ಭೂಮಿ ಹೆಸೆ ಬರೆಯುವುದು
5 ಜನ ಮುತ್ತೈದೆಯರು ಭೂಮಿ ಹಸೆ ಬರೆಯುತ್ತೇವೆಂದು ಹೇಳಿ ಅಕ್ಕಿಯಿಂದ ಗೆರೆಹಾಕಿ ಚೌಕಟ್ಟು ಮಾಡಿ ಅದನ್ನು ಒಟ್ಟು ಸೇರಿಸಬೇಕು. ಎಡದ ಪ್ರಥಮ ಚೌಕಟ್ಟಿನೊಳಗೆ (ಮದುಮಗ ಕುಳಿತುಕೊಳ್ಳುವ ಬಲಭಾಗ) ಸೂರ್ಯ ಚಿತ್ರ, ಕೊನೆಯ ಚೌಕಟ್ಟಿನೊಳಗೆ ಚಂದ್ರ ಚಿತ್ರ ಬರೆದು ಮಣೆ ಇಡಬೇಕು. ಆ ನಂತರ ವಧು/ವರರನ್ನು ಎಣ್ಣೆ ಅರಶಿನ ಮಾಡುವುದಕ್ಕೆ ಊರು ಗೌಡರು ಒಕ್ಕಣೆಯೊಂದಿಗೆ ಕುಳ್ಳಿರಿಸುವರು.
ಮಣೆಯ ಮೇಲೆ ಒಂದು ಹರಿವಾಣದಲ್ಲಿ ಬೆಳ್ತಿಗೆ ಅಕ್ಕಿ, 5 ವೀಳ್ಯದೆಲೆ, 1 ಅಡಿಕೆ ಇನ್ನೊಂದು ಹರಿವಾಣದಲ್ಲಿ ತೆಂಗಿನ ಹಾಲು ಮತ್ತು ತೆಂಗಿನ ಎಣ್ಣೆ ಮಿಶ್ರಣದಲ್ಲಿ ಅರಿಶಿನ ಹಾಗೂ ಗರಿಕೆ (5 ಅಥವಾ 10 ತುದಿ) ತುದಿ ಇರಬೇಕು. ಮೇಲ್ಕಟ್ಟಿನಡಿಯಲ್ಲಿ ಪೂರ್ವಾಭಿಮುಖವಾಗಿ ತೂಗುದೀಪ ಉರಿಸಿ ಇಟ್ಟಿರಬೇಕು.
ವಧು/ವರರ ಸ್ನಾನದ ನಂತರ ಬಿಳಿ ವಸ್ತ್ರ ಧರಿಸಿ ದೇವರ ಕೋಣೆಗೆ ಬರುವರು. ಹಿರಿಯರು ಹಚ್ಚಿದ ದೀಪದ ಎದುರು ಮನೆಯವರು ಬಂಧುಗಳೆಲ್ಲ ಸೇರಿ ಪ್ರಾರ್ಥಿಸಿಕೊಳ್ಳುವರು. ವಧು/ವರರು ದೀಪಕ್ಕೆ ಅಕ್ಕಿ ಕಾಳು ಹಾಕಿ ನಮಸ್ಕರಿಸಿ ಹಿರಿಯರ ಪಾದಗಳಿಗೆರಗಿ ಆಶೀರ್ವಾದ ಪಡೆಯುವರು. ನಂತರ ಸೋದರ ಮಾವನಿಗೆ ತಂಬಿಗೆ ನೀರು ಕೊಟ್ಟು ಮುಹೂರ್ತದ ಮಣಿ ಕಟ್ಟಲು ಕೇಳಿಕೊಳ್ಳುವರು.
ತದನಂತರ ಒಳಗಿನಿಂದ ತಂದೆಯು ವಧು/ವರನನ್ನು ಮೇಲ್ಕಟ್ಟಿನಡಿಗೆ ಕರೆದುಕೊಂಡು ಬರುವರು. ಒಕ್ಕಣೆಯೊಂದಿಗೆ ಸೋದರಮಾವ ಅಥವಾ ಊರು ಗೌಡರು ಮುಹೂರ್ತದ ಮಣಿಯನ್ನು ಕಟ್ಟಬೇಕು. ನಂತರ ಒಕ್ಕಣೆಯೊಂದಿಗೆ ಊರು ಗೌಡರು ಎಣ್ಣೆ ಅರಿಶಿನಕ್ಕೆ ಮಣೆಯ ಮೇಲೆ ಪೂರ್ವಾಭಿಮುಖವಾಗಿ ಕುಳ್ಳಿರಿಸಿ ಹರಿವಾಣದಲ್ಲಿಟ್ಟಂತಹ 5 ವೀಳ್ಯದೆಲೆ 1 ಅಡಿಕೆಯನ್ನು ವಧು/ವರನ ಕೈಯಲ್ಲಿ ಇರಿಸುವರು. ಕನಿಷ್ಠ 5 ಜನ ಮುತ್ತೈದೆಯರು ಒಬ್ಬೊಬ್ಬರಾಗಿ ಬಂದು ದೇವರ ದೀಪಕ್ಕೆ ಅಕ್ಕಿ ಕಾಳು ಹಾಕಿ ಕೈಮುಗಿದು ವಧು/ವರನಿಗೆ ಅಕ್ಷತೆ ಹಾಕಿ ಅವರ ಕೈಯಲ್ಲಿದ್ದ ವೀಳ್ಯವನ್ನು ಪಡೆದು ಅಕ್ಕಿ ಹರಿವಾಣದಲ್ಲಿಟ್ಟು ನಂತರ ಅರಿಶಿಣವನ್ನು ಪಾದದಿಂದ ಮುಖದವರೆಗೆ ಗರಿಕೆ ತುದಿಯಿಂದ 3 ಸಲ ಸವರಿ ನಂತರ ಎರಡು ಅಂಗೈಗಳಿಂದ ಅರಿಶಿನವನ್ನು ಸಂಪೂರ್ಣ ಮೈಗೆ ಹಚ್ಚಬೇಕು. ಹರಿವಾಣದಲ್ಲಿರುವ 5 ವೀಳ್ಯದೆಲೆ 1 ಅಡಿಕೆಯನ್ನು ಮತ್ತೆ ಕೈಯಲ್ಲಿಟ್ಟು ಪರಸ್ಪರ ನಮಸ್ಕರಿಸಿಕೊಳ್ಳುವರು. ಇದೇ ಕ್ರಮವನ್ನು ಉಳಿದ ಮುತ್ತೈದೆಯರು ಅನುಸರಿಸುವರು. ಈ ಸಂಧರ್ಭದಲ್ಲಿ ಮದುಮಗನಿಗೆ ಕಾಲುಂಗುರವಿಡುವ ಕ್ರಮವಿದೆ. ಸಂಪ್ರದಾಯದಂತೆ ಕಾಲುಂಗುರವನ್ನು ಕ್ಷೌರಿಕ ಇಡಬೇಕು. (ಈಗಿನ ಕಾಲಘಟ್ಟದಲ್ಲಿ ಅದು ಆಗದೇ ಇರುವ ಕಾರಣ ಅಡೋಳಿ ಕಾಲುಂಗುರ ಇಡಬಹುದು.) ಅರಿಶಿನೆಣ್ಣೆ ಸಂಪೂರ್ಣ ಆದ ನಂತರ ಊರುಗೌಡರು ಕೈಯಲ್ಲಿದ್ದ ವೀಳ್ಯವನ್ನು ಹರಿವಾಣದಲ್ಲಿರಿಸಿ ಒಕ್ಕಣೆಯೊಂದಿಗೆ. ಅರಿಶಿನೆಣ್ಣೆಯಿಂದ ಎಬ್ಬಿಸುವರು. ಈಗ ಒಂದು ಸೂಡಿ ವೀಳ್ಯದೆಲೆ 5 ಅಡಿಕೆ ಹರಿವಾಣದಲ್ಲಿರಿಸಿ ಮೊದಲೇ ನಿರ್ಧರಿಸಿದ ಅಡೋಳಿ, ಕಂಚಿಮೆ, ಸೋಬಾನೆಯವರಿಗೆ ವೀಳ್ಯ ಕೊಡುವುದು. ನಂತರ ಅಡೋಳಿ ಸ್ನಾನಕ್ಕೆ ಕರೆದುಕೊಂಡು ಹೋಗುವರು. ಸೀಗೆ, ಮೈಸೂರು ಬಾಳೆಹಣ್ಣು ಹಚ್ಚಿ ವಧುವಿನ ಅತ್ತಿಗೆ ನಾದಿನಿಯರು ಅಥವಾ ಹುಡುಗನ ಭಾವ ಮೈದುನರು ಸ್ನಾನ ಮಾಡಿಸುವರು.