Sunday, February 16, 2014

ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು (ಭಾವಗೀತೆ ಕೆ ಎಸ್ ನರಸಿಂಹಸ್ವಾಮಿ )

ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು (ಭಾವಗೀತೆ ಕೆ ಎಸ್ ನರಸಿಂಹಸ್ವಾಮಿ )

ರಾಯರು ಬಂದರು  ಮಾವನ ಮನೆಗೆ ರಾತ್ರಿಯಾಗಿತ್ತು
ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು
ತುಂಬಿದ ಚಂದಿರ ಬಂದಿತ್ತು 

ಮಾವನ ಮನೆಯಲ್ಲಿ ಮಲ್ಲಿಗೆ ಹೂಗಳ  ಪರಿಮಳ  ತುಂಬಿತ್ತು
ಬಾಗಿಲ ಬಳಿ ಕಾಲಿಗೆ ಬಿಸಿ ನೀರಿನ ತಂಬಿಗೆ ಬಂದಿತ್ತು
ಒಳಗಡೆ ದೀಪದ ಬೆಳಕಿತ್ತು

ಘಮ ಘಮಿಸುವ ಮೃಷ್ಟಾನ್ನದ  ಭೋಜನ ರಾಯರ ಕಾದಿತ್ತು
ಬೆಳ್ಳಿಯ ಬಟ್ಟಲ ಗಸಗಸೆ  ಪಾಯಸ ರಾಯರ ಕಾದಿತ್ತು
ಭೂಮಿಗೆ  ಸ್ವರ್ಗವೇ ಇಳಿದಿತ್ತು

ಚಪ್ಪರಗಾಲಿನ ಮಂಚದ ಮೇಲೆ ಮೆತ್ತನೆ  ಹಾಸಿತ್ತು
ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು
ಪದುಮಳು ಹಾಕಿದ ಹೂವಿತ್ತು

ಚಿಗುರೆಲೆ ಬಣ್ಣದ ಅಡಿಕೆಯ ತಂದಳು ನಾದಿನಿ ನಗು ನಗುತಾ
ಬಿಸಿ ಬಿಸಿ ಹಾಲಿನ ಬಟ್ಟಲ ತಂದರು ಅಕ್ಕರೆಯಲಿ ಮಾವ
ಮಡದಿಯ ಸದ್ದೇ ಇರಲಿಲ್ಲ 

ಮಡದಿಯ ತಂಗಿಯ ಕರೆದಿಂತೆಂದರು  ಅಕ್ಕನ ಕರೆಯಮ್ಮ
ಮೆಲು ದನಿಯಲ್ಲಿ  ನಾದಿನಿ ಇಂತೆಂದಳು ಪದುಮಳು ಒಳಗಿಲ್ಲ
ನಕ್ಕಳು ರಾಯರು ನಗಲಿಲ್ಲ

ಏರುತ ಇಳಿಯುತಾ  ಬಂದರು ರಾಯರು ದೂರದ ಊರಿಂದ
ಕಣ್ಣನು ಕಡಿದರು ನಿದೇಯು ಬಾರದು ಪದುಮಳು ಒಳಗಿಲ್ಲ
ಪದುಮಳ ಬಳೆಗಳ ದನಿಯಿಲ್ಲ

ಬೆಳಗಾಯಿತು ಸರಿ ಹೊರಡುವೆನೆಂದರು  ರಾಯರು ಮುನಿಸಿನಲ್ಲಿ
ಒಳಮನೆಯಲ್ಲಿ ನೀರಾಯಿತು ಎಂದಳು ನಾದಿನಿ ರಾಗದಲ್ಲಿ
ಯಾರಿಗೆ ಎನ್ನಲು ಹರುಷದಲ್ಲಿ

ಪದುಮಳು ಬಂದಳು ಹೂವನು ಮುಡಿಯುತಾ ರಾಯರ  ಕೋಣೆಯಲ್ಲಿ


No comments:

Post a Comment