Thursday, May 9, 2024

ಗೌಡ ಸಂಸ್ಕೃತಿ- ಮದುವೆ

ಗೌಡ ಸಮುದಾಯದಲ್ಲಿ ಮದುವೆಯೆನ್ನುವುದು ಬಹುಮುಖ್ಯ ಘಟ್ಟ. ಕುಟುಂಬ/ವಂಶವಾಹಿನಿ ಬೆಳೆದು ಬರಲು 'ಮದುವೆ' ಎನ್ನುವ ನಿಯೋಜಿತ ವ್ಯವಸ್ಥೆ ನಡೆಯಲೇ ಬೇಕು ಎನ್ನುವ ಕಟ್ಟಳೆ ನಮ್ಮ ಹಿರಿಯರಿಂದ ನಿರ್ಮಿತವಾದುದಾಗಿದೆ. ಈ ಮದುವೆ ಎನ್ನುವ ವ್ಯವಸ್ಥೆ ಗೌಡರಲ್ಲಿ ಬಳಿ ನೋಡುವಲ್ಲಿಂದ ಆರಂಭವಾಗುತ್ತದೆ. ಮದುವೆಯಲ್ಲಿ ಹುಡುಗಿ ನೋಡುವ ಶಾಸ್ತ್ರ, ವೀಳ್ಯ ಶಾಸ್ತ್ರ, ಮದುವೆ ದಿನದ ಕ್ರಮಗಳಲ್ಲಿ ಹಾಗೆಯೇ ನಂತರದ ಕ್ರಮಗಳಲ್ಲಿ ಹಲವು ಕಟ್ಟಳೆಗಳಿರುತ್ತವೆ. ಗೌಡರಲ್ಲಿ 'ಬಳಿ' ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. 'ಬಳಿ' ಗೌಡರಲ್ಲಿ ಸ್ವಕುಟುಂಬಿಕ ನೆಲೆಯನ್ನು ಪ್ರತಿನಿಧಿಸುತ್ತದೆಯಾದ್ದರಿಂದ ಒಂದೇ 'ಬಳಿ'ಯಲ್ಲಿ 'ಮದುವೆ' ನಡೆಯಬಾರದೆನ್ನುವ ನಿಷೇಧವನ್ನು ಇಟ್ಟುಕೊಳ್ಳಲಾಗಿದೆ. ರಕ್ತ ಸಂಬಂಧಿಗಳಲ್ಲಿ ಮದುವೆ ನಡೆಯುವುದು ಯಾವ ದೃಷ್ಟಿಯಿಂದಲೂ ಯೋಗ್ಯವಲ್ಲ ಎನ್ನುವುದನ್ನು ನಮ್ಮ ಹಿರಿಯರು ಕಂಡುಕೊಂಡಿದ್ದಾರೆನ್ನುವುದನ್ನು ಇದು ಸೂಚಿಸುತ್ತದೆ. ಹೀಗಿದ್ದೂ ತಂದೆಯ ಸಹೋದರಿ ಅಥವಾ ತಾಯಿಯ ಸಹೋದರರ ಕಡೆ 'ಬಳಿ'ಗಳಲ್ಲಿ ಮದುವೆ ನಡೆಯಬಹುದು. ಗೌಡರಲ್ಲಿ ಇರುವ ವಿಭಿನ್ನ 'ಬಳಿ'ಗಳಲ್ಲಿ 'ಮದುವೆ' ನಡೆಯುವುದು ಸಂಪ್ರದಾಯ. ಜಾತಿ ಪದ್ಧತಿ ಪ್ರಕಾರ ಅಲ್ಲದೇ ವೈದಿಕ ಕ್ರಮಗಳಲ್ಲಿ ಕೂಡಾ ಮದುವೆ ನಡೆಸಬಹುದು.

ಹುಡುಗಿ ನೋಡುವ ಕ್ರಮ : ಹುಡುಗ/ಹುಡುಗಿ ಪ್ರಾಪ್ತ ವಯಸ್ಸಿಗೆ ಬಂದಾಗ ಹಿರಿಯರು ಅವರಿಗೆ ಮದುವೆ ಮಾಡಲು ಆಲೋಚಿಸುತ್ತಾರೆ. ನೆಂಟರಿಷ್ಟರಲ್ಲಿ ಗಂಡು-ಹೆಣ್ಣನ್ನು ಹುಡುಕಲು ಹಿರಿಯರು ಸೂಚಿಸುತ್ತಾರೆ. ಶಕ್ತ ಮನೆತನದ ಸೂಕ್ತ ಬಳಿಯ ಕನ್ಯ ಗೊತ್ತಾದ ನಂತರ ಹುಡುಗಿ ನೋಡುವ ಶಾಸ್ತ್ರಕ್ಕೆ ದಿನ ನಿಗದಿ ಮಾಡುತ್ತಾರೆ.

ಹಿಂದಿನ ಕಾಲದಲ್ಲಿ ಹುಡುಗಿ ನೋಡಲು ಹುಡುಗ ಹೋಗುವ ಕ್ರಮವಿರಲಿಲ್ಲ. ಇಂದು ಹುಡುಗನೇ ನೋಡಿದ ಹುಡುಗಿಯನ್ನು ನೋಡಲು ಹಿರಿಯರು ಹೋಗುವುದು ಬಂದುಬಿಟ್ಟಿದೆ. ಮೊದಲಿನಿಂದಲೂ ಹುಡುಗ ಹುಡುಗಿಯರನ್ನು ನಿಶ್ಚಯಿಸುವಲ್ಲಿ ಉಭಯ ಕಡೆಯ ಪರಿಚಯಸ್ಥರೊಬ್ಬರು ಮಧ್ಯವರ್ತಿಯಾಗಿ ಸಹಕರಿಸುತ್ತಿದ್ದರು.

ಹುಡುಗಿ ನೋಡುವ ಶಾಸ್ತ್ರ ನಿಗದಿಯಾದ ಶುಭದಿನ ಹೇಳಿಕೆಯಾದ ಪ್ರಕಾರ ಕುಟುಂಬದ ಮತ್ತು ಬಂಧುಗಳಲ್ಲಿ 5ರಿಂದ 7ಜನ ಹಿರಿಯರು ಪೂರ್ವಾಹ್ನದ ಹೊತ್ತಿಗೆ ಹುಡುಗಿ ಮನೆ ತಲುಪಲೇಬೇಕೆನ್ನುವ ಹಿನ್ನೆಲೆಯಲ್ಲಿ ತಲುಪುತ್ತಾರೆ. (ಅಪರಾಹ್ನ ಹುಡುಗಿ ನೋಡುವ ಶಾಸ್ತ್ರ ಮಾಡಬಾರದೆನ್ನುವ ನಂಬಿಕೆ ಇದೆ.) ಹುಡುಗಿ ನೋಡುವ ಶಾಸ್ತ್ರದ ದಿನ ಹುಡುಗಿ ಮನೆಯಲ್ಲೂ ಕುಟುಂಬದ ಹಿರಿಯ ಪ್ರಮುಖರು ಸೇರುತ್ತಾರೆ. ಹುಡುಗನ ಕಡೆಯವರು ಹುಡುಗಿ ಮನೆಗೆ ಬಂದಾಗ ಕೈಕಾಲು ತೊಳೆಯಲು ನೀರು ಕೊಡುವುದು ಪದ್ಧತಿ. ಬಂದ ನೆಂಟರನ್ನು ಮನೆ ಚಾವಡಿಯಲ್ಲಿ ಕುಳ್ಳಿರಿಸಿ ಬೆಲ್ಲ-ನೀರು ಕೊಟ್ಟು ಸತ್ಕರಿಸಬೇಕು. ಮುತ್ತೈದೆಯರಿಗೆ ನೆತ್ತಿಗೆಣ್ಣೆ, ಹಣೆಗೆ ಕುಂಕುಮ, ಮುಡಿಗೆ ಹೂವು ಕೊಡಬೇಕು. ಬಂದ ಹಿರಿಯರೊಬ್ಬರಿಗೆ ಹರಿವಾಣದಲ್ಲಿ ಕವಳೆ ವೀಳ್ಯದೊಂದಿಗೆ ಅಡಿಕೆಗಳನ್ನಿಟ್ಟು ಗೌರವಿಸುವುದು ನಡೆದು ಬಂದ ಸಂಗತಿ. ಉಪಾಹಾರವನ್ನಿತ್ತು ಬಂದ ಹುಡುಗನ ಕಡೆಯವರಿಗೆ ಸತ್ಕರಿಸುವುದು

ಪರಸ್ಪರ ಕುಶಲೋಪರಿ ಬಳಿಕ ಹುಡುಗಿ ನೋಡುವ ಕ್ರಮ ಜರಗುತ್ತದೆ. ಹುಡುಗನ ಕಡೆಯಿಂದ ಬಂದ ಸ್ತ್ರೀಯರು ಮನೆಯೊಳಗೆ ಹೋಗಿ ಹುಡುಗಿಯನ್ನು ನೋಡುತ್ತಾರೆ. ಹುಡುಗಿಯನ್ನು ಮಾತಾಡಿಸುತ್ತಾರೆ. ಇದರ ಹೊರತಾಗಿಯೂ ಬಂದ ನೆಂಟರಿಗೆ ಹುಡುಗಿಯೇ ಬಾಯಾರಿಕೆ ಕೊಡುವ ನೆಪದಲ್ಲಿ ಹುಡುಗಿಯನ್ನು ನೋಡುವ ಶಾಸ್ತ್ರ ಮಾಡುವುದುಂಟು. ಪುರುಷರು ಹುಡುಗಿಯನ್ನು ನೋಡಬೇಕೆನ್ನುವ ಹಿನ್ನೆಲೆಯಲ್ಲಿ ಜೊತೆಗೆ ಹುಡುಗಿಯಲ್ಲಿ ಏನಾದರೂ ಊನ ಇದೆಯಾ ಎಂದು ಪರೀಕ್ಷಿಸುವ ದ್ರಷ್ಟಿಯಲ್ಲಿ ಹುಡುಗಿಯ ಕೈಯಲ್ಲಿ ಕೊಡಪಾನ ಕೊಟ್ಟು ನೀರು ತರ ಹೇಳುವುದೂ ಇದೆ. ಹಾಗೆಯೇ ಮನೆ ನೋಡುವೆ ನೆಪದಲ್ಲಿ ಒಳ ಹೋಗಿ ಹುಡುಗಿಯನ್ನು ಮಾತಾಡಿಸುತ್ತಾರೆ.

ಹುಡುಗಿಯ ರೂಪ ಗುಣ ನಡತೆ ಒಪ್ಪಿಗೆಯಾದರೆ, ಸತ್ಕಾರ ಸ್ವೀಕರಿಸಿ ಹೊರಟು ಬರುವ ಹುಡುಗನ ಕಡೆಯವರು ಇನ್ನು ಜಾತಕ ಕೂಡಿ ಬಂದರೆ ಹೇಳಿ ಕಳುಹಿಸುತ್ತೇವೆಂದು ಹೇಳುವುದು ವಾಡಿಕೆ ಅಥವಾ ಉಭಯಸ್ಥರು ಪಕ್ಕದ ಜೋಯಿಸರಲ್ಲಿ ಹೋಗಿ ಹುಡುಗ- ಹುಡುಗಿಯ ಜಾತಕ ತೋರಿಸುವುದುಂಟು. ಜಾತಕ ಕೂಡಿ ಬಾರದೇ ಹೋದರೆ ನೆಂಟಸ್ಥಿಗೆಮುಂದುವರಿಯುವುದಿಲ್ಲ. ಹುಡುಗಿ ನೋಡುವ ಕ್ರಮದಲ್ಲಿ ಜಾತಕ ಇಲ್ಲದಿದ್ದರೆ ಇತ್ತಂಡಗಳು ದೇವಸ್ಥಾನದಲ್ಲಿ ಅರ್ಚಕರ ಮೂಲಕ ತುಂಬೆ ಹೂವಿನಲ್ಲಿ ಪುಷ್ಪ ಪರೀಕ್ಷೆ ನಡೆಸುತ್ತಾರೆ. ಹುಡುಗನ ಕಡೆಯವರಿಗೆ ಸಂಬಂಧ ಕೂಡಿ ಬಂದರೆ ಹುಡುಗಿ ಮನೆಯವರನ್ನು ಆಹ್ವಾನಿಸುತ್ತಾರೆ. ನಿಗದಿತ ದಿನ ಹುಡುಗನ ಮನೆಗೆ ಬರುವ ಹುಡುಗಿ ಕಡೆಯವರಿಗೆ ಸಮ್ಮಾನದೂಟ ಮಾಡಿಸಿ ಕಳುಹಿಸಿ ಕೊಡಲಾಗುತ್ತದೆ. ವೀಳ್ಯಶಾಸ್ತ್ರ ನಡೆಸುವ ದಿನವನ್ನು ಪರಸ್ಪರರು ಸಂವಾದಿಸಿ ಈ ದಿನ ನಿಗದಿಪಡಿಸುತ್ತಾರೆ.

ಸೋದರ ಮಾತನಾಡಿಸುವುದು:
ಗೊತ್ತುಪಡಿಸಿದ ದಿನದಂದು ಹುಡುಗಿಯ ಕಡೆಯಿಂದ ಅವಳ ತಂದೆ-ತಾಯಿಯರು ಮತ್ತು ಹುಡುಗನ ಕಡೆಯಿಂದ ಕನಿಷ್ಟ ಒಬ್ಬರು ಹುಡುಗಿ ಸಮೇತ ಸೋದರ ಮಾವನಲ್ಲಿಗೆ ಹೋಗಿ ನಾವು ಒಂದು ಶುಭಕಾರವನ್ನು ತೆಗೆಯುವವರಿದ್ದೇವೆ. ನಿಮ್ಮಗಳ ಒಪ್ಪಿಗೆ ಕೇಳಲು ಬಂದಿದ್ದೇವೆ ಅಂತ ಹೇಳುವರು. (ಪೂರ್ವ ಪದ್ಧತಿ ಪ್ರಕಾರ ಹುಡುಗಿ ಮನೆಯಿಂದ ಒಂದು ಸೇರು ಅಕ್ಕಿ, ಒಂದು ತೆಂಗಿನಕಾಯಿ, ಒಂದು ಹೇಂಟೆ ಲಾಕಿ, ಮದ್ಯದ ಬಾಟಲಿ, ಒಂದು ಕುಡ್ತ ತೆಂಗಿನೆಣ್ಣೆ, ಸೂಡಿ ವೀಳ್ಯದೆಲೆ, ಐದು ಅಡಿಕೆಯೊಂದಿಗೆ ಸೋದರ ಮಾವನಲ್ಲಿಗೆ ಹೋಗುತ್ತಿದ್ದರು.) ತೆಗೆದುಕೊಂಡು ಹೋದ ಕೋಳಿಯನ್ನು ಅಡುಗೆ ಮಾಡಿ ರಾತ್ರಿ ಗುರು ಕಾರಣರಿಗೆ ಬಡಿಸಿ ಹಿರಿಯರ ಆಶೀರ್ವಾದ ಪಡೆಯುವುದು ರೂಢಿ. (ಪೂರ್ವ ಪದ್ಧತಿ ಪ್ರಕಾರ ಎಲ್ಲಾ ವಸ್ತುಗಳನ್ನು ಕೊಂಡು ಹೋಗುವುದು ಮಾಡದಿದ್ದರೆ ಈಗಿನ ಕಾಲ ಘಟ್ಟಕ್ಕೆ ಅನುಕೂಲವಾಗುವಂತೆ ಸೋದರ ಮಾವನಲ್ಲಿಯೇ ಸಮ್ಮಾನದ ಊಟ ಮಾಡಿ ಕಳುಹಿಸುವುದು ಮಾಡುವುದು.) ಹೀಗೆ ಸೋದರ ಮಾವನ ಒಪ್ಪಿಗೆ ಪಡೆದು ಮಾರನೇ ದಿನ ಬೆಳಿಗ್ಗೆ ವೀಳ್ಯಶಾಸ್ತ್ರಕ್ಕೆ ನಿಗದಿಪಡಿಸಿದ ದಿನದಂದು ಬರಬೇಕೆಂದು ಆಹ್ವಾನಿಸಿ ಹಿಂತಿರುಗುವುದು

Sunday, May 5, 2024

ಗೌಡ ಸಂಸ್ಕೃತಿ-- ಹುಡುಗಿ ಋತುಮತಿಯಾಗುವುದು

 ಕ್ರಮಗಳು:

1. ತಲೆಗೆ ನೀರು ಹೊಯ್ಯುವುದು

2. ಮಡಿಕೆ ಹಿಡಿಸುವುದು

3. ಋತುಶಾಂತಿ (ನೆರ್ದ ಮದುವೆ)

1. ತಲೆಗೆ ನೀರು ಹೊಯ್ಯುವುದು : ಹುಡುಗಿ ಬೆಳೆದು ದೊಡ್ಡವಳಾಗುತ್ತಾ ಶಾರೀರಿಕ ಬೆಳವಣಿಗೆಯೊಂದಿಗೆ ಒಂದು ಹಂತದಲ್ಲಿ ಋತುಮತಿಯಾಗುತ್ತಾಳೆ. ಆ ದಿನ ಹುಡುಗಿಯ ಕೈಯಲ್ಲಿ ಒಂದು ಚಿಕ್ಕ ಕತ್ತಿಯನ್ನು ಕೊಟ್ಟು ಫಲ ಬರುವ ಮರದಡಿಯಲ್ಲಿ ಕುಳ್ಳಿರಿಸುತ್ತಾರೆ. ತದನಂತರ ನೆರೆಮನೆಯ ಮುತ್ತೈದೆಯರನ್ನು ಕರೆಸಿ ಒಗ್ಗಿ ಹಾಕಿದ 5 ತೆಂಗಿನಕಾಯಿ ಮೇಲೆ ಕುಳ್ಳಿರಿಸಿ 5 ವೀಳ್ಯದೆಲೆ ಮತ್ತು 1 ಅಡಿಕೆ ಹಿಡಿದು ಐದು ಬಿಂದಿಗೆಗಳಲ್ಲಿ ತುಂಬಿಸಿಟ್ಟ ನೀರನ್ನು ಹುಡುಗಿಯ ತಲೆಗೆ ಹೊಯ್ಯುವರು ಮತ್ತೆ ಹುಡುಗಿಯನ್ನು ಸ್ನಾನ ಮಾಡಿಸಿ, ಬಟ್ಟೆ ಉಡಿಸಿ ಕೊಟ್ಟಿಗೆ ಅಥವಾ ಪ್ರತ್ಯೇಕ ಕೋಣೆಯಲ್ಲಿ ಕುಳ್ಳಿರಿಸುತ್ತಾರೆ. ನಂತರ ನಾಲ್ಕು ದಿನಗಳ ಮಟ್ಟಿಗೆ ತಿಂಡಿ ಹಾಗೂ ಆಹಾರವನ್ನು ಅಲ್ಲಿಗೆ ವ್ಯವಸ್ಥೆ ಮಾಡಬೇಕು.

2. ಮಡಿಕೆ ಹಿಡಿಸುವುದು : ಈ ಕ್ರಮವನ್ನು ಋತುಶಾಂತಿ ಲಗ್ನವನ್ನು ಮಾಡಿಸಲು ಅನಾನುಕೂಲ ಇರುವವರು ಮಾಡುತ್ತಾರೆ. ಹುಡುಗಿ ಮೈನೆರೆದ 5ನೇ ದಿನದಲ್ಲಿ ನೆರೆಮನೆಯ ಮುತ್ತೈದೆಯರನ್ನುಕರೆಯುತ್ತಾರೆ. ಮೊದಲೇ ತಿಳಿಸಿದಂತೆ ಮಡಿವಾಳಗಿತ್ತಿಯು ಬಂದು ಹುಡುಗಿಯನ್ನು ಸ್ನಾನ ಮಾಡಿಸಿ ಮಡಿ ಬಟ್ಟೆ ಉಡಿಸಿ ದೇವಸ್ಥಾನದಿಂದ ತಂದ ಪುಣ್ಯಾರ್ಚನೆಯನ್ನು ಮದುಮಗಳಿಗೆ ಹಾಗೂ ಮನೆಯೊಳಗೆ ಚಿಮುಕಿಸಿ ಶುದ್ಧಗೊಳಿಸುತ್ತಾರೆ. ಮುಂದೆ ನಡುಮನೆಯಲ್ಲಿ ಕಾಲುದೀಪ ಹಚ್ಚಿ, ಗಣಪತಿಗೆ ಇಟ್ಟು ಚಾಪೆ ಹಾಸಿ ಮನೆಯ ಅಡುಗೆಯ ಪರಿಕರಗಳನ್ನು, ಒನಕೆ, ತಡ್ಲೆ, ಕುಕ್ಕೆ ಇತ್ಯಾದಿಗಳನ್ನು ಜೋಡಿಸಿ ಇಡುತ್ತಾರೆ. ಹುಡುಗಿ ದೇವರಿಗೆ ಕೈ ಮುಗಿದು ಎಲ್ಲಾ ಪರಿಕರಗಳಿಗೆ ಅಕ್ಕಿ ಹಾಕಿ ಕೈ ಮುಗಿಯುತ್ತಾಳೆ. ಗುರುಹಿರಿಯರಿಗೆ ನಮಿಸಿ ಆಶೀರ್ವಾದ ಪಡೆಯುತ್ತಾಳೆ ನಂತರ ದನದ ಕೊಟ್ಟಿಗೆಗೆ ಹೋಗಿ ಗೋವುಗಳಿಗೆ ಹುಲ್ಲು ಕೊಟ್ಟು ನಮಸ್ಕರಿಸುತ್ತಾಳೆ. ಮುಂದೆ ಫಲ ಬರುವ ಮರಗಳಿಗೆ ಕೈ ಮುಗಿಯುವಳು. ಹುಡುಗಿ ದೇವಸ್ಥಾನಗಳಂತಹ ವಿಶೇಷ ಸ್ಥಳಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಕಡೆಗೆ ಹೋಗಬಹುದು.

ಮೈ ನೆರೆದ ಹುಡುಗಿಗೆ ಸಂಬಂಧಿಕರು ಎಲ್ಲಾ ತರಹದ ವಿಶೇಷ ಸಿಹಿ ತಿಂಡಿಗಳನ್ನು ತರುವ ಪದ್ಧತಿ ಕೂಡಾ ಚಾಲ್ತಿಯಲ್ಲಿರುತ್ತದೆ.

3. ಋತುಶಾಂತಿ ಲಗ್ನ: ಒಳ್ಳೆಯ ಮುಹೂರ್ತ ನೋಡಿ ದಿನ ಗೊತ್ತುಪಡಿಸಿ ನೆಂಟರಿಷ್ಟರನ್ನು ಕರೆಯಿಸಿ ತುಂಬಾ ಅದ್ಧೂರಿಯಾಗಿ ಆಚರಿಸುವುದು ಪದ್ಧತಿ. ಅಂದು ಬೆಳಿಗ್ಗೆ ಮಡಿವಾಳಗಿತ್ತಿಯು ಬಂದು ಹುಡುಗಿಯನ್ನು ಸ್ನಾನ ಮಾಡಿಸಿ ಮಡಿ ಬಟ್ಟೆ ಉಡಿಸಿ ಚಪ್ಪರದಡಿಯಲ್ಲಿ ಒನಕೆ ಇರಿಸಿ ಅಕ್ಕಿ ಹುಡಿಯಿಂದ ರಂಗೋಲಿ ಬರೆಯುತ್ತಾಳೆ. ಅದರ ಮಧ್ಯ ಒಂದು ಕೊಡಿ ಬಾಳೆ ಎಲೆ ಇಟ್ಟು ಅದರಲ್ಲಿ ಹುಡುಗಿಯನ್ನು ನಿಲ್ಲಿಸಿ ನಂತರ ಮಡಿವಾಳಗಿತ್ತಿ ಬಲಕಾಲ ಹೆಬ್ಬೆರಳಿನಿಂದ ತಲೆ ಮೇಲಿಂದ ಎಡಕಾಲ ಹೆಬ್ಬೆರಳಿಗೆ ಬಿಳಿ ನೂಲು ಹಾಕುತ್ತಾಳೆ. ಅದರಲ್ಲಿ ಬೆಳ್ಳಿ ಕಡಗವನ್ನು 3 ಸಲ ಆಚೆ-ಈಚೆ ದಾಟಿಸುತ್ತಾಳೆ. ಹುಡುಗಿಯ ಅತ್ತಿಗೆ, ನಾದಿನಿಯವರು ತಿನ್ನಲು ತಾಂಬೂಲ ಕೊಡುತ್ತಾರೆ. ಹುಡುಗಿ ತಾಂಬೂಲ ತಿಂದು ಎಲೆಯ ಮಧ್ಯಭಾಗಕ್ಕೆ ಉಗಿಯುತ್ತಾಳೆ. ಹೆಬ್ಬೆರಳಿಗೆ ಕಟ್ಟಿದ ನೂಲು ಸಮೇತ ಹುಡುಗಿಯ ತಾಯಿ ತೆಗೆದುಕೊಂಡು ಹೋಗಿ ನೀರಲ್ಲಿ ಬಿಡುತ್ತಾಳೆ. ಬರುವಾಗ ತಾಯಿ ಸ್ನಾನ ಮಾಡಿ ಬರಬೇಕು. (ಇದು ಪಿಲೆ ತೆಗೆಯುವುದು).
ಮುಂದೆ ತೆಂಗಿನ ಮರದಡಿಯಲ್ಲಿ ಹೊಸ ಚಾಪೆ ಹಾಸಿ ಅತ್ತಿಗೆ/ನಾದಿನಿಯವರು ಅದರಲ್ಲಿ 2 ಕುಚಗಳ ರೂಪವನ್ನು ಮಣ್ಣಿನಿಂದ ಮಾಡಿಟ್ಟಿರುತ್ತಾರೆ. ಚಾಪೆಯಲ್ಲಿ ಕೊಡಿ ಬಾಳೆಎಲೆ ಹಾಕಿ ನನ್ಯಕ್ಕಿ ಎಡೆಯಿಟ್ಟು, ಎಲೆ ಅಡಿಕೆ ಇಟ್ಟು 3ಸಲ ಪ್ರದಕ್ಷಿಣೆ ಬಂದು ಕೈ ಮುಗಿದು ಒಂದು ಎಲೆಯನ್ನು ಗಂಡು ಮಗುವಿಗೆ ಮತ್ತು ಇನ್ನೊಂದನ್ನು ಹೆಣ್ಣು ಮಗುವಿಗೆ ಕೊಡುತ್ತಾರೆ.
ಮತ್ತೆ 1 ಮಣ್ಣಿನ ಕುಂಭದಲ್ಲಿ ನೀರು ತುಂಬಿ ಅದರ ಮೇಲೆ ನೀರು ತುಂಬಿದ ತಂದಿಗೆಯಲ್ಲಿ ಮಾವಿನ ಎಲೆ, ಹಿಂಗಾರ, ತೆಂಗಿನ ಕಾಯಿ ಇಟ್ಟು ಸೋಗೆ ಸಿಂಬೆಯೊಂದಿಗೆ ಹೊತ್ತು ತರುತ್ತಾಳೆ. ನಡು ಮನೆಯಲ್ಲಿ ದೀಪ ಹಚ್ಚಿ ಗಣಪತಿಗೆ ಇಟ್ಟು ಒಲಿ ಚಾಪೆ ಹಾಸಿರುತ್ತಾರೆ. ಹುಡುಗಿ ಹೊತ್ತು ತಂದ ನೀರಿನ ಕುಂಭವನ್ನು ಹುಡುಗಿಯ ತಾಯಿ ತೆಗೆದು ನಡುಮನೆಯಲ್ಲಿಡುತ್ತಾಳೆ. ಹುಡುಗಿ ದೇವರಿಗೆ ಕೈ ಮುಗಿದು ಹಿರಿಯರ ಕಾಲಿಗೆ ನಮಸ್ಕರಿಸಿ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಾಳೆ. ಮುಂದೆ ಹೊಸ ಬಟ್ಟೆ ಉಡಿಸಿ ಚಾಪೆಯಲ್ಲಿ ಕೂರಿಸುತ್ತಾರೆ. ಬಂದ ನೆಂಟರಿಷ್ಟರು ಹುಡುಗಿಗೆ ಉಡುಗೊರೆಗಳನ್ನು ಕೊಡುತ್ತಾರೆ. ಊಟದ ನಂತರ ಹುಡುಗಿಯ ಸೋದರ ಮಾವನ ಮನೆಯವರು ಹುಡುಗಿಯನ್ನು ಕರೆದುಕೊಂಡು ಹೋಗುತ್ತಾರೆ. ತದನಂತರ ಸ್ವಲ್ಪ ದಿನಗಳಲ್ಲಿ ಹುಡುಗಿಯ ತಾಯಿ ಅಲ್ಲಿಂದ ಮಗಳನ್ನು ಕರೆದುಕೊಂಡು ಬರುತ್ತಾರೆ.

ಹುಡುಗಿ ಮೈನೆರೆಯುವುದು : ಕ್ರಮ :- ಊರ ಮಡಿವಾಳಗಿತ್ತಿಯ ಮುಂದಾಳುತನದಲ್ಲಿ ಕ್ರಮ ನಡೆಯುವುದು.

ಬೇಕಾಗುವ ಪರಿಕರಗಳು:

1) ಸಾಧಾರಣ ಸಣ್ಣ ಮಣ್ಣಿನ ಮಡಿಕೆ 1 :- ಮಡಿಕೆ ಒಳಗೆ ಸ್ವಲ್ಪ ಹಾಲು ಹಾಕಬೇಕು. ಮಡಿಕೆಯ ಬಾಯಿ ಸುತ್ತ ಒಳಗೆ ಮಾವು, ಹಲಸು ಸೊಪ್ಪುಗಳನ್ನು ಇಟ್ಟು ಅದರ ಮೇಲೆ ಒಂದು ತಂಬಿಗೆ ಇಡಬೇಕು.

2) ಕಲಶ : ಸ್ಟೀಲ್ ಅಥವಾ ಹಿತ್ತಾಳೆದ್ದಾಗಿರಬೇಕು. ತಂಬಿಗೆ ಒಳಗೆ ಸುತ್ತ ಮಾವು ಸೊಪ್ಪು
ಅದರ ಮಧ್ಯೆ ತೆಂಗಿನ ಕಾಯಿ ಇಡಬೇಕು.

3) ಸ್ಟೀಲಿನ ಅಥವಾ ಹಿತ್ತಾಳೆಯ ತಂಬಿಗೆ 5 : ಪ್ರತೀ ತಂಬಿಗೆಯ ಒಳಗೆ ವೀಳ್ಯದೆಲೆ, ಮಾವು, ಹಲಸು ಸೊಪ್ಪು ಒಂದೊಂದು ಅಡಿಕೆ ಹಾಕಿಡಬೇಕು. ಅದರ ಒಳಗೆ ಸ್ವಲ್ಪ ನೀರು ಇರಬೇಕು.

4) ದೇವಸ್ಥಾನದಿಂದ ತಂದ ಪುಣ್ಯಾರ್ಚನೆ.

5) ಕಾಲುದೀಪ

6) ಮರದ ಮಣೆ : ಮಣೆಯ ಮೇಲೆ ಸೀರೆ, ರವಿಕೆ, ಹಿಂಗಾರ ಇಟ್ಟಿರಬೇಕು.

7) ಐದು ಬಗೆಯ ಹೂವುಗಳಿರಬೇಕು : ಉದಾ : ಮಲ್ಲಿಗೆ, ತುಂಬೆ ಹೂ, ಸೇವಂತಿಗೆ ಇತ್ಯಾದಿ.

8) ತುಂಬೆ ಹೂವು : ತೆಂಗಿನ ಗರಿಯ ಕಡ್ಡಿಗೆ ಕನಿಷ್ಟ 5 ತುಂಬೆ ಹೂ ಪೋಣಿಸಿಡಬೇಕು.

9) ಬಾಚಣಿಗೆ

10) ಕುಂಕುಮ ಕರಡಿಗೆ

11) ಕಂಚಿನ ಬಟ್ಟಲು -2 
 ಒಂದನೇ ಬಟ್ಟಲಿನಲ್ಲಿ ಒಂದು ಸೇರು ಬೆಳ್ತಿಗೆ ಅಕ್ಕಿ, ಕುಂಕುಮ ಕರಡಿಗೆ, ಐದು ಬಳೆ ಐದು ಅಡಿಕೆ ಒಂದು ತೆಂಗಿನಕಾಯಿ, ಒಂದು ನೂಲಿನ ಉಂಡೆ, ಬಾಚಣಿಗೆ, ಒಂದು ಕಡಗ ಇಡಬೇಕು.
2ನೇ ಬಟ್ಟಲಿನಲ್ಲಿ ಬೆಳ್ಳಿಗೆ ಅಕ್ಕಿ ಒಂದು ಸೇರು, 5 ಎಲೆ, 1 ಅಡಿಕೆ, ಅಕ್ಕಿ ಮೇಲೆ ಒಂದು ಚೆಂಬು, ಚೆಂಬು ಸುತ್ತ ಹಲಸಿನ ಎಲೆ ಮಧ್ಯ ಒಂದು ತೆಂಗಿನಕಾಯಿ ಇರಬೇಕು.( ಇದನ್ನು ಮಂಡಲ ಬರೆದ ದೀಪದ ಹತ್ತಿರ ಇಡಬೇಕು) ತುಳಸಿ ಕಟ್ಟೆಯ ಹತ್ತಿರ ಒಂದು ಬದಿಯಲ್ಲಿ ಅಕ್ಕಿ ಹುಡಿಯಲ್ಲಿ ಮಂಡಲ ಬರೆಯಬೇಕು.

ಮಡಿವಾಳಗಿತ್ತಿ ಕೊಟ್ಟ ಸೀರೆಯನ್ನು ಉಡಿಸಿ ಶೃಂಗರಿಸಿ, ಕಲಶ ಕನ್ನಡಿ ಸಹಿತ ಪಿಲೆ ತೆಗೆಯುವ ಸ್ಥಳಕ್ಕೆ ಹುಡುಗಿಯನ್ನು ಕರೆದುಕೊಂಡು ಬರಬೇಕು. ಹಿರಿಯ ಮುತ್ತೈದೆಯರು ಪಿಲೆ ತೆಗೆಯುವ ಕ್ರಮ ಮಾಡಬೇಕು.

ಕ್ರಮ : ಮಂಡಲದ ಒಳಗೆ ಹಾಕಿಟ್ಟ ಎಲೆ ಮೇಲೆ ಹುಡುಗಿಯನ್ನು ನಿಲ್ಲಿಸಬೇಕು. ಬಲ ಹೆಬ್ಬೆರಳಿನಿಂದ ತಲೆ ಮೇಲೆ ತಂದು ಎಡ ಹೆಬ್ಬೆರಳಿಗೆ ಬರುವಂತೆ ನೂಲನ್ನು ಸೇರಿಸಿಡಬೇಕು. ಆ ನಂತರ ನೂಲಿನ ಮೂಲಕ 3 ಸಲ ಕಡಗವನ್ನು ದಾಟಿಸಬೇಕು. ನಂತರ ಜಗಿಯಲು ಎಲೆ ಅಡಿಕೆ ಕೊಟ್ಟು ಜಗಿದ ನಂತರ ಎಲೆ-ಅಡಿಕೆಯನ್ನು ಎದುರಿನ ಎಲೆಗೆ ಉಗಿಯಬೇಕು. ಇದಾದ ನಂತರ ತಲೆ ಮೇಲೆ ಮಡಿವಾಳಗಿತ್ತಿ ಬಿಳಿ ಬಟ್ಟೆ ಹಿಡಿಯುತ್ತಾರೆ. ಮಂಡಲದ ಒಳಗೆ ಇದ್ದ 5 ತಂಬಿಗೆಗೆಗಳನ್ನು 5 ಜನ ಮುತ್ತೈದೆಯರು ತೆಗೆದುಕೊಂಡು ನೀರು ಹಾಕಬೇಕು. ಮತ್ತೆ ಅದರ ಒಳಗಿದ್ದ ಎಲೆ ಕೂಡ ಹಾಕಬೇಕು. ಈ ಕ್ರಮ ಆದ ನಂತರ ಮಡಿವಾಳಗಿತ್ತಿ ಪುಣ್ಯಾರ್ಚನೆ ಹಾಕಬೇಕು. ನಂತರ ಹುಡುಗಿಯನ್ನು ಸಿಂಗರಿಸಿ ಹಣೆಗೆ ಗಂಧ ಹಚ್ಚಬೇಕು. ಈ ಎಲ್ಲಾ ಕ್ರಮ ಮುಗಿದ ಮೇಲೆ ಪಿಲೆ ತೆಗೆದ ಮುತ್ತೈದೆ ಸ್ಥಳ ಶುದ್ಧ ಮಾಡಬೇಕು.

ಗುಂಭ ಪೂಜೆ
ಬೇಕಾಗುವ ವಸ್ತುಗಳು : ಮಣ್ಣಿನ ಮಡಿಕೆ, ಕಲಶ ಕನ್ನಡಿ, 1 ತಂಬಿಗೆ, 1 ತೆಂಗಿನಕಾಯಿ, ಬೆಲ್ಲ ಅವಲಕ್ಕಿ, ಬಾಳೆಹಣ್ಣು, ಬಾಳೆಲೆ, ಚಾಪೆ.

ಬಾವಿಯ ಹತ್ತಿರ ಹೋಗಿ ಕಟ್ಟೆಬಳಿ ಪೂರ್ವಾಭಿಮುಖವಾಗಿ ಚಾಪೆ ಹಾಕಿ ಅದರ ಮೇಲೆ 5 ಬಾಳೆಲೆ ಹಾಕಿಡಬೇಕು. ಆ ಎಲೆಗಳಿಗೆ ಅವಲಕ್ಕಿ ಬೆಲ್ಲ, ಬಾಳೆಹಣ್ಣು ಬಡಿಸಬೇಕು. ಹುಡುಗಿ ಕೈಯಿಗೆ ಒಂದು ತೆಂಗಿನಕಾಯಿ ಕೊಟ್ಟು ಕೈ ಮುಗಿದು ತೆಂಗಿನಕಾಯಿಯನ್ನು ಎರಡು ಭಾಗ ಮಾಡಿ ಎಲೆಗಳಿಗೆ ಆರತಿ ಎತ್ತಿದ ಹಾಗೆ ಮಾಡಿ ಎಲೆಗಳ ಮಧ್ಯ ಗಡಿಗಳನ್ನು ಇಡಬೇಕು. ಧೂಪದಾರತಿ ಮಾಡಿಸಬೇಕು. ಪ್ರಾರ್ಥಿಸಿ ಆದ ಮೇಲೆ ಹುಡುಗಿ ಕೈಯಿಂದ ಆ ಎಲೆಗಳನ್ನು ಸ್ವಲ್ಪ ಎದುರು ಎಳೆಯಬೇಕು. ನಂತರ ಅವಲಕ್ಕಿ ಬೆಲ್ಲ ಸೇರಿಸಿ ಪಂಚಕಜ್ಜಾಯ ಮಾಡಿಸಬೇಕು. 5 ಜನ ಮುತ್ತೈದೆಯರು ಅಲ್ಲಿದ್ದ ಮಡಕೆಯನ್ನು ಎತ್ತಿ ಹುಡುಗಿ ತಲೆ ಮೇಲೆ ಇಡುತ್ತಾರೆ. ಹುಡುಗಿ ಬಾವಿಗೆ ಸುತ್ತು ಬರಬೇಕು.ನಂತರ ಮನೆ ಎದುರು ಮೆಟ್ಟಿಲ ಹತ್ತಿರ ಬಂದು ನಿಲ್ಲಬೇಕು. ಈಗ 5 ಜನ ಮುತ್ತೈದೆಯರು ಒಂದು ಕಂಚಿನ ಬಟ್ಟಲಿಗೆ ಕುರ್ದಿ ನೀರು ಹಾಕಿ, ಆರತಿ ಎತ್ತಿ, ಸೋಭಾನೆ ಹಾಡಿ, ಕುರ್ದಿ ನೀರನ್ನು ಕಾಲಿನ ಎರಡು ಬದಿಗೆ ಎರೆಯಬೇಕು. ನಂತರ ಒಳಗೆ ಕರೆದುಕೊಂಡು ಹೋಗಬೇಕು. ಕನ್ನಿಕಂಬದ ಹತ್ತಿರ ಹುಡುಗಿಯನ್ನು ದೇಸೆಗೆ ಕುಳ್ಳಿರಿಸಬೇಕು. ಆರಂಭಕ್ಕೆ ಮನೆ ಮುತ್ತೈದೆಯರು ದೇಸೆ ಹಾಕಬೇಕು. ನಂತರ ಪ್ರತಿಯೊಬ್ಬರೂ ದೇಸೆ ಹಾಕುವರು. (ಉಡುಗೊರೆ ಕೊಡುವುದಿದ್ದರೆ ಕೊಡಬಹುದು) ನಂತರ ಹೊರಗೆ ಬಂದು ತುಳಸಿಕಟ್ಟೆ ಮುಂಭಾಗದಲ್ಲಿ ದೇವರಿಗೆ ನೀರು ಇಡುವ ಕ್ರಮ ಮಾಡಬೇಕು. ಹುಡುಗಿ ಕೈಯಲ್ಲಿ 5 ಎಲೆ 1 ಅಡಿಕೆ ಕೊಡಬೇಕು. ಮನೆ ಯಜಮಾನ 5 ದೇವರುಗಳ ನೆನೆದು ಎಲೆ ಅಡಿಕೆಯ ಕೈ ಮೇಲೆ ನೀರು ಹೊಯ್ಯುವುದು ಮಾಡಬೇಕು. ಇದಾದ ನಂತರ ಒಳಗೆ ಹೋಗಿ ಅಟ್ಟಕ್ಕೆ “ಕೈ ಮುಗಿಯಬೇಕು. ಹೊರಗೆ ಬಂದು ಮರ ಗಿಡಗಳಿಗೆ, ಒನಕೆ, ದನಗಳಿಗೆ ಕೈ ಮುಗಿಯುವ ಶಾಸ್ತ್ರ ಮಾಡಬೇಕು. ಈ ಎಲ್ಲಾ ಕ್ರಮ ಮುಗಿದ ಮೇಲೆ ಹಿರಿಯರ ಪಾದ ಮುಟ್ಟಿ ನಮಸ್ಕರಿಸುವ ಶಾಸ್ತ್ರ ಮಾಡಬೇಕು. ಬಂದವರಿಗೆಲ್ಲಾ ಭೋಜನದ ವ್ಯವಸ್ಥೆ ಮಾಡಬೇಕು. ಭೋಜನದ ನಂತರ ಸೋದರದವರು ಹುಡುಗಿಯನ್ನು ಕರೆದುಕೊಂಡು ಹೋಗಬೇಕು. ಅಲ್ಲಿ ರಾತ್ರಿ ಗುರುಕಾರಣರಿಗೆ ಬಡಿಸುವ ಕ್ರಮ ಮಾಡಬೇಕು. ಮರು ದಿನ ಮನೆಯವರು ಕರಕೊಂಡು ಬರುವುದು





Friday, May 3, 2024

ಗೌಡ ಸಂಸ್ಕೃತಿ--- ಹುಟ್ಟು : (ಜನನ)

ಹಿಂದಿನ ಕಾಲದಲ್ಲಿ ಮಗು ಹುಟ್ಟಿದಾಗ ಕಂಚಿನ ಬಟ್ಟಲು ಹೊಡೆಯುವ ಸಂಪ್ರದಾಯವಿತ್ತು. ಶಬ್ದ ಕೇಳಿದಲ್ಲಿಂದ ಮಗು ಭೂಮಿಗೆ ಬಿದ್ದ ಘಳಿಗೆಯೆಂದು ನಿರ್ಧರಿಸಿ ಮಗುವಿನ ಜಾತಕದ ಗ್ರಹ ಸ್ಪುಟಗಳನ್ನು ಜ್ಯೋತಿಷ್ಯರು ಬರೆದಿಡುತ್ತಿದ್ದರು. ಹಿಂದಿನ ಕಾಲದ ಪದ್ಧತಿ ಪ್ರಕಾರ ಮಗು ಹುಟ್ಟಿದ ತಕ್ಷಣ ಬಜೆಯನ್ನು ಒಂದು ಹನಿ ಜೇನಿನಲ್ಲಿ ಅರೆದು ಮಗುವಿನ ನಾಲಗೆಗೆ ಮುಟ್ಟಿಸುವುದು ಕ್ರಮ.

ಸೂತಕ : ಜನನ ಮರಣ ಋತು ಶಾಂತಿ ಸೂತಕಗಳು 16 ದಿನ ಆಗಿರುತ್ತದೆ.

ಸೂತಕದ ದಿನಗಳಲ್ಲಿ ಮನೆಯ ದೇವರಿಗೆ ದೀಪ ಇಡುವಂತಿಲ್ಲ.

ಅಮೆ : ಹಿಂದಿನ ಕಾಲದಿಂದಲೂ 3ರ ಅಮೆ, 5ರ ಅಮೆ, 7ರ ಅಮೆಯೆಂದು ಶುದ್ದಿ ಕ್ರಿಯೆಯನ್ನು ಆಚರಿಸುತ್ತಿದ್ದರು. ಈ ಪ್ರಕಾರ ಮನೆಯನ್ನು ಆ ದಿನ ಸ್ವಚ್ಛ ಮಾಡುತ್ತಾರೆ. ನಿಗದಿಪಡಿಸಿದ ದಿನ ಊರ ಮಡಿವಾಳಗಿತ್ತಿ ಮನೆಗೆ ಬಂದು ಸ್ನಾನದ ನಂತರ ಬಾಣಂತಿಗೆ ಪುಣ್ಯಾರ್ಚನೆಯನ್ನು ಹಾಕಿ ಮನೆಯ ಪ್ರತಿ ಕೋಣೆಗೆ, ಬಚ್ಚಲು ಮನೆಗೆ, ಬಾವಿಗೆ ಕೂಡ ಹಾಕಿ ಮನೆ ಮಂದಿಗೆಲ್ಲ ಸಂಪ್ರೋಕ್ಷಣೆ ಆದ ಮೇಲೆ ತುಳಸಿ ಕಟ್ಟೆಯಲ್ಲಿಡುತ್ತಾರೆ. (ಕುಟುಂಬದವರು ಬೇಕಾದರೆ ಅಲ್ಲಿಂದ ಕೊಂಡು ಹೋಗಬಹುದು).

ಪೂರ್ವ ಪದ್ಧತಿ ಪ್ರಕಾರ ಮಗುವನ್ನು ಅಮೆ ದಿನದವರೆಗೆ ಹಾಳೆಯಲ್ಲಿ ಮಲಗಿಸಲಾಗುತ್ತಿತ್ತು.ಅಮೆ ದಿನದಿಂದ ಚಾಪೆಯಲ್ಲಿ ಮಗುವನ್ನು ಮಲಗಿಸುವುದು ರೂಢಿ. ಮಗುವನ್ನು ಸ್ನಾನಮಾಡುವ ಮೊದಲು ಎಣ್ಣೆ ತಿಕ್ಕಿ ಚಕ್ಕಳ ( ಜಿಂಕೆ ಅಥವಾ ಕಾಡುಕುರಿ ಚರ್ಮ)ದಲ್ಲಿ ಅಥವಾ ಒಲಿಯ ಸಣ್ಣ ಚಾಪೆಯಲ್ಲಿ ಮಲಗಿಸುತ್ತಿದ್ದರು. ಅನಂತರ  ಸ್ನಾನಮಾಡಿಸುವುದು ವಾಡಿಕೆ. ಅಮೆ ದಿನ ನರೆಹೊರೆಯ ಮನೆಯವರಿಗೆಲ್ಲ ಆಮಂತ್ರಿಸುವುದು ಕಮ ನೆರೆಹೊರೆಯವರು ಬರುವಾಗ 1 ಕುಡ್ಲೆ ಎಣ್ಣೆ ತರುವುದು ವಾಡಿಕೆಯಾಗಿತ್ತು. (ಬರಿ ಕೈಯಲ್ಲಿ ಬರುವ ಬದಲು ಇದೊಂದು ಸಂಪ್ರದಾಯ). 

ಅಮೆ ಕ್ರಮ : (3, 5 ಅಥವಾ 7ನೇ ದಿನಗಳಲ್ಲಿ ಮಾಡಬಹುದು) ಮಡಿವಾಳಗಿತ್ತಿಗೆ ಹೇಳಿಕೆ ಕೊಡಬೇಕು. ಮಡಿವಾಳಗಿತ್ತಿ ಬೆಳಿಗ್ಗೆ ಬಂದು ಶುದ್ಧಿ ಕ್ರಿಯೆಯನ್ನು ಆರಂಭಿಸಬೇಕು. ಹತ್ತಿರದ ದೇವಸ್ಥಾನದಿಂದ ಕುಟುಂಬದಲ್ಲದವರು ಪುಣ್ಯಾರ್ಚನೆ ತರಬೇಕು. ಮಡಿವಾಳಗಿತ್ತಿ ತಾಯಿ ಮತ್ತು ಮಗುವನ್ನು ಸ್ನಾನ ಮಾಡಿಸಿ ನಡುಮನೆಯಲ್ಲಿ ದೀಪ ಹಚ್ಚಿ ಗಣಪತಿಗೆ ಇಟ್ಟು, ಮಗುವನ್ನು ತಾಯಿ ಮಡಿಲಲ್ಲಿ ಮಲಗಿಸಿ (ಪೂರ್ವಾಭಿಮುಖವಾಗಿ) ಸೋದರ ಮಾವನೊಂದಿಗೆ (ಮಗುವಿನ ತಾಯಿಯ ಅಣ್ಣ ಅಥವಾ ತಮ್ಮ) ಪಟ್ಟೆನೂಲು ಕಟ್ಟುತ್ತೇನೆ ಎಂದು ಕೇಳಿಕೊಂಡ ಬಳಿಕ ಪಟ್ಟೆನೂಲನ್ನು ಉಡಿದಾರವಾಗಿ ಸೊಂಟಕ್ಕೆ ಕಟ್ಟುವಳು. ನಂತರ ಮಧ್ಯಾಹ್ನ ಬಂದವರಿಗೆ ಬೋಜನ ವ್ಯವಸ್ಥೆ ಮಾಡಬೇಕು (ಸಿಹಿಯೂಟ)

 ತೊಟ್ಟಿಲಿಗೆ ಹಾಕುವ ಕ್ರಮ : (ನಾಮಕರಣ, ಜೋಗುಳ ಹಾಡುಗಳು) : ಪೂರ್ವ ಪಶ್ಚಿಮವಾಗಿತೊಟ್ಟಿಲನ್ನು ಕಟ್ಟಿರಬೇಕು. ಕಿನ್ನೆರ್ ಬಳ್ಳಿಯನ್ನು ತೊಟ್ಟಿಲು ಸುತ್ತ ಸುತ್ತಿರಬೇಕು. ಹರಿದ ‌ಮೀನಿನ ಬಲೆಯನ್ನು ತೊಟ್ಟಿಲು ಸುತ್ತ ಕಟ್ಟುವುದು ವಾಡಿಕೆ. ಹೂವಿನಿಂದ ಸಿಂಗರಿಸಬಹುದು. 16ನೇ ದಿನದಲ್ಲಿ ಮಗುವನ್ನು ತೊಟ್ಟಿಲು ಹಾಕುವ ಸಂಪ್ರದಾಯ ಮಾಡಬೇಕು. ಮಣೆ ಮೇಲೆ ದೀಪ ಹಚ್ಚಿಡಬೇಕು. ಹಾಲು ಹಾಕಿದ ಅನ್ನವನ್ನು ಅರೆದು ಕೊಡಿ ಬಾಳೆಲೆಯಲ್ಲಿಡಬೇಕು. ಚಿನ್ನದ ಉಂಗುರವನ್ನು ಬಳಸಿ ಅನ್ನಪ್ರಾಶನ ಮಾಡಿಸುವರು (ಈ ದಿನಕ್ಕೆ ಜ್ಯೋತಿಷ್ಯ ಕೇಳುವ ಅಗತ್ಯವಿಲ್ಲ). 16ರ ದಿನ ಮಾಡಲು ಸಾಧ್ಯವಾಗದೇ ಇದ್ದಾಗ ಜ್ಯೋತಿಷ್ಯರಲ್ಲಿ ದಿನ ನಿಶ್ಚಯಿಸಿ ನಾಮಕರಣ ಮಾಡುತ್ತಾರೆ. ಮಗುವಿನ ಜನನ ನಕ್ಷತ್ರ ಹೊಂದಿಕೆಯಾಗುವ ಹೆಸರುಗಳನ್ನಿಡುವುದು. ನೆಂಟರಿಷ್ಟರಿಗೆ ಊರ ಬಂಧುಗಳಿಗೆ ಹೇಳಿಕೆ ಕೊಡಬೇಕು. ಆ ದಿನ ಕೂಡ ಪುಣ್ಯಾರ್ಚನೆಯನ್ನು ದೇವಸ್ಥಾನದಿಂದ ತರಬೇಕು. ಆ ದಿನ ನಾಮಕರಣ ಮಾಡಿದ ಮೇಲೆ ಸೋದರಮಾವ ಮಗುವಿಗೆ ಅನ್ನ ಪ್ರಾಶನ ಮಾಡಿ ಸಿಂಗರಿಸಿದ ತೊಟ್ಟಿಲಿಗೆ ಮುತ್ತೈದೆಯರು ಮಗುವನ್ನು ಮಲಗಿಸಬೇಕು. ಮಗುವಿನ ತಂದೆ ಅಥವಾ ತಂದೆಯ ಕಡೆಯವರು ನಾಮಕರಣ ಅಥವಾ ಹೆಸರಿಡಬೇಕು. ಮುತ್ತೈದೆಯರು ಮಗುವನ್ನು ತೊಟ್ಟಿಲಲ್ಲಿ ಹಾಕುವಾಗ ಜೋಗುಳ ಹಾಡಬೇಕು. ಸಿಹಿ ತಿಂಡಿ ಹಂಚಬೇಕು. ಬಳಗದವರು ಉಡುಗೊರೆ ಕೊಟ್ಟು ಹರಸುವುದು ಕ್ರಮ. ನಂತರ ಭೋಜನ ವ್ಯವಸ್ಥೆಯಿರುತ್ತದೆ. ಹಿಂದಿನ ಕಾಲದಲ್ಲಿ ಗೋಧೂಳಿ ಲಗ್ನದಲ್ಲಿ ಮಗುವಿನ ನಾಮಕರಣ ಮಾಡುತ್ತಿದ್ದರು.

40ನೇ ದಿನದ ಕ್ರಮ : 40ನೇ ದಿನದಲ್ಲಿ ತಾಯಿ ಮತ್ತು ಮಗುವನ್ನು ಎಣ್ಣೆ ಹಾಕಿ ಸ್ನಾನ ಮಾಡಿಸುತ್ತಾರೆ. ತಾಯಿಯ ಸ್ನಾನದ ನಂತರ ಕೊನೆಯಲ್ಲಿ 40 ಚೆಂಬು (ಒರಂಕು, ಒಣಕು ಅಂದರೆ ಗೆರಟೆಯಿಂದ ಮಾಡಿದ ತಂಬಿಗೆಯ ಆಕೃತಿಯ ಪಾತ್ರೆ, ಅದಕ್ಕೆ ಉದ್ದದ ಮರದ ಹಿಡಿಯಿರುತದೆ. ಅಥವಾ ತಾಮ್ರದ ಕೈಯಿರುವ ಚೆಂಬುವಿನಿಂದ ನೀರನ್ನು ರಭಸವಾಗಿ ಬಾಣಂತಿಗೆ ಹಾಕುತ್ತಿದ್ದರು) ನೀರು ಹೊಯ್ಯುವ ಕ್ರಮವಿದೆ. ಅನಂತರ 5 ಎಲೆ 1 ಅಡಿಕೆಯನ್ನು ಬಾಣಂತಿ ಮಂಡೆಯೊಳಗಡೆ ಹಾಕಿ ಕೈ ಮುಗಿದು ಮಂಡೆಯನ್ನು ಕೆಳಗಿಳಿಸಿ ಕವುಚಿ ಹಾಕಬೇಕು  ನಂತರ ಸೀದಾ ಮನೆಯೊಳಗಡೆ ಬಂದು ದೀಪ ಹೊತ್ತಿಸಿ ಕೈ ಮುಗಿದು ಹಿರಿಯರ ಕಾಲು ಹಿಡಿದು ಆಶೀರ್ವಾದ ಪಡೆಯಬೇಕ. 40 ದಿನ ಉಪಚಾರ ಮಾಡಿದ ನೆನಪಿಗಾಗಿ ಬಾಣಂತಿಯನ್ನು ಆರೈಕೆ ಮಾಡಿದ ಹೆಂಗಸಿಗೆ ಉಡುಗೊರೆ ನೀಡಬೇಕು. ತದನಂತರ ಹಟ್ಟಿಗೆ ಹೋಗಿ ಗೋಪೂಜೆ ಸಲ್ಲಿಸಿ ಮನೆಗೆ ಬಂದು ಹಣೆಗೆ ಕುಂಕುಮ ಇಟ್ಟು ಸೀರೆ ಉಡುವುದು. ಅದೇ ದಿನ ದೇವಸ್ಥಾನಕ್ಕೆ ಮಗುವನ್ನು ಕರಕೊಂಡು ಹೋಗಿ ಬರುವುದು ವಾಡಿಕೆ.

ಬಾಣಂತಿ ಬಚ್ಚಲು ಮನೆ : ಹಿಂದಿನ ಪದ್ಧತಿ ಪ್ರಕಾರ ಬಾಣಂತಿಗೆ ಬಚ್ಚಲು ಮನೆಯನ್ನು ಪ್ರತ್ಯೇಕವಾಗಿ ಮಾಡುತ್ತಿದ್ದರು. ಬಾಣಂತಿಯ ಬಚ್ಚಲು ಮನೆಗೆ ಇತರರು ಹೋಗುವಂತಿಲ್ಲ. ಬಚ್ಚಲು ಮನೆಗೆ ಬೈನೆಗಿಡದ ಸೋಗೆ, ಕಾಸರಕನ ಗೆಲ್ಲು, ನೆಕ್ಕಿ ಗೆಲ್ಲುಗಳನ್ನು ಸಿಕ್ಕಿಸಿ ಅದನ್ನು ಬಂದೋಬಸ್ತು ಮಾಡುತ್ತಾರೆ. (ದುಷ್ಟ ಶಕ್ತಿಗಳು ಬಾರದ ಹಾಗೆ).

ಮಗುವಿಗೆ ಕಿವಿಚುಚ್ಚುವ ಕ್ರಮ : 16ನೇ ದಿನದಿಂದ 5 ವರ್ಷದ ಒಳಗೆ ಮಗುವಿಗೆ ಕಿವಿ ಚುಚ್ಚುವುದು ಮಾಡುತ್ತಿದ್ದರು. ಹೆಣ್ಣು ಮಗುವಿಗೆ 5 ವರ್ಷದಿಂದ ಮೈ ನೆರೆಯುವ ಒಳಗೆ ಮೂಗು ಚುಚ್ಚುವುದು ಮಾಡುತ್ತಿದ್ದರು. (ಮುಹೂರ್ತ ಮತ್ತು ದಿನ ನೋಡಿ)

ಪ್ರಥಮ ಚವಲ (ಕೂದಲು) ತೆಗೆಸುವುದು : ಮುಹೂರ್ತ ಮತ್ತು ದಿನ ನೋಡಿ ಸೋದರ ಮಾವ ಚವಲ ತೆಗೆಯುವುದು. (ದೇವಸ್ಥಾನದಲ್ಲಿ ಕೂಡ ಮಾಡಬಹುದು)

ಮಗುವಿನ ತೊಟ್ಟಿಲು ಕಳುಹಿಸುವ ಕ್ರಮ : ನಿಗದಿಪಡಿಸಿದ ದಿನದಂದು ತವರು ಮನೆಯಿಂದ ಗಂಡನ ಮನೆಗೆ ತಾಯಿ ಮಗುವನ್ನು ಕಳುಹಿಸಿ ಕೊಡುವುದು ಸಂಪ್ರದಾಯ, ಹಿಂದಿನ ದಿನ ರಾತ್ರಿ ಗುರು ಕಾರಣರಿಗೆ ಅಗೇಲು ಬಳಸುವ ಕ್ರಮ. ತಾಯಿ ಹಾಗೂ ಮಗುವಿನ ಬಗ್ಗೆ ಪ್ರಾರ್ಥನೆ ಮಾಡಿ ಗುರುಕಾರಣರ ಆಶೀರ್ವಾದ ಪಡೆದು ಮಾರನೇ ದಿನ ಬೆಳಗ್ಗೆ ದೇವರ ದೀಪ ಹಚ್ಚಿ ಕೈಮುಗಿದು ಗುರು ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ ತೊಟ್ಟಿಲು ಮತ್ತು ಮಗುವನ್ನು ತವರು ಮನೆಯ ಹಿರಿಯರು ಗಂಡನ ಮನೆಯವರಿಗೆ ಒಪ್ಪಿಸುತ್ತಾರೆ.(ತೊಟ್ಟಿಲು ತೆಗೆದುಕೊಂಡು ಹೋಗುವಾಗ ಮಧ್ಯ ದಾರಿಯಲ್ಲಿ ಚೂರಿಮುಳ್ಳು, ಕಲ್ಲು ಇಟ್ಟು ಬಿಡಬೇಕು. ತವರು ಮನೆಯ ಭೂತ ಪ್ರೇತಗಳು ಜೊತೆಯಲ್ಲಿ ಬಾರದ ಹಾಗೆ.)
ಗಂಡನ ಮನೆಯ ಕ್ರಮ : ಗಂಡನ ಮನೆಗೆ ಬಂದ ತಾಯಿ ಹಾಗೂ ಮಗುವನ್ನು ಮುತ್ತೈದೆಯರು ಆರತಿ ಎತ್ತಿ ದೃಷ್ಟಿ ತೆಗೆದು ಕುರ್ದಿ ನೀರನ್ನು ಕಾಲಿಗೆ ಹೊಯ್ದು ನಂತರ ಶುದ್ಧ ನೀರಿನಿಂದ ಕಾಲು ತೊಳೆದು ಮನೆಯ ಒಳಗೆ ಕರಕೊಂಡು ಬರಬೇಕು. ನಡುಮನೆಯಲ್ಲಿ ಹಚ್ಚಿಟ್ಟ ದೀಪಕ್ಕೆ ಕೈ ಮುಗಿದು ಹಾಸಿದ ಒಲಿ ಚಾಪೆಯಲ್ಲಿ ಕುಳ್ಳಿರಿಸಿ (ಕನ್ನಿ ಕಂಬದ ಮನೆಯಲ್ಲಿ ಕಂಬದ ಎಡಭಾಗದಲ್ಲಿ ಅಥವಾ ಸೂಕ್ತ ಜಾಗದಲ್ಲಿ) ತಾಯಿ ಮಡಿಲಲ್ಲಿ ಮಗುವನ್ನು ಮಲಗಿಸಿ ತಾಯಿಗೆ ಕುಡಿಯಲು ಹಾಲು ಕೊಡಬೇಕು. ಆ ವೇಳೆಗೆ ಕೋಣೆಯಲ್ಲಿ ತೊಟ್ಟಿಲನ್ನು ಶಾಸ್ರೋಕ್ತವಾಗಿ ಕಟ್ಟುವುದು. ತಾಯಿಯ ಮಡಿಲಲ್ಲಿ ಮಲಗಿಸಿದ ಮಗುವನ್ನು ಮನೆಯ ಹಿರಿಯ ಮುತ್ತೈದೆಯರು ತೊಟ್ಟಿಲಲ್ಲಿ ಮಲಗಿಸುವರು.



Thursday, May 2, 2024

ಗೌಡ ಸಂಸ್ಕೃತಿ-ಕಟ್ಟೆಮನೆ/ಸೀಮೆಮನೆ/ಊರುಗೌಡ

ಜಾತಿ ಬಾಂಧವರ ರಕ್ಷಣೆಗಾಗಿ ಜಾತಿ ಪದ್ಧತಿಯ ಆಚಾರ, ಕಟ್ಟು, ಕಟ್ಟಳೆಗಳನ್ನು ಕ್ರಮಬದ್ಧ ರೀತಿಯಲ್ಲಿ ನಡೆಸುವುದಕ್ಕಾಗಿ ಹತ್ತು ಕುಟುಂಬ ಹದಿನೆಂಟು ಗೋತ್ರದ ಜನ ಸುಳ್ಯ ಮತ್ತು ಪಂಜ ಸೀಮೆಗಳಿಗೆ ಸಂಬಂಧಪಟ್ಟಂತೆ ಕೂಜುಗೋಡು ಕಟ್ಟೆಮನೆಯನ್ನು ಒಪ್ಪಿಕೊಂಡರು. (ಪುತ್ತೂರು ಭಾಗದಲ್ಲಿ ಬಲ್ನಾಡು ಕಟ್ಟೆಮನೆ ಆ ಭಾಗದ ಗೌಡರುಗಳಿಗೆ ಸೀಮಿತವಾಗಿದೆ)

ಕಟ್ಟೆ ಮನೆಯ ನಿರ್ದೇಶನದಂತೆ ಜಾತಿ ಪದ್ಧತಿಯಲ್ಲಿ ನಡೆಯುವ ಹುಟ್ಟಿನಿಂದ ಸಾವಿನ ತನಕ ನಡೆಯಬೇಕಾದ ಸಂಸ್ಕಾರ ವಿಧಿಗಳನ್ನು ನಿರ್ಣಯಿಸಿ ಕಾರರೂಪಕ್ಕೆ ತರುವಲ್ಲಿ ಕಟ್ಟೆಮನೆ ಮಹತ್ತರ ಪಾತ್ರವಹಿಸಿದೆ. ಕೆಳಗಿನ ಹಂತಗಳಲ್ಲಿ ನ್ಯಾಯ ನಿರ್ಣಯಗಳನ್ನು ತೀರಿಸಲು ಅಸಾಧ್ಯವಾದಾಗ ಕೂಜುಗೋಡು ಕಟ್ಟೆಮನೆಯವರು ದೂರನ್ನು ಸ್ವೀಕರಿಸಿ ಪರಿಹರಿಸುತ್ತಿದ್ದರು. ಇಲ್ಲೂ ಅಸಾಧ್ಯವಾದಾಗ ಮಾತ್ರ ಶೃಂಗೇರಿ ಗುರುಗಳ ಬಳಿ ನಿರ್ಣಯಿಸಲ್ಪಡುತ್ತಿತ್ತು. ಅಲ್ಲದೆ ಮದುವೆ ಕಾವ್ಯದಲ್ಲಿ ತೆಗೆದಿಟ್ಟ ತೆರವಿನ ಹಣದ ಒಂದು ಪಾಲನ್ನು ಶೃಂಗೇರಿ ಮಠಕ್ಕೆ ಕಳುಹಿಸಿ ಕೊಡುವ ಕೆಲಸ ಕಟ್ಟೆಮನೆಯವರದ್ದಾಗಿತ್ತು.

ಸೀಮೆಮನೆ: ಹತ್ತು ಕುಟುಂಬ ಹದಿನೆಂಟು ಗೋತ್ರದ ಜಾತಿ ಬಾಂಧವರಿಗೆ ಸುಳ್ಯ ಮತ್ತು ಪಂಜ ಸೀಮೆಗಳಿರುತ್ತವೆ. ಸೀಮೆಗಳ ವ್ಯಾಪ್ತಿಗೊಳಪಟ್ಟಂತೆ ನ್ಯಾಯ ತೀರ್ಮಾನಗಳು ಆಯಾಯ ಸೀಮೆ ಮನೆಯವರಿಗೆ ವಹಿಸಿಕೊಡಲಾಗುತ್ತದೆ. ಇಲ್ಲೂ ಆಗದೆ ಇರುವ ಸಮಸ್ಯೆಗಳನ್ನು ಕಟ್ಟೆಮನೆಗೆ ಕೊಂಡು ಹೋಗುತ್ತಾರೆ.

ಮಾಗಣೆ ಮನೆ : ನಾಲ್ಕು ಊರುಕಟ್ಟುಗಳಿಗೆ ಒಂದು ಮಾಗಣೆ ಎಂದು ಕರೆಯುತ್ತಾರೆ. ಊರುಕಟ್ಟುಗಳಲ್ಲಿ ನ್ಯಾಯ ತೀರ್ಮಾನಗಳನ್ನು ಪರಿಹರಿಸುತ್ತಾರೆ. ಇಲ್ಲಿ ಆಗದೇ ಇದ್ದಾಗ ಸೀಮೆ ಮನೆಯವರಿಗೆ ಜವಾಬ್ದಾರಿ ವಹಿಸುತ್ತಾರೆ.

ಊರುಗೌಡ: ಊರುಕಟ್ಟುಗೊಬ್ಬ ಊರುಗೌಡ. ದೊಡ್ಡ ಗ್ರಾಮಗಳಲ್ಲಿ ಬಯಲು ವ್ಯಾಪ್ತಿಗೊಬ್ಬ ಊರುಗೌಡ ಇರುತ್ತಾರೆ. ಗೌಡ ಸಮಾಜದಲ್ಲಿ ಸ್ವಜಾತಿ ನೀತಿಯನ್ನು ಕಾಪಾಡು ಉದ್ದೇಶದಿಂದ ಹಿಂದಿನಿಂದಲೂ ಗ್ರಾಮಗಳಿಗೆ ಸಂಬಂಧಪಟ್ಟಂತೆ ಇವರೇ ಕಾರ್ಯನಿರ್ವಹಿಸುತ್ತಿದ್ದರು. ಹುಟ್ಟಿನಿಂದ ಮೊದಲ್ಗೊಂಡು ಸಾವಿನ ತನಕದ ಎಲ್ಲಾ ಕಾರ್ಯಗಳು ಊರುಗೌಡರುಗಳ ನೇತೃತ್ವದಲ್ಲಿ ನಡೆಯಲ್ಪಡುತ್ತಿದ್ದವು. ಮದುವೆ ಮತ್ತು ಸತ್ತವರ ಕರ್ಮಾದಿಗಳಲ್ಲಿ ಇವರ ಮಾರ್ಗದರ್ಶನ ಅತ್ಯಂತ ಪ್ರಾಮುಖ್ಯ. ಹೀಗಾಗಿ ಮದುವೆ ಕಾರವೊಂದನ್ನು ಇಲ್ಲಿ ಉದಾಹರಿಸಿದರೆ ಹೆಣ್ಣು ನೋಡುವಲ್ಲಿಂದ ಆಟಿ ಕೂರುವವರೆಗೆ ಊರುಗೌಡರುಗಳ ಅವಶ್ಯಕತೆಯಿದೆ. ಈ ಎಲ್ಲಾ ಅಂಶಗಳಿಂದ ಇಂದಿನ ಕಾಲ ಘಟ್ಟದಲ್ಲಿ ಅವರ ಎಲ್ಲಾ ಸಮಯಗಳು ಕೂಡ ಇಂತಹ ಸಂದರ್ಭಗಳಿಗೆ ಉಪಯೋಗವಾಗುವುದರಿಂದ ಅವರ ಮನೆ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಅವರು ಎಲ್ಲಾಕಾರ್ಯಗಳಿಗೆ ಹೋಗಬೇಕಾಗಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಗೌರವಧನ ಕೊಡುವುದು ಸಮಂಜಸವೆನ್ನುವುದು ಊರುಗೌಡರುಗಳ ಸಮಾವೇಶಗಳಲ್ಲಿ ಸ್ವಜಾತಿ ಬಾಂಧವರ ಅಭಿಪ್ರಾಯವಾಗಿರುತ್ತದೆ. ಇಂದು ವೈಭವಯುತವಾಗಿ ಮದುವೆ ಕಾವ್ಯಗಳನ್ನು ನಡೆಸಿ ದುಂದು ವೆಚ್ಚ ಮಾಡುವ ನಮ್ಮ ಸಮಾಜ ಬಂಧುಗಳು ಈ ವಿಷಯಗಳನ್ನು ಗಂಭೀರವಾಗಿ ಚಿಂತಿಸಬೇಕಾಗಿದೆ. ಅವರ ಶ್ರಮಕ್ಕೆ ತಕ್ಕುದಾದ ಗೌರವಧನ ನೀಡಬೇಕು. ಈ ಹಣ ಕನಿಷ್ಠವಾಗಿ ಇಂದಿನ ಪರಿಸ್ಥಿತಿಯಲ್ಲಿ ಒಂದು ಸಾವಿರವಾದರೂ ಇರಬೇಕು ಎಂಬುದು ಸಮಾಜದವರ ಒಟ್ಟು ಅಭಿಪ್ರಾಯವಾಗಿದೆ
ಒತ್ತು ಗೌಡ (ಊರು ಗೌಡರ ಸಹಾಯಕ) ಊರುಗೌಡರುಗಳಿಗೆ ಸೂತಕ ಬಂದಾಗ ಊರುಗೌಡರ ಮನೆಗಳಲ್ಲೂ ಅಲ್ಲದೇ ಅವರ ಕುಟುಂಬಸ್ಥರ ಮನೆಗಳಲ್ಲೂಕಾರ್ಯಕ್ರಮಗಳನ್ನು ಮಾಡುವ ಸಂದರ್ಭಗಳಲ್ಲಿ ಹೆಚ್ಚಿನ ಮನೆಗಳಲ್ಲೂ ಒಂದೇ ದಿನಗಳಲ್ಲಿ ಕಾರ್ಯಕ್ರಮಗಳು ಇದ್ದಾಗ ಒತ್ತು ಗೌಡರು
ಕಾರ್ಯನಿರ್ವಹಿಸುತ್ತಾರೆ.



Wednesday, May 1, 2024

ಗೌಡ ಸಂಸ್ಕೃತಿ-ಗೌಡರಿಗೆ ಸಂಬಂಧವಿರುವ ಹತ್ತು ಕುಟುಂಬಗಳು (ಶುಭ ಮತ್ತು ಅಶುಭ ಕಾರ್ಯಗಳಿಗೆ ಸಹಕರಿಸುವವರು)

1. ಬ್ರಾಹ್ಮಣರು

2. ದಾಸಯ್ಯರು

3. ಕ್ಷೌರಿಕರು (ಸವಿತಾ ಸಮಾಜದವರು)

4. ವಿಶ್ವಕರ್ಮರು

5. ಮೂಲದವರು

6. ಮಡಿವಾಳರು

7. ಗಾಣಿಗರು

8. ನೇಕಾರರು-ಚಾಲ್ಯರು

9. ಸಮಗಾರರು

10. ಅಜಲರು ಮತ್ತು ಪರವರು


Tuesday, April 30, 2024

ಗೌಡ ಸಂಸ್ಕೃತಿ - ಬಳಿ (ಗೋತ್ರ)

 1. ನಂದರ ಬಳಿ

2. ಹೆಮ್ಮನ ಬಳಿ

3. ಬಂಗಾರು ಬಳಿ

4. ಮೂಲರ ಬಳಿ

5. ಚಾಲ್ಯರ ಬಳಿ

6. ನಾಯ‌ರ್ ಬಳಿ

7. ಗೋಳಿ ಬಳಿ

8. ಸೆಟ್ಟಿ ಬಳಿ (ಗುಂಡಣ್ಣ ಬಳಿ)

9. ಕಬರ್ ಬಳಿ

10. ಚಿತ್ತರ್ ಬಳಿ

11. ಗೌಡರ ಬಳಿ

12. ಬಳಸಣ್ಣ ಬಳಿ

13. ಕರ್ಬನ್ನ ಬಳಿ

14. ಚೌದನ್ನ ಬಳಿ

15. ಸಾಲೆ ಬಳಿ

16. ಲಿಂಗಾಯಿತ ಬಳಿ

17. ಕರಂಬೆರ್ ಬಳಿ

18. ಕುತ್ತಿಗುಂಡ ಬಳಿ

ಗೌಡ ಸಂಸ್ಕೃತಿ - ಪುಸ್ತಕ -ಮನೆತನದ ನೆಲೆಗಳು

ಕುಲದೇವರು - ತಿರುಪತಿ ಶ್ರೀ ವೆಂಕಟರಮಣ

ಶೃಂಗೇರಿ ಮಠ ಜಗದ್ಗುರುಗಳು

ಕಟ್ಟೆ ಮನೆ ಗೌಡರು

ಸೀಮೆ ಮನೆ ಗೌಡರು

ಮಾಗಣೆ ಮನೆ ಗೌಡರು

ಊರುಗೌಡರು

ಒತ್ತುಗೌಡ (ಬುದ್ಧಿವಂತ)