Friday, February 27, 2026

ಗೌಡ ಸಂಸ್ಕೃತಿ- ಮದುವೆ-(ಸೇರು ತುಪ್ಪ ತರುವ ಕ್ರಮ )

 ವಧು-ವರರೊಂದಿಗೆ ವರನ ಕಡೆಯ ನೆಂಟರಿಷ್ಟರು ಚಪ್ಪರದಡಿಯಿಂದ ಹೊರಗೆ ಬರುವರು. [ಚಪ್ಪರದ ಹೊರಗೆ ವಧು-ವರರು ಹಾಗೂ ನೆಂಟರಿಷ್ಟರಿಗೆ ಆಸನದ ವ್ಯವಸ್ಥೆ ಮಾಡಿರುತ್ತಾರೆ.] ಇಲ್ಲಿ ವಿಶ್ರಮಿಸಿದ ನಂತರ ನೆಂಟರಿಷ್ಟರು, ವಧು-ವರರು ವಧುವಿನ ಬಲಕೈಯಲ್ಲಿ ಸೇರು ತುಪ್ಪ, ಎಡ ಕೈಯಲ್ಲಿ ಒಗ್ಗಿ ಹಾಕಿದ ಜೋಡಿ ತೆಂಗಿನಕಾಯಿ, ಬಲ ಹೆಗಲಲ್ಲಿ ಧಾರೆ ಸೀರೆಯೊಂದಿಗೆ ಚಪ್ಪರದ ಮೂಡಣ ತೋರಣದಡಿಗೆ ಬರುವರು. ಇವರನ್ನು ವಧುವಿನ ಕಡೆಯ ಮುತ್ತೈದೆಯರು ಕುರ್ದಿ ಆರತಿ ಎತ್ತಿ ಎಡಕೈಯಿಂದ ವಧು-ವರರ ಹಣೆಗೆ ಕುರ್ದಿ ಬೊಟ್ಟನ್ನಿಟ್ಟು ಕಾಲಿನ ಪಕ್ಕಕ್ಕೆ ಕುರ್ದಿ ನೀರನ್ನು ಚೆಲ್ಲುವರು. ಈ ಹರಿವಾಣಕ್ಕೆ ವರನು ಹಣದೊಂದಿಗೆ 5 ವೀಳ್ಯದೆಲೆ, 1 ಅಡಿಕೆಯೊಂದಿಗೆ ಗೌರವ ಸೂಚಿಸುವರು. ಈಗ ಹುಡುಗಿಯ ಕಿರಿಯ ಸಹೋದರ ಅಥವಾ ಕಿರಿಯರು ಯಾರಾದರೂ ಒಂದು ತಂಬಿಗೆ ನೀರನ್ನು ಕಾಲಿಗೆ ಹೊಯ್ಯುವರು. ಈ ತಂಬಿಗೆಗೂ ವರನು ಹಣದೊಂದಿಗೆ 5 ವೀಳ್ಯದೆಲೆ ಒಂದು ಅಡಿಕೆಯೊಂದಿಗೆ ಗೌರವ ನೀಡಬೇಕು. ವಧುವಿನ ಮನೆಯ ಹಿರಿಯ ಮುತ್ತೈದೆಯರು ವಧು-ವರರನ್ನು ಕೈಹಿಡಿದು ಪದ್ಧತಿಯಂತೆ ಮನೆ ಒಳಗೆ ಕರೆದುಕೊಂಡು ಹೋಗಿ, ಹಸೆ ಚಾಪೆಯ ಪಕ್ಕ ಇರಿಸಿದ ಮಣೆಯ ಮೇಲೆ ಉರಿಯುತ್ತಿರುವ ನಂದಾದೀಪದ ಎಡಬಲದಲ್ಲಿ ತುಪ್ಪದ ತಂಬಿಗೆ ಹಾಗೂ ತೆಂಗಿನಕಾಯಿ ಇರಿಸುವರು. ಒಕ್ಕಣೆಯೊಂದಿಗೆ ಊರು ಗೌಡರು ಹಸೆ ಚಾಪೆಯಲ್ಲಿ ಕುಳ್ಳಿರಿಸಿದ ನಂತರ ವಧು-ವರರ ಕೈಗೆ 5 ಎಲೆ, 1 ಅಡಿಕೆ ಕೊಡಬೇಕು. ವಧು-ವರರಿಗೆ ಕನಿಷ್ಟ 5 ಜನ ಮುತ್ತದೆಯರು ಹಾಲು ತುಪ್ಪ ಕುಡಿಸಿದ ನಂತರ ವಧುವಿನ ತಾಯಿ ಅಥವಾ ಮನೆಯ ಹಿರಿಯ ಮುತ್ತೈದೆ ಅವರಿಗೆ ಕುಡಿಯಲು ಹಾಲನ್ನು ನೀಡುವರು. ಈ ಪಾತ್ರೆಗೆ ವಧು- ವರರು 5 ವೀಳ್ಯದೆಲೆ ಅಡಿಕೆ ಹಾಕಿ ಗೌರವದೊಂದಿಗೆ ಹಿಂತಿರುಗಿಸುವರು. ಕುಳಿತಲ್ಲಿಂದಲೇ ಪಾದ ಮುಟ್ಟಿ ನಮಸ್ಕರಿಸುವರು. ಈಗ ಊರುಗೌಡರ ಒಕ್ಕಣೆಯೊಂದಿಗೆ ಎಬ್ಬಿಸುವರು. ನಂತರ ವಧುವಿನ ಕಡೆಯ ಊರುಗೌಡರು ವರನ ಕಡೆಯ ಊರುಗೌಡರಿಗೆ ಮನೆಯ ಯಜಮನರಿಂದ ನೀರು ಕೊಡಿಸಿ ತುಪ್ಪದ ತಂಬಿಗೆ ಬಿಚ್ಚಲು ಕರೆಯುವರು. ಇಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಕಟ್ಟಿದ ತುಪ್ಪದ ತಂಬಿಗೆಯನ್ನು ಬಿಚ್ಚುವರು. (ತಂಬಿಗೆ ಕಟ್ಟಿದ ರೀತಿ ತಪ್ಪಿದಲ್ಲಿ ತಪ್ಪು ಕೇಳಿಸುತ್ತಾರೆ) ಬಿಚ್ಚಿದ ತುಪ್ಪವನ್ನು ವಧು/ವರರು ನಂದಾದೀಪಕ್ಕೆ ಹಾಕಿ ಕೈ ಮುಗಿಯುವರು.ಉಳಿದ ತುಪ್ಪವನ್ನು ಮನೆಯ ಒಡತಿ ಖಾಲಿ ಮಾಡಿ ಹೊದುಳು ಬಾಳೆಹಣ್ಣು, ಬೆಲ್ಲ, ವೀಳ್ಯದೆಲೆ, 1ಅಡಿಕೆ ಹಾಕಿ ಯಥಾ ಪ್ರಕಾರ ತಂಬಿಗೆಯ ಬಾಯಿ ಕಟ್ಟಿ ಮಣೆಯ ಮೇಲಿಡುತ್ತಾರೆ. ಹೊರಡುವ ಮೊದಲು ವರನ ಮನೆಯಲ್ಲಿ ನಡೆಯುವ ನಾಗೋಳಿಶಾಸ್ತ್ರಕ್ಕೆ ವಧುವಿನ ಕಡೆಯ ನಂಟರಿಷ್ಟರಿಗೆ ವರನ ಕಡೆಯವರು ಹರಿವಾಣದಲ್ಲಿ ಸೂಡಿ ವೀಳ್ಯದೆಲೆ, 10 ಅಡಿಕೆ ಇಟ್ಟು ಹೇಳಿಕೆ ಕೊಡಬೇಕು. ವಧು-ವರರು ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ, ತಾಯಿ ಎತ್ತಿ ಕೊಟ್ಟ ತುಪ್ಪದ ತಂಬಿಗೆಯನ್ನು ಬಲಕೈಯಲ್ಲಿ ಪಡಕೊಂಡು ಹೆಗಲಲ್ಲಿ ಧಾರೆ ಸೀರೆ ಹಾಕಿಕೊಂಡು ವರನೊಂದಿಗೆ ಮನೆಯಿಂದ ಹೊರಡುವರು. ಮನೆಯವರು ಸೂಚಿಸಿದ ಕುರುಂಟುವನ್ನು ಊರುಗೌಡರು ವರನ ಕಡೆಯ ಊರುಗೌಡರಿಗೆ ಹಸ್ತಾಂತರಿಸುವರು. ಈಗ ಊರುಗೌಡರ ನೇತೃತ್ವದಲ್ಲಿ ವರನ ದಿಬ್ಬಣ ಹಿಂತಿರುಗುವುದು (ದಿಬ್ಬಣ ಹೊರಡುವಾಗ ತಿಂಡಿ ತಿನಿಸುಗಳಿರುವ ಬುತ್ತಿ ಕೊಟ್ಟು ಕಳಿಸುವರು)

No comments:

Post a Comment