ಕುಲದೇವರಿಗೆ ಹರಿಕೆ ಹಣ ಕಟ್ಟುವುದು :
ಪರಿಕರಗಳು : ಕಂಚಿನಕ್ಕಿ. ಬೆಂಡು ಕುಕ್ಕೆ. ಬಾಳೆಲೆ2 ಹೊದುಳು 1 ಸೇರು, ತೆಂಗಿನಕಾಯಿ 1. ತಂಬಿಗೆ ನೀರು. ಬಾಳೆಹಣ್ಣು 1ಪಾಡ, ಅಚ್ಚು ಬೆಲ್ಲ 1.ಬಿದಿರಿನ ಗುತ್ತಿ 2. ಮುಷ್ಠಿ ಕರಿಮೆಣಸು, ಪಾವಲಿ 1. ಧೂಪದ ಆರತಿ ಮಾಡಲು ಸಣ್ಣ ಬಾಲೆ ಪಂಬೆ. ಗಂಧಧೂಪ, ಎಲೆ ಅಡಿಕೆ. ಮದರಂಗಿ ಶಾಸ್ತ್ರದ ಮಾರನೇ ದಿನ ದಿಬ್ಬಣ ಹೊರಡುವ ಮೊದಲು ಶೃಂಗಾರ ಆದ ನಂತರ ಕುಲದೇವರಿಗೆ ಹರಿಕೆ ಹಣ ಕಟ್ಟುವುದು ಮಾಡಬೇಕು. ಮೊದಲು ಕಾಲುದೀಪ ಹಚ್ಚಿಡಬೇಕು. ಒಂದು ಮಣೆಯ ಮೇಲೆ ಬೆಂಡು ಕುಕ್ಕೆ ಇಟ್ಟು ಅದರೊಳಗೆ ಜೋಡು ಬಾಳೆಲೆ ಇಡಬೇಕು. ವಧು/ವರರು 3 ಬೊಗಸೆ ಹೊದುಳು ಬಡಿಸಿ ಒಂದು ಪಾಡ ಬಾಳೆಹಣ್ಣು, ಬೆಲ್ಲ ಹಾಗೂ 5 ವೀಳ್ಯದೆಲೆ, 1 ಅಡಿಕೆ ಇಡಬೇಕು. ಆ ನಂತರ ಊರುಗೌಡರು ಒಕ್ಕಣೆಯೊಂದಿಗೆ ವಧು/ವರನ ಕೈಯಿಂದ ಒಂದು ಗೊಟ್ಟದಲ್ಲಿ ಮೊದಲು ಮಾವಿನಸೊಪ್ಪು, ಕರಿಮೆಣಸು ಹಾಕಿ ಒಂದು ಪಾವಲಿಯನ್ನು ಇಟ್ಟು ಭದ್ರಪಡಿಸುವುದು (ಈ ಹಣ ತಿರುಪತಿಗೆ ಸಲ್ಲಿಕೆಯಾಗಬೇಕು). ಇನ್ನೊಂದು ಗೊಟ್ಟದಲ್ಲಿ ಮಾವಿನ ಸೊಪ್ಪು ಹಾಗೂ ಕರಿಮೆಣಸು ಹಾಕಿ ಭದ್ರಪಡಿಸಬೇಕು. ಭದ್ರಪಡಿಸಿದ ಗೊಟ್ಟಗಳನ್ನು ಬೆಂಡು ಕುಕ್ಕೆಯಲ್ಲಿಇಡಬೇಕು. ನಂತರ ತೆಂಗಿನ ಕಾಯಿ ಒಡೆದು ನೀರು ಚೆಲ್ಲುತ್ತಾ ಬೆಂಡು ಕುಕ್ಕೆಗೆ 3 ಸುತ್ತುತಂದು ಉಳಿದ ನೀರನ್ನು ಚೆಂಬುಗೆ ಹೊಯ್ದು ಬೆಂಡು ಕುಕ್ಕೆಯ ಒಳಗಡೆ ಇಡಬೇಕು.ಬಾಳೆಪಂಬೆಯಲ್ಲಿ ತಂಬಿಗೆ ಸಮೇತ ಕೈಯಲ್ಲಿಡಿದು ದೂಪದ ಆರತಿ ಮಾಡಬೇಕು.
ಊರುಗೌಡರ ಒಕ್ಕಣೆಯೊಂದಿಗೆ ವೆಂಕಟರಮಣ ದೇವರ ಹರಕೆಯ ಹಣವನ್ನು ವಧು/ವರನ ತಲೆಯ ಮೇಲೆ ಇರಿಸಿದ್ದನ್ನು ಅಟ್ಟದವರೆಗೆ ಕೊಂಡೊಯ್ದು ಬೆಂಡು ಕುಕ್ಕೆಯನ್ನು ಮನೆಯ ಹಿರಿಯರು ಅಟ್ಟದ ಈಶಾನ್ಯ ಮೂಲೆಯಲ್ಲಿ ಇಡುವರು. (ಈಗ ಅಟ್ಟ ಇಲ್ಲದ ಕಾರಣ ದೇವರ ಕೋಣೆಯಲ್ಲಿಡಬಹುದು), ವಧು-ವರರು ಎಣಿಗೆ ಕೈ ಮುಗಿದು ಹೊಸ ಬರುವರು.
No comments:
Post a Comment