Sunday, December 14, 2025

ಗೌಡ ಸಂಸ್ಕೃತಿ- ಮದುವೆ(ಧಾರಾಕಾರ್ಯ)

ಧಾರಾಕಾರ್ಯ 

ಪರಿಕರಗಳು : ಕಾಲುದೀಪ, ಮಣೆ 2, ತಂಬಿಗೆ ನೀರು, ತೆರೆ ಹಿಡಿಯಲು ಶುಭ್ರ ಬಟ್ಟೆ, 10 ವೀಳ್ಯದೆಲೆ, 2 ಅಡಿಕೆ, ಕಂಚಿನಕ್ಕಿ, ಕೊಂಬು ಗಿಂಡಿ, ಹಿಂಗಾರದ ಮಾಲೆ 2. ದಾರೆ ಎರೆಯಲು ಕಂಚಿನ ಬಟ್ಟಲು 1, ತಾಳಿ ಕಂಠಿ,

ಕಂಚಿಮೆಯೊಂದಿಗೆ ಸೋದರ ಮಾವ ಮದುಮಗಳನ್ನು ಧಾರಾಮಂಟಪಕ್ಕೆ ಮೊದಲು ಕರೆತರಬೇಕು. (ಧಾರಾಮಂಟಪಕ್ಕೆ ಮದುಮಗ ಯಾ ಮದುಮಗಳನ್ನು ಕರೆದುಕೊಂಡು ಬರುವಾಗ ಮಡಿವಾಳರು ಮಡಿ ಬಟ್ಟೆ ಹಾಕುವ ಕ್ರಮವಿದೆ.) ಹಾಗೇ ಬರುವ ಮೊದಲು ಸೋದರ ಕಡೆಯ ಬಾವ ಮೈದುನರು ಶುಭ್ರ ಬಟ್ಟೆಯಿಂದ ತೆರೆಹಿಡಿಯಬೇಕು. ಆನಂತರ ಮದುಮಗನನ್ನು ಕರೆದುಕೊಂಡು ಬರಬೇಕು. ಮದುಮಗ ಮತ್ತು ಮದುಮಗಳು ಧಾರಾ ಮಣೆಯ ಮೇಲೆ ನಿಂತಿರಬೇಕು. ಇತ್ತಂಡದ 5 ಜನ ಮುತ್ತೈದೆಯರು ಕಂಚಿಮೆಗೆ ಅಕ್ಕಿ ಹಾಕಿ ಕೈ ಮುಗಿಯಬೇಕು. (ಹುಡುಗಿ ಕಡೆಯ ಕಂಚಿಮೆಗೆ ಹುಡುಗನ ಕಡೆಯವರು, ಹುಡುಗನ ಕಡೆಯ ಕಂಚಿಮೆಗೆ ಹುಡುಗಿ ಕಡೆಯವರು ಪರಸ್ಪರ ಕೈ ಮುಗಿಯುವರು) ಇತ್ತಂಡದ ಊರುಗೌಡರುಗಳು ಕೊಂಬುಗಿಂಡಿಯಲ್ಲಿದ್ದ ಹಾಲನ್ನು ವರನ ಕಡೆಯ ಕೊಂಬು ಗಿಂಡಿಯಿಂದ ಹಾಗೂ ವಧುವಿನ ಕಡೆಯ ಕೊಂಬು ಗಿಂಡಿಯಿಂದ ಮೂರು ಮೂರು  ಸಲ ಹೊಯ್ದುಕೊಳ್ಳಬೇಕು. (ಆದಲು-ಬದಲು ಮಾಡಿಕೊಳ್ಳುವುದು) ಕಂಚಿನಕ್ಕಿ (ಕಂಚಮೆ) ಮೇಲಿದ್ದ ತೆಂಗಿನ ಕಾಯಿಯನ್ನು ತೆಗೆದು ಅದನ್ನು ಕೂಡ ಅದಲು ಬದಲು ಮಾಡಿಕೊಳ್ಳಬೇಕು. ನಂತರ ಧಾರಾ  ಸಮಯಕ್ಕೆ ಸರಿಯಾಗಿ ವಧುವಿನ ತಂದೆ ಇತ್ತಂಡದ ಕೊಂಬುಗಿಂಡಿಯಲ್ಲಿದ್ದ ಹಾಲನ್ನು ಧಾರೆ ಎರೆಯುವ ತಂಬಿಗೆಗೆ ಹಾಕಿಸಿಕೊಂಡು ಕಾಳಿಕಂಠಿಯನ್ನು ಇಟ್ಟು ಸಭೆಯಲ್ಲಿ ಹೋಗುವರು. ಇದನ್ನು ಸಭಿಕರೆಲ್ಲರೂ ಶುಭ ಹಾರೈಕೆಯೊಂದಿಗೆ ಮುಟ್ಟಿ ನಮಸ್ಕರಿಸುವರು. ಊರುಗೌಡರ ಒಕ್ಕಣೆಯೊಂದಿಗೆ (ಒಕ್ಕಣೆ 3 ಸಲ) ಮೊದಲು ಮದುಮಗಳು ಹಿಂಗಾರದ ಮಾಲೆಯನ್ನು ಮಧುಮಗನ ಕೊರಳಿಗೆ ಹಾಕಬೇಕು. ಮದುಮಗ ಕೂಡ ಹಾಗೇನೆ ಅವಳ ಕೊರಳಿಗೆ ಹಾಕುವನು. ಈ ಎಲ್ಲಾ ಕಾರ್ಯಗಳು  ಆದ ನಂತರ ವರನ ತಂದೆ ಧಾರಾ ಬಟ್ಟಲಿನೊಂದಿಗೆ (ಕಂಚಿನಬಟ್ಟಲು, ತಯಾರಿರಬೇಕು. ವರನ ಕೈಯಲ್ಲಿ 5 ವೀಳ್ಯದೆಲೆ, 1 ಅಡಿಕೆ ವಧುವಿನ ಕೈಯಲ್ಲಿ ಕೂಡ ಅದೇ ರೀತಿ ಕೊಟ್ಟು ವರನ ಹಸ್ತದ ಮೇಲೆ ವಧುವಿನ ಹಸ್ತವನ್ನಿಟ್ಟು ಊರುಗೌಡರು ಹತ್ತು ಕುಟುಂಬ ಹದಿನೆಂಟು ಗೋತ್ರದ ಬಂಧು-ಬಾಂಧವರು, ನೆಂಟರಿಷ್ಟರು, ಗುರುಮನೆ, ಕಟ್ಟೆಮನೆ, ಸೀಮೆಮನೆ, ಮಾಗಣಮನೆ ಗೋತ್ರದ .... ಹೆಸರಿನ ವರನಿಗೆ..... ಗೋತ್ರದ ಹೆಸರಿನ ವಧುವಿನ ಕೈ ಮುಟ್ಟಿ ಕನ್ಯಾಧಾರೆ ಎರೆದು ಕೊಡುತ್ತೇವೆಂದು 3 ಸಲ ಹೇಳಬೇಕು (ವಧುವಿನ ತಂದೆ ಧಾರೆಯೆರೆಯುವರು ಅಥವಾ ಅವರು ಇಲ್ಲದಿದ್ದ ಪಕ್ಷದಲ್ಲಿ ಚಿಕ್ಕಪ್ಪ ಅಥವಾ ಸೋದರಮಾವ). ಸಭಿಕರು ಒಳ್ಳೆ ಕಾರ್ಯಂತ  ಹೇಳಬೇಕು.
ಕು. ಮೊದಲು ಹುಡುಗಿ ಕೈ ಮೇಲೆ, 2ನೇ ಸಲ ಹುಡುಗಿ ಕೈ ಕೆಳಗಿರಬೇಕು. 3ನೇ ಸಲ ಹುಡುಗಿ ಕೈ ಮೇಲಿಟ್ಟು ಧಾರೆ ನೀರಿನೊಂದಿಗೆ ಎಲೆ ಅಡಿಕೆಯನ್ನು ಮದುಮಕ್ಕಳು ಧಾರಾ ಬಟ್ಟಲಿಗೆ ಬಿಡಬೇಕು. (ಧಾರೆ ನೀರನ್ನು ಫಲ ಬರುವ ಮರದ ಬುಡಕ್ಕೆ ವರನ ಕಡೆಯವರು ಹಾಕುವರು) ನಂತರ ಊರುಗೌಡರ ಒಕ್ಕಣೆಯೊಂದಿಗೆ ಮದುಮಗ-ಮದುಮಗಳ ಕುತ್ತಿಗೆಗೆ ಮಾಂಗಲ್ಯ ಕಟ್ಟಬೇಕು. (ಒಕ್ಕಣೆ 3 ಸಲ ಹೇಳುವುದು). ವರನ ಕಡೆಯ ಕಂಚಿನಕ್ಕೆ ಬಟ್ಟಲಿನಲ್ಲಿಟ್ಟ (ಕಂಚಿಮೆ) ಕುಂಕುಮ ಕರಡಿಗೆಯಿಂದ ಕುಂಕುಮ ತೆಗೆದು ವಧುವಿನ ಹಣೆಗೆ ವರನು ತಿಲಕವಿಡಬೇಕು. ಆನಂತರ ವರನ ಶಲ್ಯಕ್ಕೆ ವಧುವಿನ ಸೀರೆ ಸೆರಗನ್ನು ಕಟ್ಟಬೇಕು. ವಧುವಿನ ತಂದೆ ವರನ ಕೈ ಹಿಡಿದು ಧಾರಾ ಮಂಟಪದಲ್ಲಿ 3 ಸುತ್ತು ಬರಬೇಕು. (ವಧುವಿನ ತಂದೆತಾಯಿ, ವರನ ತಂದೆತಾಯಿ ಧಾರಾ ಮಂಟಪಕ್ಕೆ ಇತ್ತಂಡದ ಕಂಚಿಮೆ ಸಹಿತ ಸುತ್ತು ಬರಬೇಕು.) ಕಲ್ಯಾಣಮಂಟಪದಲ್ಲಿ ಮದುವೆಯಾದರೆ ವಧುವಿನ ಕೋಣೆಗೆ ವಧು-ವರನನ್ನು ಕರೆದುಕೊಂಡು ಹೋಗಬೇಕು. ವಧುವಿನ ಮನೆಯಲ್ಲಿ ಮದುವೆಯಾದರೆ ವಧುವಿನ ಮನೆಯೊಳಗೆ ಕರಕೊಂಡು ಹೋಗುವರು.

Sunday, September 21, 2025

ಗೌಡ ಸಂಸ್ಕೃತಿ- ಮದುವೆ(ಮದುವೆಗೆ ಮುಂಚೆ ಕಟ್ಟುವ ವೀಳ್ಯ)

 ಮದುವೆಗೆ ಮುಂಚೆ ಕಟ್ಟುವ ವೀಳ್ಯ

ಪರಿಕರಗಳು : ಕಾಲು ದೀಪ, ನೆನೆಬತ್ತಿ, ಎಳ್ಳೆಣ್ಣೆ, ಅಗರಬತಿ, ಮಣೆ 2., ಚಾಪೆ 4. ಹರಿವಾಣ 2. ಬೆಳ್ತಿಗೆ ಅಕ್ಕಿ., ತುಂಬೆಹೂ, ತೇದ ಗಂಧ, ತುದಿ ಬಾಳೆಲೆ., ಅಡಿಕೆ1, ವೀಳ್ಯದೆಲೆ 5

ಚೌಕಿ ವೀಳ್ಯ : ಚೌಕಿ ವೀಳ್ಯವನ್ನು ಎತ್ತಿ ಹುಡುಗಿ ಕಡೆಯ ಊರುಗೌಡರಿಗೆ ಒಕ್ಕಣೆಯೊಂದಿಗೆ ಕಾರ್ಯಕ್ರಮ ಸುಧಾರಿಸಿ ಕೊಡಬೇಕೆಂದು ಹೇಳಿ ಮದುಮಗನ ಕಡೆಯ ಊರುಗೌಡರು ನೀಡುವರು. ಹರಿವಾಣವನ್ನು ಎಲ್ಲರೂ ಪ್ರದಕ್ಷಿಣೆ ತಂದು ಹುಡುಗಿ ಕಡೆಯವರು ಮಣೆಯ ಮೇಲಿಡಬೇಕು.

1) ದೇವರ ವೀಳ್ಯ : 9 ಕವಳೆ ವೀಳ್ಯದೆಲೆ, 9 ಅಡಿಕೆ ಇಟ್ಟು ಒಕ್ಕಣೆಯೊಂದಿಗೆ... ವೀಳ್ಯ ಕೊಡಬೇಕು. (ಒಕ್ಕಣೆ ಹಿಂದೆ ವಿವರಿಸಿದೆ)

2) ತೆರವಿನ ವೀಳ್ಯ : 7 ಕವಳೆ ವೀಳ್ಯದೆಲೆ ಸ್ವಲ್ಪ ಅಡಿಕೆ ಹೋಳುವಿನೊಂದಿಗೆ 10.50 ರೂಪಾಯಿಯನ್ನು ಚೌಕಿಯಲ್ಲಿ ಕುಳಿತವರ ಸಮಕ್ಷಮದಲ್ಲಿ ಹರಿವಾಣದಲ್ಲಿಟ್ಟು ಹುಡುಗನ ಕಡೆಯ ಊರುಗೌಡರ ಒಕ್ಕಣೆಯೊಂದಿಗೆ ಹುಡುಗಿ ಕಡೆಯ ಊರುಗೌಡರಿಗೆ ಹಸ್ತಾಂತರಿಸುತ್ತಾರೆ. ಹುಡುಗಿ ಕಡೆಯ ಊರುಗೌಡರು 5 ವೀಳ್ಯದೆಲೆ 1 ಅಡಿಕೆ, 10.50 ರೂಪಾಯಿಯನ್ನು ಮನೆಯ ಯಜಮಾನನಿಗೆ ಕೊಡುತ್ತಾರೆ. ಮನೆಯ ಯಜಮಾನ ಈ 10.50 ರೂಪಾಯಿಯನ್ನು ತಲೆಯ ರುಮಾಲಿನಲ್ಲಿ ಮದುವೆ ಕಾರ್ಯ ಮುಗಿಯುವವರೆಗೆ ಕಟ್ಟಿಕೊಂಡಿರುತ್ತಾರೆ.

3) ಬಣ್ಣ ಬಂಗಾರ ವೀಳ್ಯ : ಬಣ್ಣ ಬಂಗಾರಕ್ಕೆ ಇರಿಸುವ ಎಲ್ಲಾ ವಸ್ತುಗಳನ್ನು ಚೌಕಿಯಲ್ಲಿರುವವರೆಲ್ಲರೂ ಪರೀಕ್ಷಿಸಿ ದೊಡ್ಡ ಹರಿವಾಣದಲ್ಲಿಡಬೇಕು. (5 ವೀಳ್ಯದೆಲೆ, 1 ಅಡಿಕೆ, ಧಾರೆಸೀರೆ, ರವಿಕೆ, ಮುಸುಕಿನ ಬಟ್ಟೆ, ಕರವಸ್ತ್ರ, ಓಲೆ, ಕಡಗ, ಮೂಗುತಿ, ಕಾಲುಂಗುರ, ಡಾಬು, ಪಟ್ಟೆ ಬಾಸಿಂಗ, ಕುಂಕುಮ ಕರಡಿಗೆ, ಕೆಂಪು ಹಾಗೂ ಹಸಿರು ಬಳೆ, ಕನ್ನಡಿ, ಬಾಚಣಿಗೆ, ತುಂಬೆ ಹೂವು, ಮಲ್ಲಿಗೆ ಹೂವು. ಹಿಂಗಾರ ಇತ್ಯಾದಿ) ಇನ್ನೊಂದು ಹರಿವಾಣದಲ್ಲಿ 5 ಕವಳೆ ವೀಳ್ಯದೆಲೆ, 5 ಅಡಿಕೆ, ಸ್ವಲ್ಪ ಅಡಿಕೆ ಹೋಳು ಇರಬೇಕು. ಇತ್ತಂಡದ ಐದು ಜನ ಮುತ್ತೈದೆಯರು ಹೆಗಲಿಗೆ ಶಾಲು ಹಾಕಿ (ಬಿಳಿಯ ವಸ್ತ್ರ) ಊರುಗೌಡರ ಒಕ್ಕಣೆಯೊಂದಿಗೆ ಹರಿವಾಣಕ್ಕೆ ಕೈಮುಗಿಯುತ್ತಾ ಹೆಣ್ಣಿನ ಕಡೆಯವರು 3 ಸಲ ಗಂಡಿನ ಕಡೆಯವರು 3 ಸಲ ಅದಲು-ಬದಲು ಮಾಡಿಕೊಳ್ಳಬೇಕು. ಇದಾದ ನಂತರ ಗಂಡಿನ ಕಡೆಯವರು ಬಣ್ಣ ಬಂಗಾರ ಸಹಿತ ಹೆಣ್ಣಿನ ಕಡೆಯ ಮುತ್ತೈದೆಯರೊಂದಿಗೆ ಮದುಮಗಳನ್ನು ಶೃಂಗರಿಸಲು ತೆರಳುವರು
4) ದೇಶಮಾನ್ಯ ವೀಳ್ಯ : ಹತ್ತು ಕುಟುಂಬ ಹದಿನೆಂಟು ಗೋತ್ರದ ಬಂಧುಗಳಿಗೆ ಕೊಡುವ ಮಯ್ಯಾದೆ (ಸಮಸ್ತ ಬಂಧುಗಳಿಗೆ) ಹರಿವಾಣ ತುಂಬ ವೀಳ್ಯದೆಲೆ ಕವಳೆ, ಸಾಕಷ್ಟು ಅಡಿಕೆ ಮತ್ತು ಅಡಿಕೆ ಹೋಳು ಇರಬೇಕು. ಒಕ್ಕಣೆಯೊಂದಿಗೆ ದೇಶಮಾನ್ಯ ವೀಳ್ಯ ಕೊಡುತ್ತೇವೆಂದು ಹೇಳಿ ಕೊಡಬೇಕು. (ಯಾರಿಗಾದರೂ ಬಿಟ್ಟು ಹೋಗಿದ್ದರೆ ಈ ಬಗ್ಗೆ ಕೊಡುವ ವೀಳ್ಯ)
ವಧುವಿನ ಕಡೆಯವರು ಶೃಂಗಾರ ಆಗಿದೆಯೆಂಬುದನ್ನು ಚೌಕಿಯಲ್ಲಿ ಕುಳಿತವರಿಗೆ ತಿಳಿಸಬೇಕು. ನಂತರ ಚೌಕಿಯಲ್ಲಿ ಕುಳಿತ ಊರುಗೌಡರು ಸ್ಥಳ ಬದಲಾವಣೆ ಮಾಡಿಕೊಳ್ಳಬೇಕು. ಕೊನೆಗೆ ಚೌಕಿ ವೀಳ್ಯದೊಂದಿಗೆ ವೀಳ್ಯ ಶಾಸ್ತ್ರ ಕ್ರಮ ಮುಗಿಯುವುದು. ವಧು/ವರನಿಗೆ ಶೃಂಗಾರದ ನಂತರ ಊರುಗೌಡರು ಪಟ್ಟ-ಬಾಸಿಂಗವನ್ನು ಕಟ್ಟುವರು. ತದ ನಂತರ ಧಾರಾ ಮುಹೂರ್ತಕ್ಕೆ ಮುಂಚಿತವಾಗಿ ವಧು/ವರನನ್ನು ಸೋದರಮಾವ ಧಾರಾ ಮಂಟಪಕ್ಕೆ ಕರೆತರುವರು.

ಗೌಡ ಸಂಸ್ಕೃತಿ- ಮದುವೆ(ದಿಬ್ಬಣ ಹೊರಡುವುದು)

 ದಿಬ್ಬಣ ಹೊರಡುವುದು : ನಿಗದಿತ ಸಮಯಕ್ಕೆ ಸರಿಯಾಗಿ ಧಾರಾ ಚಪ್ಪರಕ್ಕೆ ಮದುಮಗನ ಕಡೆಯ ದಿಬ್ಬಣ ಹೊರಡುವುದು. ದಿಬ್ಬಣ ಹೊರಡುವ ಮೊದಲು ಹಸೆಮಣೆಯ ಎದುರು ಕಾಲುದೀಪ ಹಚ್ಚಿ ಮದುಮಗನನ್ನು ಹಸೆಚಾಪೆಯಲ್ಲಿ ಕುಳ್ಳರಿಸಿ ಹಾಲುತುಪ್ಪ ಶಾಸ್ತ್ರ ಮಾಡುವುದು. ನಂತರ ಕುಡಿಯಲು ಹಾಲು ಕೊಡಬೇಕು. ಹಾಲು ಕುಡಿದ ಲೋಟಕ್ಕೆ ಎಲೆ ಅಡಿಕೆ ಹಾಕುವರು. ಇದಾದ ನಂತರ ಸೋದರ ಮಾವ ಊರು ಗೌಡರೆ ಒಕ್ಕಣೆಯೊಂದಿಗೆ ಮುಸುಕಿನ ಬಟ್ಟೆಯ ಬಲದ ಬದಿಯ ತುದಿಗೆ ಪಾವಲಿಯನ್ನು ಕಟ್ಟಬೇಕು. ಊರುಗೌಡರು ಒಕ್ಕಣೆಯೊಂದಿಗೆ ವರರನ್ನು ಎಬ್ಬಿಸುವರು. ನಂತರ ಹಿರಿಯರ ಪಾದ ಮುಟ್ಟಿ ಆಶೀರ್ವಾದ ಪಡೆಯಬೇಕು. ಮನೆಯ ಯಜಮಾನ ವರರನ್ನು ಮೆಟ್ಟಿಲಿಳಿಸಿ ದೇವ ಸಭೆಯ ಮೇಲ್ಕಟ್ಟಿನಡಿಯಲ್ಲಿ ಊರುಗೌಡರಿಗೆ ಹಸ್ತಾಂತರಿಸುವರು. ಬಣ್ಣ ಬಂಗಾರದ ಸಹಿತವಾಗಿ ಮದುವೆ ಕಾರ್ಯವನ್ನು ಸಂಪೂರ್ಣ ಯಶಸ್ವಿಗೊಳಿಸಲು ಅಧಿಕಾರ ವಹಿಸಿ ಕೊಡುತ್ತಾರೆ. ವಾಲಗ ಗರ್ನಾಲುನೊಂದಿಗೆ ದಿಬ್ಬಣ ಹೊರಡುವುದು.

ದಿಬ್ಬಣ ಚಪ್ಪರಕ್ಕೆ ಬಂದು ತಲುಪಿದಾಗ ವಧುವಿನ ಮನೆಯವರು ವಾಲಗದೊಂದಿಗೆ ಸ್ವಾಗತಿಸುತ್ತಾರೆ. ದಿಬ್ಬಣ ಚಪ್ಪರದ ಮುಖ ತೋರಣಕ್ಕೆ ಬಂದಾಗ ಮುತ್ತೈದೆಯರು ಸೋಬಾನೆಯೊಂದಿಗೆ ಕುರ್ದಿ ಆರತಿ ಮಾಡಬೇಕು. ಕಾಲಿಗೆ ನೀರು ಎರೆದು ದೃಷ್ಟಿ ತೆಗೆಯಬೇಕು. (ಆರತಿ ಎತ್ತಿದ ಹರಿವಾಣಕ್ಕೂ ನೀರು ಎರೆದ ತಂಬಿಗೆಗೂ ಎಲೆ, ಅಡಿಕೆ, ಪಾವಲಿಯನ್ನು ಹಾಕಬೇಕು ಮದುಮಗಳ ದಿಬ್ಬಣವಾದರೆ ಮನೆ ಒಳಗೆ ಹಸೆ ಚಾಪೆಯಲ್ಲಿ ಕುಳ್ಳಿರಿಸಬೇಕು. ಮದುಮಗನದಾದರೆ ಚಪ್ಪರದ ಬದಿಯಲ್ಲಿ ಪ್ರತ್ಯೇಕ ಆಸನ ಇರಿಸಿ ಕುಳ್ಳಿರಿಸುವರು.) (ಮದುಮಗನ ಮನೆಯಲ್ಲಿ ಮದುವೆಯಾದರೆ ಮದುಮಗ ಹೊರಗೆ ಹೋಗಿ ಪ್ರತ್ಯೇಕ ಸ್ಥಳದಲ್ಲಿ ಕುಳಿತುಕೊಳ್ಳಬೇಕು.)

ಗೌಡ ಸಂಸ್ಕೃತಿ- ಮದುವೆ(ಕುಲದೇವರಿಗೆ ಹರಿಕೆ ಹಣ ಕಟ್ಟುವುದು)

 ಕುಲದೇವರಿಗೆ ಹರಿಕೆ ಹಣ ಕಟ್ಟುವುದು :

ಪರಿಕರಗಳು : ಕಂಚಿನಕ್ಕಿ. ಬೆಂಡು ಕುಕ್ಕೆ. ಬಾಳೆಲೆ2 ಹೊದುಳು 1 ಸೇರು, ತೆಂಗಿನಕಾಯಿ 1. ತಂಬಿಗೆ ನೀರು. ಬಾಳೆಹಣ್ಣು 1ಪಾಡ, ಅಚ್ಚು ಬೆಲ್ಲ 1.ಬಿದಿರಿನ ಗುತ್ತಿ 2. ಮುಷ್ಠಿ ಕರಿಮೆಣಸು, ಪಾವಲಿ 1. ಧೂಪದ ಆರತಿ ಮಾಡಲು ಸಣ್ಣ ಬಾಲೆ ಪಂಬೆ. ಗಂಧಧೂಪ, ಎಲೆ ಅಡಿಕೆ. ಮದರಂಗಿ ಶಾಸ್ತ್ರದ ಮಾರನೇ ದಿನ ದಿಬ್ಬಣ ಹೊರಡುವ ಮೊದಲು ಶೃಂಗಾರ ಆದ ನಂತರ ಕುಲದೇವರಿಗೆ ಹರಿಕೆ ಹಣ ಕಟ್ಟುವುದು ಮಾಡಬೇಕು. ಮೊದಲು ಕಾಲುದೀಪ ಹಚ್ಚಿಡಬೇಕು. ಒಂದು ಮಣೆಯ ಮೇಲೆ ಬೆಂಡು ಕುಕ್ಕೆ ಇಟ್ಟು ಅದರೊಳಗೆ ಜೋಡು ಬಾಳೆಲೆ ಇಡಬೇಕು. ವಧು/ವರರು 3 ಬೊಗಸೆ ಹೊದುಳು ಬಡಿಸಿ ಒಂದು ಪಾಡ ಬಾಳೆಹಣ್ಣು, ಬೆಲ್ಲ ಹಾಗೂ 5 ವೀಳ್ಯದೆಲೆ, 1 ಅಡಿಕೆ ಇಡಬೇಕು. ಆ ನಂತರ ಊರುಗೌಡರು ಒಕ್ಕಣೆಯೊಂದಿಗೆ ವಧು/ವರನ ಕೈಯಿಂದ ಒಂದು ಗೊಟ್ಟದಲ್ಲಿ ಮೊದಲು ಮಾವಿನಸೊಪ್ಪು, ಕರಿಮೆಣಸು ಹಾಕಿ ಒಂದು ಪಾವಲಿಯನ್ನು ಇಟ್ಟು ಭದ್ರಪಡಿಸುವುದು (ಈ ಹಣ ತಿರುಪತಿಗೆ ಸಲ್ಲಿಕೆಯಾಗಬೇಕು). ಇನ್ನೊಂದು ಗೊಟ್ಟದಲ್ಲಿ ಮಾವಿನ ಸೊಪ್ಪು ಹಾಗೂ ಕರಿಮೆಣಸು ಹಾಕಿ ಭದ್ರಪಡಿಸಬೇಕು. ಭದ್ರಪಡಿಸಿದ ಗೊಟ್ಟಗಳನ್ನು ಬೆಂಡು ಕುಕ್ಕೆಯಲ್ಲಿಇಡಬೇಕು. ನಂತರ ತೆಂಗಿನ ಕಾಯಿ ಒಡೆದು ನೀರು ಚೆಲ್ಲುತ್ತಾ ಬೆಂಡು ಕುಕ್ಕೆಗೆ 3 ಸುತ್ತುತಂದು ಉಳಿದ ನೀರನ್ನು ಚೆಂಬುಗೆ ಹೊಯ್ದು ಬೆಂಡು ಕುಕ್ಕೆಯ ಒಳಗಡೆ ಇಡಬೇಕು.ಬಾಳೆಪಂಬೆಯಲ್ಲಿ ತಂಬಿಗೆ ಸಮೇತ ಕೈಯಲ್ಲಿಡಿದು ದೂಪದ ಆರತಿ ಮಾಡಬೇಕು.
ಊರುಗೌಡರ ಒಕ್ಕಣೆಯೊಂದಿಗೆ ವೆಂಕಟರಮಣ ದೇವರ ಹರಕೆಯ ಹಣವನ್ನು ವಧು/ವರನ ತಲೆಯ ಮೇಲೆ ಇರಿಸಿದ್ದನ್ನು ಅಟ್ಟದವರೆಗೆ ಕೊಂಡೊಯ್ದು ಬೆಂಡು ಕುಕ್ಕೆಯನ್ನು ಮನೆಯ ಹಿರಿಯರು ಅಟ್ಟದ ಈಶಾನ್ಯ ಮೂಲೆಯಲ್ಲಿ ಇಡುವರು. (ಈಗ ಅಟ್ಟ ಇಲ್ಲದ ಕಾರಣ ದೇವರ ಕೋಣೆಯಲ್ಲಿಡಬಹುದು), ವಧು-ವರರು ಎಣಿಗೆ ಕೈ ಮುಗಿದು ಹೊಸ ಬರುವರು.

Friday, August 29, 2025

ಗೌಡ ಸಂಸ್ಕೃತಿ- ಮದುವೆ(ಹಸೆ ಚಾಪೆ ಹಾಕುವುದು)

 ಹಸೆ ಚಾಪೆ ಹಾಕುವುದು : ಹಸೆ ಬರೆದ ನಂತರ ಅದರಡಿಯಲ್ಲಿ 5 ಜನ ಮುತ್ತೈದೆಯರು

ಸೋಭಾನೆಯೊಂದಿಗೆ 5 ಕುಡ್ತೆ ಕುಚುಲು ಅಕ್ಕಿಯನ್ನು 5 ಸಾಲುಗಳಾಗಿ ಹಾಕುವರು. ನಂತರ ಎರಡು ಬದಿಯಲ್ಲಿ 5 ಎಲೆ, 1 ಅಡಿಕೆ ಇಡುವರು. ಸೋಭಾನೆಯೊಂದಿಗೆ ಅದರ ಮೇಲೆ ಹಸೆ ಚಾಪೆ ಹಾಕಿ ಅದರ ಮೇಲೆ ಕುಳಿತುಕೊಳ್ಳುವರು. ಇವರಿಗೆ ಮನೆಯ ಮುತ್ತೈದೆಯರು ತಲೆಗೆ ಎಣ್ಣೆ ಕೊಟ್ಟು ಹಸೆ ಚಾಪೆಯನ್ನು ಬಿಟ್ಟು ಕೊಡುವಂತೆ ವಿನಂತಿಸಿಕೊಳ್ಳುವರು. ಅವರು ಹಸೆ ಚಾಪೆಯಿಂದ ಏಳುವ ಮೊದಲು ಒಗ್ಗಿ ಹಾಕಿದ ತೆಂಗಿನಕಾಯಿಯನ್ನು ಚಾಪೆಯಲ್ಲಿಟ್ಟು ಏಳುವರು. (ತುಪ್ಪದ ಕ್ರಮ ಮುಗಿದ ನಂತರ ಹಸೆ ಚಾಪೆ ಹಾಗೂ ಅಕ್ಕಿ, ಎಣ್ಣೆ, ಅರಿಶಿನಕ್ಕೆ ಸಂಬಂಧಪಟ್ಟ ವಸ್ತ್ರವನ್ನು ಮಡಿವಾಳರು ತೆಗೆದುಕೊಂಡು ಹೋಗುವರು) ಕೈಯಲ್ಲಿಟ್ಟ ಮದರಂಗಿ ಚಿತ್ತಾರವು ಒಣಗಿದ ನಂತರ ವಧು/ವರರು ಕುಳಿತಲ್ಲಿಗೆ, ಒಂದು ಪಾತ್ರೆಯನ್ನು ಇಟ್ಟು ಅದಕ್ಕೆ ಕೈ ತೊಳೆಯುವರು. (ನೀರನ್ನು ಫಲ ಬರುವ ಮರದ ಬುಡಕ್ಕೆ ಹೊಯ್ಯುವರು) ಊರುಗೌಡರು ಒಕ್ಕಣೆಯೊಂದಿಗೆ ವಧು-ವರರನ್ನು ಎಬ್ಬಿಸುವರು.ನಂತರ ವಧು-ವರರನ್ನು ಒಳಗೆ ಕರೆದುಕೊಂಡು ಹಸೆ ಚಾಪೆಯಲ್ಲಿ ಒಕ್ಕಣೆಯೊಂದಿಗೆ ಕುಳ್ಳಿರಿಸುವರು. ಊರುಗೌಡರು 5 ಎಲೆ 1 ಅಡಿಕೆ ಅವರ ಕೈಯಲ್ಲಿಡಬೇಕು. ಒಂದು ಮಣೆ ಒಂದು ಚೆಂಬು, ಒಂದು ಕಾಲುದೀಪ ಇರಬೇಕು. ಒಂದು ಹರಿವಾಣದಲ್ಲಿ ಅಕ್ಕಿ, 5 ವೀಳ್ಯದೆಲೆ, 1 ಅಡಿಕೆ. ಇನ್ನೊಂದು ಹರಿವಾಣದಲ್ಲಿ ಹಾಲು ತುಪ್ಪ ಮಿಶ್ರಿತ ಬಳೆಗಳನ್ನು ಹಾಕಿಡಬೇಕು). ಕಾಲುದೀಪ ಹಚ್ಚಿರಬೇಕು. 5 ಜನ ಮುತ್ತೈದೆಯರು ಅಕ್ಕಿ ದೇಸೆ ಮಾಡಿ ಹಾಲು ತುಪ್ಪ ಶಾಸ್ತ್ರ ಮಾಡಬೇಕು.

Saturday, August 23, 2025

ಗೌಡ ಸಂಸ್ಕೃತಿ- ಮದುವೆ (ಹಸೆ ಬರೆಯುವುದು)

 ಹಸೆ ಬರೆಯುವುದು : ಮದರಂಗಿ ಶಾಸ್ತ್ರಕ್ಕೆ ಕುಳ್ಳಿರಿಸಿದ ನಂತರ ಮನೆಯ ಯಜಮಾನ ತಂಬಿಗೆ ನೀರು ಕೊಟ್ಟು ಹಸೆ ಬರೆಯಲು ಕೇಳಿಕೊಳ್ಳುವರು ಊರುಗೌಡರ ಜವಾಬ್ದಾರಿಯ (ಸೋದರದವರು ಹಸೆ ಬರೆಯಬೇಕು.) ನಡುಮನೆಯ ಗೋಡೆಯಲ್ಲಿ ಪೂರ್ವಾಭಿಮುಖವಾಗಿ  ಬರೆಯುವರು. ಬಲಬದಿಗೆ ಸೂರ್ಯ, ಎಡಬದಿಗೆ ಚಂದ್ರನ ಚಿತ್ರ ಬರುವಂತೆ ಚಿತ್ರಿಸುವುದು. ಬಲ ಬದಿಯ ಚಿತ್ರದ ಕೆಳಗೆ ವರನ ಹೆಸರು ಎಡಬದಿಯ ಚಿತ್ರದ ಕೆಳಗೆ ವಧುವಿನ ಹೆಸರು ಬರೆಯಬೇಕು. ಹಸೆ ಬರೆದು ಮುಗಿದ ನಂತರ ಹಸೆ ಬರೆದವರಿಗೆ ಮನೆಯೊಡತಿ ಅವಲಕ್ಕಿ, ಬಾಳೆಹಣ್ಣು, ಬೆಲ್ಲ ಇವುಗಳಿಂದ ಯಥೋಪಚಾರವಾಗಿಉಪಚರಿಸಬೇಕು.

ಗೌಡ ಸಂಸ್ಕೃತಿ- ಮದುವೆ(ಮದರಂಗಿ ಕೊಯ್ಯುವುದು)

 ಮದರಂಗಿ ಕೊಯ್ಯುವುದು :


ಪರಿಕರಗಳು :

1) ತಂಬಿಗೆ ನೀರು.

2) ತುದಿ ಬಾಳೆಲೆ

3) ಹರಿವಾಣ

4) ವೀಳ್ಯದೆಲೆ 5.

5) ಅಡಿಕೆ 1

6) ಪಾವಲಿ 1

ವಧು/ವರರು ಸ್ನಾನಕ್ಕೆ ಹೋದ ನಂತರ ಮದರಂಗಿ ಕೊಯ್ಯಲು ಗಿಡದ ಹತ್ತಿರ ಹೋಗುವರು. 5 ಜನ ಮುತ್ತೈದೆಯರು ಒಂದು ತಂಬಿಗೆ ನೀರು, ಒಂದು ಕೊಡಿ ಬಾಳೆಲೆ, ಹರಿವಾಣದಲ್ಲಿ 5 ವೀಳ್ಯದೆಲೆ, ಒಂದು ಅಡಿಕೆ, ಒಂದು ಪಾವಲಿಯನ್ನಿಟ್ಟುಕೊಂಡು ಮದರಂಗಿ ಗಿಡಕ್ಕೆ ನೀರನ್ನು ಎರೆದು ಕನಿಷ್ಠ 3 ಸುತ್ತು ಬಂದು ನಂತರ ವೀಳ್ಯವನ್ನು ಬುಡದಲ್ಲಿರಿಸಿ, ಸರ್ವರೂ ದೇವರನ್ನು ಪ್ರಾರ್ಥಿಸಿಕೊಂಡು ಕೈಮುಗಿದು ಹರಿವಾಣವನ್ನು ಎತ್ತಿಕೊಂಡು ಶೋಭಾನೆ ಹೇಳುತ್ತಾ ಮದರಂಗಿ ಸೊಪ್ಪುಗಳನ್ನು ಕೊಯ್ದು ಹರಿವಾಣದಲ್ಲಿ ಇರಿಸಿದ ಬಾಳೆಲೆಗೆ ಹಾಕಿ ತರುವರು. ಮನೆಗೆ ಬಂದಮೇಲೆ ಮದರಂಗಿ ಸೊಪ್ಪುಗಳನ್ನು ಅರೆಯುವ ಕಲ್ಲಿನಲ್ಲಿ ಹಾಕಿ ಅರೆಯುವರು. ಇದೇ ಸಮಯದಲ್ಲಿ ವಧು/ವರನು ಬಿಳಿವಸ್ತ್ರ ಧರಿಸಿ ಶ್ವೇತ ವರ್ಣದ ಛತ್ರಿಯೊಂದಿಗೆ ಕಂಚಿಮೆ ಸಮೇತ ಬಾವಿಕಟ್ಟೆಗೆ ಹೋಗಿ ಗಂಗೆ ಪೂಜೆ ಮಾಡಬೇಕು. ಗಂಗೆಪೂಜೆ ಮಾಡಿ ಚಪ್ಪರದ ಮುಖದ್ವಾರಕ್ಕೆ ಬಂದಾಗ 5 ಜನ ಮುತ್ತೈದೆಯರು ಆರತಿಯೊಂದಿಗೆ ಕುರ್ದಿನೀರಿನಾರತಿಯೊಂದಿಗೆ ನೆನೆಬತ್ತಿಯಲ್ಲಿ ದೃಷ್ಟಿ ತೆಗೆಯುವುದು, ಶೋಭಾನೆ ಹೇಳಬೇಕು. ಕಿರಿಯರು ಕಾಲು ತೊಳೆಯುವ ಕ್ರಮ ಮಾಡಬೇಕು. ಆಗ ವಧು-ವರರು 5 ವೀಳ್ಯದೆಲೆ, 1 ಅಡಿಕೆಯೊಂದಿಗೆ ಹಣವನ್ನು ಕಾಣಿಕೆಯಾಗಿ ತಂಬಿಗೆಗೆ ಹಾಗೂ ಹರಿವಾಣಕ್ಕೆ ಪ್ರತ್ಯೇಕ ಪ್ರತ್ಯೇಕವಾಗಿ ಹಾಕಬೇಕು. ನಂತರ ದೃಷ್ಟಿ ತೆಗೆಯುವ ಕ್ರಮ ಮಾಡಬೇಕು. 4 ವೀಳ್ಯದೆಲೆ, 4 ಅಡಿಕೆ ಹೋಳನ್ನು ಊರುಗೌಡರು ವಧು-ವರರ ತಲೆಯ ಸುತ್ತ 3 ಸಲ ತಂದು 4 ದಿಕ್ಕುಗಳಿಗೆ ಎಸೆಯುವರು. ನಂತರ ತೆಂಗಿನ ಕಾಯಿಯನ್ನು ತಲೆ ಸುತ್ತ ತಂದು ಭೂಮಿಗೆ ಒಡೆಯುವರು. ನಂತರ ಮೇಲ್ಕಟ್ಟಿನಡಿಯಲ್ಲಿ ಮದರಂಗಿ ಇಡಲು ಊರುಗೌಡರು ಒಕ್ಕಣೆಯೊಂದಿಗೆ ಕುಳ್ಳಿರಿಸುವರು. ಈ ಮೊದಲೇ ಕಡೆದು ಇಟ್ಟ ಮದರಂಗಿಯನ್ನು ಮಣೆಯ ಮೇಲೆ ಹರಿವಾಣದಲ್ಲಿ ಕೊಡಿ ಬಾಳೆಲೆಯಲ್ಲಿ ಹಾಕಿಡಬೇಕು, ಮೊದಲು ಸೋದರದವರು ಕೈಗೆ 5 ಬೊಟ್ಟು ಇಡಬೇಕು. ನಂತರ ಅಕ್ಕ-ತಂಗಿಯರು, ಅತ್ತಿಗೆ-ನಾದಿನಿಯರು, ಮದರಂಗಿ ಇಡುತ್ತಾರೆ. ಬಲಕೈಗೆ ಸೂರ್ಯ, ಎಡಕೈಗೆ ಚಂದ್ರ ಚಿತ್ರವನ್ನು ಬಿಡಿಸುವರು. ಮದರಂಗಿ ಇಡುವಾಗ ಸೋಬಾನೆ ಹಾಡುವರು.