ಮದುವೆಗೆ ಮುಂಚೆ ಕಟ್ಟುವ ವೀಳ್ಯ
Sunday, September 21, 2025
ಗೌಡ ಸಂಸ್ಕೃತಿ- ಮದುವೆ(ಮದುವೆಗೆ ಮುಂಚೆ ಕಟ್ಟುವ ವೀಳ್ಯ)
ಪರಿಕರಗಳು : ಕಾಲು ದೀಪ, ನೆನೆಬತ್ತಿ, ಎಳ್ಳೆಣ್ಣೆ, ಅಗರಬತಿ, ಮಣೆ 2., ಚಾಪೆ 4. ಹರಿವಾಣ 2. ಬೆಳ್ತಿಗೆ ಅಕ್ಕಿ., ತುಂಬೆಹೂ, ತೇದ ಗಂಧ, ತುದಿ ಬಾಳೆಲೆ., ಅಡಿಕೆ1, ವೀಳ್ಯದೆಲೆ 5
ಚೌಕಿ ವೀಳ್ಯ : ಚೌಕಿ ವೀಳ್ಯವನ್ನು ಎತ್ತಿ ಹುಡುಗಿ ಕಡೆಯ ಊರುಗೌಡರಿಗೆ ಒಕ್ಕಣೆಯೊಂದಿಗೆ ಕಾರ್ಯಕ್ರಮ ಸುಧಾರಿಸಿ ಕೊಡಬೇಕೆಂದು ಹೇಳಿ ಮದುಮಗನ ಕಡೆಯ ಊರುಗೌಡರು ನೀಡುವರು. ಹರಿವಾಣವನ್ನು ಎಲ್ಲರೂ ಪ್ರದಕ್ಷಿಣೆ ತಂದು ಹುಡುಗಿ ಕಡೆಯವರು ಮಣೆಯ ಮೇಲಿಡಬೇಕು.
1) ದೇವರ ವೀಳ್ಯ : 9 ಕವಳೆ ವೀಳ್ಯದೆಲೆ, 9 ಅಡಿಕೆ ಇಟ್ಟು ಒಕ್ಕಣೆಯೊಂದಿಗೆ... ವೀಳ್ಯ ಕೊಡಬೇಕು. (ಒಕ್ಕಣೆ ಹಿಂದೆ ವಿವರಿಸಿದೆ)
2) ತೆರವಿನ ವೀಳ್ಯ : 7 ಕವಳೆ ವೀಳ್ಯದೆಲೆ ಸ್ವಲ್ಪ ಅಡಿಕೆ ಹೋಳುವಿನೊಂದಿಗೆ 10.50 ರೂಪಾಯಿಯನ್ನು ಚೌಕಿಯಲ್ಲಿ ಕುಳಿತವರ ಸಮಕ್ಷಮದಲ್ಲಿ ಹರಿವಾಣದಲ್ಲಿಟ್ಟು ಹುಡುಗನ ಕಡೆಯ ಊರುಗೌಡರ ಒಕ್ಕಣೆಯೊಂದಿಗೆ ಹುಡುಗಿ ಕಡೆಯ ಊರುಗೌಡರಿಗೆ ಹಸ್ತಾಂತರಿಸುತ್ತಾರೆ. ಹುಡುಗಿ ಕಡೆಯ ಊರುಗೌಡರು 5 ವೀಳ್ಯದೆಲೆ 1 ಅಡಿಕೆ, 10.50 ರೂಪಾಯಿಯನ್ನು ಮನೆಯ ಯಜಮಾನನಿಗೆ ಕೊಡುತ್ತಾರೆ. ಮನೆಯ ಯಜಮಾನ ಈ 10.50 ರೂಪಾಯಿಯನ್ನು ತಲೆಯ ರುಮಾಲಿನಲ್ಲಿ ಮದುವೆ ಕಾರ್ಯ ಮುಗಿಯುವವರೆಗೆ ಕಟ್ಟಿಕೊಂಡಿರುತ್ತಾರೆ.
ಗೌಡ ಸಂಸ್ಕೃತಿ- ಮದುವೆ(ದಿಬ್ಬಣ ಹೊರಡುವುದು)
ದಿಬ್ಬಣ ಹೊರಡುವುದು : ನಿಗದಿತ ಸಮಯಕ್ಕೆ ಸರಿಯಾಗಿ ಧಾರಾ ಚಪ್ಪರಕ್ಕೆ ಮದುಮಗನ ಕಡೆಯ ದಿಬ್ಬಣ ಹೊರಡುವುದು. ದಿಬ್ಬಣ ಹೊರಡುವ ಮೊದಲು ಹಸೆಮಣೆಯ ಎದುರು ಕಾಲುದೀಪ ಹಚ್ಚಿ ಮದುಮಗನನ್ನು ಹಸೆಚಾಪೆಯಲ್ಲಿ ಕುಳ್ಳರಿಸಿ ಹಾಲುತುಪ್ಪ ಶಾಸ್ತ್ರ ಮಾಡುವುದು. ನಂತರ ಕುಡಿಯಲು ಹಾಲು ಕೊಡಬೇಕು. ಹಾಲು ಕುಡಿದ ಲೋಟಕ್ಕೆ ಎಲೆ ಅಡಿಕೆ ಹಾಕುವರು. ಇದಾದ ನಂತರ ಸೋದರ ಮಾವ ಊರು ಗೌಡರೆ ಒಕ್ಕಣೆಯೊಂದಿಗೆ ಮುಸುಕಿನ ಬಟ್ಟೆಯ ಬಲದ ಬದಿಯ ತುದಿಗೆ ಪಾವಲಿಯನ್ನು ಕಟ್ಟಬೇಕು. ಊರುಗೌಡರು ಒಕ್ಕಣೆಯೊಂದಿಗೆ ವರರನ್ನು ಎಬ್ಬಿಸುವರು. ನಂತರ ಹಿರಿಯರ ಪಾದ ಮುಟ್ಟಿ ಆಶೀರ್ವಾದ ಪಡೆಯಬೇಕು. ಮನೆಯ ಯಜಮಾನ ವರರನ್ನು ಮೆಟ್ಟಿಲಿಳಿಸಿ ದೇವ ಸಭೆಯ ಮೇಲ್ಕಟ್ಟಿನಡಿಯಲ್ಲಿ ಊರುಗೌಡರಿಗೆ ಹಸ್ತಾಂತರಿಸುವರು. ಬಣ್ಣ ಬಂಗಾರದ ಸಹಿತವಾಗಿ ಮದುವೆ ಕಾರ್ಯವನ್ನು ಸಂಪೂರ್ಣ ಯಶಸ್ವಿಗೊಳಿಸಲು ಅಧಿಕಾರ ವಹಿಸಿ ಕೊಡುತ್ತಾರೆ. ವಾಲಗ ಗರ್ನಾಲುನೊಂದಿಗೆ ದಿಬ್ಬಣ ಹೊರಡುವುದು.
ದಿಬ್ಬಣ ಚಪ್ಪರಕ್ಕೆ ಬಂದು ತಲುಪಿದಾಗ ವಧುವಿನ ಮನೆಯವರು ವಾಲಗದೊಂದಿಗೆ ಸ್ವಾಗತಿಸುತ್ತಾರೆ. ದಿಬ್ಬಣ ಚಪ್ಪರದ ಮುಖ ತೋರಣಕ್ಕೆ ಬಂದಾಗ ಮುತ್ತೈದೆಯರು ಸೋಬಾನೆಯೊಂದಿಗೆ ಕುರ್ದಿ ಆರತಿ ಮಾಡಬೇಕು. ಕಾಲಿಗೆ ನೀರು ಎರೆದು ದೃಷ್ಟಿ ತೆಗೆಯಬೇಕು. (ಆರತಿ ಎತ್ತಿದ ಹರಿವಾಣಕ್ಕೂ ನೀರು ಎರೆದ ತಂಬಿಗೆಗೂ ಎಲೆ, ಅಡಿಕೆ, ಪಾವಲಿಯನ್ನು ಹಾಕಬೇಕು ಮದುಮಗಳ ದಿಬ್ಬಣವಾದರೆ ಮನೆ ಒಳಗೆ ಹಸೆ ಚಾಪೆಯಲ್ಲಿ ಕುಳ್ಳಿರಿಸಬೇಕು. ಮದುಮಗನದಾದರೆ ಚಪ್ಪರದ ಬದಿಯಲ್ಲಿ ಪ್ರತ್ಯೇಕ ಆಸನ ಇರಿಸಿ ಕುಳ್ಳಿರಿಸುವರು.) (ಮದುಮಗನ ಮನೆಯಲ್ಲಿ ಮದುವೆಯಾದರೆ ಮದುಮಗ ಹೊರಗೆ ಹೋಗಿ ಪ್ರತ್ಯೇಕ ಸ್ಥಳದಲ್ಲಿ ಕುಳಿತುಕೊಳ್ಳಬೇಕು.)
ಗೌಡ ಸಂಸ್ಕೃತಿ- ಮದುವೆ(ಕುಲದೇವರಿಗೆ ಹರಿಕೆ ಹಣ ಕಟ್ಟುವುದು)
ಕುಲದೇವರಿಗೆ ಹರಿಕೆ ಹಣ ಕಟ್ಟುವುದು :
ಪರಿಕರಗಳು : ಕಂಚಿನಕ್ಕಿ. ಬೆಂಡು ಕುಕ್ಕೆ. ಬಾಳೆಲೆ2 ಹೊದುಳು 1 ಸೇರು, ತೆಂಗಿನಕಾಯಿ 1. ತಂಬಿಗೆ ನೀರು. ಬಾಳೆಹಣ್ಣು 1ಪಾಡ, ಅಚ್ಚು ಬೆಲ್ಲ 1.ಬಿದಿರಿನ ಗುತ್ತಿ 2. ಮುಷ್ಠಿ ಕರಿಮೆಣಸು, ಪಾವಲಿ 1. ಧೂಪದ ಆರತಿ ಮಾಡಲು ಸಣ್ಣ ಬಾಲೆ ಪಂಬೆ. ಗಂಧಧೂಪ, ಎಲೆ ಅಡಿಕೆ. ಮದರಂಗಿ ಶಾಸ್ತ್ರದ ಮಾರನೇ ದಿನ ದಿಬ್ಬಣ ಹೊರಡುವ ಮೊದಲು ಶೃಂಗಾರ ಆದ ನಂತರ ಕುಲದೇವರಿಗೆ ಹರಿಕೆ ಹಣ ಕಟ್ಟುವುದು ಮಾಡಬೇಕು. ಮೊದಲು ಕಾಲುದೀಪ ಹಚ್ಚಿಡಬೇಕು. ಒಂದು ಮಣೆಯ ಮೇಲೆ ಬೆಂಡು ಕುಕ್ಕೆ ಇಟ್ಟು ಅದರೊಳಗೆ ಜೋಡು ಬಾಳೆಲೆ ಇಡಬೇಕು. ವಧು/ವರರು 3 ಬೊಗಸೆ ಹೊದುಳು ಬಡಿಸಿ ಒಂದು ಪಾಡ ಬಾಳೆಹಣ್ಣು, ಬೆಲ್ಲ ಹಾಗೂ 5 ವೀಳ್ಯದೆಲೆ, 1 ಅಡಿಕೆ ಇಡಬೇಕು. ಆ ನಂತರ ಊರುಗೌಡರು ಒಕ್ಕಣೆಯೊಂದಿಗೆ ವಧು/ವರನ ಕೈಯಿಂದ ಒಂದು ಗೊಟ್ಟದಲ್ಲಿ ಮೊದಲು ಮಾವಿನಸೊಪ್ಪು, ಕರಿಮೆಣಸು ಹಾಕಿ ಒಂದು ಪಾವಲಿಯನ್ನು ಇಟ್ಟು ಭದ್ರಪಡಿಸುವುದು (ಈ ಹಣ ತಿರುಪತಿಗೆ ಸಲ್ಲಿಕೆಯಾಗಬೇಕು). ಇನ್ನೊಂದು ಗೊಟ್ಟದಲ್ಲಿ ಮಾವಿನ ಸೊಪ್ಪು ಹಾಗೂ ಕರಿಮೆಣಸು ಹಾಕಿ ಭದ್ರಪಡಿಸಬೇಕು. ಭದ್ರಪಡಿಸಿದ ಗೊಟ್ಟಗಳನ್ನು ಬೆಂಡು ಕುಕ್ಕೆಯಲ್ಲಿಇಡಬೇಕು. ನಂತರ ತೆಂಗಿನ ಕಾಯಿ ಒಡೆದು ನೀರು ಚೆಲ್ಲುತ್ತಾ ಬೆಂಡು ಕುಕ್ಕೆಗೆ 3 ಸುತ್ತುತಂದು ಉಳಿದ ನೀರನ್ನು ಚೆಂಬುಗೆ ಹೊಯ್ದು ಬೆಂಡು ಕುಕ್ಕೆಯ ಒಳಗಡೆ ಇಡಬೇಕು.ಬಾಳೆಪಂಬೆಯಲ್ಲಿ ತಂಬಿಗೆ ಸಮೇತ ಕೈಯಲ್ಲಿಡಿದು ದೂಪದ ಆರತಿ ಮಾಡಬೇಕು.
ಊರುಗೌಡರ ಒಕ್ಕಣೆಯೊಂದಿಗೆ ವೆಂಕಟರಮಣ ದೇವರ ಹರಕೆಯ ಹಣವನ್ನು ವಧು/ವರನ ತಲೆಯ ಮೇಲೆ ಇರಿಸಿದ್ದನ್ನು ಅಟ್ಟದವರೆಗೆ ಕೊಂಡೊಯ್ದು ಬೆಂಡು ಕುಕ್ಕೆಯನ್ನು ಮನೆಯ ಹಿರಿಯರು ಅಟ್ಟದ ಈಶಾನ್ಯ ಮೂಲೆಯಲ್ಲಿ ಇಡುವರು. (ಈಗ ಅಟ್ಟ ಇಲ್ಲದ ಕಾರಣ ದೇವರ ಕೋಣೆಯಲ್ಲಿಡಬಹುದು), ವಧು-ವರರು ಎಣಿಗೆ ಕೈ ಮುಗಿದು ಹೊಸ ಬರುವರು.
Subscribe to:
Posts (Atom)