Monday, October 14, 2024

ಬಯಕೆ ಮದುವೆ (ಸೀಮಂತ)

 ಕನ್ಯ ಗರ್ಭವತಿಯಾದಾಗ ವರನ ಮನೆಯವರು ಹೆಣ್ಣಿನ ಮನೆಗೆ ಸಮಾಚಾರ ಮುಟ್ಟಿಸುತ್ತಾರೆ. ಮಗಳು ಗರ್ಭವತಿಯಾದ ವಿಚಾರವನ್ನು ತಿಳಿದ ತವರು ಮನೆಯವರು ಮಗಳನ್ನು ಏಳನೇ ತಿಂಗಳಲ್ಲಿ ಬಂದು ಕರೆದುಕೊಂಡು ಹೋಗುವರು. ದೇವರ ದೀಪ ಹಚ್ಚಿ ಹಿರಿಯರ ಆಶೀರ್ವಾದ ಪಡೆದು ಹೊರಡುವ ಪದ್ಧತಿ. ನಂತರ ತವರು ಮನೆಯಲ್ಲಿ ಬಯಕೆ ಮದುವೆ ಮಾಡುವ ಕ್ರಮವಿದೆ. ನಿಶ್ಚಿತ ಶುಭದಿನದಂದು ಬಯಕೆ ಮದುವೆಯನ್ನು ಮಾಡುವರು. ಚೊಚ್ಚಲ ಹೆರಿಗೆಯಲ್ಲಿ ಗರ್ಭಿಣಿಗೆ ಬಹಳಷ್ಟು ಬಯಕೆಗಳಿರುತ್ತವೆ. ಬಯಕೆ ಮದುವೆ ಮಾಡುವ ಸಮಯಕ್ಕೆ ಮುಂಚೆ ಕದಳಿ ಬಾಳೆಹಣ್ಣು, ಹೊದಳು, ಅವಲಕ್ಕಿ, ಬೆಲ್ಲ, ತೆಂಗಿನಕಾಯಿ, ಬಾಳೆಎಲೆ, ಎಲೆಅಡಿಕೆ. ಏಳನೇ ತಿಂಗಳಾದರೆ ಏಳು ಬಗೆಯ ಸಿಹಿತಿಂಡಿ ಹಾಗೇನೆ ಏಳು ಬಗೆಯ ಹೂಗಳನ್ನು ಶೇಖರಿಸಿಡಬೇಕು. ನೆರೆಹೊರೆಯವರನ್ನು, ನೆಂಟರಿಷ್ಟರನ್ನು ಹಾಗೂ ಗಂಡ ಮತ್ತು ಅವನ ಮನೆಯವರನ್ನು ಆಹ್ವಾನಿಸಬೇಕು. ಪತಿಯ ಮನೆಯಿಂದ ಬರುವಾಗ ಹೊಸ ಹಸಿರು ಸೀರೆ, ರವಿಕೆ, ಹಸಿರು ಬಲೆ, ಆಭರಣ, ಹೂ, ಹಿಂಗಾರ ಸಿಹಿತಿಂಡಿಗಳನ್ನು ತರುವರು.


Thursday, October 10, 2024

ಗೌಡ ಸಂಸ್ಕೃತಿ- ಮದುವೆ.

 ಗೌಡ ಸಮುದಾಯದಲ್ಲಿ ಮದುವೆಯೆನ್ನುವುದು ಬಹುಮುಖ್ಯ ಘಟ್ಟ. ಕುಟುಂಬ/ವಂಶವಾಹಿನಿ ಬೆಳೆದು ಬರಲು 'ಮದುವೆ' ಎನ್ನುವ ನಿಯೋಜಿತ ವ್ಯವಸ್ಥೆ ನಡೆಯಲೇ ಬೇಕು ಎನ್ನುವ ಕಟ್ಟಳೆ ನಮ್ಮ ಹಿರಿಯರಿಂದ ನಿರ್ಮಿತವಾದುದಾಗಿದೆ. ಈ ಮದುವೆ ಎನ್ನುವ ವ್ಯವಸ್ಥೆ ಗೌಡರಲ್ಲಿ ಬಳಿ ನೋಡುವಲ್ಲಿಂದ ಆರಂಭವಾಗುತ್ತದೆ. ಮದುವೆಯಲ್ಲಿ ಹುಡುಗಿ ನೋಡುವ ಶಾಸ್ತ್ರ, ವೀಳ್ಯ ಶಾಸ್ತ್ರ, ಮದುವೆ ದಿನದ ಕ್ರಮಗಳಲ್ಲಿ ಹಾಗೆಯೇ ನಂತರದ ಕ್ರಮಗಳಲ್ಲಿ ಹಲವು ಕಟ್ಟಳೆಗಳಿರುತ್ತವೆ. ಗೌಡರಲ್ಲಿ 'ಬಳಿ' ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. 'ಬಳಿ' ಗೌಡರಲ್ಲಿ ಸ್ವಕುಟುಂಬಿಕ ನೆಲೆಯನ್ನು ಪ್ರತಿನಿಧಿಸುತ್ತದೆಯಾದ್ದರಿಂದ ಒಂದೇ 'ಬಳಿ'ಯಲ್ಲಿ 'ಮದುವೆ' ನಡೆಯಬಾರದೆನ್ನುವ ನಿಷೇಧವನ್ನು ಇಟ್ಟುಕೊಳ್ಳಲಾಗಿದೆ. ರಕ್ತ ಸಂಬಂಧಿಗಳಲ್ಲಿ ಮದುವೆ ನಡೆಯುವುದು ಯಾವ ದೃಷ್ಟಿಯಿಂದಲೂ ಯೋಗ್ಯವಲ್ಲ ಎನ್ನುವುದನ್ನು ನಮ್ಮ ಹಿರಿಯರು ಕಂಡುಕೊಂಡಿದ್ದಾರೆನ್ನುವುದನ್ನು ಇದು ಸೂಚಿಸುತ್ತದೆ. ಹೀಗಿದ್ದೂ ತಂದೆಯ ಸಹೋದರಿ ಅಥವಾ ತಾಯಿಯ ಸಹೋದರರ ಕಡೆ 'ಬಳಿ'ಗಳಲ್ಲಿ ಮದುವೆ ನಡೆಯಬಹುದು. ಗೌಡರಲ್ಲಿ ಇರುವ ವಿಭಿನ್ನ 'ಬಳಿ'ಗಳಲ್ಲಿ 'ಮದುವೆ' ನಡೆಯುವುದು ಸಂಪ್ರದಾಯ. ಜಾತಿ ಪದ್ಧತಿ ಪ್ರಕಾರ ಅಲ್ಲದೇ ವೈದಿಕ ಕ್ರಮಗಳಲ್ಲಿ ಕೂಡಾ ಮದುವೆ ನಡೆಸಬಹುದು.

Sunday, September 15, 2024

ಬಾಗಿಲ ತಡೆಯುವ ಹಾಡುಗಳು-3

 ಮಾವಿನ ತೋರಣಕಾಗಿ ಬಂದ-ಗಂಡನ ತಂಗಿ।
ತೆಂಗು ಬಾಳೆ-ಯಾ ಅಡಕೇಯಾ॥
ವನಕಾಗಿ ಬಂದು ಬಾಗಿಲನು ತಡೆದಾಳು||
ಜಗಲೀಲಿ ನಿಂದು ಹತ್ತು ಬೆರಳು ನೊಂದಾವು 
ನೆತ್ತೀಯಾ ದಂಡೆ-ಜರಿದಾವು| ತಂಗ್ಯಮ್ಮಾ ನೀ 
ತಡೆದಾ ಬಾಗಿಲನು ಬಿಡು ನಮಗೆ||
ಆನೆಗಾನೆ ಕೊಡುವೆ ಆನೆ ಮರಿಗಳ-ಕೊಡುವೇ
 ಕಂಠೀಸರ ಕೊಡುವೆ ಜೊರಳಿಗೆ|| ತಂಗ್ಯಮ್ಮ ನೀ 
ತಡೆದಾ ಬಾಗಿಲನು ಬಿಡು ನಮಗೆ||
ಆನೆಗಳು ನಮಗುಂಟು ಆನೆಮರಿಗಳು ಉಂಟು 
ಕಂಠೀಸರವುಂಟು-ಕೊರಳಿಗೆ ಅಣ್ಣಯ್ಯ ನಾ 
ತಡೆದಾ-ಬಾಗಿಲ ಬಿಡಲಾರೆ||
ಕಲ್ಮೇಲೆ ಕಲ್ಲೊಡ್ಡಿ-ಹೂವ ಬಿಡಿಸುವ ಜಾಣೆ! 
ತಂಗ್ಯಮ್ಮ ಬಾಗಿಲ ಬಿಡಲಾರ-ಳು|| ಅವಳೊಂದು 
ಮಾತಿಗೆ ಬಾಗಿಲ ತಡೆದವಳೆ||
ಅತ್ತಿಗೆ-ಅತ್ತಿಗೆ ಅಡಿಕೆ ಜೂಜಾಡೊವೆರಡು 
ಮುತ್ತೀನ ಜೂಜು ಸರಜೂಜು॥ ಅತ್ತಿಗೆ
 ಹೆತ್ತಹೆಣ್ಣಾ ಜೂಜು ಮಗನೀಗೆ||
ನಾನು ಹೆಣ್ಣೆತ್ತಾಗ ನೀನು ಗಂಡ್ಡೆತ್ತಾಗ 
ಸಣ್ಣಕ್ಕಿ ಬಯಲು ಬೆಳೆದಾಗ-ನಾದುನಿ- 
ಮಾಡಿಕೊಳ್ಳೋಣಾ-ಮದುವೇಯಾ॥
ಶ್ರೀ ಗಿರಿ ಪರ್ವತಕೆ ಹೋದೋದೊಂದುಂಟಾದ್ರೆ
 ಶಿವ-ನ ದಯದಿಂದಾ ಮಗನಾದ್ರೆ|| 
ನಾದುನಿ ಮಗನಿಗೆ ಧಾರೆ ಎರೆವೇನು||
ಮನೆಯಾ ಮುಂದಿರುವಾ- ಹೊನ್ನರಳಿಮರವೆ
ಅಣ್ಣಾನ ಮನೆಗೆ ಹೆಣ್ಣಿಗೆ ಬರುತ್ತೇನೆ–ಅತ್ತಿಗಮ್ಮಾ- 
ನಿನ್ನ ಸಾಕ್ಷಿಯಾಗಿ ಬಾಗೀಲ ಬಿಡುತೇನೆ-ಅತ್ತಿಗಮ್ಮಾ 
ಬಾಗಿ-ದಾಟಿ-ಒಳಗೋಗು||

Saturday, September 14, 2024

ಬಾಗಿಲ ತಡೆಯುವ ಹಾಡುಗಳು-2

 ಅಂಗನ ಮಣಿಯೆ ರಂಗ ಬಂದಾ। 
ಬಿಡಿರೆ ಬಾಗಿಲಾ- ತೆಗೆಯಿರಿ ಕದಗಳಾ| 
ರಂಗ ರುಕ್ಕಿಣಿ ಬಂದಾಗಾಯ್ತು! 
ಬಿಡಿರೆ ಬಾಗಿಲಾ ತೆಗೆಯಿರಿ ಕದಗಳಾ|
ತಂದೆ ತಾಯರ ಬಿಟ್ಟು ಬಂದೆ. 
ಅಣ್ಣ ತಮ್ಮಂದಿರಾ ಆಟ ಬಿಟ್ಟು-ಬಂದೆ  ನಾ ಬಿಡಿರೆ ಬಾಗಿಲಾ- 
ಅಕ್ಕತಂಗಿಯರ ಕೂಟ ಬಿಟ್ಟು-ಬಂದೆ-II 
ಬಂದೆ ನಾ ಬಿಡಿರಿ ಬಾಗಿಲಾ-ತೆಗೆಯಿರಿ ಕದಗಳಾ-1

ರಂಗ ರುಕ್ಕಿಣಿ ಬಂದಾಗಾಯ್ತು-ಬಿಡಿರಿ ಬಾಗಿಲಾ|| 
ಅತ್ತೆ ಮಾವರ ಗುಣ ಕಂಡು| 
ಬಾವ ಮೈದುನರ ಆಟ ಕಂಡು|
 ಅತ್ತಿಗೆ ನಾದಿನಿಯರ ಹಿತ ಕಂಡು!
 ಬಂದೆ ನಾ ಬಿಡಿರಿ ಬಾಗಿಲಾ-ತೆಗೆಯಿರಿ ಕದಗಳಾ||

ಬಾಗಿಲ ತಡೆಯುವ ಹಾಡುಗಳು-1

 ಅಂದು ಗೋಕುಲದಿಂದಾ-ಬಂದ-ನಾರಾಯಣ ಕೃಷ್ಣಾ-1
ಮಂಟಪದ ನಡುಗಾಗಿ-ಬರುವ ಹಾಗೆನಣ್ಣಯ್ಯಾ!
 ಮಡದಿ ಬೆಡಗೆಂದು ಬರುತಾರೆ||
 ಮಡದಿ ಬೆಡಗೆಂದು ಬರುವಾಗ ಅಣ್ಣಯ್ಯಾ-I
 ತಂಗಿಯ ಕದಗಳಾ ತಡೆದಾಳು-–ತಂಗ್ಯಮ್ಮ
ನೀ-ತಡೆದಾ ಕದವಾ-ಬಿಡುಬೇಗಾ॥ ನಾ ತಡೆ ಕದಾ ಬಿಡಲಾರೆ! ಪ್ರತಿಯೊಂದು-ಮಾತು ನುಡಿಬೇಗಾ|| 
ದೇಶ ಉಂಬಳಿ ಕೊಡುವೆ! ಶೇಷ-ಉಪ್ಪರಿಗೆ ಕೊಡುವೆ- 
ನೀ ತಡೆದ ಕದಗಳಾ-ಬಿಡು ಬೇಗಾ||
ದೇಶ ಉಂಬಳಿ ನನಗುಂಟು! ಶೇಷ ಉಪ್ಪರಿಗೆ
 ನನಗುಂಟು! ಎನ್ನುವ ನೀನ ನನಗೆ-ಕೊಡುವೆನ್ನಮ್ಮಾ
 ಪ್ರೀತಿಗೊಂದು ಮಾತು ನುಡಿಬೇಗಾ||

Thursday, September 12, 2024

ತುಪ್ಪ ತೆಗೆದುಕೊಂಡು ಬರುವಾಗ (ಶೋಭಾನೆ ಹಾಡು) -2

 ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದ ಶ್ರೀಗಂಧ ಪರಿಮಳವು 
ಲೇಸಾಗಿ ಪದ್ಮ ಹಾವಿಗೆಯನ್ನು ಧರಿಸಿದ ವಾಸುದೇವನಿಗೂ
ಕಾಲಲ್ಲಿ ಕಿರುಗೆಜ್ಜೆ ನೀಲದ ಬಾವುಲಿ ನೀಲವರ್ಣದ 
ನಾಟಕಳ್ಹಾಕುವ ನಮ್ಮ ಭಾವಜನಯ್ಯ ಬಾಲ ಗೋಪಾಗೆ 
ನೀಲವರ್ಣನಿಗೆ ವನಿತೆ ಶ್ರೀಲಕ್ಷ್ಮೀಗೂ ನೀಲದಾರತೀಯಾ ಬೆಳಗೀರೆ ಶೋಭಾನೆ 
ಕುಂಕುಮ ಕಸ್ತೂರಿ ಪರಿ ಪರಿ ನಾಮ ಶಂಕ ಚಕ್ರವನ್ನೇ ಧರಿಸಿದ
 ನಮ್ಮ ಬಿಂಕದಿಂದಲಿ ನಾಟ್ಯವ ನಾಡುತಾಡುವ 
ಪಂಕಜ ನಾಭಗೆ ವನಿತೆ ಶ್ರೀಲಕ್ಷ್ಮೀಗೆ ಕುಂಕುಮಧಾರತೀಯಾ ಬೆಳಗೀರೆ ಶೋಭಾನೆ.
 ಹದಿನಾರು ಸಾವಿರ ಸ್ತ್ರೀಯರನೊಡಗೊಂಡು 
ಚದುರಂಗ ಪಗಡೆಯ ನಾಡಿದ ನಮ್ಮ ಮದನ ಮೋಹನ 
ದೇವ ಎಡೆಯಲಿ ಕೌಸ್ತುಭ ಮಧುಸೂದನನಿಗೆ 
ವನಿತೆ ಶ್ರೀಲಕ್ಷ್ಮೀ ಸುದತಿಯಾರತಿಯಾ ಬೆಳಗೀರೆ ಶೋಭಾನೆ 
ತೆತ್ತಿಸಕೋಟ ದೇವರ್ಕಳ ನೋಡಗೊಂಡು ಹಸ್ತವ 
ತಾರದೊಳಾಡಿದ ನಮ್ಮ ಸತ್ಯಭಾಮೆ ಪ್ರಿಯ ಪುರಂಧರ ವಿಠಲಗೆ 
ನಿತ್ಯೋತಮನಿಗೆ ವನಿತೆ ಶ್ರೀಲಕ್ಷ್ಮೀಗೆ ಮುತ್ತಿನಾರತಿಯಾ ಬೆಳಗೀರೆ ಶೋಭಾನೆ.
 ವನಿತೆ ಶ್ರೀಲಕ್ಷ್ಮೀಗೂ ಬಾಸಿಂಗದಾರತಿಯಾ ಬೆಳಗೀರೆ ಶೋಭಾನೆ 


Tuesday, September 10, 2024

ತುಪ್ಪ ತೆಗೆದುಕೊಂಡು ಬರುವಾಗ (ಶೋಭಾನೆ ಹಾಡು) -1

ಅರತಿ ಎತ್ತುವೆ ನಂದಗೋಕುಲದೊಳಗೆ ಆಡುವ ನಂದ ಗೋಪಿಯ
 ಕಂದನಿಗೆ ಬಂದು ಮಧುರೆಯಲ್ಲಿ ಮಾವನ ಕೊಂದು ಮಂಧರ ದರ ಗೋಪಾಲಗೆ 
ಕಂಕಣದಾರತಿಯಾ ಬೆಳಗೀರೆ ಶೋಭಾನೆ.
 ಚೆನ್ನಯ ಮನೆ ಮನೆ ಹಾಲು ಮೊಸರನು
 ಕದ್ದು ಕಣ್ಣ ಸನ್ನೆಯ ಮಾಡಿ ಕರೆದ ಕೃಷ್ಣಯ್ಯಗೆ 
ಹೊನ್ನಿನಾರತಿಯಾ ಬೆಳಗೀರೆ ಶೋಭಾನೆ
 ಜಲಜಾಕ್ಷಿಯರೆಲ್ಲರೂ ಜಲಕ್ರೀಡೆಯಾಡುವ ಸಮಯದೊಳು 
ಉಡುವ ಸೀರೆಯ ಕದ್ದು ಕಡಹದ ಮರವೇರಿ ಹುಡುಕು ಮಾಡುವ
 ನಮ್ಮ ಒಡೆಯ ಶ್ರೀಕೃಷ್ಣಯ್ಯಂಗೆ ಜಡಜದಾರತಿಯಾ ಬೆಳಗೀರೆ ಶೋಭಾನೆ.