಯನ್ನು ಕೊಟ್ಟು ಫಲ ಬರುವ ಮರದಡಿಯಲ್ಲಿ ಕುಳ್ಳಿರಿಸುತ್ತಾರೆ. ತದನಂತರ ನೆರೆಮನೆಯ ಮುತ್ತೈದೆಯರನ್ನು ಕರೆಸಿ ಒಗ್ಗಿ ಹಾಕಿದ 5 ತೆಂಗಿನಕಾಯಿ ಮೇಲೆ ಕುಳ್ಳಿರಿಸಿ 5 ವೀಳ್ಯದೆಲೆ ಮತ್ತು 1 ಅಡಿಕೆ ಹಿಡಿದು ಐದು ಬಿಂದಿಗೆಗಳಲ್ಲಿ ತುಂಬಿಸಿಟ್ಟ ನೀರನ್ನು ಹುಡುಗಿಯ ತಲೆಗೆ ಹೊಯ್ಯುವರು ಮತ್ತೆ ಹುಡುಗಿಯನ್ನು ಸ್ನಾನ ಮಾಡಿಸಿ, ಬಟ್ಟೆ ಉಡಿಸಿ ಕೊಟ್ಟಿಗೆ ಅಥವಾ ಪ್ರತ್ಯೇಕ ಕೋಣೆಯಲ್ಲಿ ಕುಳ್ಳಿರಿಸುತ್ತಾರೆ. ನಂತರ ನಾಲ್ಕು ದಿನಗಳ ಮಟ್ಟಿಗೆ ತಿಂಡಿ ಹಾಗೂ ಆಹಾರವನ್ನು ಅಲ್ಲಿಗೆ ವ್ಯವಸ್ಥೆ ಮಾಡಬೇಕು.

2. ಮಡಿಕೆ ಹಿಡಿಸುವುದು : ಈ ಕ್ರಮವನ್ನು ಋತುಶಾಂತಿ ಲಗ್ನವನ್ನು ಮಾಡಿಸಲು ಅನಾನುಕೂಲ ಇರುವವರು ಮಾಡುತ್ತಾರೆ. ಹುಡುಗಿ ಮೈನೆರೆದ 5ನೇ ದಿನದಲ್ಲಿ ನೆರೆಮನೆಯ ಮುತ್ತೈದೆಯರನ್ನುಕರೆಯುತ್ತಾರೆ. ಮೊದಲೇ ತಿಳಿಸಿದಂತೆ ಮಡಿವಾಳಗಿತ್ತಿಯು ಬಂದು ಹುಡುಗಿಯನ್ನು ಸ್ನಾನ ಮಾಡಿಸಿ ಮಡಿ ಬಟ್ಟೆ ಉಡಿಸಿ ದೇವಸ್ಥಾನದಿಂದ ತಂದ ಪುಣ್ಯಾರ್ಚನೆಯನ್ನು ಮದುಮಗಳಿಗೆ ಹಾಗೂ ಮನೆಯೊಳಗೆ ಚಿಮುಕಿಸಿ ಶುದ್ಧಗೊಳಿಸುತ್ತಾರೆ. ಮುಂದೆ ನಡುಮನೆಯಲ್ಲಿ ಕಾಲುದೀಪ ಹಚ್ಚಿ, ಗಣಪತಿಗೆ ಇಟ್ಟು ಚಾಪೆ ಹಾಸಿ ಮನೆಯ ಅಡುಗೆಯ ಪರಿಕರಗಳನ್ನು, ಒನಕೆ, ತಡ್ಲೆ, ಕುಕ್ಕೆ ಇತ್ಯಾದಿಗಳನ್ನು ಜೋಡಿಸಿ ಇಡುತ್ತಾರೆ. ಹುಡುಗಿ ದೇವರಿಗೆ ಕೈ ಮುಗಿದು ಎಲ್ಲಾ ಪರಿಕರಗಳಿಗೆ ಅಕ್ಕಿ ಹಾಕಿ ಕೈ ಮುಗಿಯುತ್ತಾಳೆ. ಗುರುಹಿರಿಯರಿಗೆ ನಮಿಸಿ ಆಶೀರ್ವಾದ ಪಡೆಯುತ್ತಾಳೆ ನಂತರ ದನದ ಕೊಟ್ಟಿಗೆಗೆ ಹೋಗಿ ಗೋವುಗಳಿಗೆ ಹುಲ್ಲು ಕೊಟ್ಟು ನಮಸ್ಕರಿಸುತ್ತಾಳೆ. ಮುಂದೆ ಫಲ ಬರುವ ಮರಗಳಿಗೆ ಕೈ ಮುಗಿಯುವಳು. ಹುಡುಗಿ ದೇವಸ್ಥಾನಗಳಂತಹ ವಿಶೇಷ ಸ್ಥಳಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಕಡೆಗೆ ಹೋಗಬಹುದು.

ಮೈ ನೆರೆದ ಹುಡುಗಿಗೆ ಸಂಬಂಧಿಕರು ಎಲ್ಲಾ ತರಹದ ವಿಶೇಷ ಸಿಹಿ ತಿಂಡಿಗಳನ್ನು ತರುವ ಪದ್ಧತಿ ಕೂಡಾ ಚಾಲ್ತಿಯಲ್ಲಿರುತ್ತದೆ.

3. ಋತುಶಾಂತಿ ಲಗ್ನ: ಒಳ್ಳೆಯ ಮುಹೂರ್ತ ನೋಡಿ ದಿನ ಗೊತ್ತುಪಡಿಸಿ ನೆಂಟರಿಷ್ಟರನ್ನು ಕರೆಯಿಸಿ ತುಂಬಾ ಅದ್ಧೂರಿಯಾಗಿ ಆಚರಿಸುವುದು ಪದ್ಧತಿ. ಅಂದು ಬೆಳಿಗ್ಗೆ ಮಡಿವಾಳಗಿತ್ತಿಯು ಬಂದು ಹುಡುಗಿಯನ್ನು ಸ್ನಾನ ಮಾಡಿಸಿ ಮಡಿ ಬಟ್ಟೆ ಉಡಿಸಿ ಚಪ್ಪರದಡಿಯಲ್ಲಿ ಒನಕೆ ಇರಿಸಿ ಅಕ್ಕಿ ಹುಡಿಯಿಂದ ರಂಗೋಲಿ ಬರೆಯುತ್ತಾಳೆ. ಅದರ ಮಧ್ಯ ಒಂದು ಕೊಡಿ ಬಾಳೆ ಎಲೆ ಇಟ್ಟು ಅದರಲ್ಲಿ ಹುಡುಗಿಯನ್ನು ನಿಲ್ಲಿಸಿ ನಂತರ ಮಡಿವಾಳಗಿತ್ತಿ ಬಲಕಾಲ ಹೆಬ್ಬೆರಳಿನಿಂದ ತಲೆ ಮೇಲಿಂದ ಎಡಕಾಲ ಹೆಬ್ಬೆರಳಿಗೆ ಬಿಳಿ ನೂಲು ಹಾಕುತ್ತಾಳೆ. ಅದರಲ್ಲಿ ಬೆಳ್ಳಿ ಕಡಗವನ್ನು 3 ಸಲ ಆಚೆ-ಈಚೆ ದಾಟಿಸುತ್ತಾಳೆ. ಹುಡುಗಿಯ ಅತ್ತಿಗೆ, ನಾದಿನಿಯವರು ತಿನ್ನಲು ತಾಂಬೂಲ ಕೊಡುತ್ತಾರೆ. ಹುಡುಗಿ ತಾಂಬೂಲ ತಿಂದು ಎಲೆಯ ಮಧ್ಯಭಾಗಕ್ಕೆ ಉಗಿಯುತ್ತಾಳೆ. ಹೆಬ್ಬೆರಳಿಗೆ ಕಟ್ಟಿದ ನೂಲು ಸಮೇತ ಹುಡುಗಿಯ ತಾಯಿ ತೆಗೆದುಕೊಂಡು ಹೋಗಿ ನೀರಲ್ಲಿ ಬಿಡುತ್ತಾಳೆ. ಬರುವಾಗ ತಾಯಿ ಸ್ನಾನ ಮಾಡಿ ಬರಬೇಕು. (ಇದು ಪಿಲೆ ತೆಗೆಯುವುದು).
ಮುಂದೆ ತೆಂಗಿನ ಮರದಡಿಯಲ್ಲಿ ಹೊಸ ಚಾಪೆ ಹಾಸಿ ಅತ್ತಿಗೆ/ನಾದಿನಿಯವರು ಅದರಲ್ಲಿ 2 ಕುಚಗಳ ರೂಪವನ್ನು ಮಣ್ಣಿನಿಂದ ಮಾಡಿಟ್ಟಿರುತ್ತಾರೆ. ಚಾಪೆಯಲ್ಲಿ ಕೊಡಿ ಬಾಳೆಎಲೆ ಹಾಕಿ ನನ್ಯಕ್ಕಿ ಎಡೆಯಿಟ್ಟು, ಎಲೆ ಅಡಿಕೆ ಇಟ್ಟು 3ಸಲ ಪ್ರದಕ್ಷಿಣೆ ಬಂದು ಕೈ ಮುಗಿದು ಒಂದು ಎಲೆಯನ್ನು ಗಂಡು ಮಗುವಿಗೆ ಮತ್ತು ಇನ್ನೊಂದನ್ನು ಹೆಣ್ಣು ಮಗುವಿಗೆ ಕೊಡುತ್ತಾರೆ.
ಮತ್ತೆ 1 ಮಣ್ಣಿನ ಕುಂಭದಲ್ಲಿ ನೀರು ತುಂಬಿ ಅದರ ಮೇಲೆ ನೀರು ತುಂಬಿದ ತಂದಿಗೆಯಲ್ಲಿ ಮಾವಿನ ಎಲೆ, ಹಿಂಗಾರ, ತೆಂಗಿನ ಕಾಯಿ ಇಟ್ಟು ಸೋಗೆ ಸಿಂಬೆಯೊಂದಿಗೆ ಹೊತ್ತು ತರುತ್ತಾಳೆ. ನಡು ಮನೆಯಲ್ಲಿ ದೀಪ ಹಚ್ಚಿ ಗಣಪತಿಗೆ ಇಟ್ಟು ಒಲಿ ಚಾಪೆ ಹಾಸಿರುತ್ತಾರೆ. ಹುಡುಗಿ ಹೊತ್ತು ತಂದ ನೀರಿನ ಕುಂಭವನ್ನು ಹುಡುಗಿಯ ತಾಯಿ ತೆಗೆದು ನಡುಮನೆಯಲ್ಲಿಡುತ್ತಾಳೆ. ಹುಡುಗಿ ದೇವರಿಗೆ ಕೈ ಮುಗಿದು ಹಿರಿಯರ ಕಾಲಿಗೆ ನಮಸ್ಕರಿಸಿ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಾಳೆ. ಮುಂದೆ ಹೊಸ ಬಟ್ಟೆ ಉಡಿಸಿ ಚಾಪೆಯಲ್ಲಿ ಕೂರಿಸುತ್ತಾರೆ. ಬಂದ ನೆಂಟರಿಷ್ಟರು ಹುಡುಗಿಗೆ ಉಡುಗೊರೆಗಳನ್ನು ಕೊಡುತ್ತಾರೆ. ಊಟದ ನಂತರ ಹುಡುಗಿಯ ಸೋದರ ಮಾವನ ಮನೆಯವರು ಹುಡುಗಿಯನ್ನು ಕರೆದುಕೊಂಡು ಹೋಗುತ್ತಾರೆ. ತದನಂತರ ಸ್ವಲ್ಪ ದಿನಗಳಲ್ಲಿ ಹುಡುಗಿಯ ತಾಯಿ ಅಲ್ಲಿಂದ ಮಗಳನ್ನು ಕರೆದುಕೊಂಡು ಬರುತ್ತಾರೆ.

ಹುಡುಗಿ ಮೈನೆರೆಯುವುದು : ಕ್ರಮ :- ಊರ ಮಡಿವಾಳಗಿತ್ತಿಯ ಮುಂದಾಳುತನದಲ್ಲಿ ಕ್ರಮ ನಡೆಯುವುದು.

ಬೇಕಾಗುವ ಪರಿಕರಗಳು:

1) ಸಾಧಾರಣ ಸಣ್ಣ ಮಣ್ಣಿನ ಮಡಿಕೆ 1 :- ಮಡಿಕೆ ಒಳಗೆ ಸ್ವಲ್ಪ ಹಾಲು ಹಾಕಬೇಕು. ಮಡಿಕೆಯ ಬಾಯಿ ಸುತ್ತ ಒಳಗೆ ಮಾವು, ಹಲಸು ಸೊಪ್ಪುಗಳನ್ನು ಇಟ್ಟು ಅದರ ಮೇಲೆ ಒಂದು ತಂಬಿಗೆ ಇಡಬೇಕು.

2) ಕಲಶ : ಸ್ಟೀಲ್ ಅಥವಾ ಹಿತ್ತಾಳೆದ್ದಾಗಿರಬೇಕು. ತಂಬಿಗೆ ಒಳಗೆ ಸುತ್ತ ಮಾವು ಸೊಪ್ಪು
ಅದರ ಮಧ್ಯೆ ತೆಂಗಿನ ಕಾಯಿ ಇಡಬೇಕು.

3) ಸ್ಟೀಲಿನ ಅಥವಾ ಹಿತ್ತಾಳೆಯ ತಂಬಿಗೆ 5 : ಪ್ರತೀ ತಂಬಿಗೆಯ ಒಳಗೆ ವೀಳ್ಯದೆಲೆ, ಮಾವು, ಹಲಸು ಸೊಪ್ಪು ಒಂದೊಂದು ಅಡಿಕೆ ಹಾಕಿಡಬೇಕು. ಅದರ ಒಳಗೆ ಸ್ವಲ್ಪ ನೀರು ಇರಬೇಕು.

4) ದೇವಸ್ಥಾನದಿಂದ ತಂದ ಪುಣ್ಯಾರ್ಚನೆ.

5) ಕಾಲುದೀಪ

6) ಮರದ ಮಣೆ : ಮಣೆಯ ಮೇಲೆ ಸೀರೆ, ರವಿಕೆ, ಹಿಂಗಾರ ಇಟ್ಟಿರಬೇಕು.

7) ಐದು ಬಗೆಯ ಹೂವುಗಳಿರಬೇಕು : ಉದಾ : ಮಲ್ಲಿಗೆ, ತುಂಬೆ ಹೂ, ಸೇವಂತಿಗೆ ಇತ್ಯಾದಿ.

8) ತುಂಬೆ ಹೂವು : ತೆಂಗಿನ ಗರಿಯ ಕಡ್ಡಿಗೆ ಕನಿಷ್ಟ 5 ತುಂಬೆ ಹೂ ಪೋಣಿಸಿಡಬೇಕು.

9) ಬಾಚಣಿಗೆ

10) ಕುಂಕುಮ ಕರಡಿಗೆ

11) ಕಂಚಿನ ಬಟ್ಟಲು -2 
 ಒಂದನೇ ಬಟ್ಟಲಿನಲ್ಲಿ ಒಂದು ಸೇರು ಬೆಳ್ತಿಗೆ ಅಕ್ಕಿ, ಕುಂಕುಮ ಕರಡಿಗೆ, ಐದು ಬಳೆ ಐದು ಅಡಿಕೆ ಒಂದು ತೆಂಗಿನಕಾಯಿ, ಒಂದು ನೂಲಿನ ಉಂಡೆ, ಬಾಚಣಿಗೆ, ಒಂದು ಕಡಗ ಇಡಬೇಕು.
2ನೇ ಬಟ್ಟಲಿನಲ್ಲಿ ಬೆಳ್ಳಿಗೆ ಅಕ್ಕಿ ಒಂದು ಸೇರು, 5 ಎಲೆ, 1 ಅಡಿಕೆ, ಅಕ್ಕಿ ಮೇಲೆ ಒಂದು ಚೆಂಬು, ಚೆಂಬು ಸುತ್ತ ಹಲಸಿನ ಎಲೆ ಮಧ್ಯ ಒಂದು ತೆಂಗಿನಕಾಯಿ ಇರಬೇಕು.( ಇದನ್ನು ಮಂಡಲ ಬರೆದ ದೀಪದ ಹತ್ತಿರ ಇಡಬೇಕು) ತುಳಸಿ ಕಟ್ಟೆಯ ಹತ್ತಿರ ಒಂದು ಬದಿಯಲ್ಲಿ ಅಕ್ಕಿ ಹುಡಿಯಲ್ಲಿ ಮಂಡಲ ಬರೆಯಬೇಕು.

ಮಡಿವಾಳಗಿತ್ತಿ ಕೊಟ್ಟ ಸೀರೆಯನ್ನು ಉಡಿಸಿ ಶೃಂಗರಿಸಿ, ಕಲಶ ಕನ್ನಡಿ ಸಹಿತ ಪಿಲೆ ತೆಗೆಯುವ ಸ್ಥಳಕ್ಕೆ ಹುಡುಗಿಯನ್ನು ಕರೆದುಕೊಂಡು ಬರಬೇಕು. ಹಿರಿಯ ಮುತ್ತೈದೆಯರು ಪಿಲೆ ತೆಗೆಯುವ ಕ್ರಮ ಮಾಡಬೇಕು.

ಕ್ರಮ : ಮಂಡಲದ ಒಳಗೆ ಹಾಕಿಟ್ಟ ಎಲೆ ಮೇಲೆ ಹುಡುಗಿಯನ್ನು ನಿಲ್ಲಿಸಬೇಕು. ಬಲ ಹೆಬ್ಬೆರಳಿನಿಂದ ತಲೆ ಮೇಲೆ ತಂದು ಎಡ ಹೆಬ್ಬೆರಳಿಗೆ ಬರುವಂತೆ ನೂಲನ್ನು ಸೇರಿಸಿಡಬೇಕು. ಆ ನಂತರ ನೂಲಿನ ಮೂಲಕ 3 ಸಲ ಕಡಗವನ್ನು ದಾಟಿಸಬೇಕು. ನಂತರ ಜಗಿಯಲು ಎಲೆ ಅಡಿಕೆ ಕೊಟ್ಟು ಜಗಿದ ನಂತರ ಎಲೆ-ಅಡಿಕೆಯನ್ನು ಎದುರಿನ ಎಲೆಗೆ ಉಗಿಯಬೇಕು. ಇದಾದ ನಂತರ ತಲೆ ಮೇಲೆ ಮಡಿವಾಳಗಿತ್ತಿ ಬಿಳಿ ಬಟ್ಟೆ ಹಿಡಿಯುತ್ತಾರೆ. ಮಂಡಲದ ಒಳಗೆ ಇದ್ದ 5 ತಂಬಿಗೆಗೆಗಳನ್ನು 5 ಜನ ಮುತ್ತೈದೆಯರು ತೆಗೆದುಕೊಂಡು ನೀರು ಹಾಕಬೇಕು. ಮತ್ತೆ ಅದರ ಒಳಗಿದ್ದ ಎಲೆ ಕೂಡ ಹಾಕಬೇಕು. ಈ ಕ್ರಮ ಆದ ನಂತರ ಮಡಿವಾಳಗಿತ್ತಿ ಪುಣ್ಯಾರ್ಚನೆ ಹಾಕಬೇಕು. ನಂತರ ಹುಡುಗಿಯನ್ನು ಸಿಂಗರಿಸಿ ಹಣೆಗೆ ಗಂಧ ಹಚ್ಚಬೇಕು. ಈ ಎಲ್ಲಾ ಕ್ರಮ ಮುಗಿದ ಮೇಲೆ ಪಿಲೆ ತೆಗೆದ ಮುತ್ತೈದೆ ಸ್ಥಳ ಶುದ್ಧ ಮಾಡಬೇಕು.

ಗುಂಭ ಪೂಜೆ
ಬೇಕಾಗುವ ವಸ್ತುಗಳು : ಮಣ್ಣಿನ ಮಡಿಕೆ, ಕಲಶ ಕನ್ನಡಿ, 1 ತಂಬಿಗೆ, 1 ತೆಂಗಿನಕಾಯಿ, ಬೆಲ್ಲ ಅವಲಕ್ಕಿ, ಬಾಳೆಹಣ್ಣು, ಬಾಳೆಲೆ, ಚಾಪೆ.

ಬಾವಿಯ ಹತ್ತಿರ ಹೋಗಿ ಕಟ್ಟೆಬಳಿ ಪೂರ್ವಾಭಿಮುಖವಾಗಿ ಚಾಪೆ ಹಾಕಿ ಅದರ ಮೇಲೆ 5 ಬಾಳೆಲೆ ಹಾಕಿಡಬೇಕು. ಆ ಎಲೆಗಳಿಗೆ ಅವಲಕ್ಕಿ ಬೆಲ್ಲ, ಬಾಳೆಹಣ್ಣು ಬಡಿಸಬೇಕು. ಹುಡುಗಿ ಕೈಯಿಗೆ ಒಂದು ತೆಂಗಿನಕಾಯಿ ಕೊಟ್ಟು ಕೈ ಮುಗಿದು ತೆಂಗಿನಕಾಯಿಯನ್ನು ಎರಡು ಭಾಗ ಮಾಡಿ ಎಲೆಗಳಿಗೆ ಆರತಿ ಎತ್ತಿದ ಹಾಗೆ ಮಾಡಿ ಎಲೆಗಳ ಮಧ್ಯ ಗಡಿಗಳನ್ನು ಇಡಬೇಕು. ಧೂಪದಾರತಿ ಮಾಡಿಸಬೇಕು. ಪ್ರಾರ್ಥಿಸಿ ಆದ ಮೇಲೆ ಹುಡುಗಿ ಕೈಯಿಂದ ಆ ಎಲೆಗಳನ್ನು ಸ್ವಲ್ಪ ಎದುರು ಎಳೆಯಬೇಕು. ನಂತರ ಅವಲಕ್ಕಿ ಬೆಲ್ಲ ಸೇರಿಸಿ ಪಂಚಕಜ್ಜಾಯ ಮಾಡಿಸಬೇಕು. 5 ಜನ ಮುತ್ತೈದೆಯರು ಅಲ್ಲಿದ್ದ ಮಡಕೆಯನ್ನು ಎತ್ತಿ ಹುಡುಗಿ ತಲೆ ಮೇಲೆ ಇಡುತ್ತಾರೆ. ಹುಡುಗಿ ಬಾವಿಗೆ ಸುತ್ತು ಬರಬೇಕು.ನಂತರ ಮನೆ ಎದುರು ಮೆಟ್ಟಿಲ ಹತ್ತಿರ ಬಂದು ನಿಲ್ಲಬೇಕು. ಈಗ 5 ಜನ ಮುತ್ತೈದೆಯರು ಒಂದು ಕಂಚಿನ ಬಟ್ಟಲಿಗೆ ಕುರ್ದಿ ನೀರು ಹಾಕಿ, ಆರತಿ ಎತ್ತಿ, ಸೋಭಾನೆ ಹಾಡಿ, ಕುರ್ದಿ ನೀರನ್ನು ಕಾಲಿನ ಎರಡು ಬದಿಗೆ ಎರೆಯಬೇಕು. ನಂತರ ಒಳಗೆ ಕರೆದುಕೊಂಡು ಹೋಗಬೇಕು. ಕನ್ನಿಕಂಬದ ಹತ್ತಿರ ಹುಡುಗಿಯನ್ನು ದೇಸೆಗೆ ಕುಳ್ಳಿರಿಸಬೇಕು. ಆರಂಭಕ್ಕೆ ಮನೆ ಮುತ್ತೈದೆಯರು ದೇಸೆ ಹಾಕಬೇಕು. ನಂತರ ಪ್ರತಿಯೊಬ್ಬರೂ ದೇಸೆ ಹಾಕುವರು. (ಉಡುಗೊರೆ ಕೊಡುವುದಿದ್ದರೆ ಕೊಡಬಹುದು) ನಂತರ ಹೊರಗೆ ಬಂದು ತುಳಸಿಕಟ್ಟೆ ಮುಂಭಾಗದಲ್ಲಿ ದೇವರಿಗೆ ನೀರು ಇಡುವ ಕ್ರಮ ಮಾಡಬೇಕು. ಹುಡುಗಿ ಕೈಯಲ್ಲಿ 5 ಎಲೆ 1 ಅಡಿಕೆ ಕೊಡಬೇಕು. ಮನೆ ಯಜಮಾನ 5 ದೇವರುಗಳ ನೆನೆದು ಎಲೆ ಅಡಿಕೆಯ ಕೈ ಮೇಲೆ ನೀರು ಹೊಯ್ಯುವುದು ಮಾಡಬೇಕು. ಇದಾದ ನಂತರ ಒಳಗೆ ಹೋಗಿ ಅಟ್ಟಕ್ಕೆ “ಕೈ ಮುಗಿಯಬೇಕು. ಹೊರಗೆ ಬಂದು ಮರ ಗಿಡಗಳಿಗೆ, ಒನಕೆ, ದನಗಳಿಗೆ ಕೈ ಮುಗಿಯುವ ಶಾಸ್ತ್ರ ಮಾಡಬೇಕು. ಈ ಎಲ್ಲಾ ಕ್ರಮ ಮುಗಿದ ಮೇಲೆ ಹಿರಿಯರ ಪಾದ ಮುಟ್ಟಿ ನಮಸ್ಕರಿಸುವ ಶಾಸ್ತ್ರ ಮಾಡಬೇಕು. ಬಂದವರಿಗೆಲ್ಲಾ ಭೋಜನದ ವ್ಯವಸ್ಥೆ ಮಾಡಬೇಕು. ಭೋಜನದ ನಂತರ ಸೋದರದವರು ಹುಡುಗಿಯನ್ನು ಕರೆದುಕೊಂಡು ಹೋಗಬೇಕು. ಅಲ್ಲಿ ರಾತ್ರಿ ಗುರುಕಾರಣರಿಗೆ ಬಡಿಸುವ ಕ್ರಮ ಮಾಡಬೇಕು. ಮರು ದಿನ ಮನೆಯವರು ಕರಕೊಂಡು ಬರುವುದು





Friday, May 3, 2024

ಗೌಡ ಸಂಸ್ಕೃತಿ--- ಹುಟ್ಟು : (ಜನನ)

ಹಿಂದಿನ ಕಾಲದಲ್ಲಿ ಮಗು ಹುಟ್ಟಿದಾಗ ಕಂಚಿನ ಬಟ್ಟಲು ಹೊಡೆಯುವ ಸಂಪ್ರದಾಯವಿತ್ತು. ಶಬ್ದ ಕೇಳಿದಲ್ಲಿಂದ ಮಗು ಭೂಮಿಗೆ ಬಿದ್ದ ಘಳಿಗೆಯೆಂದು ನಿರ್ಧರಿಸಿ ಮಗುವಿನ ಜಾತಕದ ಗ್ರಹ ಸ್ಪುಟಗಳನ್ನು ಜ್ಯೋತಿಷ್ಯರು ಬರೆದಿಡುತ್ತಿದ್ದರು. ಹಿಂದಿನ ಕಾಲದ ಪದ್ಧತಿ ಪ್ರಕಾರ ಮಗು ಹುಟ್ಟಿದ ತಕ್ಷಣ ಬಜೆಯನ್ನು ಒಂದು ಹನಿ ಜೇನಿನಲ್ಲಿ ಅರೆದು ಮಗುವಿನ ನಾಲಗೆಗೆ ಮುಟ್ಟಿಸುವುದು ಕ್ರಮ.

ಸೂತಕ : ಜನನ ಮರಣ ಋತು ಶಾಂತಿ ಸೂತಕಗಳು 16 ದಿನ ಆಗಿರುತ್ತದೆ.

ಸೂತಕದ ದಿನಗಳಲ್ಲಿ ಮನೆಯ ದೇವರಿಗೆ ದೀಪ ಇಡುವಂತಿಲ್ಲ.

ಅಮೆ : ಹಿಂದಿನ ಕಾಲದಿಂದಲೂ 3ರ ಅಮೆ, 5ರ ಅಮೆ, 7ರ ಅಮೆಯೆಂದು ಶುದ್ದಿ ಕ್ರಿಯೆಯನ್ನು ಆಚರಿಸುತ್ತಿದ್ದರು. ಈ ಪ್ರಕಾರ ಮನೆಯನ್ನು ಆ ದಿನ ಸ್ವಚ್ಛ ಮಾಡುತ್ತಾರೆ. ನಿಗದಿಪಡಿಸಿದ ದಿನ ಊರ ಮಡಿವಾಳಗಿತ್ತಿ ಮನೆಗೆ ಬಂದು ಸ್ನಾನದ ನಂತರ ಬಾಣಂತಿಗೆ ಪುಣ್ಯಾರ್ಚನೆಯನ್ನು ಹಾಕಿ ಮನೆಯ ಪ್ರತಿ ಕೋಣೆಗೆ, ಬಚ್ಚಲು ಮನೆಗೆ, ಬಾವಿಗೆ ಕೂಡ ಹಾಕಿ ಮನೆ ಮಂದಿಗೆಲ್ಲ ಸಂಪ್ರೋಕ್ಷಣೆ ಆದ ಮೇಲೆ ತುಳಸಿ ಕಟ್ಟೆಯಲ್ಲಿಡುತ್ತಾರೆ. (ಕುಟುಂಬದವರು ಬೇಕಾದರೆ ಅಲ್ಲಿಂದ ಕೊಂಡು ಹೋಗಬಹುದು).

ಪೂರ್ವ ಪದ್ಧತಿ ಪ್ರಕಾರ ಮಗುವನ್ನು ಅಮೆ ದಿನದವರೆಗೆ ಹಾಳೆಯಲ್ಲಿ ಮಲಗಿಸಲಾಗುತ್ತಿತ್ತು.ಅಮೆ ದಿನದಿಂದ ಚಾಪೆಯಲ್ಲಿ ಮಗುವನ್ನು ಮಲಗಿಸುವುದು ರೂಢಿ. ಮಗುವನ್ನು ಸ್ನಾನಮಾಡುವ ಮೊದಲು ಎಣ್ಣೆ ತಿಕ್ಕಿ ಚಕ್ಕಳ ( ಜಿಂಕೆ ಅಥವಾ ಕಾಡುಕುರಿ ಚರ್ಮ)ದಲ್ಲಿ ಅಥವಾ ಒಲಿಯ ಸಣ್ಣ ಚಾಪೆಯಲ್ಲಿ ಮಲಗಿಸುತ್ತಿದ್ದರು. ಅನಂತರ  ಸ್ನಾನಮಾಡಿಸುವುದು ವಾಡಿಕೆ. ಅಮೆ ದಿನ ನರೆಹೊರೆಯ ಮನೆಯವರಿಗೆಲ್ಲ ಆಮಂತ್ರಿಸುವುದು ಕಮ ನೆರೆಹೊರೆಯವರು ಬರುವಾಗ 1 ಕುಡ್ಲೆ ಎಣ್ಣೆ ತರುವುದು ವಾಡಿಕೆಯಾಗಿತ್ತು. (ಬರಿ ಕೈಯಲ್ಲಿ ಬರುವ ಬದಲು ಇದೊಂದು ಸಂಪ್ರದಾಯ). 

ಅಮೆ ಕ್ರಮ : (3, 5 ಅಥವಾ 7ನೇ ದಿನಗಳಲ್ಲಿ ಮಾಡಬಹುದು) ಮಡಿವಾಳಗಿತ್ತಿಗೆ ಹೇಳಿಕೆ ಕೊಡಬೇಕು. ಮಡಿವಾಳಗಿತ್ತಿ ಬೆಳಿಗ್ಗೆ ಬಂದು ಶುದ್ಧಿ ಕ್ರಿಯೆಯನ್ನು ಆರಂಭಿಸಬೇಕು. ಹತ್ತಿರದ ದೇವಸ್ಥಾನದಿಂದ ಕುಟುಂಬದಲ್ಲದವರು ಪುಣ್ಯಾರ್ಚನೆ ತರಬೇಕು. ಮಡಿವಾಳಗಿತ್ತಿ ತಾಯಿ ಮತ್ತು ಮಗುವನ್ನು ಸ್ನಾನ ಮಾಡಿಸಿ ನಡುಮನೆಯಲ್ಲಿ ದೀಪ ಹಚ್ಚಿ ಗಣಪತಿಗೆ ಇಟ್ಟು, ಮಗುವನ್ನು ತಾಯಿ ಮಡಿಲಲ್ಲಿ ಮಲಗಿಸಿ (ಪೂರ್ವಾಭಿಮುಖವಾಗಿ) ಸೋದರ ಮಾವನೊಂದಿಗೆ (ಮಗುವಿನ ತಾಯಿಯ ಅಣ್ಣ ಅಥವಾ ತಮ್ಮ) ಪಟ್ಟೆನೂಲು ಕಟ್ಟುತ್ತೇನೆ ಎಂದು ಕೇಳಿಕೊಂಡ ಬಳಿಕ ಪಟ್ಟೆನೂಲನ್ನು ಉಡಿದಾರವಾಗಿ ಸೊಂಟಕ್ಕೆ ಕಟ್ಟುವಳು. ನಂತರ ಮಧ್ಯಾಹ್ನ ಬಂದವರಿಗೆ ಬೋಜನ ವ್ಯವಸ್ಥೆ ಮಾಡಬೇಕು (ಸಿಹಿಯೂಟ)

 ತೊಟ್ಟಿಲಿಗೆ ಹಾಕುವ ಕ್ರಮ : (ನಾಮಕರಣ, ಜೋಗುಳ ಹಾಡುಗಳು) : ಪೂರ್ವ ಪಶ್ಚಿಮವಾಗಿತೊಟ್ಟಿಲನ್ನು ಕಟ್ಟಿರಬೇಕು. ಕಿನ್ನೆರ್ ಬಳ್ಳಿಯನ್ನು ತೊಟ್ಟಿಲು ಸುತ್ತ ಸುತ್ತಿರಬೇಕು. ಹರಿದ ‌ಮೀನಿನ ಬಲೆಯನ್ನು ತೊಟ್ಟಿಲು ಸುತ್ತ ಕಟ್ಟುವುದು ವಾಡಿಕೆ. ಹೂವಿನಿಂದ ಸಿಂಗರಿಸಬಹುದು. 16ನೇ ದಿನದಲ್ಲಿ ಮಗುವನ್ನು ತೊಟ್ಟಿಲು ಹಾಕುವ ಸಂಪ್ರದಾಯ ಮಾಡಬೇಕು. ಮಣೆ ಮೇಲೆ ದೀಪ ಹಚ್ಚಿಡಬೇಕು. ಹಾಲು ಹಾಕಿದ ಅನ್ನವನ್ನು ಅರೆದು ಕೊಡಿ ಬಾಳೆಲೆಯಲ್ಲಿಡಬೇಕು. ಚಿನ್ನದ ಉಂಗುರವನ್ನು ಬಳಸಿ ಅನ್ನಪ್ರಾಶನ ಮಾಡಿಸುವರು (ಈ ದಿನಕ್ಕೆ ಜ್ಯೋತಿಷ್ಯ ಕೇಳುವ ಅಗತ್ಯವಿಲ್ಲ). 16ರ ದಿನ ಮಾಡಲು ಸಾಧ್ಯವಾಗದೇ ಇದ್ದಾಗ ಜ್ಯೋತಿಷ್ಯರಲ್ಲಿ ದಿನ ನಿಶ್ಚಯಿಸಿ ನಾಮಕರಣ ಮಾಡುತ್ತಾರೆ. ಮಗುವಿನ ಜನನ ನಕ್ಷತ್ರ ಹೊಂದಿಕೆಯಾಗುವ ಹೆಸರುಗಳನ್ನಿಡುವುದು. ನೆಂಟರಿಷ್ಟರಿಗೆ ಊರ ಬಂಧುಗಳಿಗೆ ಹೇಳಿಕೆ ಕೊಡಬೇಕು. ಆ ದಿನ ಕೂಡ ಪುಣ್ಯಾರ್ಚನೆಯನ್ನು ದೇವಸ್ಥಾನದಿಂದ ತರಬೇಕು. ಆ ದಿನ ನಾಮಕರಣ ಮಾಡಿದ ಮೇಲೆ ಸೋದರಮಾವ ಮಗುವಿಗೆ ಅನ್ನ ಪ್ರಾಶನ ಮಾಡಿ ಸಿಂಗರಿಸಿದ ತೊಟ್ಟಿಲಿಗೆ ಮುತ್ತೈದೆಯರು ಮಗುವನ್ನು ಮಲಗಿಸಬೇಕು. ಮಗುವಿನ ತಂದೆ ಅಥವಾ ತಂದೆಯ ಕಡೆಯವರು ನಾಮಕರಣ ಅಥವಾ ಹೆಸರಿಡಬೇಕು. ಮುತ್ತೈದೆಯರು ಮಗುವನ್ನು ತೊಟ್ಟಿಲಲ್ಲಿ ಹಾಕುವಾಗ ಜೋಗುಳ ಹಾಡಬೇಕು. ಸಿಹಿ ತಿಂಡಿ ಹಂಚಬೇಕು. ಬಳಗದವರು ಉಡುಗೊರೆ ಕೊಟ್ಟು ಹರಸುವುದು ಕ್ರಮ. ನಂತರ ಭೋಜನ ವ್ಯವಸ್ಥೆಯಿರುತ್ತದೆ. ಹಿಂದಿನ ಕಾಲದಲ್ಲಿ ಗೋಧೂಳಿ ಲಗ್ನದಲ್ಲಿ ಮಗುವಿನ ನಾಮಕರಣ ಮಾಡುತ್ತಿದ್ದರು.

40ನೇ ದಿನದ ಕ್ರಮ : 40ನೇ ದಿನದಲ್ಲಿ ತಾಯಿ ಮತ್ತು ಮಗುವನ್ನು ಎಣ್ಣೆ ಹಾಕಿ ಸ್ನಾನ ಮಾಡಿಸುತ್ತಾರೆ. ತಾಯಿಯ ಸ್ನಾನದ ನಂತರ ಕೊನೆಯಲ್ಲಿ 40 ಚೆಂಬು (ಒರಂಕು, ಒಣಕು ಅಂದರೆ ಗೆರಟೆಯಿಂದ ಮಾಡಿದ ತಂಬಿಗೆಯ ಆಕೃತಿಯ ಪಾತ್ರೆ, ಅದಕ್ಕೆ ಉದ್ದದ ಮರದ ಹಿಡಿಯಿರುತದೆ. ಅಥವಾ ತಾಮ್ರದ ಕೈಯಿರುವ ಚೆಂಬುವಿನಿಂದ ನೀರನ್ನು ರಭಸವಾಗಿ ಬಾಣಂತಿಗೆ ಹಾಕುತ್ತಿದ್ದರು) ನೀರು ಹೊಯ್ಯುವ ಕ್ರಮವಿದೆ. ಅನಂತರ 5 ಎಲೆ 1 ಅಡಿಕೆಯನ್ನು ಬಾಣಂತಿ ಮಂಡೆಯೊಳಗಡೆ ಹಾಕಿ ಕೈ ಮುಗಿದು ಮಂಡೆಯನ್ನು ಕೆಳಗಿಳಿಸಿ ಕವುಚಿ ಹಾಕಬೇಕು  ನಂತರ ಸೀದಾ ಮನೆಯೊಳಗಡೆ ಬಂದು ದೀಪ ಹೊತ್ತಿಸಿ ಕೈ ಮುಗಿದು ಹಿರಿಯರ ಕಾಲು ಹಿಡಿದು ಆಶೀರ್ವಾದ ಪಡೆಯಬೇಕ. 40 ದಿನ ಉಪಚಾರ ಮಾಡಿದ ನೆನಪಿಗಾಗಿ ಬಾಣಂತಿಯನ್ನು ಆರೈಕೆ ಮಾಡಿದ ಹೆಂಗಸಿಗೆ ಉಡುಗೊರೆ ನೀಡಬೇಕು. ತದನಂತರ ಹಟ್ಟಿಗೆ ಹೋಗಿ ಗೋಪೂಜೆ ಸಲ್ಲಿಸಿ ಮನೆಗೆ ಬಂದು ಹಣೆಗೆ ಕುಂಕುಮ ಇಟ್ಟು ಸೀರೆ ಉಡುವುದು. ಅದೇ ದಿನ ದೇವಸ್ಥಾನಕ್ಕೆ ಮಗುವನ್ನು ಕರಕೊಂಡು ಹೋಗಿ ಬರುವುದು ವಾಡಿಕೆ.

ಬಾಣಂತಿ ಬಚ್ಚಲು ಮನೆ : ಹಿಂದಿನ ಪದ್ಧತಿ ಪ್ರಕಾರ ಬಾಣಂತಿಗೆ ಬಚ್ಚಲು ಮನೆಯನ್ನು ಪ್ರತ್ಯೇಕವಾಗಿ ಮಾಡುತ್ತಿದ್ದರು. ಬಾಣಂತಿಯ ಬಚ್ಚಲು ಮನೆಗೆ ಇತರರು ಹೋಗುವಂತಿಲ್ಲ. ಬಚ್ಚಲು ಮನೆಗೆ ಬೈನೆಗಿಡದ ಸೋಗೆ, ಕಾಸರಕನ ಗೆಲ್ಲು, ನೆಕ್ಕಿ ಗೆಲ್ಲುಗಳನ್ನು ಸಿಕ್ಕಿಸಿ ಅದನ್ನು ಬಂದೋಬಸ್ತು ಮಾಡುತ್ತಾರೆ. (ದುಷ್ಟ ಶಕ್ತಿಗಳು ಬಾರದ ಹಾಗೆ).

ಮಗುವಿಗೆ ಕಿವಿಚುಚ್ಚುವ ಕ್ರಮ : 16ನೇ ದಿನದಿಂದ 5 ವರ್ಷದ ಒಳಗೆ ಮಗುವಿಗೆ ಕಿವಿ ಚುಚ್ಚುವುದು ಮಾಡುತ್ತಿದ್ದರು. ಹೆಣ್ಣು ಮಗುವಿಗೆ 5 ವರ್ಷದಿಂದ ಮೈ ನೆರೆಯುವ ಒಳಗೆ ಮೂಗು ಚುಚ್ಚುವುದು ಮಾಡುತ್ತಿದ್ದರು. (ಮುಹೂರ್ತ ಮತ್ತು ದಿನ ನೋಡಿ)

ಪ್ರಥಮ ಚವಲ (ಕೂದಲು) ತೆಗೆಸುವುದು : ಮುಹೂರ್ತ ಮತ್ತು ದಿನ ನೋಡಿ ಸೋದರ ಮಾವ ಚವಲ ತೆಗೆಯುವುದು. (ದೇವಸ್ಥಾನದಲ್ಲಿ ಕೂಡ ಮಾಡಬಹುದು)

ಮಗುವಿನ ತೊಟ್ಟಿಲು ಕಳುಹಿಸುವ ಕ್ರಮ : ನಿಗದಿಪಡಿಸಿದ ದಿನದಂದು ತವರು ಮನೆಯಿಂದ ಗಂಡನ ಮನೆಗೆ ತಾಯಿ ಮಗುವನ್ನು ಕಳುಹಿಸಿ ಕೊಡುವುದು ಸಂಪ್ರದಾಯ, ಹಿಂದಿನ ದಿನ ರಾತ್ರಿ ಗುರು ಕಾರಣರಿಗೆ ಅಗೇಲು ಬಳಸುವ ಕ್ರಮ. ತಾಯಿ ಹಾಗೂ ಮಗುವಿನ ಬಗ್ಗೆ ಪ್ರಾರ್ಥನೆ ಮಾಡಿ ಗುರುಕಾರಣರ ಆಶೀರ್ವಾದ ಪಡೆದು ಮಾರನೇ ದಿನ ಬೆಳಗ್ಗೆ ದೇವರ ದೀಪ ಹಚ್ಚಿ ಕೈಮುಗಿದು ಗುರು ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ ತೊಟ್ಟಿಲು ಮತ್ತು ಮಗುವನ್ನು ತವರು ಮನೆಯ ಹಿರಿಯರು ಗಂಡನ ಮನೆಯವರಿಗೆ ಒಪ್ಪಿಸುತ್ತಾರೆ.(ತೊಟ್ಟಿಲು ತೆಗೆದುಕೊಂಡು ಹೋಗುವಾಗ ಮಧ್ಯ ದಾರಿಯಲ್ಲಿ ಚೂರಿಮುಳ್ಳು, ಕಲ್ಲು ಇಟ್ಟು ಬಿಡಬೇಕು. ತವರು ಮನೆಯ ಭೂತ ಪ್ರೇತಗಳು ಜೊತೆಯಲ್ಲಿ ಬಾರದ ಹಾಗೆ.)
ಗಂಡನ ಮನೆಯ ಕ್ರಮ : ಗಂಡನ ಮನೆಗೆ ಬಂದ ತಾಯಿ ಹಾಗೂ ಮಗುವನ್ನು ಮುತ್ತೈದೆಯರು ಆರತಿ ಎತ್ತಿ ದೃಷ್ಟಿ ತೆಗೆದು ಕುರ್ದಿ ನೀರನ್ನು ಕಾಲಿಗೆ ಹೊಯ್ದು ನಂತರ ಶುದ್ಧ ನೀರಿನಿಂದ ಕಾಲು ತೊಳೆದು ಮನೆಯ ಒಳಗೆ ಕರಕೊಂಡು ಬರಬೇಕು. ನಡುಮನೆಯಲ್ಲಿ ಹಚ್ಚಿಟ್ಟ ದೀಪಕ್ಕೆ ಕೈ ಮುಗಿದು ಹಾಸಿದ ಒಲಿ ಚಾಪೆಯಲ್ಲಿ ಕುಳ್ಳಿರಿಸಿ (ಕನ್ನಿ ಕಂಬದ ಮನೆಯಲ್ಲಿ ಕಂಬದ ಎಡಭಾಗದಲ್ಲಿ ಅಥವಾ ಸೂಕ್ತ ಜಾಗದಲ್ಲಿ) ತಾಯಿ ಮಡಿಲಲ್ಲಿ ಮಗುವನ್ನು ಮಲಗಿಸಿ ತಾಯಿಗೆ ಕುಡಿಯಲು ಹಾಲು ಕೊಡಬೇಕು. ಆ ವೇಳೆಗೆ ಕೋಣೆಯಲ್ಲಿ ತೊಟ್ಟಿಲನ್ನು ಶಾಸ್ರೋಕ್ತವಾಗಿ ಕಟ್ಟುವುದು. ತಾಯಿಯ ಮಡಿಲಲ್ಲಿ ಮಲಗಿಸಿದ ಮಗುವನ್ನು ಮನೆಯ ಹಿರಿಯ ಮುತ್ತೈದೆಯರು ತೊಟ್ಟಿಲಲ್ಲಿ ಮಲಗಿಸುವರು.



Thursday, May 2, 2024

ಗೌಡ ಸಂಸ್ಕೃತಿ-ಕಟ್ಟೆಮನೆ/ಸೀಮೆಮನೆ/ಊರುಗೌಡ

ಜಾತಿ ಬಾಂಧವರ ರಕ್ಷಣೆಗಾಗಿ ಜಾತಿ ಪದ್ಧತಿಯ ಆಚಾರ, ಕಟ್ಟು, ಕಟ್ಟಳೆಗಳನ್ನು ಕ್ರಮಬದ್ಧ ರೀತಿಯಲ್ಲಿ ನಡೆಸುವುದಕ್ಕಾಗಿ ಹತ್ತು ಕುಟುಂಬ ಹದಿನೆಂಟು ಗೋತ್ರದ ಜನ ಸುಳ್ಯ ಮತ್ತು ಪಂಜ ಸೀಮೆಗಳಿಗೆ ಸಂಬಂಧಪಟ್ಟಂತೆ ಕೂಜುಗೋಡು ಕಟ್ಟೆಮನೆಯನ್ನು ಒಪ್ಪಿಕೊಂಡರು. (ಪುತ್ತೂರು ಭಾಗದಲ್ಲಿ ಬಲ್ನಾಡು ಕಟ್ಟೆಮನೆ ಆ ಭಾಗದ ಗೌಡರುಗಳಿಗೆ ಸೀಮಿತವಾಗಿದೆ)

ಕಟ್ಟೆ ಮನೆಯ ನಿರ್ದೇಶನದಂತೆ ಜಾತಿ ಪದ್ಧತಿಯಲ್ಲಿ ನಡೆಯುವ ಹುಟ್ಟಿನಿಂದ ಸಾವಿನ ತನಕ ನಡೆಯಬೇಕಾದ ಸಂಸ್ಕಾರ ವಿಧಿಗಳನ್ನು ನಿರ್ಣಯಿಸಿ ಕಾರರೂಪಕ್ಕೆ ತರುವಲ್ಲಿ ಕಟ್ಟೆಮನೆ ಮಹತ್ತರ ಪಾತ್ರವಹಿಸಿದೆ. ಕೆಳಗಿನ ಹಂತಗಳಲ್ಲಿ ನ್ಯಾಯ ನಿರ್ಣಯಗಳನ್ನು ತೀರಿಸಲು ಅಸಾಧ್ಯವಾದಾಗ ಕೂಜುಗೋಡು ಕಟ್ಟೆಮನೆಯವರು ದೂರನ್ನು ಸ್ವೀಕರಿಸಿ ಪರಿಹರಿಸುತ್ತಿದ್ದರು. ಇಲ್ಲೂ ಅಸಾಧ್ಯವಾದಾಗ ಮಾತ್ರ ಶೃಂಗೇರಿ ಗುರುಗಳ ಬಳಿ ನಿರ್ಣಯಿಸಲ್ಪಡುತ್ತಿತ್ತು. ಅಲ್ಲದೆ ಮದುವೆ ಕಾವ್ಯದಲ್ಲಿ ತೆಗೆದಿಟ್ಟ ತೆರವಿನ ಹಣದ ಒಂದು ಪಾಲನ್ನು ಶೃಂಗೇರಿ ಮಠಕ್ಕೆ ಕಳುಹಿಸಿ ಕೊಡುವ ಕೆಲಸ ಕಟ್ಟೆಮನೆಯವರದ್ದಾಗಿತ್ತು.

ಸೀಮೆಮನೆ: ಹತ್ತು ಕುಟುಂಬ ಹದಿನೆಂಟು ಗೋತ್ರದ ಜಾತಿ ಬಾಂಧವರಿಗೆ ಸುಳ್ಯ ಮತ್ತು ಪಂಜ ಸೀಮೆಗಳಿರುತ್ತವೆ. ಸೀಮೆಗಳ ವ್ಯಾಪ್ತಿಗೊಳಪಟ್ಟಂತೆ ನ್ಯಾಯ ತೀರ್ಮಾನಗಳು ಆಯಾಯ ಸೀಮೆ ಮನೆಯವರಿಗೆ ವಹಿಸಿಕೊಡಲಾಗುತ್ತದೆ. ಇಲ್ಲೂ ಆಗದೆ ಇರುವ ಸಮಸ್ಯೆಗಳನ್ನು ಕಟ್ಟೆಮನೆಗೆ ಕೊಂಡು ಹೋಗುತ್ತಾರೆ.

ಮಾಗಣೆ ಮನೆ : ನಾಲ್ಕು ಊರುಕಟ್ಟುಗಳಿಗೆ ಒಂದು ಮಾಗಣೆ ಎಂದು ಕರೆಯುತ್ತಾರೆ. ಊರುಕಟ್ಟುಗಳಲ್ಲಿ ನ್ಯಾಯ ತೀರ್ಮಾನಗಳನ್ನು ಪರಿಹರಿಸುತ್ತಾರೆ. ಇಲ್ಲಿ ಆಗದೇ ಇದ್ದಾಗ ಸೀಮೆ ಮನೆಯವರಿಗೆ ಜವಾಬ್ದಾರಿ ವಹಿಸುತ್ತಾರೆ.

ಊರುಗೌಡ: ಊರುಕಟ್ಟುಗೊಬ್ಬ ಊರುಗೌಡ. ದೊಡ್ಡ ಗ್ರಾಮಗಳಲ್ಲಿ ಬಯಲು ವ್ಯಾಪ್ತಿಗೊಬ್ಬ ಊರುಗೌಡ ಇರುತ್ತಾರೆ. ಗೌಡ ಸಮಾಜದಲ್ಲಿ ಸ್ವಜಾತಿ ನೀತಿಯನ್ನು ಕಾಪಾಡು ಉದ್ದೇಶದಿಂದ ಹಿಂದಿನಿಂದಲೂ ಗ್ರಾಮಗಳಿಗೆ ಸಂಬಂಧಪಟ್ಟಂತೆ ಇವರೇ ಕಾರ್ಯನಿರ್ವಹಿಸುತ್ತಿದ್ದರು. ಹುಟ್ಟಿನಿಂದ ಮೊದಲ್ಗೊಂಡು ಸಾವಿನ ತನಕದ ಎಲ್ಲಾ ಕಾರ್ಯಗಳು ಊರುಗೌಡರುಗಳ ನೇತೃತ್ವದಲ್ಲಿ ನಡೆಯಲ್ಪಡುತ್ತಿದ್ದವು. ಮದುವೆ ಮತ್ತು ಸತ್ತವರ ಕರ್ಮಾದಿಗಳಲ್ಲಿ ಇವರ ಮಾರ್ಗದರ್ಶನ ಅತ್ಯಂತ ಪ್ರಾಮುಖ್ಯ. ಹೀಗಾಗಿ ಮದುವೆ ಕಾರವೊಂದನ್ನು ಇಲ್ಲಿ ಉದಾಹರಿಸಿದರೆ ಹೆಣ್ಣು ನೋಡುವಲ್ಲಿಂದ ಆಟಿ ಕೂರುವವರೆಗೆ ಊರುಗೌಡರುಗಳ ಅವಶ್ಯಕತೆಯಿದೆ. ಈ ಎಲ್ಲಾ ಅಂಶಗಳಿಂದ ಇಂದಿನ ಕಾಲ ಘಟ್ಟದಲ್ಲಿ ಅವರ ಎಲ್ಲಾ ಸಮಯಗಳು ಕೂಡ ಇಂತಹ ಸಂದರ್ಭಗಳಿಗೆ ಉಪಯೋಗವಾಗುವುದರಿಂದ ಅವರ ಮನೆ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಅವರು ಎಲ್ಲಾಕಾರ್ಯಗಳಿಗೆ ಹೋಗಬೇಕಾಗಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಗೌರವಧನ ಕೊಡುವುದು ಸಮಂಜಸವೆನ್ನುವುದು ಊರುಗೌಡರುಗಳ ಸಮಾವೇಶಗಳಲ್ಲಿ ಸ್ವಜಾತಿ ಬಾಂಧವರ ಅಭಿಪ್ರಾಯವಾಗಿರುತ್ತದೆ. ಇಂದು ವೈಭವಯುತವಾಗಿ ಮದುವೆ ಕಾವ್ಯಗಳನ್ನು ನಡೆಸಿ ದುಂದು ವೆಚ್ಚ ಮಾಡುವ ನಮ್ಮ ಸಮಾಜ ಬಂಧುಗಳು ಈ ವಿಷಯಗಳನ್ನು ಗಂಭೀರವಾಗಿ ಚಿಂತಿಸಬೇಕಾಗಿದೆ. ಅವರ ಶ್ರಮಕ್ಕೆ ತಕ್ಕುದಾದ ಗೌರವಧನ ನೀಡಬೇಕು. ಈ ಹಣ ಕನಿಷ್ಠವಾಗಿ ಇಂದಿನ ಪರಿಸ್ಥಿತಿಯಲ್ಲಿ ಒಂದು ಸಾವಿರವಾದರೂ ಇರಬೇಕು ಎಂಬುದು ಸಮಾಜದವರ ಒಟ್ಟು ಅಭಿಪ್ರಾಯವಾಗಿದೆ
ಒತ್ತು ಗೌಡ (ಊರು ಗೌಡರ ಸಹಾಯಕ) ಊರುಗೌಡರುಗಳಿಗೆ ಸೂತಕ ಬಂದಾಗ ಊರುಗೌಡರ ಮನೆಗಳಲ್ಲೂ ಅಲ್ಲದೇ ಅವರ ಕುಟುಂಬಸ್ಥರ ಮನೆಗಳಲ್ಲೂಕಾರ್ಯಕ್ರಮಗಳನ್ನು ಮಾಡುವ ಸಂದರ್ಭಗಳಲ್ಲಿ ಹೆಚ್ಚಿನ ಮನೆಗಳಲ್ಲೂ ಒಂದೇ ದಿನಗಳಲ್ಲಿ ಕಾರ್ಯಕ್ರಮಗಳು ಇದ್ದಾಗ ಒತ್ತು ಗೌಡರು
ಕಾರ್ಯನಿರ್ವಹಿಸುತ್ತಾರೆ.



Wednesday, May 1, 2024

ಗೌಡ ಸಂಸ್ಕೃತಿ-ಗೌಡರಿಗೆ ಸಂಬಂಧವಿರುವ ಹತ್ತು ಕುಟುಂಬಗಳು (ಶುಭ ಮತ್ತು ಅಶುಭ ಕಾರ್ಯಗಳಿಗೆ ಸಹಕರಿಸುವವರು)

1. ಬ್ರಾಹ್ಮಣರು

2. ದಾಸಯ್ಯರು

3. ಕ್ಷೌರಿಕರು (ಸವಿತಾ ಸಮಾಜದವರು)

4. ವಿಶ್ವಕರ್ಮರು

5. ಮೂಲದವರು

6. ಮಡಿವಾಳರು

7. ಗಾಣಿಗರು

8. ನೇಕಾರರು-ಚಾಲ್ಯರು

9. ಸಮಗಾರರು

10. ಅಜಲರು ಮತ್ತು ಪರವರು


Tuesday, April 30, 2024

ಗೌಡ ಸಂಸ್ಕೃತಿ - ಬಳಿ (ಗೋತ್ರ)

 1. ನಂದರ ಬಳಿ

2. ಹೆಮ್ಮನ ಬಳಿ

3. ಬಂಗಾರು ಬಳಿ

4. ಮೂಲರ ಬಳಿ

5. ಚಾಲ್ಯರ ಬಳಿ

6. ನಾಯ‌ರ್ ಬಳಿ

7. ಗೋಳಿ ಬಳಿ

8. ಸೆಟ್ಟಿ ಬಳಿ (ಗುಂಡಣ್ಣ ಬಳಿ)

9. ಕಬರ್ ಬಳಿ

10. ಚಿತ್ತರ್ ಬಳಿ

11. ಗೌಡರ ಬಳಿ

12. ಬಳಸಣ್ಣ ಬಳಿ

13. ಕರ್ಬನ್ನ ಬಳಿ

14. ಚೌದನ್ನ ಬಳಿ

15. ಸಾಲೆ ಬಳಿ

16. ಲಿಂಗಾಯಿತ ಬಳಿ

17. ಕರಂಬೆರ್ ಬಳಿ

18. ಕುತ್ತಿಗುಂಡ ಬಳಿ

ಗೌಡ ಸಂಸ್ಕೃತಿ - ಪುಸ್ತಕ -ಮನೆತನದ ನೆಲೆಗಳು

ಕುಲದೇವರು - ತಿರುಪತಿ ಶ್ರೀ ವೆಂಕಟರಮಣ

ಶೃಂಗೇರಿ ಮಠ ಜಗದ್ಗುರುಗಳು

ಕಟ್ಟೆ ಮನೆ ಗೌಡರು

ಸೀಮೆ ಮನೆ ಗೌಡರು

ಮಾಗಣೆ ಮನೆ ಗೌಡರು

ಊರುಗೌಡರು

ಒತ್ತುಗೌಡ (ಬುದ್ಧಿವಂತ)



Monday, March 4, 2024

ಗೌಡ ಸಂಸ್ಕೃತಿ - ಪುಸ್ತಕ

 

ಮುನ್ನುಡಿ    - ಪ್ರೊ|| ಕೋಡಿ ಕುಶಾಲಪ್ಪ ಗೌಡ

ಬೇಸಾಯ ವೃತ್ತಿಯ, ಕಠಿಣ ಪರಿಶ್ರಮಿಗಳೂ, ಸ್ವಾವಲಂಬಿಗಳೂ, ಸ್ವಾಭಿಮಾನಿಗಳೂ, ನೀತಿ ನಿಯಮಪಾಲಕರು ಆದವರು ಗೌಡರು. ಗೌಡ ఎంబ ಪದದ ವ್ಯುತ್ಪತ್ತಿತ ಬಗ್ಗೆ ನಾನಾ ರೀತಿಯ ಊಹೆಗಳು ನಡೆದಿವೆ. ಇವರು ಮೂಲತಃ ಬಂಗಾಳದವರು, ಅಲ್ಲಿ ಕಬ್ಬು ಬೆಳೆಸಿ, ಬೆಲ್ಲ ತಯಾರಿಕೆಯ ಉದ್ಯೋಗ ಪ್ರಮುಖವಾಗಿತ್ತು. ಬೆಲ್ಲಕ್ಕೆ ಆರ್ಯನ್ ಭಾಷೆಯಲ್ಲಿ ಗುಡ ಎನುತ್ತಾರೆ, ಹಾಗೆ ಪ್ರಧಾನವಾಗಿ  ಬೆಲ್ಲ ತಯಾರಿಯಾಗುವ ನಾಡನ್ನು ಗೌಡ ದೇಶವೆಂದು ಗುರುತಿಸಿದುದರಿಂದ ಬಂಗಾಳಕ್ಕೆ ಆ ಹೆಸರಾಯಿತು ಸಹಜವಾಗಿ ಗೌಡ ದೇಶದ ಜನರು ಗೌಡರು ಎಂದಾದರು.

ಕಲ್ಲಾಗಿರಬೇಕು ಕಠಿಣ ಭವ ತೊರೆಯೊಳಗೆ, ಬೆಲ್ಲವಾಗಿರಬೇಕು ಬಲ್ಲವರೊಡನೆ' ಎಂಬ ಮಾತಿಗನುಸರಿಸಿಯೇ ಹೆಚ್ಚಿನ ಗೌಡರ ವರ್ತನೆ ಕಂಡು ಬರುವುದೇನೋ ನಿಜವಾದರೂ ದಾಖಲೆಯ ಆಧಾರವಿಲ್ಲದೆ ಇರುವುದರಿಂದ ಇದನ್ನು ನಿಜವೆಂದು ಒಪ್ಪಲು ಸಾಧ್ಯವಿಲ್ಲ. ಇನ್ನೊಬ್ಬರು ದೊಡ್ಡ ಸಂಸ್ಕೃತ ವಿದ್ವಾಂಸರಾದ ದಿ|| ಕಡವ ಶಂಭು ಶರ್ಮರು ಗೌಡರು ಹಿಂದೆ ಗೋಪಾಲಕರಾಗಿದ್ದರು. ಗೋ + ಆಟ- ಗೋವಾಟ-ಗೌಡ ಎಂದಾಗಿರಬೇಕು ಎಂದು ಹೇಳಿದ್ದರು. ಇದೂ ಊಹೆಯ ನೆಲೆಯಲ್ಲಿಯೇ ನಿಲ್ಲುತ್ತದೆ.ಮುದುಕ ಎಂಬ ಶುದ್ಧ ಕನ್ನಡ ಪದವನ್ನು 'ಮುದಂ ಕರೋತಿ  ಮುದುಕಃ ಎಂದು ಹೇಳುವ ಸಂಸ್ಕೃತ ಪ್ರಿಯರು ಇದ್ದಾರೆ. ಪ್ರಾಚೀನ ಕನ್ನಡ ಶಾಶನಗಳಲ್ಲಿ ಸಾಮಾಜಿಕ ವ್ಯವಸ್ಥೆಯ ಅಧಿಕಾರ ಸ್ಥಾನವನ್ನು ಕುರಿತು ಹೇಳುವಾಗ 'ಗ್ರಾಮ ವೃದ್ಧ' ಎಂಬ ಪದ ಹಲವೆಡೆ ಕಂಡು ಬರುತ್ತದೆ. ಗ್ರಾಮದ ಹಿರಿಯ ಎಂಬ ಒಂದು ಅಧಿಕಾರ ಸ್ಥಾನವನ್ನು ನಿರ್ದೇಶಿಸುವ ಈ ಸಂಸ್ಕೃತ ಪದ ಪ್ರಾಕೃತ  ಭಾಷೆಯಲ್ಲಿ ಗ್ರಾಮ ವುಡ್ದ ಎಂದಾಗಿ ಮುಂದೆ  ಗ್ರಾಮುಡ್ಡ: ಗಾಮು೦ಡ, ಗಾವುಂಡ, ಗವುಂಡ, ಗೌಡ ಎಂಬ ರೂಪಗಳು ಕಾಲ ಕ್ರಮದಲ್ಲಿ ಕಂಡು ಬರುತ್ತವೆ. ಇವೆಲ್ಲ ಶಿಲಾಶಾಸನಗಳಲ್ಲಿ ಕಂಡು ಬರುವ ರೂಪಗಳು . ಗಾಮದ ಒಂದು ಅಧಿಕಾರವನ್ನು ಸೂಚಿಸುವಂಥದ್ದು ಮತ್ತೆ ಆ ಸಂತತಿ ಯವರಿಗೆಲ್ಲ ಅನ್ವಯಿಸಿ ಒಂದು ಜಾತಿಯ ಹೆಸರಾಗಿ ಬಳಕೆಗೆ ಬಂದಿದೆ. 

ಆರ್ಯನ್  ವರ್ಗದ ಜನರಲ್ಲಿ ಋಷಿಗಳ ಮೂಲಕ  ಗೋತ್ರಗಳನ್ನು ಗುರುತಿಸುತ್ತಾರೆ, ಗೋತ್ರ ಅಂದರೆ ಗೋವುಗಳ ರಕ್ಷಣೆಗಿರುವ ಸ್ಥಳ ಗೋ ಸಮೂಹ ಎಂದೆಲ್ಲ ಅರ್ಥವಿದೆ. ಆರ್ಯರು ತಮ್ಮ ಸಂಪತ್ತಾದ ಅಥವಾ ಜೀವನಾಧಾರವಾದ, ಗೋ ಸಮೂಹಗಳನ್ನು ಹೊಡೆದುಕೊಂಡು ಮೇವಿರುವೆಡೆಗೆಲ್ಲ ಸಂಚರಿಸುತ್ತಿದ್ದ ಮಂದಿ. ಹೊ. ಇಂತಹ ಒಂದು ಗುಂಪು ಒಂದು ಗೋತ್ರವೇನಿಸುತ್ತಿತ್ತು. ಆ ಗುಂಪು ಯಾರಿಗೆ ಸ್ವಂತವಾಗಿದೆಯೋ ಅದು ಅವನ ಹೆಸರಿನ ಗೋತ್ರವೆನಿಸುತ್ತಿತ್ತು. ಗೌಡರಲ್ಲಿ ಈ ವ್ಯವಸ್ಥೆಯಿರಲಿಲ್ಲವಾದುದರಿಂದ 'ಗೋತ್ರ' ಎಂದು ನಾವು ಹೇಳಿಕೊಳ್ಳುವ ಹತ್ತುಕುಟುಂಬ, ಹದಿನೆಂಟು ಗೋತ್ರ'ವೆಂಬಲ್ಲಿ  ಗೋತ್ರವೆಂಬುದರ  ಅರ್ಥ ಬಳಿ'ಯೆಂಬುದರಷ್ಟು ಹೊಂದಿಕೊಳ್ಳುವುದಿಲ್ಲ.ಆದರೆ ಮಾತಿನಲ್ಲಿ ಹೇಗೋ ಬಂದುಬಿಟ್ಟಿದೆ. ಬಳಿ (ಬ) ಎಂಬುದಕ್ಕೆ 'ಹತ್ತಿರ' 'ಸಮೀಪ  “ಮುಂದುವರಿವ' ಎಂಬಿತ್ಯಾದಿ ಮೂಲಾರ್ಥವಿದ್ದರೂ  ಸಂಸ್ಕೃತ ಪದ “'ಗೋತ್ರ ' “ವಂಶ” “ಕುಲ ಎಂಬ ಸಾಮಾನ್ಯ ಅರ್ಥವನ್ನೇ  ನಾವೂ ನಮ್ಮ ವಾಡಿಕೆಯಲ್ಲಿ ಬಳಸುತಿದ್ದೇವೆ. 

ಗೌಡರು ಏನೋ ಕಾರಣದಿಂದ ಐಗೂರು ಸೀಮೆಯಿಂದ ಘಟ್ಟವಿಳಿದು ತುಳುನಾಡಿನ  ಕಡೆಗೆ ವಲಸೆ ಬಂದರು. ಹಾಗೆ ವಲಸೆ ಬಂದವರು ಹತ್ತು ಕುಟುಂಬಕ್ಕೆ ಸೇರಿದ ಜನರು . ಈ ಹತ್ತು ಕುಟುಂಬಗಳಲ್ಲಿ ಮೊದಲು ಹತ್ತು ಬಳಿಗಳೆ  ಇದ್ದಿರಬಹುದು  ತಮ್ಮ ಸಮೂಹಕ್ಕೆ ಇತರ ಕೆಲವರನ್ನು ಸೇರಿಸಿಕೊಳ್ಳಬೇಕಾದ ಅಗತ್ಯ ತೋರಿ ಬಂತು, ಹಾಗೆ ಹೊಸಬರನ್ನೂ  ಒಂದೊಂದು ವ್ಯವಸ್ಥಿತ  ಗುಂಪುಗಳಾಗಿ ಮಾಡಿ ಅದಕ್ಕೊಂದು ಹೆಸರನ್ನು ಕೊಟ್ಟು ತಮ್ಮ ಜಾತಿಯ  ಪರಿಧಿಯಲ್ಲಿ ಸೇರಿಸಿಕೊಂಡು ವಿಸ್ತರಿಸಿದ ಸಮಾಜದಲ್ಲಿ ಗೋತ್ರ ಹತ್ತು ಇದ್ದದ್ದು ಹದಿನೆಂಟಾಗಿ ವಿಸ್ತರಿಸಿತು. ವಲಸೆ ಬಂದವರು ಹೊಸ ಜಾಗದಲ್ಲಿ ಪರಕೀಯರಂತಿರುತಾರೆ ಸ್ಥಳೀಯರಾದವರಿಂದ ದಬ್ಬಾಳಿಕೆಯನ್ನು ಎದುರಿಸುವ ಸಂಧರ್ಭವು ಇರಬಹುದು. ಹೀಗಿದ್ದರೆ ತಮ್ಮಲ್ಲಿ ತಕ್ಕಷ್ಟು ಸಂಖ್ಯಾಬಲವು ಬೇಕಾಗುತದೆ ಈ ಕಾರಣದಿಂದ ವಿಸ್ತರಿಸಿದ ಆಗಿನ ಕಾಲದ ನಮ್ಮ ಸಮಾಜದವರು ಸಾಮಾಜಿಕ ನಡವಳಿಕೆಗಳನ್ನು ರೂಪಿಸಿಕೊಳ್ಳಲು ಶೃಂಗೇರಿಯ ಗುರುಪೀಠವನ್ನೇ ಅವಲಂಬಿಸಿದರು. ಆ ಬಹುಜನ ಸಮುದಾಯಗಳಿಗೆಲ್ಲ ಇದ್ದ ಏಕೈಕ ಗುರುಪೀಠ ಶೃಂಗೇರಿ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣಕರ್ತರಾದ ಮಹಾಪುರುಷ ಮಾಧವಾಚಾರ್ಯರೇ ವಿದ್ಯಾರಣ್ಯರೆಂಬ ಹೆಸರಿನ ಯತಿಗಳಾಗಿ ಮುಂದೆ ಶೃಂಗೇರಿಯ ಗುರುಪೀಠವನ್ನೇರಿದರೆಂಬ ಪ್ರತೀತಿಯಿದೆ. ವಿಜಯನಗರದ ಪ್ರತಿಯೊಬ್ಬ ಅರಸನೂ ಶೃಂಗೇರಿಪೀಠಕ್ಕೆ ದತ್ತಿದಾನಗಳನ್ನು ಕೊಟ್ಟು ಗೌರವಿಸಿದ್ದಾನೆ. ಈಗಲಾದರೆ ಜಾತ್ಯತೀತವೆಂದು ಕರೆದುಕೊಳ್ಳುವ ನಮ್ಮ ದೇಶದಲ್ಲಿ ಒಂದೊಂದು ಜಾತಿಗೆ ಒಂದೊಂದು ಗುರುಪೀಠ ಬೇಕೆಂದು ಮಾಡಿಕೊಂಡಿರುವುದು ಕಂಡು ಬರುತ್ತದೆ.

ಸ್ವಜಾತಿಗೇ ಮೀಸಲಾದ ಗುರುಪೀಠವಿಲ್ಲದಾಗ ಶೃಂಗೇರಿ ಪೀಠದ ಗುರುಗಳೇ ನಿರ್ದೇಶಿಸಿದ ಗೌಡರ ಸಾಮಾಜಿಕ ನಡವಳಿಕೆಗಳನ್ನೂ ಹಿಂದಿನಿಂದಲೂ ನಮ್ಮವರು ಪಾಲಿಸುತ್ತ ಬಂದಿದ್ದಾರೆ. ಮುಖ್ಯವಾಗಿ 'ಬಳಿ' ಅಥವಾ 'ಗೋತ್ರ' ನಿಯಮಾನುಸಾರ, ಒಂದೇ ಗೋತ್ರಕ್ಕೆ ಸೇರಿದವರೊಳಗೆ ಮದುವೆ ನಡೆಯಬಾರದೆಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತ ಬಂದಿದ್ದರೂ ಒಂದೆರಡು ಕಡೆಗಳಲ್ಲಿ ಅತಿಕ್ರಮಣವಾದ ಸಂಗತಿಗಳು ಕಂಡು ಬರುತ್ತವೆ. ಈಗ ಹೊಸ ಕಾಲ. ವಿದ್ಯಾಭ್ಯಾಸ ಹೆಚ್ಚಿದೆ. ಶ್ರೀಮಂತಿಕೆಯೂ ಬಂದಿದೆ. ಈಗ ಎದ್ದು ಕಾಣುವ ಸಂಗತಿಯೆಂದರೆ ಯಾರಿಗೂ ಯಾವುದಕ್ಕೂ ಸಮಯವಿಲ್ಲದಾಗಿರುವುದು. ಹೀಗಾಗಿ ಮದುವೆಯೆಂಬುದು ಹಿಂದೆ ಮೂರು-ನಾಲ್ಕು ದಿನಗಳ ಸಂಭ್ರಮವಾದರೆ, ಈಗ ಸಿನೆಮಾದಲ್ಲಾದಂತೆ, ಯಾವುದೋ ಒಂದು ಕಲ್ಯಾಣಮಂಟಪದಲ್ಲಿ ಒಂದೆರಡು ಗಂಟೆಗಳಲ್ಲಿ ಮುಗಿದು ಹೋಗುತ್ತದೆ. ಅನೇಕ ಆಚರಣೆಗಳು ಅನಗತ್ಯವೆಂದು ತೊಡೆದು ಹಾಕಿ ಬಿಡುತ್ತಾರೆ.

ಹೀಗೆ ವಲಸೆ ಬಂದ ಗೌಡರಲ್ಲಿ ಎರಡು ಪಾಲಾಯ್ತು. ಒಂದು ಗುಂಪು ಪಶ್ಚಿಮಾಭಿಮುಖವಾಗಿ ಈಗ ದಕ್ಷಿಣ ಕನ್ನಡವೆಂದು ಕರೆಯುವ ಸೀಮೆಯ ಕಡೆಗೆ ಹರಿಯಿತು. ಇನ್ನೊಂದು ಪೂರ್ವಾಭಿಮುಖವಾಗಿ ಕೊಡಗು ಸೀಮೆಯ ಕಡೆಗೆ ಹರಿಯಿತು. ಕೊಡಗು ಸೀಮೆಯಲ್ಲಿ ಜನವಸತಿ ಕಡಿಮೆ. ಕಾಡು ಹೆಚ್ಚು. ಆಗಿನ ಕಾಲದ ಅರಸರು ಇಲ್ಲಿಗೆ ಜನರು ಬಂದು ನೆಲೆಸುವುದನ್ನು ಪ್ರೋತ್ಸಾಹಿಸಿ ಸಹಾಯ ಕೊಡುತ್ತಿದ್ದರು. ಇಲ್ಲಿಗೆ ಬಂದವರು ಕಾಡನ್ನು ಕಡಿದು ಗದ್ದೆ-ತೋಟಗಳನ್ನು ಮಾಡಿ ಸ್ವಂತ ಭೂ ಹಿಡುವಳಿದಾರರಾದರು. ಸಿರಿ ಸಂಪನ್ನರೂ ಆದರು. ದಕ್ಷಿಣಕನ್ನಡದ ಕಡೆಗೆ ಹೋದವರಿಗೆ ಈ ಸೌಲಭ್ಯ ದೊರೆಯದೆ ಅಲ್ಲಿ ಮೊದಲೇ ನೆಲೆಸಿದ್ದ ದೊಡ್ಡ ಭೂ ಮಾಲಿಕರಿಂದ ಹಿಡುವಳಿಗಳನ್ನು ಗೇಣಿಗೆ ಪಡೆದು ಬೇಸಾಯಗಾರರಾದರು. ಸ್ಥಳೀಯ ಪ್ರಬಲ ಭಾಷೆಯಾದ ತುಳುವಿನ ಪ್ರಭಾವಕ್ಕೆ ಒಳಗಾಗಿ, ಒಂದೆರಡು ತಲೆಮಾರು ಕಳೆಯುವಷ್ಟರಲ್ಲಿ ತುಳುವೇ ಅವರಿಗೆ ಮಾತೃಭಾಷೆಯಾಯಿತು.

ಹೀಗೆ ಗೌಡರಲ್ಲಿ ತುಳು ಮಾತಾಡುವವರು ಮತ್ತು ಕನ್ನಡದ ಒಂದು ಪ್ರಭೇದವನ್ನು ಅರೆಬಾಸೆ ಮಾತಾಡುವವರೆಂದು ಎರಡು ವಿಭಾಗಿಸಿದಂತೆ ತೋರಿದರೂ ಸಾಮಾಜಿಕ ಕಟ್ಟುಪಾಡುಗಳು ಆಚರಣೆಗಳು, ಸಂಪ್ರದಾಯಗಳಲ್ಲಿ ಏನೊಂದೂ ಭೇದ ಕಾಣಿಸಲಿಲ್ಲ. ಆಂತರಿಕ ಸಾಮಾಜಿಕ ವ್ಯವಸ್ಥೆಯನ್ನು ಗುರುಪೀಠದಿಂದ ನಿಯುಕ್ತರಾದ ಅಧಿಕಾರಿ ವರ್ಗದವರು, ಎಲ್ಲ ಕಡೆಯೂ ಸರಿಯಾಗಿ ತಮ್ಮ ಕರ್ತವ್ಯ ಪಾಲಿಸಿದ್ದೇ ಹೀಗಿರಲು ಕಾರಣವಾಗಿರಬೇಕು. ತೋರ ಮಟ್ಟಿಗೆ ಹೋಗಿದ್ದರೂ ಕೆಲವು ಅನಿವಾರ್ಯ ಕಾರಣಗಳಿಂದ ಅಲ್ಲಲ್ಲಿ ಕೆಲವು ವ್ಯತ್ಯಾಸಗಳು ಆಚರಣೆಯಲ್ಲಿ ಸಂಪ್ರದಾಯದಲ್ಲಿ ಕಂಡು ಬರುತ್ತವೆ ಎಂದು ಗೌಡ ಯುವ ಸೇವಾ ಸಂಘದ ಗ್ರಾಮ ಸಭೆಗಳು ಸುಮಾರು 30 ಕಡೆ ನಡೆದಾಗ ಆ ಊರುಗಳ ಮುಂದಾಳುಗಳು ಯುವ ಸೇವಾ ಸಂಘದವರ ಗಮನಕ್ಕೆ ತಂದಾಗ ಹಿಂದಿನ ಕ್ರಮಗಳು ಅಳಿಸಿ ಹೋಗದಂತೆ ಅಥವಾ ಮುಂದಿನ ತಲೆಮಾರಿಗೆ ಸರಿಯಾದ ಕ್ರಮ ಯಾವುದೆಂದು ತಿಳಿಸಿ ಕೊಡಲು ಎಲ್ಲವನ್ನೂ ಒಂದು ನಿರ್ಧಿಷ್ಟ ಸೀಮೆಗೆ ಅಳವಡಿಸಿ ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಶ್ಲಾನ್ಯ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ ಎಂಬುದನ್ನು ನಾನು (ಅವರನ್ನು) ಹಾರ್ದಿಕವಾಗಿ ಅಭಿನಂದಿಸುತ್ತೇನೆ. ಬೇರೆಡೆಯಲ್ಲಿ ಭೇದ ಕಂಡು ಬಂದರೆ ಅಲ್ಲಿಯ ಬಂಧುಗಳು ಸೇರಿ, ಹೀಗೆಯೇ ಒಂದು ಪ್ರಕಟಣೆಯನ್ನು ಹೊರತರಬೇಕು. ಆ ಮೇಲೆ ಅಂಥ ಎಲ್ಲ ಆಕರಗಳನ್ನು ಪರಿಶೀಲಿಸಿ (Standard) ಕೈಫಿಡಿ ಹೊರ ಬರುವಂತಾಗಬೇಕು. ಗೌಡ ಯುವ ಸಂಘ ಇಡುವ ಈ ಮೊದಲ ಹೆಜ್ಜೆ - ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ಬಹುದೂರ ಸಾಗಲಿ. ಕುಲಬಾಂಧವರು ಅಭಿಮಾನದಿಂದ ಅವರ ಉತ್ಸಾಹವನ್ನು ಪ್ರೋತ್ಸಾಹಿಸಲಿ. ಮುನ್ನುಡಿ ರೂಪದಲ್ಲಿ ಬರೆದ ಈ ನಾಲ್ಕು ಮಾತುಗಳಲ್ಲಿ ಒಳಗೆ ಏನೇನಿದೆಯೆಂದು ವಿಮರ್ಶಾಪೂರ್ವಕ ಬಯಲು ಮಾಡಲಿಲ್ಲ. ಎಲ್ಲವೂ (ಹುಟ್ಟಿನಿಂದ ಸಾವಿನವರೆಗಿನದು) ಇವೆ. ನೀವೇ ಓದಿ ನೋಡಿ ಎಂದು ವಿನಂತಿಸಿ, ನನ್ನಿಂದ ಈ ನುಡಿಗಳನ್ನು ಬರೆಸಿದ ಸಂಘದ ಸದಸ್ಯರಿಗೆ ವಂದಿಸಿ, ಎಲ್ಲರಿಗೂ ಶುಭ ಕೋರಿ ಮುಗಿಸುತ್ತೇನೆ

ಭದ್ರಂ ಶುಭಂ ಮಂಗಳಂ

ಪ್ರೊ. ಕೋಡಿ ಕುಶಾಲಪ್ಪ ಗೌಡ

Page1

ತುಳುನಾಡಿಗೆ ಗೌಡರ ವಲಸೆಯು ಕ್ರಿ.ಶ. 1450 ರಿಂದ 1520 ರ ಅವಧಿಯಲ್ಲಿ ಹಂತ ಹಂತವಾಗಿ ಆಗಿರಬಹುದೆಂದು ಇತಿಹಾಸ ತಜ್ಞರ ಅಭಿಮತವಾಗಿದೆ. ಗೌಡ ಜನಾಂಗವು ಸುಳ್ಯ, ಪುತ್ತೂರು, ಬೆಳ್ತಂಗಡಿ, ವಿಟ್ಲ, ಬಂಟ್ವಾಳ ತಾಲೂಕುಗಳಲ್ಲಿ ಸಾಮಾನ್ಯವಾಗಿಯೂ ಕಾಸರಗೋಡಿನ ಬಂದಡ್ಕ ಕಡೆ ವಿರಳವಾಗಿಯೂ ನೆಲೆಸಿದ್ದಾರೆ. ಕೊಡಗಿನಲ್ಲಿ ಕೊಡಗರಸರ ಕಾಲದಲ್ಲಿ "ಕುಳ ನಷ್ಟವಾಗಿದ್ದು" ಜಮ್ಮಾ ಹಿಡಿದು ನೆಲೆಯಾಗಿದ್ದಾರೆ. ಮುಖ್ಯವಾಗಿ ಇವರು ಬಯಲು ಸೀಮೆಯಿಂದ ಹಾಸನದ ಐಗೂರು ಸೀಮೆ ಹಾಗೂ ಸರಹದ್ದುಗಳಿಂದ ವಲಸೆ ಬಂದರೆಂಬ ಪ್ರತೀತಿಯಿದೆ. ಪರಂಪರೆಯ ಮಾತಿನಲ್ಲಿ ಚಿನ್ನದ ಹೆಸರಿನ ಹರಿಯುವ ನೀರಿನ ಆಶ್ರಯದ - ಚಿನ್ನದಂತಹ ಬೆಳೆ ಭಾಗ್ಯ ಪಡೆಯುತ್ತಿದ್ದು ಚಿನ್ನದ ನಾಮಾಂಕಿತ ಹೊಂದಿದ ಶಕ್ತಿ ಆರಾಧನೆಯ ಚಿನ್ನದ ಹೆಸರನ್ನು ಧರಿಸುವ ಅನುಭವಿಸುವ ನಾಡು ಎಂದಾಗಿದೆ. ಇದು ಹೇಮಾವತಿ ನದಿ ಪರಿಸರ ಹಾಗೂ “ಹೊಸಕೋಟೆ ಕೆಂಚಮ್ಮ” ಸಾನಿಧ್ಯವೆನಿಸಿದೆ. ಇಂತಹ ಸುಭಿಕ್ಷ ಕಾಲದಲ್ಲಿ ಒಮ್ಮೆ ಅತೀವ ಬರಗಾಲ ಬಂದು ಹೇಮಾವತಿ ನದಿ ಬತ್ತಿ ಹೋಗಿ ಕೃಷಿ ಕಾಯಕಕ್ಕೆ ಸಾಧ್ಯವಾಗದೆ ಗೋವುಗಳ ಪಾಲನೆಗೆ ತೊಡಕಾಗಿ ಜೀವಿಸಲು ಜನಗಳಿಗೆ ಕಷ್ಟವಾಯಿತು. ಅಲ್ಲದೆ ಅಂದಿನ ಪಾಳೇಗಾರ ರಂಗಪ್ಪನಾಯಕನೆನ್ನುವ ಐಗೂರು ಸೀಮೆಯ ಆಡಳಿತದಾರನು ಕ್ರೂರವಾಗಿ ವರ್ತಿಸಿದ್ದರಿಂದ ಒಕ್ಕಲುತನ ಮಾಡಲು ಅಸಾದ್ಯವಾಯಿತು ಎನ್ನಲಾಗಿದೆ. ತುಳುನಾಡಿನಲ್ಲಿ
ಕೃಷಿಕಾಯಕಕ್ಕೆ ವಿಫುಲ ಸ್ಥಳಾವಕಾಶಗಳಿದ್ದು ಇಲ್ಲಿಯ ಮೇಲ್ವರ್ಗದ ಊಳಿಗಕ್ಕಾಗಿ ಬಂದಿದ್ದು ಮುಂದೆ ಅನುಕೂಲ ವಾತಾವರಣದಲ್ಲಿ ಹೊಂದಿಕೊಂಡರು. ಇಲ್ಲಿ ಬೇಸಾಯದೊಂದಿಗೆ ರಾಗಿ ಬೆಳೆಯಲ್ಲಿ ಪ್ರಸಿದ್ಧರಾದರು. ಮುಂದೆ ಮಾತೃ ಭಾಷೆಯ ಪರಿವರ್ತನೆಯಾಗಿ ಅರೆಭಾಷೆ ಎನಿಸಿತು. ಇಲ್ಲಿಯ ಪರಿಸರ ಭಾಷೆ ತುಳು ಅಗತ್ಯವೆನಿಸಿತ್ತಾದರೂ ಈ ಪರಿಸರದಲ್ಲಿಯ ಪರಿಸ್ಥಿತಿಗೆ ನಿಧಾನವಾಗಿ ಹೊಂದಿಕೊಳ್ಳಬೇಕಾಯಿತು. ಇಲ್ಲಿಯ “ಮಾತೃಪ್ರಧಾನ” ಪರಂಪರೆಯಲ್ಲಿ ತನ್ನತನ ಉಳಿಸಿ ಬೆಳೆಸಬೇಕಾಗಿತ್ತು.

ತುಳುನಾಡಿನಲ್ಲಿ ಭಂಗರಸರ ಸಂಸ್ಥಾನದಲ್ಲಿ ಹೆಚ್ಚಾಗಿ ಈ ಒಕ್ಕಲಿಗರು ತಮ್ಮ ನೆಲೆಯನ್ನು ಸ್ಥಾಪಿಸಿಕೊಂಡರು. ಹೆಚ್ಚಿನ ಕೃಷಿ ಭೂಮಿ ಮೇಲ್ವರ್ಗದವರ ಸ್ವಾಧೀನವಿದ್ದು ಉಳುಮೆಗಾಗಿ ಪಡಕೊಂಡು ಮುಂದುವರಿದರು. ಗೌಡ ಜನಾಂಗಕ್ಕೆ ಪೂರ್ಣ ಅನುಕೂಲವಾಗಿ ಕೆಳದಿ ನಾಯಕರ ಅಧಿಕಾರದಲ್ಲಿ ತುಳುನಾಡು ಇತ್ತಲ್ಲದೆ, ಕೆಳದಿಯರಸರು ಗೌಡ ಸಮುದಾಯದವರಾಗಿದ್ದು ವಿಜಯನಗರದರಸರ ಮೂಲಕ ಕೆಳದಿಯ ನಾಯಕರು ಆಡಳಿತ ನಡೆಸುತ್ತಿದ್ದರು.

ಮೂಲದಲ್ಲಿ ಒಕ್ಕಲಿಗ, ಲಿಂಗಾಯ್ತ ಮತಸ್ಥರಾಗಿ ಗುರುತಿಸಿಕೊಂಡು ನಂತರ ಗೌಡರಾಗಿ ಪರಿವರ್ತನೆಯಾದ ಐತಿಹ್ಯಗಳು ಇವೆ. ಕೂಡು ಕುಟುಂಬದವರಾಗಿ ಭೂಮಿ ಸಂಬಂಧ ಕೃಷಿ ಉದ್ದೇಶದಲ್ಲಿ ಹಿಂದೆ ಇಲ್ಲಿಯವರು ದೈವ ದೇವರ ಆರಾಧನೆ ಮಾಡುತ್ತಿದ್ದು ಹಂತ ಹಂತವಾಗಿ ಊರಿನ ಅಧಿಕಾರಗಳು ಲಭಿಸುವಂತಾಯಿತು. ಹಿಂದೆ ಸಾಮಾಜಿಕ ನೆಲೆಗಟ್ಟಿಗೆ ವ್ಯವಸ್ಥೆ ಇದ್ದ ಸ್ಥಳ ಮನೆ (ಗುರು ಮನೆ- ಪುರೋಹಿತ ವರ್ಗ) ನಡುಮನೆ (ಆಡಳಿತ ವರ್ಗ), ದೊಡ್ಡ ಮನೆ (ಆಡಳಿತ ನಡೆಸುವ), ಮುಂತಾದ ಸ್ಥಾನ ಮಾನಗಳಲ್ಲಿ ದೊಡ್ಡಮನೆ ಸಂಪ್ರದಾಯವು ಗೌಡ ಕುಟುಂಬಗಳಿಗೂ ಬಂತು. ನಂತರದ ಕಾಲದಲ್ಲಿ ಬದಲಾವಣೆಗೊಂಡು ಶೃಂಗೇರಿ ಮಠದ ಆಜ್ಞಾನುವರ್ತಿಗಳಾದರು (ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧ ಪಟ್ಟ ಆಧಾರ ಗ್ರಂಥ -ಪರ್ಲ ಆನಂದ ಗೌಡರು).

Page 2
ಗೌಡರು ತುಳುನಾಡಿನಲ್ಲಿ ಸಾಮಾಜಿಕವಾಗಿ ಬಳಿ ಸಂಪ್ರದಾಯ ಹೊಂದಿದವರಾಗಿದ್ದು ಭಿನ್ನ ಬಳಿಗಳಲ್ಲಿ ಮದುವೆ ಮುಂತಾದ ಸಂಬಂಧಗಳು ನಡೆಯುತಿದ್ದು ತುಳುನಾಡಿನಲ್ಲಿ ಮಾತ್ರ ಮೂಲದಿಂದ ಕುಟುಂಬ ನೆಲೆಯಲ್ಲಿದ್ದು ಮುಖ್ಯವಾಗಿ ಗೌಡರಿಗೆ ಪಿತೃ ಮೂಲವಾಗಿದ್ದು ಸಾಮಾಜಿಕತೆಗೆ ಬಳಿ ಭಾಂಧವ್ಯವೇ ಬೇಕಾಗಿದ್ದು ಅರಮನೆ ಅಧಿಕಾರದಿಂದ ಪಡೆಯಲಾಯಿತು. ಶೃಂಗೇರಿ ಗುರುಪೀಠದ ಆಣತಿಯಂತೆ ದೇವಾಲಯಗಳ ಮೂಲಕ ಇಲ್ಲಿಯ ಸಾರಯಿತು ಶ್ವಾಹ್ಮಣರಲ್ಲಿ ಆಚಾರ-ವಿಚಾರ ಹಕ್ಕು ತಪ್ಪು-ಒಪ್ಪು ಕಾಣಿಕೆ ಮುಂತಾದ ನೈತಿಕ ಕಟ್ಟು ನಾಡುಗಳಿದ್ದವು. ಅಂತಯೇ ಶೃಂಗೇರಿ ಗುರುಪೀಠದ ಆಣತಿಯಂತೆ ಗೌಡ ಜನಾಂಗದ ಉನ್ನತಿಗಾಗಿ ನೈತಿಕತೆಯ, ಉಳಿವಿಗಾಗಿ, ಗೌಡ ಆಚಾರ-ವಿಚಾರಗಳ ಹಕ್ಕು, ದೀಪಾರಾಧ್ಯರಿಂದ ಹಕ್ಕು. ಮದುವೆಚರಣ ಹಕ್ಕು, ಹಾಗೂ ತಪ್ಪು - ಒಪ್ಪು ಕಾಣಿಕೆ, ಮುಂತಾದ ವ್ಯವಸ್ಥೆಯು ಮೂಡು ಕಟ್ಟೆ ಮನೆ, ಪಡು ಕಟ್ಟೆಮನೆಯ ಗೌಡರಿಗೂ ಅವರಿಂದ ಮಾಗಣೆ ಗೌಡರಿಗೂ ಊರುಗೌಡರಿಗೂ, ಒತ್ತು ಗೌಡರಿಗೂ ಅಧಿಕಾರ ಹಾಗೂ ನೇಮಕ ಮಾಡಿ ಕಟ್ಟೆ ಮನೆ ಗೌಡರಿಗೆ 'ಸನದು' ಕೊಡಿಸಲಾಯಿತು. ಮುಂದೆ ಗೌಡ ಸಮಾಜಕ್ಕೆ ಭದ್ರ ನೆಲೆಯಾಯಿತು.

ಮನೆಯ ಕ್ಷೇತ್ರ ಸಂಬಂಧವಾಗಿ ವರ್ಣರ ಪಂಜುರ್ಲಿ, ಕೃಷಿಕಾಯುವ ಸಂಬಂಧ ಕುಪ್ಪೆ ಪಂಜುರ್ಲಿ (ಮನಿಪಾಂತಿ ಪಂಜುರ್ಲಿ), ಮನೆಯೊಳಗಿನ ದೈವ ಪಾಷಾಣ ಮೂರ್ತಿ, ಕೃಷಿ ಸಂಪತ್ತು ಪಶುಸಂಪತ್ತು, ಐಶ್ವರ್ಯ ಆರೋಗ್ಯಕ್ಕಾಗಿ ನಾಗಾರಾಧನೆ, ಮುಂತಾದುವುಗಳನ್ನು, ಜನನ ದೈವ (ಕುಟುಂಬದ ಹುಟ್ಟು) ರುದ್ರ ಚಾಮುಂಡಿ-ಶಿರಾಡಿ ಹಾಗು ದೊಡ್ಡ ಹಿಡುವಳಿ ಸಂಬಂಧ ರಕೇಶ್ವರಿ-ಚಾಮುಂಡಿ ವಗೈರೆ ದೈವಗಳನ್ನು ಗೌಡ ಮಟ್ಟದಲ್ಲಿ ಆರಾದನೆಯೊಂದಿಗೆ ದೇವಾಲಯ ಸಂಬಂಧಗಳನ್ನು ಹೊಂದಿಕೊಂಡರು. ಮೂಲತಃ ತಮ್ಮ ಹಿರಿಯರಿಂದ ಆರಾಧಿಸುತ್ತಿದ್ದ ಹೊಸಕೋಟೆ ಕೆಂಚಮ್ಮ ವನಗೂರು ಸಬ್ಬಮ್ಮ ಶಕ್ತಿಯನ್ನು ಆರಾಧಿಸಿದರು. ಅಲ್ಲದೇ ರಾಜಾಜ್ಞೆಯಂತೆ ಶ್ರೀ ತಿರುಪತಿ ವೆಂಕಟರಮಣ ದೇವರ ಮುಡಿಪು ಸೇವೆ ಆರಾಧಿಸಲು ಆರಂಭಿಸಿದರು.

ಕೂಜುಗೋಡು, ಕಟ್ಟೆಮನೆ ಸಂತತಿ ನಕ್ಷೆಯ ಪ್ರಕಾರ ಅಪ್ಪಯ್ಯ ಗೌಡರ ಕಾಲದಲ್ಲಿ ಶೃಂಗೇರಿ ಸ್ವಾಮಿಗಳು ಸುಬ್ರಹ್ಮಣ್ಯಕ್ಕೆ ಬಂದಾಗ ಕಟ್ಟೆಮನೆಯ ಹಿರಿಯರನ್ನು ಕರೆಯಿಸಿ ನಿಮ್ಮ ಈ ಊರಿನಲ್ಲಿ ಗೌಡರ ಸಂಖ್ಯೆ ಹೆಚ್ಚಾಗಿರುವುದರಿಂದ ನಮ್ಮ ಮಠಕ್ಕೆ ಬಂದು "ಸನದು" ಪಡೆದು ಗೌಡ ಸಮಾಜಕ್ಕೆ ನೀವುಗಳು ಕಟ್ಟೆಮನೆ ಗೌಡರಾಗಬೇಕು ಹಾಗೂ ಗುರುಮಠಕ್ಕೆ ಶಿಷ್ಯರಾಗಬೇಕೆಂದು ಹೇಳಿದಕ್ಕೆ ಅಪ್ಪಯ್ಯ ಗೌಡರು ಒಪ್ಪಿಕೊಂಡರು. ಆ ಪ್ರಕಾರ ಅಪ್ಪಯ್ಯ ಗೌಡರು ಶೃಂಗೇರಿಗೆ ತೆರಳಿ ಸ್ವಾಮಿಯಿಂದ ಆಶೀರ್ವಾದ ಮತ್ತು "ಸನದು" ಪಡೆದುಕೊಂಡು ಮಠದ ಸ್ವಾಮಿಗಳ ಸೂಚನೆಯಂತೆ ಒಪ್ಪಿಕೊಂಡು ಊರಿಗೆ ಹಿಂತಿರುಗಿದರು. ಸ್ವಾಮಿಗಳ ಸೂಚನೆಯ ಪ್ರಕಾರ ಪ್ರತಿಯೊಂದು ಊರಿನಿಂದಲೂ ಗೌಡರುಗಳನ್ನು ಕರೆಸಿ ಅವರ ಪೈಕಿ ಒಬ್ಬರನ್ನು ಊರು ಗೌಡರೆಂತಲೂ, ಮಾಗಣೆ ಗೌಡರೆಂತಲೂ ನೇಮಕ ಮಾಡಿದರು

(ಆಧಾರ-ಮಲ್ಲಯ್ಯ ಗೌಡ ಕಟ್ಟೆಮನೆ- ಹಿರಿಯ ಯಜಮಾನ)
ಹೀಗೆ ಆ ಕಾಲದಲ್ಲಿ ನೇಮಕಗೊಂಡ ಊರುಗೌಡರುಗಳು ಪ್ರತಿ ಮನೆ ಮನೆಗೆ ತೆರಳಿ ಶೃಂಗೇರಿ ಮಠಕ್ಕೆ ಕಾಣಿಕೆ ವಸೂಲು ಮಾಡಿಕೊಂಡು ಊರುಗಳಲ್ಲಿ ನಡೆಯುವ ವಾದ ವಿವಾದಗಳನ್ನು ಪರಿಹರಿಸಿ ತೀರ್ಮಾನಿಸುವುದು, ಊರಿನಲ್ಲಿ ನಡೆಯುವ ಶುಭಕಾರ್ಯಗಳ ಉಸ್ತುವಾರಿ ವಹಿ, ನಡೆಸಿಕೊಡುವುದು ಊರುಗೌಡರುಗಳ ಕೆಲಸಗಳಾಗಿವೆ.

ಅಪ್ಪಯ್ಯ ಗೌಡರ ನಂತರ ಕಟ್ಟೆಮನೆಯ ಜವಾಬ್ದಾರಿ ದೇವಣ್ಣ ಗೌಡರಿಗೆ ಬಂತು. ಅವರ ಕಾಲದ ನಂತರ ಸಾಂತಪ್ಪ ಗೌಡರ ಕಾಲಕ್ಕಾಗುವಾಗ ಕೂಜುಕೋಡು ಕಟ್ಟೆಮನೆಯ ಅಧಿಕಾರ ಕ್ಷೀಣಿಸುತ್ತಾ ಬಂತು. ಸಾಂತಪ್ಪ ಗೌಡರಿಗೆ ಶೃಂಗೇರಿಗೆ ಜಗದ್ಗುರುಗಳು ಕೊಟ್ಟ ಹಕ್ಕು ಪತ್ರದ ದಾಖಲೆ ಕೂಡ ಇದೆ. ಆದರೆ ಅವರಿಂದ ನಂತರ ಈ ಜವಾಬ್ದಾರಿ ನಿರ್ವಹಣೆಯಾದ ದಾಖಲೆಗಳಿಲ್ಲ.
ಗೌಡ ಜನಾಂಗವು ಪೂರ್ವದಿಂದಲೂ ಕೃಷಿ ಕಾಯಕವಾದ ಜೀವನ ನಡೆಸುತ್ತಿದುದರಿಂದ ಉಳುವುದು, ಬೆಳೆಕೊಯ್ಯುವುದು ಮುಂತಾದುವುಗಳನ್ನು ಮಾಡುತ್ತಿದ್ದರು. ಪ್ರಾಯಶಃ ಈ ಕಾರಣದಿಂದ ಪರಸ್ಪರ ಒಬ್ಬರಿಂದ ಒಬ್ಬರಿಗೆ ಸಹಕಾರದ ಅಗತ್ಯವಿತ್ತು. ಅಲ್ಲದೇ ಊರಲ್ಲಿ ನಡೆಯುವ ಆಚಾರ ವಿಚಾರಗಳತ್ತ ಅವರು ಗಮನಹರಿಸಿದರು. ತಾವು ಕೂಡಾ ಸ್ವಜಾತಿ ಭಾಂದವರ ರಕ್ಷಣೆ ಹಾಗೂ ಆಚಾರ ವಿಚಾರಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಕಟ್ಟುಪಾಡುಗಳನ್ನು ರಚಿಸಿಕೊಂಡರು. ಹೀಗೆ ಮೊದಲಿಗೆ ಏಕ ಘಟಕವಾಗಿದ್ದು ಅವಿಚ್ಛಿನ್ನ ಪರಂಪರೆಯನ್ನು ಹೊಂದಿದ ನಮ್ಮ ಜನಾಂಗದವರು ನಂತರ ಸಂಖ್ಯಾ ಬಾಹುಳ್ಯತೆಯಿಂದ ವಿಸ್ತಾರ ಪ್ರದೇಶದಲ್ಲಿ ಹರಡಿ ಹೋದರು. ಪ್ರಾದೇಶಿಕ ವೈಪರೀತ್ಯದಿಂದಾಗಿ ನಮ್ಮ ಆಚಾರ ವಿಚಾರ ಪದ್ದತಿ ಜೀವನ ಕ್ರಮಗಳಲ್ಲಿ ಭಿನ್ನತೆಯ ಲಕ್ಷಣಗಳನ್ನು ಕಾಣುವಂತಾಯ್ತು. ಪ್ರಾದೇಶಿಕ ಭಿನ್ನತೆಗಳಿಂದಾಗಿ ಒಂದೇ ಜಾತಿಗೆ ಸೇರಿದ ಗೌಡ ಸಮುದಾಯದ ಜೀವನ ಶೈಲಿ, ಭಾಷೆ, ಆಹಾರ ಪದ್ದತಿ, ವೇಷ ಭೂಷಣಗಳು, ಆಚಾರ ವಿಚಾರಗಳಲ್ಲಿ ತೀವ್ರ ತರಹದ ವ್ಯತ್ಯಾಸಗಳು ಸೃಷ್ಟಿಯಾದವು. ವಿವಾಹ ವಿಧಿಗಳು, ಮರಣ ನಂತರದ ಸಂದರ್ಭಗಳು, ಹಬ್ಬ ಹರಿದಿನಗಳ ನಂತರದ ಆಚರಣೆಗಳಲ್ಲಿ ಪ್ರಾದೇಶಿಕ ಭಿನ್ನತೆಯು ಉಂಟಾಗಿದೆ.

ಹತ್ತು ಕುಟುಂಬ ಹದಿನೆಂಟು ಗೋತ್ರದವರೆಂದು ನಾವು ನಮ್ಮನ್ನು ಕರೆಸಿಕೊಳ್ಳುತ್ತಿದ್ದರೂ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋದಾಗ ಆಚರಣೆ ಕ್ರಮದಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ.

ನಮ್ಮ ಜನಾಂಗದವರಲ್ಲಿ ಹಿಂದೆ ಒಂದು ವ್ಯವಸ್ಥಿತವಾದ ಜೀವನ ಕ್ರಮವಿತ್ತು ಎಂದು ತಿಳಿದು ಬರುತ್ತದೆ. "ಊರಿಗೊಬ್ಬ ಗೌಡ ನಾಡಿಗೊಬ್ಬ ದೊರೆ" ಎಂಬ ನಾಣ್ಣುಡಿಯಂತೆ ಊರ ಗೌಡರಿಗೆ ಅತ್ಯಂತ ಪ್ರಾಧಾನ್ಯತೆಯಿತ್ತು. ಗೌಡರ ನೇತೃತ್ವದಲ್ಲಿ ಎಲ್ಲಾ ಕಾರ್ಯಗಳು ನಡೆಯುತ್ತಿದ್ದವು. ಅದಕ್ಕೆ ಪೂರಕವೆಂಬಂತೆ ಜಾತಿ ಬಾಂಧವರ ರಕ್ಷಣೆಗಾಗಿ ಹಾಗೂ ಜಾತಿ ಪದ್ದತಿಯ ಆಚಾರ ವಿಚಾರಗಳನ್ನೂ ನೋಡಿಕೊಳ್ಳುವುದಕ್ಕಾಗಿ ಸುಳ್ಯ ಭಾಗದ ವಾತೆ ಕೂಜುಗೋಡು ಕಟ್ಟೆಮನೆ ಇದ್ದಂತೆ ಪುತ್ತೂರು ಭಾಗದವರಿಗೆ ಬಲ್ನಾಡು ಕಟ್ಟೆಮನೆಗಳೆಂದು ನಿರ್ಣಯಿಸಿಕೊಂಡಿದ್ದರು. ಕಟ್ಟೆಮನೆಯ ನಂತರ ಸೀಮೆ ಮನೆ, ಮಾಗಣೆ ಮನೆ, ಅನಂತರ ಊರುಗೌಡರು ಅವರ ಕೆಳಗಿನ ಒತ್ತು ಗೌಡರು (ಬುದ್ಧಿವಂತ) ಹೀಗೆ ಒಂದು ವ್ಯವಸ್ಥಿತವಾದ ಕ್ರಮದಲ್ಲಿ ನಮ್ಮವರು ಇದ್ದರು ಎಂದು ದಾಖಲೆಗಳಿಂದ ತಿಳಿದು ಬರುತ್ತದೆ.
ಶೃಂಗೇರಿ  ಗುರುಪೀಠವಾಗಿ, ಕುಲದೇವರಾಗಿ ತಿರುಪತಿ ವೆಂಕಟರಮಣ ದೇವರನ್ನು ಆರಾಧನೆ ಮಾಡುವವರಾಗಿದ್ದೇವೆ ಹೀಗಾಗಿ ಇಂತಹ ಭವ್ಯ ಪರಂಪರೆಯನ್ನು ಹೊಂದಿದ ನಮ್ಮ ಜನಾಂಗದ ಅಳಿದು ಹೋದ ಪರಂಪರೆಯನ್ನು ಮತ್ತೆ ತರುವ ಪ್ರಯತ್ನವಾಗಬೇಕೆಂದು ನಮ್ಮ ಯುವಸೇವಾ ಸಂಘದ ಪ್ರತಿ ಗ್ರಾಮ ಸಭೆಗಳಲ್ಲಿ ನಮ್ಮ ಜನಾಂಗದವರಿಂದ ಸಲಹೆಗಳು ವ್ಯಕ್ತವಾಗುತ್ತಿದ್ದವು. ನಮ್ಮ ಸಂಘವು ಈಗಾಗಲೇ ಅನೇಕ ಮಹತ್ತರವಾದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದು ಈ ವಿಚಾರದ ಚಿಂತನೆಗಳು ನಮ್ಮಲ್ಲಿ ಸಂಚಲನವನ್ನುಂಟು ಮಾಡಿದವು ಎಂದೇ ಹೇಳಬಹುದು. ಈಗಾಗಲೇ ಮಹತ್ತರವಾದ ಕೆಲಸ ಕಾರ್ಯಗಳನ್ನು ಕೈಗೆತ್ತಿಕೊಂಡು ಅದರಲ್ಲಿ ಯಶಸ್ವಿಯಾಗಿ ಬಡವರ ಆಶಾಕಿರಣವಾದ ಶ್ರೀ ವೆಂಕಟರಮಣ ಕೋ ಅಪರೇಟಿವ್ ಸೊಸೈಟಿ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ ನಮ್ಮ ಸಂಘವು ಸುಳ್ಯದ ಕೊಡಿಯಾಲ್ ಬೈಲಿನಲ್ಲಿ ಸ್ವಂತದ್ದಾದ 6'/ ಎಕ್ರೆ ಜಾಗವನ್ನು ಹೊಂದಿದ್ದು ಅಲ್ಲಿ ಮಲ್ನಾಡ್ ಪ್ರೌಢಶಾಲೆಯನ್ನು ತೆರೆದು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತುಕೊಟ್ಟಿದೆ. 2 ಬೃಹತ್ ಸಮಾವೇಶಗಳನ್ನು ನಡೆಸಿ ನಮ್ಮ ಅಸ್ತಿತ್ವವನ್ನು ಹೆಚ್ಚಿಸಿಕೊಂಡೆವೆಂದು ಹೇಳಬಹುದು. ಹೀಗಾಗಿ ದಿನಾಂಕ : 26.09.2009 ರಂದು ಆಗಿನ ಸಂಘದ ಅಧ್ಯಕ್ಷರಾದ ಶ್ರೀ ಪಿ.ಸಿ ಜಯರಾಮ ಅಧ್ಯಕ್ಷತೆಯಲ್ಲಿ ಸುಳ್ಯದ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಪದಾಧಿಕಾರಿಗಳು ಸಭೆ ಸೇರಿ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನ ಬಾಂಧವರ ಆಚಾರ ಪದ್ಧತಿ ಸಂಸ್ಕೃತಿಗಳನ್ನು ಏಕ ರೂಪವಾಗಿ ಕ್ರೋಢೀಕರಿಸುವ ದೃಷ್ಟಿಯಿಂದ ಸಮಿತಿ ಯೊಂದನ್ನು ರಚಿಸಲಾಯಿತು ಪುಸ್ತಕವನ್ನು ಹೊರ ತರುವ ದೃಷ್ಟಿಯಿಂದ ಸಮಿತಿಗೆ ಸಂಘದ ಉಪಾಧ್ಯಕ್ಷರಾದ ಶ್ರೀ ದೊಡ್ಡಣ್ಣ ಬರೆಮೇಲುರವರನ್ನು ಪುಸ್ತಕ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಉಳಿದಂತೆ ಸದಸ್ಯರುಗಳಾಗಿ ಶ್ರೀ ಮದುವೆಗದ್ದೆ ಬೋಜಪ್ಪ ಗೌಡ ಶ್ರೀ. ಕೆ.ಸಿ ನಾರಾಯಣ ಗೌಡ ಕುಯಿಂತೋಡು, ಶ್ರೀ ಬಿ.ಸಿ ವಸಂತ ಕಲ್ಮಕಾರು, ಪುರುಷೋತ್ತಮ ಅಮೈ, ಎಸ್‌. ಆರ್ ಸೂರಯ್ಯ ಗೌಡ ಸೂಂತೋಡು, ಎ.ಸಿ ಹೊನ್ನಪ್ಪ ಗೌಡ ಅಮಚೂರು, ಜಗದೀಶ್ ಕುಯಿಂತೋಡು ಇವರನ್ನು ಆಯ್ಕೆ ಮಾಡಲಾಯಿತು. ನಮ್ಮ ಸಮಿತಿ ಸುಮಾರು 30ಕ್ಕಿಂತಲೂ ಹೆಚ್ಚು ಬಾರಿ ಸಭೆ ಸೇರಿ ಚರ್ಚಿಸಿ ಈ ಪುಸ್ತಕ ಹೊರ ತರುವಲ್ಲಿ ಪ್ರಯತ್ನಿಸಿದೆ.