Thursday, May 9, 2024

ಗೌಡ ಸಂಸ್ಕೃತಿ- ಮದುವೆ

ಗೌಡ ಸಮುದಾಯದಲ್ಲಿ ಮದುವೆಯೆನ್ನುವುದು ಬಹುಮುಖ್ಯ ಘಟ್ಟ. ಕುಟುಂಬ/ವಂಶವಾಹಿನಿ ಬೆಳೆದು ಬರಲು 'ಮದುವೆ' ಎನ್ನುವ ನಿಯೋಜಿತ ವ್ಯವಸ್ಥೆ ನಡೆಯಲೇ ಬೇಕು ಎನ್ನುವ ಕಟ್ಟಳೆ ನಮ್ಮ ಹಿರಿಯರಿಂದ ನಿರ್ಮಿತವಾದುದಾಗಿದೆ. ಈ ಮದುವೆ ಎನ್ನುವ ವ್ಯವಸ್ಥೆ ಗೌಡರಲ್ಲಿ ಬಳಿ ನೋಡುವಲ್ಲಿಂದ ಆರಂಭವಾಗುತ್ತದೆ. ಮದುವೆಯಲ್ಲಿ ಹುಡುಗಿ ನೋಡುವ ಶಾಸ್ತ್ರ, ವೀಳ್ಯ ಶಾಸ್ತ್ರ, ಮದುವೆ ದಿನದ ಕ್ರಮಗಳಲ್ಲಿ ಹಾಗೆಯೇ ನಂತರದ ಕ್ರಮಗಳಲ್ಲಿ ಹಲವು ಕಟ್ಟಳೆಗಳಿರುತ್ತವೆ. ಗೌಡರಲ್ಲಿ 'ಬಳಿ' ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. 'ಬಳಿ' ಗೌಡರಲ್ಲಿ ಸ್ವಕುಟುಂಬಿಕ ನೆಲೆಯನ್ನು ಪ್ರತಿನಿಧಿಸುತ್ತದೆಯಾದ್ದರಿಂದ ಒಂದೇ 'ಬಳಿ'ಯಲ್ಲಿ 'ಮದುವೆ' ನಡೆಯಬಾರದೆನ್ನುವ ನಿಷೇಧವನ್ನು ಇಟ್ಟುಕೊಳ್ಳಲಾಗಿದೆ. ರಕ್ತ ಸಂಬಂಧಿಗಳಲ್ಲಿ ಮದುವೆ ನಡೆಯುವುದು ಯಾವ ದೃಷ್ಟಿಯಿಂದಲೂ ಯೋಗ್ಯವಲ್ಲ ಎನ್ನುವುದನ್ನು ನಮ್ಮ ಹಿರಿಯರು ಕಂಡುಕೊಂಡಿದ್ದಾರೆನ್ನುವುದನ್ನು ಇದು ಸೂಚಿಸುತ್ತದೆ. ಹೀಗಿದ್ದೂ ತಂದೆಯ ಸಹೋದರಿ ಅಥವಾ ತಾಯಿಯ ಸಹೋದರರ ಕಡೆ 'ಬಳಿ'ಗಳಲ್ಲಿ ಮದುವೆ ನಡೆಯಬಹುದು. ಗೌಡರಲ್ಲಿ ಇರುವ ವಿಭಿನ್ನ 'ಬಳಿ'ಗಳಲ್ಲಿ 'ಮದುವೆ' ನಡೆಯುವುದು ಸಂಪ್ರದಾಯ. ಜಾತಿ ಪದ್ಧತಿ ಪ್ರಕಾರ ಅಲ್ಲದೇ ವೈದಿಕ ಕ್ರಮಗಳಲ್ಲಿ ಕೂಡಾ ಮದುವೆ ನಡೆಸಬಹುದು.

ಹುಡುಗಿ ನೋಡುವ ಕ್ರಮ : ಹುಡುಗ/ಹುಡುಗಿ ಪ್ರಾಪ್ತ ವಯಸ್ಸಿಗೆ ಬಂದಾಗ ಹಿರಿಯರು ಅವರಿಗೆ ಮದುವೆ ಮಾಡಲು ಆಲೋಚಿಸುತ್ತಾರೆ. ನೆಂಟರಿಷ್ಟರಲ್ಲಿ ಗಂಡು-ಹೆಣ್ಣನ್ನು ಹುಡುಕಲು ಹಿರಿಯರು ಸೂಚಿಸುತ್ತಾರೆ. ಶಕ್ತ ಮನೆತನದ ಸೂಕ್ತ ಬಳಿಯ ಕನ್ಯ ಗೊತ್ತಾದ ನಂತರ ಹುಡುಗಿ ನೋಡುವ ಶಾಸ್ತ್ರಕ್ಕೆ ದಿನ ನಿಗದಿ ಮಾಡುತ್ತಾರೆ.

ಹಿಂದಿನ ಕಾಲದಲ್ಲಿ ಹುಡುಗಿ ನೋಡಲು ಹುಡುಗ ಹೋಗುವ ಕ್ರಮವಿರಲಿಲ್ಲ. ಇಂದು ಹುಡುಗನೇ ನೋಡಿದ ಹುಡುಗಿಯನ್ನು ನೋಡಲು ಹಿರಿಯರು ಹೋಗುವುದು ಬಂದುಬಿಟ್ಟಿದೆ. ಮೊದಲಿನಿಂದಲೂ ಹುಡುಗ ಹುಡುಗಿಯರನ್ನು ನಿಶ್ಚಯಿಸುವಲ್ಲಿ ಉಭಯ ಕಡೆಯ ಪರಿಚಯಸ್ಥರೊಬ್ಬರು ಮಧ್ಯವರ್ತಿಯಾಗಿ ಸಹಕರಿಸುತ್ತಿದ್ದರು.

ಹುಡುಗಿ ನೋಡುವ ಶಾಸ್ತ್ರ ನಿಗದಿಯಾದ ಶುಭದಿನ ಹೇಳಿಕೆಯಾದ ಪ್ರಕಾರ ಕುಟುಂಬದ ಮತ್ತು ಬಂಧುಗಳಲ್ಲಿ 5ರಿಂದ 7ಜನ ಹಿರಿಯರು ಪೂರ್ವಾಹ್ನದ ಹೊತ್ತಿಗೆ ಹುಡುಗಿ ಮನೆ ತಲುಪಲೇಬೇಕೆನ್ನುವ ಹಿನ್ನೆಲೆಯಲ್ಲಿ ತಲುಪುತ್ತಾರೆ. (ಅಪರಾಹ್ನ ಹುಡುಗಿ ನೋಡುವ ಶಾಸ್ತ್ರ ಮಾಡಬಾರದೆನ್ನುವ ನಂಬಿಕೆ ಇದೆ.) ಹುಡುಗಿ ನೋಡುವ ಶಾಸ್ತ್ರದ ದಿನ ಹುಡುಗಿ ಮನೆಯಲ್ಲೂ ಕುಟುಂಬದ ಹಿರಿಯ ಪ್ರಮುಖರು ಸೇರುತ್ತಾರೆ. ಹುಡುಗನ ಕಡೆಯವರು ಹುಡುಗಿ ಮನೆಗೆ ಬಂದಾಗ ಕೈಕಾಲು ತೊಳೆಯಲು ನೀರು ಕೊಡುವುದು ಪದ್ಧತಿ. ಬಂದ ನೆಂಟರನ್ನು ಮನೆ ಚಾವಡಿಯಲ್ಲಿ ಕುಳ್ಳಿರಿಸಿ ಬೆಲ್ಲ-ನೀರು ಕೊಟ್ಟು ಸತ್ಕರಿಸಬೇಕು. ಮುತ್ತೈದೆಯರಿಗೆ ನೆತ್ತಿಗೆಣ್ಣೆ, ಹಣೆಗೆ ಕುಂಕುಮ, ಮುಡಿಗೆ ಹೂವು ಕೊಡಬೇಕು. ಬಂದ ಹಿರಿಯರೊಬ್ಬರಿಗೆ ಹರಿವಾಣದಲ್ಲಿ ಕವಳೆ ವೀಳ್ಯದೊಂದಿಗೆ ಅಡಿಕೆಗಳನ್ನಿಟ್ಟು ಗೌರವಿಸುವುದು ನಡೆದು ಬಂದ ಸಂಗತಿ. ಉಪಾಹಾರವನ್ನಿತ್ತು ಬಂದ ಹುಡುಗನ ಕಡೆಯವರಿಗೆ ಸತ್ಕರಿಸುವುದು

ಪರಸ್ಪರ ಕುಶಲೋಪರಿ ಬಳಿಕ ಹುಡುಗಿ ನೋಡುವ ಕ್ರಮ ಜರಗುತ್ತದೆ. ಹುಡುಗನ ಕಡೆಯಿಂದ ಬಂದ ಸ್ತ್ರೀಯರು ಮನೆಯೊಳಗೆ ಹೋಗಿ ಹುಡುಗಿಯನ್ನು ನೋಡುತ್ತಾರೆ. ಹುಡುಗಿಯನ್ನು ಮಾತಾಡಿಸುತ್ತಾರೆ. ಇದರ ಹೊರತಾಗಿಯೂ ಬಂದ ನೆಂಟರಿಗೆ ಹುಡುಗಿಯೇ ಬಾಯಾರಿಕೆ ಕೊಡುವ ನೆಪದಲ್ಲಿ ಹುಡುಗಿಯನ್ನು ನೋಡುವ ಶಾಸ್ತ್ರ ಮಾಡುವುದುಂಟು. ಪುರುಷರು ಹುಡುಗಿಯನ್ನು ನೋಡಬೇಕೆನ್ನುವ ಹಿನ್ನೆಲೆಯಲ್ಲಿ ಜೊತೆಗೆ ಹುಡುಗಿಯಲ್ಲಿ ಏನಾದರೂ ಊನ ಇದೆಯಾ ಎಂದು ಪರೀಕ್ಷಿಸುವ ದ್ರಷ್ಟಿಯಲ್ಲಿ ಹುಡುಗಿಯ ಕೈಯಲ್ಲಿ ಕೊಡಪಾನ ಕೊಟ್ಟು ನೀರು ತರ ಹೇಳುವುದೂ ಇದೆ. ಹಾಗೆಯೇ ಮನೆ ನೋಡುವೆ ನೆಪದಲ್ಲಿ ಒಳ ಹೋಗಿ ಹುಡುಗಿಯನ್ನು ಮಾತಾಡಿಸುತ್ತಾರೆ.

ಹುಡುಗಿಯ ರೂಪ ಗುಣ ನಡತೆ ಒಪ್ಪಿಗೆಯಾದರೆ, ಸತ್ಕಾರ ಸ್ವೀಕರಿಸಿ ಹೊರಟು ಬರುವ ಹುಡುಗನ ಕಡೆಯವರು ಇನ್ನು ಜಾತಕ ಕೂಡಿ ಬಂದರೆ ಹೇಳಿ ಕಳುಹಿಸುತ್ತೇವೆಂದು ಹೇಳುವುದು ವಾಡಿಕೆ ಅಥವಾ ಉಭಯಸ್ಥರು ಪಕ್ಕದ ಜೋಯಿಸರಲ್ಲಿ ಹೋಗಿ ಹುಡುಗ- ಹುಡುಗಿಯ ಜಾತಕ ತೋರಿಸುವುದುಂಟು. ಜಾತಕ ಕೂಡಿ ಬಾರದೇ ಹೋದರೆ ನೆಂಟಸ್ಥಿಗೆಮುಂದುವರಿಯುವುದಿಲ್ಲ. ಹುಡುಗಿ ನೋಡುವ ಕ್ರಮದಲ್ಲಿ ಜಾತಕ ಇಲ್ಲದಿದ್ದರೆ ಇತ್ತಂಡಗಳು ದೇವಸ್ಥಾನದಲ್ಲಿ ಅರ್ಚಕರ ಮೂಲಕ ತುಂಬೆ ಹೂವಿನಲ್ಲಿ ಪುಷ್ಪ ಪರೀಕ್ಷೆ ನಡೆಸುತ್ತಾರೆ. ಹುಡುಗನ ಕಡೆಯವರಿಗೆ ಸಂಬಂಧ ಕೂಡಿ ಬಂದರೆ ಹುಡುಗಿ ಮನೆಯವರನ್ನು ಆಹ್ವಾನಿಸುತ್ತಾರೆ. ನಿಗದಿತ ದಿನ ಹುಡುಗನ ಮನೆಗೆ ಬರುವ ಹುಡುಗಿ ಕಡೆಯವರಿಗೆ ಸಮ್ಮಾನದೂಟ ಮಾಡಿಸಿ ಕಳುಹಿಸಿ ಕೊಡಲಾಗುತ್ತದೆ. ವೀಳ್ಯಶಾಸ್ತ್ರ ನಡೆಸುವ ದಿನವನ್ನು ಪರಸ್ಪರರು ಸಂವಾದಿಸಿ ಈ ದಿನ ನಿಗದಿಪಡಿಸುತ್ತಾರೆ.

ಸೋದರ ಮಾತನಾಡಿಸುವುದು:
ಗೊತ್ತುಪಡಿಸಿದ ದಿನದಂದು ಹುಡುಗಿಯ ಕಡೆಯಿಂದ ಅವಳ ತಂದೆ-ತಾಯಿಯರು ಮತ್ತು ಹುಡುಗನ ಕಡೆಯಿಂದ ಕನಿಷ್ಟ ಒಬ್ಬರು ಹುಡುಗಿ ಸಮೇತ ಸೋದರ ಮಾವನಲ್ಲಿಗೆ ಹೋಗಿ ನಾವು ಒಂದು ಶುಭಕಾರವನ್ನು ತೆಗೆಯುವವರಿದ್ದೇವೆ. ನಿಮ್ಮಗಳ ಒಪ್ಪಿಗೆ ಕೇಳಲು ಬಂದಿದ್ದೇವೆ ಅಂತ ಹೇಳುವರು. (ಪೂರ್ವ ಪದ್ಧತಿ ಪ್ರಕಾರ ಹುಡುಗಿ ಮನೆಯಿಂದ ಒಂದು ಸೇರು ಅಕ್ಕಿ, ಒಂದು ತೆಂಗಿನಕಾಯಿ, ಒಂದು ಹೇಂಟೆ ಲಾಕಿ, ಮದ್ಯದ ಬಾಟಲಿ, ಒಂದು ಕುಡ್ತ ತೆಂಗಿನೆಣ್ಣೆ, ಸೂಡಿ ವೀಳ್ಯದೆಲೆ, ಐದು ಅಡಿಕೆಯೊಂದಿಗೆ ಸೋದರ ಮಾವನಲ್ಲಿಗೆ ಹೋಗುತ್ತಿದ್ದರು.) ತೆಗೆದುಕೊಂಡು ಹೋದ ಕೋಳಿಯನ್ನು ಅಡುಗೆ ಮಾಡಿ ರಾತ್ರಿ ಗುರು ಕಾರಣರಿಗೆ ಬಡಿಸಿ ಹಿರಿಯರ ಆಶೀರ್ವಾದ ಪಡೆಯುವುದು ರೂಢಿ. (ಪೂರ್ವ ಪದ್ಧತಿ ಪ್ರಕಾರ ಎಲ್ಲಾ ವಸ್ತುಗಳನ್ನು ಕೊಂಡು ಹೋಗುವುದು ಮಾಡದಿದ್ದರೆ ಈಗಿನ ಕಾಲ ಘಟ್ಟಕ್ಕೆ ಅನುಕೂಲವಾಗುವಂತೆ ಸೋದರ ಮಾವನಲ್ಲಿಯೇ ಸಮ್ಮಾನದ ಊಟ ಮಾಡಿ ಕಳುಹಿಸುವುದು ಮಾಡುವುದು.) ಹೀಗೆ ಸೋದರ ಮಾವನ ಒಪ್ಪಿಗೆ ಪಡೆದು ಮಾರನೇ ದಿನ ಬೆಳಿಗ್ಗೆ ವೀಳ್ಯಶಾಸ್ತ್ರಕ್ಕೆ ನಿಗದಿಪಡಿಸಿದ ದಿನದಂದು ಬರಬೇಕೆಂದು ಆಹ್ವಾನಿಸಿ ಹಿಂತಿರುಗುವುದು

ವೀಳ್ಯಶಾಸ್ತ್ರ (ವಧುವಿನ ಮನೆಯಲ್ಲಿ)

ಪರಿಕರಗಳು : ಕಾಲುದೀಪ,ಎಳ್ಳೆಣ್ಣೆ, ನೆಣೆಬತ್ತಿ, ಅಗರಬತ್ತಿ. ಚಾಪೆ 4, ಮಣೆ 2, ತಂಬಿಗೆ ನೀರು, ಹರಿವಾಣ 1, ವೀಳ್ಯದೆಲೆ 5, ಅಡಿಕೆ 1, ಹಿಡಿ ಬೆಳ್ಳಿಗೆ ಅಕ್ಕಿ, ತೇದ ಗಂಧ ಹಾಗೂ ತುಂಬೆ ಹೂ, ತುದಿ ಬಾಳೆಲ, ಉದ್ದಕ್ಕೆ ಒಡೆದ ಸ್ವಲ್ಪ ಅಡಿಕೆಹೋಳು

ಮದುವೆಗೆ ಸುಮಾರು ಒಂದು ವಾರ ಅಥವಾ ಹದಿನೈದು ದಿನಗಳ ಒಳಗೆ ವೀಳ್ಯಶಾಸ್ತ್ರವನ್ನು ಊರು ಗೌಡರ ಗಮನಕ್ಕೆ ತಂದು ನಿಶ್ಚಯ ಮಾಡಿಕೊಳ್ಳಬೇಕು. (ಅನಿವಾರ್ಯ ಕಾರಣಗಳಲ್ಲಿ ಮದರಂಗಿ ಶಾಸ್ತ್ರದ ದಿನ ವೀಳ್ಯಶಾಸ್ತ್ರ ಇಟ್ಟುಕೊಳ್ಳಬಹುದು. ವೀಳ್ಯಶಾಸ್ತ್ರವನ್ನು ಬೆಳಗಿನ ಸಮಯ ಮಾಡುವುದು ಸೂಕ್ತ)

ಉಭಯಸ್ತರು ನಿಶ್ಚಯಿಸಿದ ದಿನ ವಧುವಿನ ಮನೆಯಲ್ಲಿ ವೀಳ್ಯ ಶಾಸ್ತ್ರಕ್ಕೆ ಏರ್ಪಾಡು ಮಾಡಬೇಕು. ವಧುವಿನ ಮನೆಯವರು ಬಂಧು-ಬಾಂಧವರಿಗೆ, ಊರುಗೌಡರಿಗೆ 1 ಸೂಡಿ ವೀಳ್ಯದೆಲೆ, 5 ಅಡಿಕೆ ಹರಿವಾಣದಲ್ಲಿಟ್ಟು ವೀಳ್ಯಶಾಸ್ತ್ರಕ್ಕೆ ಕೇಳಿಕೊಳ್ಳಬೇಕು. ಅದರಂತೆ ವರನ ಕಡೆಯಿಂದಲೂ ಅವರ ಬಂಧು-ಬಾಂಧವರಿಗೆ, ಊರು ಗೌಡರಿಗೆ ವೀಳ್ಯ ಕೊಟ್ಟು ವೀಳ್ಯ ಶಾಸ್ತ್ರಕ್ಕೆ ಬರುವಂತೆ ಹೇಳಬೇಕು. (ವೀಳ್ಯಶಾಸ್ತ್ರಕ್ಕೆ ಹುಡುಗ ಹೋಗುವ ಕ್ರಮವಿರಲಿಲ್ಲ)

ವೀಳ್ಯಶಾಸ್ತ್ರದ ದಿನ ಸೋದರಮಾವ, ಊರು ಗೌಡರು, ಕುಟುಂಬಸ್ಥರು, ನೆಂಟರು ಇವರೆಲ್ಲ ಸಮಯಕ್ಕೆ ಮುಂಚಿತವಾಗಿ ಬಂದು ವರನ ಮನೆಯಲ್ಲಿ ಸೇರುತ್ತಾರೆ. ವೀಳ್ಯ ಕಟ್ಟಲು ಒಂದು ಕೈ ಚೀಲದಲ್ಲಿ ವೀಳ್ಯದೆಲೆ ಅದಕ್ಕೆ ನೀಟವಾಗಿ ಒಡೆದ ಅಡಕೆ ಹೋಳು, 2 ಹರಿವಾಣಗಳಿರಬೇಕು. ಹೊರಡುವ ಮೊದಲು ಮನೆಯ ಹಿರಿಯರು ದೇವರಿಗೆ ದೀಪ ಹಚ್ಚಿ ಕೈ ಮುಗಿದು ಮನೆಯಿಂದ ಹೊರಡಬೇಕು.

ವಧುವಿನ ಮನೆಯಲ್ಲಿ ಆಗಮಿಸಿದ ನೆಂಟರಿಗೆ ಕೈಕಾಲು ಮುಖ ತೊಳೆಯಲು ನೀರುಕೊಟ್ಟು ಸತ್ಕರಿಸುತ್ತಾರೆ. ನಂತರ ವೀಳ್ಯ ಶಾಸ್ತ್ರಕ್ಕೆ ತಯಾರಿ ಮಾಡುತ್ತಾರೆ. ವಧುವಿನ ಕಡೆಯ ಊರುಗೌಡರ ಉಸ್ತುವಾರಿಯಲ್ಲಿ ಚೌಕಿ ಹಾಸಿ (ಚೌಕಾಕಾರವಾಗಿ ನಾಲ್ಕು ದಿಕ್ಕಿನಿಂದ ನಾಲ್ಕು ಚಾಪೆ ಹಾಸುವುದು) ಮಧ್ಯೆ 2 ಮಣೆ, ತಂಬಿಗೆ ನೀರು, 1 ಹರಿವಾಣದಲ್ಲಿ 5 ವೀಳ್ಯದೆಲೆ 1 ಅಡಿಕೆ ಒಂದು ಹಿಡಿ ಬೆಳ್ತಿಗೆ ಅಕ್ಕಿ ಹಾಕಿಡಬೇಕು. ಕಾಲುದೀಪವನ್ನು ಪೂರ್ವಾಭಿಮುಖವಾಗಿ ಒಂದು ಹಿಡಿ ಬೆಳಗಿಸಬೇಕು. ತೇದ ಗಂಧ ಮತ್ತು ತುಂಬೆ ಹೂ ಕೊಡಿ (ತುದಿ) ಬಾಳೆ ಎಲೆಯಲ್ಲಿಡಬೇಕು. ಇದಾದ ನಂತರ ವಧುವಿನ ಮನೆಯ ಹಿರಿಯರು ಮತ್ತು ಊರುಗೌಡರು ತಂಬಿಗೆ ನೀರು ಹಿಡಿದು ವರನ ಕಡೆಯವರನ್ನು ಚೌಕಿಗೆ ಕುಳಿತುಕೊಳ್ಳಲು ಆಹ್ವಾನಿಸಿ ವಧುವಿನ ಕಡೆಯ ಊರು ಗೌಡರ ಸಮೇತ ಪೂರ್ವಾಭಿಮುಖವಾಗಿ ಕುಳಿತುಕೊಳ್ಳುವರು. ವರನ ಕಡೆಯ ಊರುಗೌಡರು ಚೌಕಿ ಬಳಿ ಬಂದು ಸೀಮೆ, ಗ್ರಾಮ ಮತ್ತು ಊರು, ಮನೆ ಹಾಗೂ ಮನೆ ಯಜಮಾನನ ಹೆಸರು ಹೇಳಿ ಇತ್ತಂಡದವರ ಒಪ್ಪಿಗೆ ಮೇರೆಗೆ ನಾವು ವೀಳ್ಯಶಾಸ್ತ್ರಕ್ಕಾಗಿ ಬಂದಿರುತ್ತೇವೆ, ಚೌಕಿಗೆ ಬರಲು ಮತ್ತು ಕುಳಿತುಕೊಳ್ಳಲು ಅನುಮತಿ ಕೊಡಿ ಎಂದು ಕೇಳುತ್ತಾರೆ. ಒಪ್ಪಿಗೆ ಪಡೆದು ತಂಬಿಗೆ ನೀರು ಮುಟ್ಟಿ ದೀಪಕ್ಕೆ ನಮಸ್ಕರಿಸಿ ಪಶ್ಚಿಮ ಭಾಗಕ್ಕೆ ಮುಖ ಮಾಡಿ ಕುಳಿತುಕೊಳ್ಳುವರು. ಉಳಿದವರು ಅವರವರ ಭಾಗಕ್ಕೆ ತಕ್ಕಂತೆ ಚೌಕಿ ಸುತ್ತ ಕುಳಿತುಕೊಳ್ಳುವರು. (ಉಭಯ ಕಡೆಗಳಿಂದ ಕನಿಷ್ಠ 5 ಜನರಿರಬೇಕು; ಮತ್ತು ಎಲ್ಲರೂ ತಲೆಗೆ ರುಮಾಲು ಸುತ್ತಬೇಕು. ತೇದ ಗಂಧವನ್ನು ಹಾಕಿಕೊಳ್ಳಬೇಕು).

1) ಕುಟುಂಬದ ಯಜಮಾನ, 2) ಸೋದರ ಮಾವ, 3) ಊರುಗೌಡರು 4) ಒತ್ತುಗೌಡರು ಇಲ್ಲದ ಪಕ್ಷದಲ್ಲಿ ಯಾರಾದರು. 5) ಊರಿನವರು. 

ಊರು ಗೌಡರ ಉಡುಗೆ ತೊಡುಗೆಗಳು :

ಬಿಳಿ ಶರ್ಟ್, ಬಿಳಿ ಮುಂಡು, ಬಿಳಿ ಶಾಲು ಧರಿಸಿರಬೇಕು. ಕಾರ್ಯಕ್ರಮ ನಡೆಸಿಕೊಡುವಾಗ ಮುಂಡಾಸು ಕಟ್ಟಿರಲೇಬೇಕು. (ಪ್ರತೀ ಬೈಲಿಗೊಬ್ಬ ಊರುಗೌಡ, ಒತ್ತು ಗೌಡ ಇರುತ್ತಾರೆ. ಊರು ಗೌಡರ ನಂತರ ಅವರ ಮಕ್ಕಳ ಕಾಲಕ್ಕಾಗುವಾಗ ಊರುಗೌಡತ್ತಿಗೆ ಮಾಡಲು ಸಾಧ್ಯವಾಗದ ಪಕ್ಷದಲ್ಲಿ ಸಂಪ್ರದಾಯ ರೀತಿ ರಿವಾಜುಗಳ ಬಗ್ಗೆ ತಿಳಿದವರನ್ನು ಆಯಾ ಊರಿನ ಹಿರಿಯರು ಚರ್ಚಿಸಿ ನೇಮಕ ಮಾಡಬಹುದು.)

ಮದುವೆ ಕಾರ್ಯಕ್ಕೆ ಸಂಬಂದಪಟ್ಟಂತೆ ಊರು ಗೌಡರಿಗೆ ಅವರ ಮನೆಗೆ ಹೋಗಿ ! ಸೂಡಿ ವೀಳ್ಯದೆಲೆ, 5 ಅಡಿಕೆ, ಅಡಿಕೆಹೋಳು ಹರಿವಾಣದಲ್ಲಿ ಇಟ್ಟು ಮದುವೆ ಕಾರ್ಯವನ್ನುಬಂದು ಸುಧಾರಿಸಿಕೊಡಲು ಕೇಳಿಕೊಳ್ಳಬೇಕು.

ವೀಳ್ಯ ಕೊಡುವ ಕ್ರಮ :
ಹರಿವಾಣದಲ್ಲಿ ವೀಳ್ಯ ಕೊಡುವಾಗ ವೀಳ್ಯದೆಲೆಯ ತುದಿ ಹಾಗು ಅಡಿಕೆ ತೊಟ್ಟು ತೆಗೆದುಕೊಳ್ಳುವ ಭಾಗಕ್ಕಿರಬೇಕು. ತೆಗೆದುಕೊಂಡ ಮೇಲೆ ಅದರಲ್ಲಿ ವೀಳ್ಯದೆಲೆ ಹಾಗೂ ಅಡಿಕೆ ಹೋಳು ಶಾಸ್ತ್ರಕ್ಕೆ ತೆಗೆದುಕೊಂಡು ಮತ್ತೆ ಅವರು ಕೂಡಾ ತಿರುಗಿಸಿ ಕೊಡಬೇಕು

ವೀಳ್ಯ ಶಾಸ್ತ್ರ ದಿನದ ವೀಳ್ಯಗಳು

1. ಚೌಕಿ ವೀಳ್ಯ

2. ದೇವರ ವೀಳ್ಯ

3. ಗುರು ವೀಳ್ಯ

4. ಸಲಾವಳಿ ವೀಳ್ಯ

5. ಮಾತು ಕರಾರು ವೀಳ್ಯ

6. ವೀಳ್ಯ ಶಾಸ್ತ್ರದ ವೀಳ್ಯ

7. ಲಗ್ನ ವೀಳ್ಯ

8. ತಾಯಿ ವೀಳ್ಯ

9 ತಂದೆ ವೀಳ್ಯ
ಪರಿಚಯಾತ್ಮಾಕ ವೀಳ್ಯ:

ಚೌಕಿ ವೀಳ್ಯ

ಚೌಕಿಯಲ್ಲಿ ಕುಳಿತವರೆಲ್ಲ ಗಂಧವನ್ನು ಹಚ್ಚಿಕೊಳ್ಳಬೇಕು. ವರನ ಕಡೆಯ ಊರುಗೌಡರು. ಒಂದು ಹರಿವಾಣದಲ್ಲಿ ಸೂಡಿ ಎಲೆ, 5 ಅಡಿಕೆ ಇಟ್ಟು ವಧುವಿನ ಕಡೆಯ ಊರುಗೌಡರಿಗೆ ಅವರು ಬಂದ ಜಿಲ್ಲೆ, ತಾಲೂಕು, ನಾಡು, ಗ್ರಾಮ ಮತ್ತು ಇಂತವರ ಅನುಮತಿ ಮೇರೆಗೆ ಹುಡುಗನ ಮನೆಯ ಯಜಮಾನನ ಹೆಸರು ಹೇಳುವುದು.. ..ಹುಡುಗಿಯ ಕಡೆಯ ಪೂರ್ಣ ವಿವರ ಮತ್ತು ಯಜಮಾನನ ಹೆಸರು ಹೇಳಿ ಅವರ ಅನುಮತಿ ಮೇರೆಗೆ ವೀಳ್ಯಶಾಸ್ತ್ರ ನಡೆಸುವುದಕ್ಕೆ ಬಂದ ನೆಂಟರು ನಾವು. ನಮ್ಮ ಸಂಸ್ಕೃತಿ, ಪದ್ಧತಿ, ಕಟ್ಟಳೆಗಳಿಗೆ ಸರಿಯಾಗಿ ನಮ್ಮ ಇಂದಿನ ವೀಳ್ಯಶಾಸ್ತ್ರವನ್ನು ಮುಂದಿನ ದಿಬ್ಬಣ, ಮದುವೆ ಕಾಠ್ಯಕ್ರಮವನ್ನೆಲ್ಲಾ ಮನೆಯವರ ಒಪ್ಪಿಗೆ ಮೇರೆಗೆ ಸುಧಾರಿಸಿ ಕೊಡಬೇಕು ಅಂತ ಕೇಳಿಕೊಳ್ಳುತ್ತಾರೆ. ಊರು ಗೌಡರು ಮನೆಯ ಯಜಮಾನರ ಒಪ್ಪಿಗೆ ಪಡೆದು ಕಾರ್ಯಕ್ರಮ ಮುಂದುವರಿಸುತ್ತಾರೆ. ಕುಟುಂಬದ ಸರ್ವರಲ್ಲಿಯೂ, ಸೋದರದವರಲ್ಲಿಯೂ ಒಪ್ಪಿಗೆ ಇದೆಯೋ ಎಂದು ಕೇಳುವರು. ಎಲ್ಲರೂ ಒಪ್ಪಿಗೆ ಸೂಚಿಸುವರು.

1. ಚೌಕಿ ವೀಳ್ಯ ಜೋಡಿಸಿಡುವ ಕ್ರಮ : ವಧುವಿನ ಕಡೆಯವರು ಮಣೆಯ ಮೇಲೆ ಇರಿಸಿದ ಹರಿವಾಣದಲ್ಲಿ-ವರನ ಕಡೆಯವರು ಹರಿವಾಣದ ಸುತ್ತಲೂ ವೀಳ್ಯದ ಎಲೆಯ ಕವಳೆಯ ತುದಿ ಹೊರಗೆ ಬರುವಂತೆ ಇಡಬೇಕು. (ಸಾಮಾನ್ಯವಾಗಿ 5 ಕವಳೆ ಅಥವಾ ಕವಳೆ ವಿಷಮ ಸಂಖ್ಯೆಯಲ್ಲಿರಬೇಕು) ಮಧ್ಯದಲ್ಲಿ ಕವಳೆ ಸಂಖ್ಯೆಯಷ್ಟೆ ಅಡಿಕೆಯಿರಬೇಕು ಹಾಗೂ ಅಡಿಕೆ ಹೋಳು ಹಾಗೂ ಸ್ವಲ್ಪ ಬೆಳ್ತಿಗೆ ಅಕ್ಕಿ ಇರಬೇಕು.

ಚೌಕಿ ವೀಳ್ಯ ಕೊಡುವ ಕ್ರಮ : ವರನ ಕಡೆಯ ಗುರುಮನೆ, ಕಟ್ಟೆಮನೆ, ಸೀಮೆಮನೆ, ಮಾಗಣೆಮನೆ ಊರುಗೌಡರು ಎದ್ದು ನಿಂತು ಗೋತ್ರದ ಹೆಸರಿನ ವರನಿಂದ ಸ್ವಜಾತಿ ಬಾಂಧವರ ಸಮ್ಮುಖದಲ್ಲಿ ಚೌಕಿ ವೀಳ್ಯ ಎತ್ತಿ ಕೊಡುತ್ತೇವೆ ಎಂದು ಹೇಳಿ ವಧುವಿನ ಕಡೆಯ ಊರುಗೌಡರಿಗೆ ಕೊಟ್ಟಾಗ ಅವರು ಕೂಡ ಹಾಗೇನೆ ಎದ್ದು ನಿಂತು ಒಕ್ಕಣೆಯೊಂದಿಗೆ ಸ್ವೀಕಾರ ಮಾಡುತ್ತಾರೆ. (ಪ್ರತಿಯೊಬ್ಬರು ವೀಳ್ಯ ಬದಲಾಯಿಸಿಕೊಳ್ಳುವಾಗ ಇತ್ತಂಡದವರು ತಂಬಿಗೆಯಲ್ಲಿರುವ ನೀರನ್ನು ಮುಟ್ಟಿಕೊಳ್ಳಬೇಕು) ನಂತರ ಇದನ್ನು ಬಳಿಯಲ್ಲಿ ಕುಳಿತವರಿಗೆ ಪ್ರದಕ್ಷಿಣೆ ಬರುವಂತೆ ಕೊಡಬೇಕು. ಎಲ್ಲರೂ ಗೌರವಸೂಚಕವಾಗಿ ನಮಸ್ಕರಿಸಿ ವಧುವಿನ ಕಡೆಯ ಊರುಗೌಡರು ಮಣೆಯ ಮೇಲಿಡುತ್ತಾರೆ.

2) ದೇವರ ವೀಳ್ಯ : 5 ಕವಳೆ ವೀಳ್ಯದೆಲೆ 5 ಅಡಿಕೆ, ಸ್ವಲ್ಪ ಅಡಿಕೆ ಹೋಳು ಹಾಕಿ ವರನ ಕಡೆಯ ಊರುಗೌಡರು, ನೀರಿನ ತಂಬಿಗೆ ಮುಟ್ಟಿ ಎದ್ದು ನಿಂತು ವೀಳ್ಯದ ತಟ್ಟೆಯನ್ನು ಕೈಯಲ್ಲಿ ಹಿಡಿದು ಹತ್ತು ಕುಟುಂಬ ಹದಿನೆಂಟು ಗೋತ್ರದ ಬಂಧು-ಬಾಂಧವರು, ನೆಂಟರಿಷ್ಟರು, ಗುರುಮನೆ, ಕಟ್ಟೆಮನೆ, ಸೀಮೆಮನೆ, ಮಾಗಣೆಮನೆ.........ಗೋತ್ರದ..............ಹೆಸರಿನ  ವರನಿಂದ ಸ್ವಜಾತಿ ಬಾಂಧವರ ಸಮ್ಮುಖದಲ್ಲಿ .......ಗೋತ್ರದ ........ವಧುವಿಗೆ ದೇವರ ವೀಳ್ಯವನ್ನು ಎತ್ತಿ ಕೊಡುತ್ತೇವೆ ಎಂದು ಹೆಣ್ಣಿನ ಕಡೆಯ ಊರುಗೌಡರಿಗೆ ಒಪ್ಪಿಸುವರು. ಅದೇ ರೀತಿಯ ಒಕ್ಕಣೆಯೊಂದಿಗೆ ವಧುವಿನ ಕಡೆಯ ಊರುಗೌಡರು ಸ್ವೀಕರಿಸುವರು (3 ಸಲ ಒಕ್ಕಣೆ ಹೇಳಬೇಕು). ಆಗ ಸಭೆಯಲ್ಲಿದ್ದವರು ಒಪ್ಪಿಗೆಯಾಗಿ ಒಳ್ಳೆ ಕಾರ್ಯಂತ ಗಟ್ಟಿಯಾಗಿ ಹೇಳಬೇಕು.

3) ಗುರು ವೀಳ್ಯ: 7 ಕವಳೆ ವೀಳ್ಯದೆಲೆ, 7 ಅಡಿಕೆ, ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ವೀಳ್ಯ ಬದಲಾಯಿಸಿಕೊಳ್ಳಬೇಕು. (ಒಕ್ಕಣೆಯೊಂದಿಗೆ ಹೇಳಿ ವೀಳ್ಯ ಬದಲಾಯಿಸಿಕೊಳ್ಳಬೇಕು).

4) ಸಲಾವಳಿ ವೀಳ್ಯ : 9 ಕವಳೆ ವೀಳ್ಯದೆಲೆ, 9 ಅಡಿಕೆ ಹಾಗೂ ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ಒಕ್ಕಣೆಯೊಂದಿಗೆ ವೀಳ್ಯ ಬದಲಾಯಿಸಿಕೊಳ್ಳಬೇಕು. (ಸಲಾವಳಿ ಎಂದರೆ ವಧು ವರರ ಜಾತಕಾದಿಗಳು, ಗೋತ್ರಗಳು, ನಕ್ಷತ್ರಗಳು, ದಶಕೂಟಗಳು, ಸಂಖ್ಯಾಶಾಸ್ತ್ರ ಮುಂತಾದುವುಗಳು ಒಳಗೊಂಡಿರುತ್ತವೆ.)

5) ಮಾತು ಕರಾರು ವೀಳ್ಯ : 9 ಕವಳೆ ವೀಳ್ಯದೆಲೆ, 9 ಅಡಿಕೆ ಹಾಗೂ ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ಒಕ್ಕಣೆಯೊಂದಿಗೆ ವೀಳ್ಯ ಬದಲಾಯಿಸಿಕೊಳ್ಳಬೇಕು. (ಕರಾರು ಪತ್ರ ಮಾಡಿಕೊಳ್ಳಬೇಕು. )

6) ವೀಳ್ಯ ಶಾಸ್ತ್ರದ ವೀಳ್ಯ: 9 ಅಡಿಕೆ 9ಕವಳೆ ವೀಳ್ಯದೆಲೆ ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ಒಕ್ಕಣೆಯೊಂದಿಗೆ ವೀಳ್ಯ ಬದಲಾಯಿಸಿಕೊಳ್ಳಬೇಕು. 5 ವೀಳ್ಯದೆಲೆ 1 ಅಡಿಕೆ ವರನಿಗಾಗಿ, ವರನ ಮನೆಯವರಿಗೂ, 5 ವೀಳ್ಯದೆಲೆ 1 ಅಡಿಕೆ ವಧುವಿಗಾಗಿ ವಧುವಿನ ಕಡೆಯವರಿಗೂ ಹರಿವಾಣದಲ್ಲಿಟ್ಟು ಕೊಡಬೇಕು.

7) ಲಗ್ನ ವೀಳ್ಯ : 9 ಕವಳೆ ವೀಳ್ಯದೆಲೆ, 9 ಅಡಿಕೆಯೊಂದಿಗೆ ಮಾತು ಕರಾರು ಪತ್ರ ಇಟ್ಟು ಒಕ್ಕಣೆಯೊಂದಿಗೆ ಮೇಲಿನಂತೆ ವೀಳ್ಯ ಬದಲಿಸಿಕೊಳ್ಳಬೇಕು.

8,9) ತಾಯಿ ತಂದೆ ವೀಳ್ಯ (2 ಹರಿವಾಣಗಳಿರಬೇಕು) : 9 ಕವಳೆ ವೀಳ್ಯದೆಲೆ, 9 ಅಡಿಕೆ ಹಾಗೂ ಅಡಿಕೆ ಹೋಳು ಇಟ್ಟಿರಬೇಕು. ಉಭಯ ಕಡೆಯಿಂದಲೂ ಊರುಗೌಡರ ಜೊತೆ ಒಬ್ಬರು ಎದ್ದು ಒಕ್ಕಣೆಯೊಂದಿಗೆ ವೀಳ್ಯ ಕೊಡುವುದು ಹಾಗೂ ತೆಗೆದುಕೊಳ್ಳುವುದು ಮಾಡಬೇಕು. ತಂದೆಯ ವೀಳ್ಯದಿಂದ ತಂದೆಯ ಕುಟುಂಬದವರಿಗೂ, ತಾಯಿ ವೀಳ್ಯದಿಂದ ತಾಯಿ ಕುಟುಂಬದವರಿಗೂ ಹಂಚಬೇಕು. ಹಿಂದಿನ ಕಾಲದಲ್ಲಿ ಉಭಯ ಕಡೆಯ ಕುಟುಂಬಸ್ಥರಿಗೆ ಹೀಗೆ ವೀಳ್ಯ ಕೊಟ್ಟು ಆಹ್ವಾನಿಸುತ್ತಿದ್ದರು.

ಚೌಕಿ ವೀಳ್ಯ : ಚೌಕಿ ವೀಳ್ಯವನ್ನು ಎತ್ತಿ ವಧುವಿನ ಕಡೆಯ ಊರುಗೌಡರಿಗೆ ಕಾರ್ಯಕ್ರಮ
ಚೆನ್ನಾಗಿ ಸುಧಾರಿಸಿಕೊಟ್ಟಿದ್ದೀರಿ ಎಂದು ಹೇಳಿ ವರನ ಕಡೆಯ ಊರುಗೌಡರು ನೀಡುವರು. ಹರಿವಾಣವನ್ನು ಆರಂಭದಲ್ಲಿ ಚೌಕಿ ವೀಳ್ಯದಂತೆ ಪ್ರದಕ್ಷಿಣೆ ತಂದು (ಸಾಂಕೇತಿಕವಾಗಿ ಚೌಕಿಯಲ್ಲಿರುವವರು 1 ವೀಳ್ಯದೆಲೆ, 1 ಅಡಿಕೆ ಹೋಳನ್ನು ತೆಗೆದುಕೊಳ್ಳುವರು) ವಧುವಿನ ಕಡೆಯ ಊರು ಗೌಡರು ಮಣೆಯ ಮೇಲಿಡಬೇಕು. (ಈಗ ಊರುಗೌಡರು ಸ್ಥಳ ಬದಲಾವಣೆ ಮಾಡಿಕೊಳ್ಳುವರು). ವೀಳ್ಯ ತಿನ್ನುತ್ತಾ ಮದುವೆಯ ಮುಂದಿನ ವ್ಯವಸ್ಥೆಯ ಬಗ್ಗೆ ಮಾತುಕತೆಯಾಗುತ್ತದೆ. ಮಾತುಕತೆ ಮುಗಿದ ನಂತರ ಕೈಮುಗಿದು ಎಲ್ಲರೂ ಚೌಕಿಯಿಂದ ಏಳುತ್ತಾರೆ. ಭೋಜನ ವ್ಯವಸ್ಥೆಯಾದ ನಂತರ ಹುಡುಗಿ ಮನೆಯವರ ಒಪ್ಪಿಗೆ ಪಡೆದು ವರನ ಮನೆಯವರು ತೆರಳುವರು.

ಚಪ್ಪರ ಹಾಕುವ ಕ್ರಮ : ಮದುವೆಗೆ 4 ಅಥವಾ 5 ದಿನಗಳಿಗೆ ಮುಂಚಿತವಾಗಿ ಕುಟುಂಬಸ್ಥರಿಗೆ,
ನೆರೆಕರೆಯವರಿಗೆ ಹೇಳಿಕೆ ಕೊಟ್ಟು ಚಪ್ಪರ ಹಾಕಲು ಕೇಳಿಕೊಳ್ಳುವುದು. ಊರುಗೌಡರ ನೇತೃತ್ವದಲ್ಲಿ ಮನೆಯ ಮುಂಭಾಗದಲ್ಲಿ ಚಪ್ಪರ ಹಾಕುವುದು. ಚಪ್ಪರದ ಕಂಬಗಳು ಸಮ ಸಂಖ್ಯೆಯಲ್ಲಿರಬೇಕು. ಮದುವೆಯ ಹಿಂದಿನ ದಿನ, ಮದರಂಗಿಯಂದು ವಿಶ್ವಕರ್ಮರು ನಿರ್ಮಿಸಿಕೊಟ್ಟ ಹಾಲೆಮರದ ಪಾದುಕೆಗಳನ್ನು ಪ್ರವೇಶ ದ್ವಾರದ ಅಡಿಯಲ್ಲಿ ನೆಲಕ್ಕೆ ಮರದ ಮೊಳೆಯಿಂದ ಅಳವಡಿಸುವುದು. ಚಪ್ಪರದ ಮುಖ ತೋರಣವನ್ನು ವಿಶ್ವಕರ್ಮರಿಂದ ಮಾಡಿಸಬೇಕು. ಪೂರ್ವ ಈಶಾನ್ಯದಲ್ಲಿ ದ್ವಾರ ನಿರ್ಮಿಸಿ, ಗೊನೆ ಹಾಕಿದ 2 ಕದಳಿ ಬಾಳೆ ಕಟ್ಟಿ ತಳಿರು ತೋರಣಗಳಿಂದ ಶೃಂಗರಿಸಬೇಕು. (ಚಪ್ಪರದ ನಾಲ್ಕು ಮೂಲೆಗಳಿಗೆ ಊರುಗೌಡರು ನಾನೇಲು ಸೊಪ್ಪು ಸುತ್ತಿ ಮನೆಯವರಿಗೆ ಚಪ್ಪರವನ್ನು ಒಪ್ಪಿಸುವುದು ಕ್ರಮ)

ಧಾರಾ ಮಂಟಪ : ಮನೆಯ ಮುಂಭಾಗದಲ್ಲಿ ಪೂರ್ವಾಭಿಮುಖವಾಗಿ ನಾಲ್ಕು ಅಡಿಕೆ ಮರದ ಕಂಬಗಳನ್ನು ಉಪಯೋಗಿಸಿ ಧಾರಾ ಮಂಟಪ ರಚಿಸುವುದು. ಮಡಿವಾಳ ಮಣೆಯಿಟ್ಟ ದೀಪ ಹಚ್ಚಿ  ಬೆಂಡು ಕುಕ್ಕೆಯಲ್ಲಿ 1 ಸೇರು ಅಕ್ಕಿ, 1 ತೆಂಗಿನ ಕಾಯಿ, 5 ವೀಳ್ಯದೆಲೆ, ಅಡಿಕೆ 1 ಪಾವಲಿ ಇಟ್ಟು ಕೈ ಮುಗಿದು ಮೇಲ್ಕಟ್ಟು ಕಟ್ಟುತ್ತಾನೆ. ಮೇಲ್ಕಟ್ಟು ಕಟ್ಟಿದ ಮಧ್ಯಭಾಗಕ್ಕೆ 5 ವೀಳ್ಯದೆಲೆ, 1 ಅಡಿಕೆಯಲ್ಲಿ ನಿಯಮನುಸಾರವಾಗಿ ಒಗ್ಗಿ ಹಾಕಿದ ಜೋಡು ತೆಂಗಿನ ಕಾಯಿಯೊಂದಿಗೆ ಪೋಣಿಸಿ ಕಟ್ಟುವನು. ನಾಲ್ಕು ಕಂಬಗಳಿಗೆ ಬಿಳಿ ವಸ್ತ್ರವನ್ನು ಕಟ್ಟುವನು (ಎಣ್ಣೆ ಅರಿಶಿನ ಮಾಡಿದ ಕೈ ಉಜ್ಜಲು)

ಮದುಮಗಳಿಗೆ ಬಳೆ ತೊಡಿಸುವ ಶಾಸ್ತ್ರ (ಮದರಂಗಿ ಶಾಸ್ತ್ರದ ಮೊದಲ ದಿನ) : ವಧುವಿನ
ಮನೆಯಲ್ಲಿ ಬಳೆ ತೊಡಿಸುವ ಪದ್ಧತಿಯಿರುತ್ತದೆ. ಈ ಮೊದಲೇ ಹೇಳಿಕೆ ಕೊಟ್ಟಂತೆ ಬಂದಿರುವ ಬಳೆಗಾರ್ತಿ ಚಪ್ಪರದಡಿಯಲ್ಲಿ ಹಸಿರು ಮತ್ತು ಕೆಂಪು ಬಳೆಗಳನ್ನು ತಂದು ಮದುಮಗಳಿಗೆ ತೊಡಿಸುವುದು. ಸೇರಿದ ಇಷ್ಟಪಟ್ಟ ಎಲ್ಲಾ ಹೆಂಗಳೆಯರಿಗೂ ಬಳೆ ತೊಡಿಸುವುದು ಪದ್ಧತಿ.

ಗುರುಕಾರಣರಿಗೆ ಬಡಿಸುವುದು : ವೀಳ್ಯ ಶಾಸ್ತ್ರದ ನಂತರ ನಿಶ್ಚಯಿಸಿದ ದಿನದಂದು ವಧು/ವರರ ತಳಮನೆಯಲ್ಲಿ ಗುರು ಕಾರಣರಿಗೆ ಬಡಿಸುವ ಕ್ರಮವಿದೆ.

ಮದುಮಗನ ಮುಖ ಕ್ಷೌರ : ಮದರಂಗಿ ಶಾಸ್ತ್ರದ ಮೊದಲು ಕ್ಷೌರ ಮಾಡಿಸುವುದು ಕ್ರಮ. ಕ್ಷೌರಿಕನಿಗೆ ಹೇಳಿಕೆ ಕೊಟ್ಟು ಮದರಂಗಿ ಶಾಸ್ತ್ರ ದಿನ ಬರಲು ಹೇಳುವುದು ಪದ್ಧತಿ. ಮುಖ ಕ್ಷೌರ ಮಾಡಿದ ಮೇಲೆ ಕ್ಷೌರಿಕನಿಗೆ ಕೊಡುವ ಮರ್ಯಾದೆ ಕೊಟ್ಟು ಕಳುಹಿಸುವುದು ಪದ್ಧತಿ.

ಎಣ್ಣೆ ಅರಶಿನ ಮತ್ತು ಮದರಂಗಿ ಶಾಸ್ತ್ರ (ಮೇಲ್ಕಟ್ಟಿನ ಅಡಿಯಲ್ಲಿ) :

ಪರಿಕರಗಳು : ಕಾಲುದೀಪ, ತೂಗುದೀಪ, ಹರಿವಾಣ 2. ಬೆಳ್ಳಿಗೆ ಅಕ್ಕಿ. ವೀಳ್ಯದೆಲೆ 5 ಅಡಿಕೆ 1. ತೆಂಗಿನ ಕಾಯಿಯ ಹಾಲು, ಎಣ್ಣೆ, ಅರಶಿನ, ಗರಿಕೆ.

ಊರುಗೌಡರು ಬಂದಾಗ ಮನೆಯ ಯಜಮಾನ ತಂಬಿಗೆ ನೀರು ಕೊಟ್ಟು ಕುಳ್ಳಿರಿ ಉಪಚರಿಸಿ ನಂತರ ಸೂಡಿ ಎಲೆ, 5 ಅಡಿಕೆಯೊಂದಿಗೆ ಕಾರಕ್ರಮ ನಡೆಸಿಕೊಡು ಕೇಳಿಕೊಳ್ಳಬೇಕು. (ವಧುವಿನ ಮನೆಯಲ್ಲಿ ವರನ ಮನೆಯ ಕೊಡಿಯಾಳು ಬಂದುದನ ಖಾತರಿಪಡಿಸಿಕೊಳ್ಳುತ್ತಾರೆ.)

ವಧು/ವರರು ಭೋಜನ ಸ್ವೀಕರಿಸಿದ ನಂತರ ಮದರಂಗಿ ಶಾಸ್ತ್ರ ಮಾಡಬೇಕು. ಆಮೇಲೆ ಫಲಾಹಾರ ಮಾತ್ರ ಮಾಡಬಹುದು. (ಶೇಷೋಪಚಾರ) ಪಟ್ಟ ಭಾಸಿಂಗ ತೆಗೆದ ಮೇಲೆನೇ ಭೋಜನ ಮಾಡಬೇಕು.

ಭೂಮಿ ಹೆಸೆ ಬರೆಯುವುದು :

5 ಜನ ಮುತ್ತೈದೆಯರು ಭೂಮಿ ಹಸೆ ಬರೆಯುತ್ತೇವೆಂದು ಹೇಳಿ ಅಕ್ಕಿಯಿಂದ ಗೆರೆಹಾಕಿ ಚೌಕಟ್ಟು ಮಾಡಿ ಅದನ್ನು ಒಟ್ಟು ಸೇರಿಸಬೇಕು. ಎಡದ ಪ್ರಥಮ ಚೌಕಟ್ಟಿನೊಳಗೆ (ಮದುಮಗ ಕುಳಿತುಕೊಳ್ಳುವ ಬಲಭಾಗ) ಸೂರ್ಯ ಚಿತ್ರ, ಕೊನೆಯ ಚೌಕಟ್ಟಿನೊಳಗೆ ಚಂದ್ರ ಚಿತ್ರ ಬರೆದು ಮಣೆ ಇಡಬೇಕು. ಆ ನಂತರ ವಧು/ವರರನ್ನು ಎಣ್ಣೆ ಅರಶಿನ ಮಾಡುವುದಕ್ಕೆ ಊರು ಗೌಡರು ಒಕ್ಕಣೆಯೊಂದಿಗೆ ಕುಳ್ಳಿರಿಸುವರು.

ಮಣೆಯ ಮೇಲೆ ಒಂದು ಹರಿವಾಣದಲ್ಲಿ ಬೆಳ್ತಿಗೆ ಅಕ್ಕಿ, 5 ವೀಳ್ಯದೆಲೆ, 1 ಅಡಿಕೆ ಇನ್ನೊಂದು ಹರಿವಾಣದಲ್ಲಿ ತೆಂಗಿನ ಹಾಲು ಮತ್ತು ತೆಂಗಿನ ಎಣ್ಣೆ ಮಿಶ್ರಣದಲ್ಲಿ ಅರಿಶಿನ ಹಾಗೂ ಗರಿಕೆ (5 ಅಥವಾ 10 ತುದಿ) ತುದಿ ಇರಬೇಕು. ಮೇಲ್ಕಟ್ಟಿನಡಿಯಲ್ಲಿ ಪೂರ್ವಾಭಿಮುಖವಾಗಿ ತೂಗುದೀಪ ಉರಿಸಿ ಇಟ್ಟಿರಬೇಕು.

ವಧು/ವರರ ಸ್ನಾನದ ನಂತರ ಬಿಳಿ ವಸ್ತ್ರ ಧರಿಸಿ ದೇವರ ಕೋಣೆಗೆ ಬರುವರು. ಹಿರಿಯರು ಹಚ್ಚಿದ ದೀಪದ ಎದುರು ಮನೆಯವರು ಬಂಧುಗಳೆಲ್ಲ ಸೇರಿ ಪ್ರಾರ್ಥಿಸಿಕೊಳ್ಳುವರು. ವಧು/ವರರು ದೀಪಕ್ಕೆ ಅಕ್ಕಿ ಕಾಳು ಹಾಕಿ ನಮಸ್ಕರಿಸಿ ಹಿರಿಯರ ಪಾದಗಳಿಗೆರಗಿ ಆಶೀರ್ವಾದ ಪಡೆಯುವರು. ನಂತರ ಸೋದರ ಮಾವನಿಗೆ ತಂಬಿಗೆ ನೀರು ಕೊಟ್ಟು ಮುಹೂರ್ತದ ಮಣಿ ಕಟ್ಟಲು ಕೇಳಿಕೊಳ್ಳುವರು.

ತದನಂತರ ಒಳಗಿನಿಂದ ತಂದೆಯು ವಧು/ವರನನ್ನು ಮೇಲ್ಕಟ್ಟಿನಡಿಗೆ ಕರೆದುಕೊಂಡು ಬರುವರು. ಒಕ್ಕಣೆಯೊಂದಿಗೆ ಸೋದರಮಾವ ಅಥವಾ ಊರು ಗೌಡರು ಮುಹೂರ್ತದ ಮಣಿಯನ್ನು ಕಟ್ಟಬೇಕು. ನಂತರ ಒಕ್ಕಣೆಯೊಂದಿಗೆ ಊರು ಗೌಡರು ಎಣ್ಣೆ ಅರಿಶಿನಕ್ಕೆ ಮಣೆಯ ಮೇಲೆ ಪೂರ್ವಾಭಿಮುಖವಾಗಿ ಕುಳ್ಳಿರಿಸಿ ಹರಿವಾಣದಲ್ಲಿಟ್ಟಂತಹ 5 ವೀಳ್ಯದೆಲೆ 1 ಅಡಿಕೆಯನ್ನು ವಧು/ವರನ ಕೈಯಲ್ಲಿ ಇರಿಸುವರು. ಕನಿಷ್ಠ 5 ಜನ ಮುತ್ತೈದೆಯರು ಒಬ್ಬೊಬ್ಬರಾಗಿ ಬಂದು ದೇವರ ದೀಪಕ್ಕೆ ಅಕ್ಕಿ ಕಾಳು ಹಾಕಿ ಕೈಮುಗಿದು ವಧು/ವರನಿಗೆ ಅಕ್ಷತೆ ಹಾಕಿ ಅವರ ಕೈಯಲ್ಲಿದ್ದ ವೀಳ್ಯವನ್ನು ಪಡೆದು ಅಕ್ಕಿ ಹರಿವಾಣದಲ್ಲಿಟ್ಟು ನಂತರ ಅರಿಶಿಣವನ್ನು ಪಾದದಿಂದ ಮುಖದವರೆಗೆ ಗರಿಕೆ ತುದಿಯಿಂದ 3 ಸಲ ಸವರಿ ನಂತರ ಎರಡು ಅಂಗೈಗಳಿಂದ ಅರಿಶಿನವನ್ನು ಸಂಪೂರ್ಣ ಮೈಗೆ ಹಚ್ಚಬೇಕು. ಹರಿವಾಣದಲ್ಲಿರುವ 5 ವೀಳ್ಯದೆಲೆ 1 ಅಡಿಕೆಯನ್ನು ಮತ್ತೆ ಕೈಯಲ್ಲಿಟ್ಟು ಪರಸ್ಪರ ನಮಸ್ಕರಿಸಿಕೊಳ್ಳುವರು. ಇದೇ ಕ್ರಮವನ್ನು ಉಳಿದ ಮುತ್ತೈದೆಯರು ಅನುಸರಿಸುವರು. ಈ ಸಂಧರ್ಭದಲ್ಲಿ ಮದುಮಗನಿಗೆ ಕಾಲುಂಗುರವಿಡುವ ಕ್ರಮವಿದೆ. ಸಂಪ್ರದಾಯದಂತೆ ಕಾಲುಂಗುರವನ್ನು ಕ್ಷೌರಿಕ ಇಡಬೇಕು. (ಈಗಿನ ಕಾಲಘಟ್ಟದಲ್ಲಿ ಅದು ಆಗದೇ ಇರುವ ಕಾರಣ ಅಡೋಳಿ ಕಾಲುಂಗುರ ಇಡಬಹುದು.) ಅರಿಶಿನೆಣ್ಣೆ ಸಂಪೂರ್ಣ ಆದ ನಂತರ ಊರುಗೌಡರು ಕೈಯಲ್ಲಿದ್ದ ವೀಳ್ಯವನ್ನು ಹರಿವಾಣದಲ್ಲಿರಿಸಿ ಒಕ್ಕಣೆಯೊಂದಿಗೆ. ಅರಿಶಿನೆಣ್ಣೆಯಿಂದ ಎಬ್ಬಿಸುವರು. ಈಗ ಒಂದು ಸೂಡಿ ವೀಳ್ಯದೆಲೆ 5 ಅಡಿಕೆ ಹರಿವಾಣದಲ್ಲಿರಿಸಿ ಮೊದಲೇ ನಿರ್ಧರಿಸಿದ ಅಡೋಳಿ, ಕಂಚಿಮೆ, ಸೋಬಾನೆಯವರಿಗೆ ವೀಳ್ಯ ಕೊಡುವುದು. ನಂತರ ಅಡೋಳಿ ಸ್ನಾನಕ್ಕೆ ಕರೆದುಕೊಂಡು ಹೋಗುವರು. ಸೀಗೆ, ಮೈಸೂರು ಬಾಳೆಹಣ್ಣು ಹಚ್ಚಿ ವಧುವಿನ ಅತ್ತಿಗೆ ನಾದಿನಿಯರು ಅಥವಾ ಹುಡುಗನ ಭಾವ ಮೈದುನರು ಸ್ನಾನ ಮಾಡಿಸುವರು.

ಮದರಂಗಿ ಕೊಯ್ಯುವುದು :

ಪರಿಕರಗಳು :

1) ತಂಬಿಗೆ ನೀರು.

2) ತುದಿ ಬಾಳೆಲೆ

3) ಹರಿವಾಣ

4) ವೀಳ್ಯದೆಲೆ 5.

5) ಅಡಿಕೆ 1

6) ಪಾವಲಿ 1

ವಧು/ವರರು ಸ್ನಾನಕ್ಕೆ ಹೋದ ನಂತರ ಮದರಂಗಿ ಕೊಯ್ಯಲು ಗಿಡದ ಹತ್ತಿರ ಹೋಗುವರು. 5 ಜನ ಮುತ್ತೈದೆಯರು ಒಂದು ತಂಬಿಗೆ ನೀರು, ಒಂದು ಕೊಡಿ ಬಾಳೆಲೆ, ಹರಿವಾಣದಲ್ಲಿ 5 ವೀಳ್ಯದೆಲೆ, ಒಂದು ಅಡಿಕೆ, ಒಂದು ಪಾವಲಿಯನ್ನಿಟ್ಟುಕೊಂಡು ಮದರಂಗಿ ಗಿಡಕ್ಕೆ ನೀರನ್ನು ಎರೆದು ಕನಿಷ್ಠ 3 ಸುತ್ತು ಬಂದು ನಂತರ ವೀಳ್ಯವನ್ನು ಬುಡದಲ್ಲಿರಿಸಿ, ಸರ್ವರೂ ದೇವರನ್ನು ಪ್ರಾರ್ಥಿಸಿಕೊಂಡು ಕೈಮುಗಿದು ಹರಿವಾಣವನ್ನು ಎತ್ತಿಕೊಂಡು ಶೋಭಾನೆ ಹೇಳುತ್ತಾ ಮದರಂಗಿ ಸೊಪ್ಪುಗಳನ್ನು ಕೊಯ್ದು ಹರಿವಾಣದಲ್ಲಿ ಇರಿಸಿದ ಬಾಳೆಲೆಗೆ ಹಾಕಿ ತರುವರು. ಮನೆಗೆ ಬಂದಮೇಲೆ ಮದರಂಗಿ ಸೊಪ್ಪುಗಳನ್ನು ಅರೆಯುವ ಕಲ್ಲಿನಲ್ಲಿ ಹಾಕಿ ಅರೆಯುವರು. ಇದೇ ಸಮಯದಲ್ಲಿ ವಧು/ವರನು ಬಿಳಿವಸ್ತ್ರ ಧರಿಸಿ ಶ್ವೇತ ವರ್ಣದ ಛತ್ರಿಯೊಂದಿಗೆ ಕಂಚಿಮೆ ಸಮೇತ ಬಾವಿಕಟ್ಟೆಗೆ ಹೋಗಿ ಗಂಗೆ ಪೂಜೆ ಮಾಡಬೇಕು. ಗಂಗೆಪೂಜೆ ಮಾಡಿ ಚಪ್ಪರದ ಮುಖದ್ವಾರಕ್ಕೆ ಬಂದಾಗ 5 ಜನ ಮುತ್ತೈದೆಯರು ಆರತಿಯೊಂದಿಗೆ ಕುರ್ದಿನೀರಿನಾರತಿಯೊಂದಿಗೆ ನೆನೆಬತ್ತಿಯಲ್ಲಿ ದೃಷ್ಟಿ ತೆಗೆಯುವುದು, ಶೋಭಾನೆ ಹೇಳಬೇಕು. ಕಿರಿಯರು ಕಾಲು ತೊಳೆಯುವ ಕ್ರಮ ಮಾಡಬೇಕು. ಆಗ ವಧು-ವರರು 5 ವೀಳ್ಯದೆಲೆ, 1 ಅಡಿಕೆಯೊಂದಿಗೆ ಹಣವನ್ನು ಕಾಣಿಕೆಯಾಗಿ ತಂಬಿಗೆಗೆ ಹಾಗೂ ಹರಿವಾಣಕ್ಕೆ ಪ್ರತ್ಯೇಕ ಪ್ರತ್ಯೇಕವಾಗಿ ಹಾಕಬೇಕು. ನಂತರ ದೃಷ್ಟಿ ತೆಗೆಯುವ ಕ್ರಮ ಮಾಡಬೇಕು. 4 ವೀಳ್ಯದೆಲೆ, 4 ಅಡಿಕೆ ಹೋಳನ್ನು ಊರುಗೌಡರು ವಧು-ವರರ ತಲೆಯ ಸುತ್ತ 3 ಸಲ ತಂದು 4 ದಿಕ್ಕುಗಳಿಗೆ ಎಸೆಯುವರು. ನಂತರ ತೆಂಗಿನ ಕಾಯಿಯನ್ನು ತಲೆ ಸುತ್ತ ತಂದು ಭೂಮಿಗೆ ಒಡೆಯುವರು. ನಂತರ ಮೇಲ್ಕಟ್ಟಿನಡಿಯಲ್ಲಿ ಮದರಂಗಿ ಇಡಲು ಊರುಗೌಡರು ಒಕ್ಕಣೆಯೊಂದಿಗೆ ಕುಳ್ಳಿರಿಸುವರು. ಈ ಮೊದಲೇ ಕಡೆದು ಇಟ್ಟ ಮದರಂಗಿಯನ್ನು ಮಣೆಯ ಮೇಲೆ ಹರಿವಾಣದಲ್ಲಿ ಕೊಡಿ ಬಾಳೆಲೆಯಲ್ಲಿ ಹಾಕಿಡಬೇಕು, ಮೊದಲು ಸೋದರದವರು ಕೈಗೆ 5 ಬೊಟ್ಟು ಇಡಬೇಕು. ನಂತರ ಅಕ್ಕ-ತಂಗಿಯರು, ಅತ್ತಿಗೆ-ನಾದಿನಿಯರು, ಮದರಂಗಿ ಇಡುತ್ತಾರೆ. ಬಲಕೈಗೆ ಸೂರ್ಯ, ಎಡಕೈಗೆ ಚಂದ್ರ ಚಿತ್ರವನ್ನು ಬಿಡಿಸುವರು. ಮದರಂಗಿ ಇಡುವಾಗ ಸೋಬಾನೆ ಹಾಡುವರು.

ಹಸೆ ಬರೆಯುವುದು : ಮದರಂಗಿ ಶಾಸ್ತ್ರಕ್ಕೆ ಕುಳ್ಳಿರಿಸಿದ ನಂತರ ಮನೆಯ ಯಜಮಾನ ತಂಬಿಗೆ ನೀರು ಕೊಟ್ಟು ಹಸೆ ಬರೆಯಲು ಕೇಳಿಕೊಳ್ಳುವರು ಊರುಗೌಡರ ಜವಾಬ್ದಾರಿಯ (ಸೋದರದವರು ಹಸೆ ಬರೆಯಬೇಕು.) ನಡುಮನೆಯ ಗೋಡೆಯಲ್ಲಿ ಪೂರ್ವಾಭಿಮುಖವಾಗಿ  ಬರೆಯುವರು. ಬಲಬದಿಗೆ ಸೂರ್ಯ, ಎಡಬದಿಗೆ ಚಂದ್ರನ ಚಿತ್ರ ಬರುವಂತೆ ಚಿತ್ರಿಸುವುದು. ಬಲ ಬದಿಯ ಚಿತ್ರದ ಕೆಳಗೆ ವರನ ಹೆಸರು ಎಡಬದಿಯ ಚಿತ್ರದ ಕೆಳಗೆ ವಧುವಿನ ಹೆಸರು ಬರೆಯಬೇಕು. ಹಸೆ ಬರೆದು ಮುಗಿದ ನಂತರ ಹಸೆ ಬರೆದವರಿಗೆ ಮನೆಯೊಡತಿ ಅವಲಕ್ಕಿ, ಬಾಳೆಹಣ್ಣು, ಬೆಲ್ಲ ಇವುಗಳಿಂದ ಯಥೋಪಚಾರವಾಗಿ
ಉಪಚರಿಸಬೇಕು.

ಹಸೆ ಚಾಪೆ ಹಾಕುವುದು : ಹಸೆ ಬರೆದ ನಂತರ ಅದರಡಿಯಲ್ಲಿ 5 ಜನ ಮುತ್ತೈದೆಯರು
ಸೋಭಾನೆಯೊಂದಿಗೆ 5 ಕುಡ್ತೆ ಕುಚುಲು ಅಕ್ಕಿಯನ್ನು 5 ಸಾಲುಗಳಾಗಿ ಹಾಕುವರು. ನಂತರ ಎರಡು ಬದಿಯಲ್ಲಿ 5 ಎಲೆ, 1 ಅಡಿಕೆ ಇಡುವರು. ಸೋಭಾನೆಯೊಂದಿಗೆ ಅದರ ಮೇಲೆ ಹಸೆ ಚಾಪೆ ಹಾಕಿ ಅದರ ಮೇಲೆ ಕುಳಿತುಕೊಳ್ಳುವರು. ಇವರಿಗೆ ಮನೆಯ ಮುತ್ತೈದೆಯರು ತಲೆಗೆ ಎಣ್ಣೆ ಕೊಟ್ಟು ಹಸೆ ಚಾಪೆಯನ್ನು ಬಿಟ್ಟು ಕೊಡುವಂತೆ ವಿನಂತಿಸಿಕೊಳ್ಳುವರು. ಅವರು ಹಸೆ ಚಾಪೆಯಿಂದ ಏಳುವ ಮೊದಲು ಒಗ್ಗಿ ಹಾಕಿದ ತೆಂಗಿನಕಾಯಿಯನ್ನು ಚಾಪೆಯಲ್ಲಿಟ್ಟು ಏಳುವರು. (ತುಪ್ಪದ ಕ್ರಮ ಮುಗಿದ ನಂತರ ಹಸೆ ಚಾಪೆ ಹಾಗೂ ಅಕ್ಕಿ, ಎಣ್ಣೆ, ಅರಿಶಿನಕ್ಕೆ ಸಂಬಂಧಪಟ್ಟ ವಸ್ತ್ರವನ್ನು ಮಡಿವಾಳರು ತೆಗೆದುಕೊಂಡು ಹೋಗುವರು) ಕೈಯಲ್ಲಿಟ್ಟ ಮದರಂಗಿ ಚಿತ್ತಾರವು ಒಣಗಿದ ನಂತರ ವಧು/ವರರು ಕುಳಿತಲ್ಲಿಗೆ, ಒಂದು ಪಾತ್ರೆಯನ್ನು ಇಟ್ಟು ಅದಕ್ಕೆ ಕೈ ತೊಳೆಯುವರು. (ನೀರನ್ನು ಫಲ ಬರುವ ಮರದ ಬುಡಕ್ಕೆ ಹೊಯ್ಯುವರು) ಊರುಗೌಡರು ಒಕ್ಕಣೆಯೊಂದಿಗೆ ವಧು-ವರರನ್ನು ಎಬ್ಬಿಸುವರು.ನಂತರ ವಧು-ವರರನ್ನು ಒಳಗೆ ಕರೆದುಕೊಂಡು ಹಸೆ ಚಾಪೆಯಲ್ಲಿ ಒಕ್ಕಣೆಯೊಂದಿಗೆ ಕುಳ್ಳಿರಿಸುವರು. ಊರುಗೌಡರು 5 ಎಲೆ 1 ಅಡಿಕೆ ಅವರ ಕೈಯಲ್ಲಿಡಬೇಕು. ಒಂದು ಮಣೆ ಒಂದು ಚೆಂಬು, ಒಂದು ಕಾಲುದೀಪ ಇರಬೇಕು. ಒಂದು ಹರಿವಾಣದಲ್ಲಿ ಅಕ್ಕಿ, 5 ವೀಳ್ಯದೆಲೆ, 1 ಅಡಿಕೆ. ಇನ್ನೊಂದು ಹರಿವಾಣದಲ್ಲಿ ಹಾಲು ತುಪ್ಪ ಮಿಶ್ರಿತ ಬಳೆಗಳನ್ನು ಹಾಕಿಡಬೇಕು). ಕಾಲುದೀಪ ಹಚ್ಚಿರಬೇಕು. 5 ಜನ ಮುತ್ತೈದೆಯರು ಅಕ್ಕಿ ದೇಸೆ ಮಾಡಿ ಹಾಲು ತುಪ್ಪ ಶಾಸ್ತ್ರ ಮಾಡಬೇಕು.

ಕುಲದೇವರಿಗೆ ಹರಿಕೆ ಹಣ ಕಟ್ಟುವುದು :
ಪರಿಕರಗಳು : ಕಂಚಿನಕ್ಕಿ. ಬೆಂಡು ಕುಕ್ಕೆ. ಬಾಳೆಲೆ2 ಹೊದುಳು 1 ಸೇರು, ತೆಂಗಿನಕಾಯಿ 1. ತಂಬಿಗೆ ನೀರು. ಬಾಳೆಹಣ್ಣು 1ಪಾಡ, ಅಚ್ಚು ಬೆಲ್ಲ 1.ಬಿದಿರಿನ ಗುತ್ತಿ 2. ಮುಷ್ಠಿ ಕರಿಮೆಣಸು, ಪಾವಲಿ 1. ಧೂಪದ ಆರತಿ ಮಾಡಲು ಸಣ್ಣ ಬಾಲೆ ಪಂಬೆ. ಗಂಧಧೂಪ, ಎಲೆ ಅಡಿಕೆ. ಮದರಂಗಿ ಶಾಸ್ತ್ರದ ಮಾರನೇ ದಿನ ದಿಬ್ಬಣ ಹೊರಡುವ ಮೊದಲು ಶೃಂಗಾರ ಆದ ನಂತರ ಕುಲದೇವರಿಗೆ ಹರಿಕೆ ಹಣ ಕಟ್ಟುವುದು ಮಾಡಬೇಕು. ಮೊದಲು ಕಾಲುದೀಪ ಹಚ್ಚಿಡಬೇಕು. ಒಂದು ಮಣೆಯ ಮೇಲೆ ಬೆಂಡು ಕುಕ್ಕೆ ಇಟ್ಟು ಅದರೊಳಗೆ ಜೋಡು ಬಾಳೆಲೆ ಇಡಬೇಕು. ವಧು/ವರರು 3 ಬೊಗಸೆ ಹೊದುಳು ಬಡಿಸಿ ಒಂದು ಪಾಡ ಬಾಳೆಹಣ್ಣು, ಬೆಲ್ಲ ಹಾಗೂ 5 ವೀಳ್ಯದೆಲೆ, 1 ಅಡಿಕೆ ಇಡಬೇಕು. ಆ ನಂತರ ಊರುಗೌಡರು ಒಕ್ಕಣೆಯೊಂದಿಗೆ ವಧು/ವರನ ಕೈಯಿಂದ ಒಂದು ಗೊಟ್ಟದಲ್ಲಿ ಮೊದಲು ಮಾವಿನಸೊಪ್ಪು, ಕರಿಮೆಣಸು ಹಾಕಿ ಒಂದು ಪಾವಲಿಯನ್ನು ಇಟ್ಟು ಭದ್ರಪಡಿಸುವುದು (ಈ ಹಣ ತಿರುಪತಿಗೆ ಸಲ್ಲಿಕೆಯಾಗಬೇಕು). ಇನ್ನೊಂದು ಗೊಟ್ಟದಲ್ಲಿ ಮಾವಿನ ಸೊಪ್ಪು ಹಾಗೂ ಕರಿಮೆಣಸು ಹಾಕಿ ಭದ್ರಪಡಿಸಬೇಕು. ಭದ್ರಪಡಿಸಿದ ಗೊಟ್ಟಗಳನ್ನು ಬೆಂಡು ಕುಕ್ಕೆಯಲ್ಲಿಇಡಬೇಕು. ನಂತರ ತೆಂಗಿನ ಕಾಯಿ ಒಡೆದು ನೀರು ಚೆಲ್ಲುತ್ತಾ ಬೆಂಡು ಕುಕ್ಕೆಗೆ 3 ಸುತ್ತುತಂದು ಉಳಿದ ನೀರನ್ನು ಚೆಂಬುಗೆ ಹೊಯ್ದು ಬೆಂಡು ಕುಕ್ಕೆಯ ಒಳಗಡೆ ಇಡಬೇಕು.ಬಾಳೆಪಂಬೆಯಲ್ಲಿ ತಂಬಿಗೆ ಸಮೇತ ಕೈಯಲ್ಲಿಡಿದು ದೂಪದ ಆರತಿ ಮಾಡಬೇಕು.
ಊರುಗೌಡರ ಒಕ್ಕಣೆಯೊಂದಿಗೆ ವೆಂಕಟರಮಣ ದೇವರ ಹರಕೆಯ ಹಣವನ್ನು ವಧು/ವರನ ತಲೆಯ ಮೇಲೆ ಇರಿಸಿದ್ದನ್ನು ಅಟ್ಟದವರೆಗೆ ಕೊಂಡೊಯ್ದು ಬೆಂಡು ಕುಕ್ಕೆಯನ್ನು ಮನೆಯ ಹಿರಿಯರು ಅಟ್ಟದ ಈಶಾನ್ಯ ಮೂಲೆಯಲ್ಲಿ ಇಡುವರು. (ಈಗ ಅಟ್ಟ ಇಲ್ಲದ ಕಾರಣ ದೇವರ ಕೋಣೆಯಲ್ಲಿಡಬಹುದು), ವಧು-ವರರು ಎಣಿಗೆ ಕೈ ಮುಗಿದು ಹೊಸ ಬರುವರು.
ದಿಬ್ಬಣ ಹೊರಡುವುದು : ನಿಗದಿತ ಸಮಯಕ್ಕೆ ಸರಿಯಾಗಿ ಧಾರಾ ಚಪ್ಪರಕ್ಕೆ ಮದುಮಗನ ಕಡೆಯ ದಿಬ್ಬಣ ಹೊರಡುವುದು. ದಿಬ್ಬಣ ಹೊರಡುವ ಮೊದಲು ಹಸೆಮಣೆಯ ಎದುರು ಕಾಲುದೀಪ ಹಚ್ಚಿ ಮದುಮಗನನ್ನು ಹಸೆಚಾಪೆಯಲ್ಲಿ ಕುಳ್ಳರಿಸಿ ಹಾಲುತುಪ್ಪ ಶಾಸ್ತ್ರ ಮಾಡುವುದು. ನಂತರ ಕುಡಿಯಲು ಹಾಲು ಕೊಡಬೇಕು. ಹಾಲು ಕುಡಿದ ಲೋಟಕ್ಕೆ ಎಲೆ ಅಡಿಕೆ ಹಾಕುವರು. ಇದಾದ ನಂತರ ಸೋದರ ಮಾವ ಊರು ಗೌಡರೆ ಒಕ್ಕಣೆಯೊಂದಿಗೆ ಮುಸುಕಿನ ಬಟ್ಟೆಯ ಬಲದ ಬದಿಯ ತುದಿಗೆ ಪಾವಲಿಯನ್ನು ಕಟ್ಟಬೇಕು. ಊರುಗೌಡರು ಒಕ್ಕಣೆಯೊಂದಿಗೆ ವರರನ್ನು ಎಬ್ಬಿಸುವರು. ನಂತರ ಹಿರಿಯರ ಪಾದ ಮುಟ್ಟಿ ಆಶೀರ್ವಾದ ಪಡೆಯಬೇಕು. ಮನೆಯ ಯಜಮಾನ ವರರನ್ನು ಮೆಟ್ಟಿಲಿಳಿಸಿ ದೇವ ಸಭೆಯ ಮೇಲ್ಕಟ್ಟಿನಡಿಯಲ್ಲಿ ಊರುಗೌಡರಿಗೆ ಹಸ್ತಾಂತರಿಸುವರು. ಬಣ್ಣ ಬಂಗಾರದ ಸಹಿತವಾಗಿ ಮದುವೆ ಕಾರ್ಯವನ್ನು ಸಂಪೂರ್ಣ ಯಶಸ್ವಿಗೊಳಿಸಲು ಅಧಿಕಾರ ವಹಿಸಿ ಕೊಡುತ್ತಾರೆ. ವಾಲಗ ಗರ್ನಾಲುನೊಂದಿಗೆ ದಿಬ್ಬಣ ಹೊರಡುವುದು.
ದಿಬ್ಬಣ ಚಪ್ಪರಕ್ಕೆ ಬಂದು ತಲುಪಿದಾಗ ವಧುವಿನ ಮನೆಯವರು ವಾಲಗದೊಂದಿಗೆ ಸ್ವಾಗತಿಸುತ್ತಾರೆ. ದಿಬ್ಬಣ ಚಪ್ಪರದ ಮುಖ ತೋರಣಕ್ಕೆ ಬಂದಾಗ ಮುತ್ತೈದೆಯರು ಸೋಬಾನೆಯೊಂದಿಗೆ ಕುರ್ದಿ ಆರತಿ ಮಾಡಬೇಕು. ಕಾಲಿಗೆ ನೀರು ಎರೆದು ದೃಷ್ಟಿ ತೆಗೆಯಬೇಕು. (ಆರತಿ ಎತ್ತಿದ ಹರಿವಾಣಕ್ಕೂ ನೀರು ಎರೆದ ತಂಬಿಗೆಗೂ ಎಲೆ, ಅಡಿಕೆ, ಪಾವಲಿಯನ್ನು ಹಾಕಬೇಕು ಮದುಮಗಳ ದಿಬ್ಬಣವಾದರೆ ಮನೆ ಒಳಗೆ ಹಸೆ ಚಾಪೆಯಲ್ಲಿ ಕುಳ್ಳಿರಿಸಬೇಕು. ಮದುಮಗನದಾದರೆ ಚಪ್ಪರದ ಬದಿಯಲ್ಲಿ ಪ್ರತ್ಯೇಕ ಆಸನ ಇರಿಸಿ ಕುಳ್ಳಿರಿಸುವರು.) (ಮದುಮಗನ ಮನೆಯಲ್ಲಿ ಮದುವೆಯಾದರೆ ಮದುಮಗ ಹೊರಗೆ ಹೋಗಿ ಪ್ರತ್ಯೇಕ ಸ್ಥಳದಲ್ಲಿ ಕುಳಿತುಕೊಳ್ಳಬೇಕು.)

ಮದುವೆಗೆ ಮುಂಚೆ ಕಟ್ಟುವ ವೀಳ್ಯ

ಪರಿಕರಗಳು : ಕಾಲು ದೀಪ, ನೆನೆಬತ್ತಿ, ಎಳ್ಳೆಣ್ಣೆ, ಅಗರಬತಿ, ಮಣೆ 2., ಚಾಪೆ 4. ಹರಿವಾಣ 2. ಬೆಳ್ತಿಗೆ ಅಕ್ಕಿ., ತುಂಬೆಹೂ, ತೇದ ಗಂಧ, ತುದಿ ಬಾಳೆಲೆ., ಅಡಿಕೆ1, ವೀಳ್ಯದೆಲೆ 5

ಚೌಕಿ ವೀಳ್ಯ : ಚೌಕಿ ವೀಳ್ಯವನ್ನು ಎತ್ತಿ ಹುಡುಗಿ ಕಡೆಯ ಊರುಗೌಡರಿಗೆ ಒಕ್ಕಣೆಯೊಂದಿಗೆ ಕಾರ್ಯಕ್ರಮ ಸುಧಾರಿಸಿ ಕೊಡಬೇಕೆಂದು ಹೇಳಿ ಮದುಮಗನ ಕಡೆಯ ಊರುಗೌಡರು ನೀಡುವರು. ಹರಿವಾಣವನ್ನು ಎಲ್ಲರೂ ಪ್ರದಕ್ಷಿಣೆ ತಂದು ಹುಡುಗಿ ಕಡೆಯವರು ಮಣೆಯ ಮೇಲಿಡಬೇಕು.

1) ದೇವರ ವೀಳ್ಯ : 9 ಕವಳೆ ವೀಳ್ಯದೆಲೆ, 9 ಅಡಿಕೆ ಇಟ್ಟು ಒಕ್ಕಣೆಯೊಂದಿಗೆ... ವೀಳ್ಯ ಕೊಡಬೇಕು. (ಒಕ್ಕಣೆ ಹಿಂದೆ ವಿವರಿಸಿದೆ)

2) ತೆರವಿನ ವೀಳ್ಯ : 7 ಕವಳೆ ವೀಳ್ಯದೆಲೆ ಸ್ವಲ್ಪ ಅಡಿಕೆ ಹೋಳುವಿನೊಂದಿಗೆ 10.50 ರೂಪಾಯಿಯನ್ನು ಚೌಕಿಯಲ್ಲಿ ಕುಳಿತವರ ಸಮಕ್ಷಮದಲ್ಲಿ ಹರಿವಾಣದಲ್ಲಿಟ್ಟು ಹುಡುಗನ ಕಡೆಯ ಊರುಗೌಡರ ಒಕ್ಕಣೆಯೊಂದಿಗೆ ಹುಡುಗಿ ಕಡೆಯ ಊರುಗೌಡರಿಗೆ ಹಸ್ತಾಂತರಿಸುತ್ತಾರೆ. ಹುಡುಗಿ ಕಡೆಯ ಊರುಗೌಡರು 5 ವೀಳ್ಯದೆಲೆ 1 ಅಡಿಕೆ, 10.50 ರೂಪಾಯಿಯನ್ನು ಮನೆಯ ಯಜಮಾನನಿಗೆ ಕೊಡುತ್ತಾರೆ. ಮನೆಯ ಯಜಮಾನ ಈ 10.50 ರೂಪಾಯಿಯನ್ನು ತಲೆಯ ರುಮಾಲಿನಲ್ಲಿ ಮದುವೆ ಕಾರ್ಯ ಮುಗಿಯುವವರೆಗೆ ಕಟ್ಟಿಕೊಂಡಿರುತ್ತಾರೆ.

ತೆರವಿನ ಹಣದ ವಿವರಣೆ :
ಅ) ಶೃಂಗೇರಿ ಮಠಕ್ಕೆ :-   ರೂ 6.25
ಆ) ಎಲೆ ಅಡಿಕೆ ಬಾಬ್ತು : ರೂ 0.50
ಇ) ಹಾಲೆ ಮರದ ಪಾದ ಕಂಬ ಬಾಬ್ತು : ರೂ 1.25
ಈ) ಆರತಿಗಳ ಬಾಬ್ತು : ರೂ 1.25
ಉ) ಸ್ಥಳ ಕಾಣಿಕೆ : ರೂ 1.25
ಒಟ್ಟು : ರೂ 10.50

3) ಬಣ್ಣ ಬಂಗಾರ ವೀಳ್ಯ : ಬಣ್ಣ ಬಂಗಾರಕ್ಕೆ ಇರಿಸುವ ಎಲ್ಲಾ ವಸ್ತುಗಳನ್ನು ಚೌಕಿಯಲ್ಲಿರುವವರೆಲ್ಲರೂ ಪರೀಕ್ಷಿಸಿ ದೊಡ್ಡ ಹರಿವಾಣದಲ್ಲಿಡಬೇಕು. (5 ವೀಳ್ಯದೆಲೆ, 1 ಅಡಿಕೆ, ಧಾರೆಸೀರೆ, ರವಿಕೆ, ಮುಸುಕಿನ ಬಟ್ಟೆ, ಕರವಸ್ತ್ರ, ಓಲೆ, ಕಡಗ, ಮೂಗುತಿ, ಕಾಲುಂಗುರ, ಡಾಬು, ಪಟ್ಟೆ ಬಾಸಿಂಗ, ಕುಂಕುಮ ಕರಡಿಗೆ, ಕೆಂಪು ಹಾಗೂ ಹಸಿರು ಬಳೆ, ಕನ್ನಡಿ, ಬಾಚಣಿಗೆ, ತುಂಬೆ ಹೂವು, ಮಲ್ಲಿಗೆ ಹೂವು. ಹಿಂಗಾರ ಇತ್ಯಾದಿ) ಇನ್ನೊಂದು ಹರಿವಾಣದಲ್ಲಿ 5 ಕವಳೆ ವೀಳ್ಯದೆಲೆ, 5 ಅಡಿಕೆ, ಸ್ವಲ್ಪ ಅಡಿಕೆ ಹೋಳು ಇರಬೇಕು. ಇತ್ತಂಡದ ಐದು ಜನ ಮುತ್ತೈದೆಯರು ಹೆಗಲಿಗೆ ಶಾಲು ಹಾಕಿ (ಬಿಳಿಯ ವಸ್ತ್ರ) ಊರುಗೌಡರ ಒಕ್ಕಣೆಯೊಂದಿಗೆ ಹರಿವಾಣಕ್ಕೆ ಕೈಮುಗಿಯುತ್ತಾ ಹೆಣ್ಣಿನ ಕಡೆಯವರು 3 ಸಲ ಗಂಡಿನ ಕಡೆಯವರು 3 ಸಲ ಅದಲು-ಬದಲು ಮಾಡಿಕೊಳ್ಳಬೇಕು. ಇದಾದ ನಂತರ ಗಂಡಿನ ಕಡೆಯವರು ಬಣ್ಣ ಬಂಗಾರ ಸಹಿತ ಹೆಣ್ಣಿನ ಕಡೆಯ ಮುತ್ತೈದೆಯರೊಂದಿಗೆ ಮದುಮಗಳನ್ನು ಶೃಂಗರಿಸಲು ತೆರಳುವರು
4) ದೇಶಮಾನ್ಯ ವೀಳ್ಯ : ಹತ್ತು ಕುಟುಂಬ ಹದಿನೆಂಟು ಗೋತ್ರದ ಬಂಧುಗಳಿಗೆ ಕೊಡುವ ಮಯ್ಯಾದೆ (ಸಮಸ್ತ ಬಂಧುಗಳಿಗೆ) ಹರಿವಾಣ ತುಂಬ ವೀಳ್ಯದೆಲೆ ಕವಳೆ, ಸಾಕಷ್ಟು ಅಡಿಕೆ ಮತ್ತು ಅಡಿಕೆ ಹೋಳು ಇರಬೇಕು. ಒಕ್ಕಣೆಯೊಂದಿಗೆ ದೇಶಮಾನ್ಯ ವೀಳ್ಯ ಕೊಡುತ್ತೇವೆಂದು ಹೇಳಿ ಕೊಡಬೇಕು. (ಯಾರಿಗಾದರೂ ಬಿಟ್ಟು ಹೋಗಿದ್ದರೆ ಈ ಬಗ್ಗೆ ಕೊಡುವ ವೀಳ್ಯ)
ವಧುವಿನ ಕಡೆಯವರು ಶೃಂಗಾರ ಆಗಿದೆಯೆಂಬುದನ್ನು ಚೌಕಿಯಲ್ಲಿ ಕುಳಿತವರಿಗೆ ತಿಳಿಸಬೇಕು. ನಂತರ ಚೌಕಿಯಲ್ಲಿ ಕುಳಿತ ಊರುಗೌಡರು ಸ್ಥಳ ಬದಲಾವಣೆ ಮಾಡಿಕೊಳ್ಳಬೇಕು. ಕೊನೆಗೆ ಚೌಕಿ ವೀಳ್ಯದೊಂದಿಗೆ ವೀಳ್ಯ ಶಾಸ್ತ್ರ ಕ್ರಮ ಮುಗಿಯುವುದು. ವಧು/ವರನಿಗೆ ಶೃಂಗಾರದ ನಂತರ ಊರುಗೌಡರು ಪಟ್ಟ-ಬಾಸಿಂಗವನ್ನು ಕಟ್ಟುವರು. ತದ ನಂತರ ಧಾರಾ ಮುಹೂರ್ತಕ್ಕೆ ಮುಂಚಿತವಾಗಿ ವಧು/ವರನನ್ನು ಸೋದರಮಾವ ಧಾರಾ ಮಂಟಪಕ್ಕೆ ಕರೆತರುವರು.
ಧಾರಾಕಾರ್ಯ
ಪರಿಕರಗಳು : ಕಾಲುದೀಪ, ಮಣೆ 2, ತಂಬಿಗೆ ನೀರು, ತೆರೆ ಹಿಡಿಯಲು ಶುಭ್ರ ಬಟ್ಟೆ, 10 ವೀಳ್ಯದೆಲೆ, 2 ಅಡಿಕೆ, ಕಂಚಿನಕ್ಕಿ, ಕೊಂಬು ಗಿಂಡಿ, ಹಿಂಗಾರದ ಮಾಲೆ 2. ದಾರೆ ಎರೆಯಲು ಕಂಚಿನ ಬಟ್ಟಲು 1, ತಾಳಿ ಕಂಠಿ,
ಕಂಚಿಮೆಯೊಂದಿಗೆ ಸೋದರ ಮಾವ ಮದುಮಗಳನ್ನು ಧಾರಾಮಂಟಪಕ್ಕೆ ಮೊದಲು ಕರೆತರಬೇಕು. (ಧಾರಾಮಂಟಪಕ್ಕೆ ಮದುಮಗ ಯಾ ಮದುಮಗಳನ್ನು ಕರೆದುಕೊಂಡು ಬರುವಾಗ ಮಡಿವಾಳರು ಮಡಿ ಬಟ್ಟೆ ಹಾಕುವ ಕ್ರಮವಿದೆ.) ಹಾಗೇ ಬರುವ ಮೊದಲು ಸೋದರ ಕಡೆಯ ಬಾವ ಮೈದುನರು ಶುಭ್ರ ಬಟ್ಟೆಯಿಂದ ತೆರೆಹಿಡಿಯಬೇಕು. ಆನಂತರ ಮದುಮಗನನ್ನು ಕರೆದುಕೊಂಡು ಬರಬೇಕು. ಮದುಮಗ ಮತ್ತು ಮದುಮಗಳು ಧಾರಾ ಮಣೆಯ ಮೇಲೆ ನಿಂತಿರಬೇಕು. ಇತ್ತಂಡದ 5 ಜನ ಮುತ್ತೈದೆಯರು ಕಂಚಿಮೆಗೆ ಅಕ್ಕಿ ಹಾಕಿ ಕೈ ಮುಗಿಯಬೇಕು. (ಹುಡುಗಿ ಕಡೆಯ ಕಂಚಿಮೆಗೆ ಹುಡುಗನ ಕಡೆಯವರು, ಹುಡುಗನ ಕಡೆಯ ಕಂಚಿಮೆಗೆ ಹುಡುಗಿ ಕಡೆಯವರು ಪರಸ್ಪರ ಕೈ ಮುಗಿಯುವರು) ಇತ್ತಂಡದ ಊರುಗೌಡರುಗಳು ಕೊಂಬುಗಿಂಡಿಯಲ್ಲಿದ್ದ ಹಾಲನ್ನು ವರನ ಕಡೆಯ ಕೊಂಬು ಗಿಂಡಿಯಿಂದ ಹಾಗೂ ವಧುವಿನ ಕಡೆಯ ಕೊಂಬು ಗಿಂಡಿಯಿಂದ ಮೂರು ಮೂರು  ಸಲ ಹೊಯ್ದುಕೊಳ್ಳಬೇಕು. (ಆದಲು-ಬದಲು ಮಾಡಿಕೊಳ್ಳುವುದು) ಕಂಚಿನಕ್ಕಿ (ಕಂಚಮೆ) ಮೇಲಿದ್ದ ತೆಂಗಿನ ಕಾಯಿಯನ್ನು ತೆಗೆದು ಅದನ್ನು ಕೂಡ ಅದಲು ಬದಲು ಮಾಡಿಕೊಳ್ಳಬೇಕು. ನಂತರ ಧಾರಾ  ಸಮಯಕ್ಕೆ ಸರಿಯಾಗಿ ವಧುವಿನ ತಂದೆ ಇತ್ತಂಡದ ಕೊಂಬುಗಿಂಡಿಯಲ್ಲಿದ್ದ ಹಾಲನ್ನು ಧಾರೆ ಎರೆಯುವ ತಂಬಿಗೆಗೆ ಹಾಕಿಸಿಕೊಂಡು ಕಾಳಿಕಂಠಿಯನ್ನು ಇಟ್ಟು ಸಭೆಯಲ್ಲಿ ಹೋಗುವರು. ಇದನ್ನು ಸಭಿಕರೆಲ್ಲರೂ ಶುಭ ಹಾರೈಕೆಯೊಂದಿಗೆ ಮುಟ್ಟಿ ನಮಸ್ಕರಿಸುವರು. ಊರುಗೌಡರ ಒಕ್ಕಣೆಯೊಂದಿಗೆ (ಒಕ್ಕಣೆ 3 ಸಲ) ಮೊದಲು ಮದುಮಗಳು ಹಿಂಗಾರದ ಮಾಲೆಯನ್ನು ಮಧುಮಗನ ಕೊರಳಿಗೆ ಹಾಕಬೇಕು. ಮದುಮಗ ಕೂಡ ಹಾಗೇನೆ ಅವಳ ಕೊರಳಿಗೆ ಹಾಕುವನು. ಈ ಎಲ್ಲಾ ಕಾರ್ಯಗಳು  ಆದ ನಂತರ ವರನ ತಂದೆ ಧಾರಾ ಬಟ್ಟಲಿನೊಂದಿಗೆ (ಕಂಚಿನಬಟ್ಟಲು, ತಯಾರಿರಬೇಕು. ವರನ ಕೈಯಲ್ಲಿ 5 ವೀಳ್ಯದೆಲೆ, 1 ಅಡಿಕೆ ವಧುವಿನ ಕೈಯಲ್ಲಿ ಕೂಡ ಅದೇ ರೀತಿ ಕೊಟ್ಟು ವರನ ಹಸ್ತದ ಮೇಲೆ ವಧುವಿನ ಹಸ್ತವನ್ನಿಟ್ಟು ಊರುಗೌಡರು ಹತ್ತು ಕುಟುಂಬ ಹದಿನೆಂಟು ಗೋತ್ರದ ಬಂಧು-ಬಾಂಧವರು, ನೆಂಟರಿಷ್ಟರು, ಗುರುಮನೆ, ಕಟ್ಟೆಮನೆ, ಸೀಮೆಮನೆ, ಮಾಗಣಮನೆ ಗೋತ್ರದ .... ಹೆಸರಿನ ವರನಿಗೆ..... ಗೋತ್ರದ ಹೆಸರಿನ ವಧುವಿನ ಕೈ ಮುಟ್ಟಿ ಕನ್ಯಾಧಾರೆ ಎರೆದು ಕೊಡುತ್ತೇವೆಂದು 3 ಸಲ ಹೇಳಬೇಕು (ವಧುವಿನ ತಂದೆ ಧಾರೆಯೆರೆಯುವರು ಅಥವಾ ಅವರು ಇಲ್ಲದಿದ್ದ ಪಕ್ಷದಲ್ಲಿ ಚಿಕ್ಕಪ್ಪ ಅಥವಾ ಸೋದರಮಾವ). ಸಭಿಕರು ಒಳ್ಳೆ ಕಾರ್ಯಂತ  ಹೇಳಬೇಕು.
ಕು. ಮೊದಲು ಹುಡುಗಿ ಕೈ ಮೇಲೆ, 2ನೇ ಸಲ ಹುಡುಗಿ ಕೈ ಕೆಳಗಿರಬೇಕು. 3ನೇ ಸಲ ಹುಡುಗಿ ಕೈ ಮೇಲಿಟ್ಟು ಧಾರೆ ನೀರಿನೊಂದಿಗೆ ಎಲೆ ಅಡಿಕೆಯನ್ನು ಮದುಮಕ್ಕಳು ಧಾರಾ ಬಟ್ಟಲಿಗೆ ಬಿಡಬೇಕು. (ಧಾರೆ ನೀರನ್ನು ಫಲ ಬರುವ ಮರದ ಬುಡಕ್ಕೆ ವರನ ಕಡೆಯವರು ಹಾಕುವರು) ನಂತರ ಊರುಗೌಡರ ಒಕ್ಕಣೆಯೊಂದಿಗೆ ಮದುಮಗ-ಮದುಮಗಳ ಕುತ್ತಿಗೆಗೆ ಮಾಂಗಲ್ಯ ಕಟ್ಟಬೇಕು. (ಒಕ್ಕಣೆ 3 ಸಲ ಹೇಳುವುದು). ವರನ ಕಡೆಯ ಕಂಚಿನಕ್ಕೆ ಬಟ್ಟಲಿನಲ್ಲಿಟ್ಟ (ಕಂಚಿಮೆ) ಕುಂಕುಮ ಕರಡಿಗೆಯಿಂದ ಕುಂಕುಮ ತೆಗೆದು ವಧುವಿನ ಹಣೆಗೆ ವರನು ತಿಲಕವಿಡಬೇಕು. ಆನಂತರ ವರನ ಶಲ್ಯಕ್ಕೆ ವಧುವಿನ ಸೀರೆ ಸೆರಗನ್ನು ಕಟ್ಟಬೇಕು. ವಧುವಿನ ತಂದೆ ವರನ ಕೈ ಹಿಡಿದು ಧಾರಾ ಮಂಟಪದಲ್ಲಿ 3 ಸುತ್ತು ಬರಬೇಕು. (ವಧುವಿನ ತಂದೆತಾಯಿ, ವರನ ತಂದೆತಾಯಿ ಧಾರಾ ಮಂಟಪಕ್ಕೆ ಇತ್ತಂಡದ ಕಂಚಿಮೆ ಸಹಿತ ಸುತ್ತು ಬರಬೇಕು.) ಕಲ್ಯಾಣಮಂಟಪದಲ್ಲಿ ಮದುವೆಯಾದರೆ ವಧುವಿನ ಕೋಣೆಗೆ ವಧು-ವರನನ್ನು ಕರೆದುಕೊಂಡು ಹೋಗಬೇಕು. ವಧುವಿನ ಮನೆಯಲ್ಲಿ ಮದುವೆಯಾದರೆ ವಧುವಿನ ಮನೆಯೊಳಗೆ ಕರಕೊಂಡು ಹೋಗುವರು.
ವಧುವಿನ ಮನೆಗೆ ಗೃಹ ಪ್ರವೇಶ:
ಧಾರಾಕಾರ್ಯ ಮುಗಿದ ನಂತರ ವಧು-ವರರನ್ನು ತಾಯಿ ತಂದೆಯವರು ಬಲ ಕಾಲು ಮುಂದಿಟ್ಟು ಒಳ ಕರೆದುಕೊಂಡು ಹೋಗಿ ಹಸೆ ಚಾಪೆಯ ಹತ್ತಿರ ನಿಲ್ಲಿಸುವರು. ಊರುಗೌಡರು ಒಕ್ಕಣೆಯೊಂದಿಗೆ ಹಸೆ ಚಾಪೆಯಲ್ಲಿ ಕುಳ್ಳಿರಿಸುವರು. ಕನಿಷ್ಠ 5 ಜನ ಮುತ್ತೈದೆಯರು ವಧು-ವರರಿಗೆ ಹಾಲು ತುಪ್ಪ ಕುಡಿಸುವರು. ತದನಂತರ ವಧುವಿನ ತಾಯಿ ಅಥವಾ ಮನೆಯ ಹಿರಿಯ ಮುತ್ತೈದೆಯರು ಕುಡಿಯಲು ಹಾಲು ಕೊಡುವರು. ಹಾಲು ಕೊಟ್ಟ ಪಾತ್ರೆಗೆ 5 ವೀಳ್ಯದೆಲೆ. 1 ಅಡಿಕೆಯೊಂದಿಗೆ ಮರ್ಯಾದೆ ಹಾಕಿ ಹಿಂತಿರುಗಿಸುವರು. ಒಕ್ಕಣೆಯೊಂದಿಗೆ ವಧು-ವರರನ್ನು ಊರುಗೌಡರು ಹಸೆ ಚಾಪೆಯಿಂದ ಏಳಿಸುವರು. ವಧು-ವರರು ಹಿರಿಯರ ಪಾದ ಮುಟ್ಟಿ ಆಶೀರ್ವಾದ ಪಡೆಯುವರು.
ಶೇಷೋಪಚಾರ: 
ಪರಿಕರಗಳು : ಕಾಲುದೀಪ 1, ನೆನೆಬತ್ತಿ, ಎಳ್ಳೆಣ್ಣೆ, ಹರಿವಾಣ 2, ಬೆಳ್ತಿಗೆ ಅಕ್ಕಿ, ವೀಳ್ಯದೆಲೆ 20, ಅಡಿಕೆ 4, ತಂಬಿಗೆ ನೀರು.(ಶೇಷೋಪಚಾರಕ್ಕೆ ಬೆಳ್ತಿಗೆ ಅಕ್ಕಿಯನ್ನು ಉಪಯೋಗಿಸಬೇಕು)
ಈಗ ವಧು-ವರರು ವಸ್ತ್ರ ಬದಲಿಸಿ ಶೇಷೋಪಚಾರಕ್ಕೆ ಅಡೋಳಿಯ ಜೊತೆ ಮೇಲ್ಕಟ್ಟಿನಡಿಯಲ್ಲಿ ಬರಬೇಕು. ಹಾಕಿದ ಚಪ್ಪರದ ಮೇಲ್ಕಟ್ಟಿನಡಿಯಲ್ಲಿ ಪೂರ್ವಾಭಿಮುಖವಾಗಿ ಇರಿಸಿದ ಆಸನಗಳಿಗೆ ಮಡಿವಾಳನು ಮೇಲ್ವಸ್ತ್ರವನ್ನು ಹೊದಿಸುತ್ತಾರೆ. ಆಸನದ ಎದುರು ಬಲಬದಿಯಲ್ಲಿ ಸರಮಾಲೆ ದೀಪ ಹಚ್ಚಿಟ್ಟಿರಬೇಕು. ಹಾಗೇನೆ ಆಸನದ ಮುಂಭಾಗದಲ್ಲಿ ಮಣೆಗಳ ಮೇಲೆ ಒಂದು ಹರಿವಾಣದಲ್ಲಿ ಬೆಳ್ಳಿಗೆ ಅಕ್ಕಿ ಹಾಗೂ 5 ವೀಳ್ಯದೆಲೆ, 1 ಅಡಿಕೆ (ಶೇಷೆ ಹಾಕಲು) ಇನ್ನೊಂದು ಹರಿವಾಣದಲ್ಲಿ ಒಂದು ಮುಷ್ಟಿ ಬೆಳ್ತಿಗೆ ಅಕ್ಕಿ (ನಗದು ರೂಪದ ಉಡುಗೊರೆ ಇಡಲು) ಹಾಗೂ 5 ವೀಳ್ಯದೆಲೆ. 1 ಅಡಿಕೆಯನ್ನು ಜೋಡಿಸಿಟ್ಟಿರಬೇಕು. ಒಕ್ಕಣೆಯೊಂದಿಗೆ – ಊರುಗೌಡರು ಶೇಷೋಪಚಾರಕ್ಕೆ ಕುಳ್ಳಿರಿಸಿ ವಧು-ವರರ ಕೈಯಲ್ಲಿ 5 ವೀಳ್ಯದೆಲೆ 1 ಅಡಿಕೆಯನ್ನು ಕೊಟ್ಟು ಶೇಷೆ ಹಾಕುವರು. ಮನೆಯ ಯಜಮಾನ ನೆಂಟರಿಷ್ಟರನ್ನು ಒಂದು ತಂಬಿಗೆ ನೀರಿನೊಂದಿಗೆ ಶೇಷೋಪಚಾರಕ್ಕೆ ಆಹ್ವಾನಿಸುತ್ತಾರೆ.

ವಧುವಿನ ತಾಯಿ-ತಂದೆ ಮೊದಲು ಶೇಷೆ (ಅಕ್ಷತೆ) ಹಾಕಿ ಆಶೀರ್ವದಿಸುವರು.ನಂತರ ವರನ ತಂದೆ ತಾಯಿ, ತದನಂತರ ನೆಂಟರಿಷ್ಠರು ಶೇಷೆ ಹಾಕಿ ಆಶೀರ್ವಾದ ಮಾಡುವರು ಹಾಗೂ ಉಡುಗೊರೆ ಇದ್ದಲ್ಲಿ ವಧು-ವರರಿಗೆ ನೀಡಿ, ಅಲ್ಲದೇ ನಗದು ರೂಪದ ಉಡುಗೊರೆಯನ್ನು ಎದುರು ಇರಿಸಿದ ಬಟ್ಟಲಿಗೆ ಹಾಕುವರು.
ಶೇಷೋಪಚಾರ ಮುಗಿದ ತಕ್ಷಣ ಕನಿಷ್ಠ 5 ಜನ ಮುತ್ತೈದೆಯರು ಸೋಬಾನೆಯೊಂದಿಗೆ ಶೇಷೋಪಚಾರಕ್ಕೆ ಕುಳಿತಲ್ಲಿಯೇ ಶೇಷೆಗೆ ಉಪಯೋಗಿಸಿದ ಅಕ್ಕಿಯಲ್ಲಿ ಆರತಿ (5 ನೆನಬತ್ತಿ ಮಾವಿನ ಸೊಪ್ಪಲ್ಲಿಟ್ಟು) ಮಾಡಿ ಹರಿವಾಣದಲ್ಲಿದ್ದ ಅಕ್ಕಿಯನ್ನು ಪೂರ್ತಿ ಮುಗಿಸಬೇಕು. ಮದುಮಕ್ಕಳ ಕೈಯಲ್ಲಿದ್ದ ವೀಳ್ಯದೆಲೆ, ಅಡಿಕೆಯನ್ನು ಆರತಿ ತಟ್ಟೆಗೆ ಹಾಕುವರು.
(ಶೇಷೋಪಚಾರ ಹಾಕುವ ಸಂದರ್ಭದಲ್ಲಿ ಪಾದರಕ್ಷೆಗಳನ್ನು ನಿಷೇದಿಸಬೇಕು)
ಅನಂತರ ಊರುಗೌಡರ ಒಕ್ಕಣೆಯೊಂದಿಗೆ ವಧು-ವರರನ್ನು ಶೇಷೋಪಚಾರದಿಂದ ಏಳಿಸುವರು. ಹರಿವಾಣದಲ್ಲಿರುವ ನಗದು ಉಡುಗೊರೆಯನ್ನು ಊರುಗೌಡರು ಒಕ್ಕಣೆಯೊಂದಿಗೆ ಮನೆಯ ಯಜಮಾನನ ತಲೆ ಮೇಲೆ ಇರಿಸುವರು. (ಹರಿವಾಣವನ್ನು ಬಿಳಿ ವಸ್ತ್ರದಿಂದ ಕಟ್ಟುವುದು). ಪಟ್ಟಬಾಸಿಂಗ ಬಿಚ್ಚಿದ ನಂತರ ವಧು-ವರರು ಊರುಗೌಡರು, ಅಡೋಳಿ, ಕಂಚಿಮೆ ಇವರೆಲ್ಲ ಒಟ್ಟಾಗಿ ಕುಳಿತು ಊಟ ಮಾಡಬೇಕು.

ಹೆಣ್ಣು ಇಳಿಸಿ ಕೊಡುವ ಕ್ರಮ : ವಧುವಿಗೆ ಕೊಡುವ ಬಳುವಳಿಯೊಂದಿಗೆ ತಾಯಿ- ತಂದೆಯರು ವಧು-ವರರು ಹಾಗೂ ಕುಟುಂಬಸ್ಥರು ಮೇಲ್ಕಟ್ಟಿನಡಿಯಲ್ಲಿ ಪೂರ್ವಾಭಿಮುಖವಾಗಿ ನಿಲ್ಲುವರು. ವಧುವಿನ ಬಲ ಹೆಗಲಲ್ಲಿ ಧಾರಾ ಸೀರೆ ಇರಬೇಕು. ಪರಿಣಿತರು ಹೆಣ್ಣು ಇಳಿಸಿ ಕೊಡುವ ಸೋಬಾನೆಯನ್ನು ಹೇಳುವರು. ಒಕ್ಕಣೆಯೊಂದಿಗೆ ವಧುವಿನ ತಂದೆ ವಧು-ವರರ ಕೈಯೆತ್ತಿ ವರನ ತಂದೆ ಅಥವಾ ಊರುಗೌಡರಿಗೆ ವಧು- ವರರನ್ನು ಒಪ್ಪಿಸುವರು. ತದನಂತರ ವಧುವರರು ವಧುವಿನ ತಾಯಿ-ತಂದೆಗೆ ಸೀರೆ ಹಾಗೂ ದೋತಿಯನ್ನು ಉಡುಗೊರೆಯಾಗಿ ನೀಡುವರು. (ಉಡುಗೊರೆಗಳನ್ನು ವರನ ಮನೆಯವರೇ ವ್ಯವಸ್ಥೆ ಮಾಡುವುದು. ವಧು ತಾಯಿಗೂ ವರನು ಮಾವನಿಗೂ ಕೊಡಬೇಕು). ನಂತರ ವಧು-ವರರು ತಾಯಿ-ತಂದೆ ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುವರು.

ಸೇರು ತುಪ್ಪ ತರುವ ಕ್ರಮ : ವಧು-ವರರೊಂದಿಗೆ ವರನ ಕಡೆಯ ನೆಂಟರಿಷ್ಟರು ಚಪ್ಪರದಡಿಯಿಂದ ಹೊರಗೆ ಬರುವರು. [ಚಪ್ಪರದ ಹೊರಗೆ ವಧು-ವರರು ಹಾಗೂ ನೆಂಟರಿಷ್ಟರಿಗೆ ಆಸನದ ವ್ಯವಸ್ಥೆ ಮಾಡಿರುತ್ತಾರೆ.] ಇಲ್ಲಿ ವಿಶ್ರಮಿಸಿದ ನಂತರ ನೆಂಟರಿಷ್ಟರು, ವಧು-ವರರು ವಧುವಿನ ಬಲಕೈಯಲ್ಲಿ ಸೇರು ತುಪ್ಪ, ಎಡ ಕೈಯಲ್ಲಿ ಒಗ್ಗಿ ಹಾಕಿದ ಜೋಡಿ ತೆಂಗಿನಕಾಯಿ, ಬಲ ಹೆಗಲಲ್ಲಿ ಧಾರೆ ಸೀರೆಯೊಂದಿಗೆ ಚಪ್ಪರದ ಮೂಡಣ ತೋರಣದಡಿಗೆ ಬರುವರು. ಇವರನ್ನು ವಧುವಿನ ಕಡೆಯ ಮುತ್ತೈದೆಯರು ಕುರ್ದಿ ಆರತಿ ಎತ್ತಿ ಎಡಕೈಯಿಂದ ವಧು-ವರರ ಹಣೆಗೆ ಕುರ್ದಿ ಬೊಟ್ಟನ್ನಿಟ್ಟು ಕಾಲಿನ ಪಕ್ಕಕ್ಕೆ ಕುರ್ದಿ ನೀರನ್ನು ಚೆಲ್ಲುವರು. ಈ ಹರಿವಾಣಕ್ಕೆ ವರನು ಹಣದೊಂದಿಗೆ 5 ವೀಳ್ಯದೆಲೆ, 1 ಅಡಿಕೆಯೊಂದಿಗೆ ಗೌರವ ಸೂಚಿಸುವರು. ಈಗ ಹುಡುಗಿಯ ಕಿರಿಯ ಸಹೋದರ ಅಥವಾ ಕಿರಿಯರು ಯಾರಾದರೂ ಒಂದು ತಂಬಿಗೆ ನೀರನ್ನು ಕಾಲಿಗೆ ಹೊಯ್ಯುವರು. ಈ ತಂಬಿಗೆಗೂ ವರನು ಹಣದೊಂದಿಗೆ 5 ವೀಳ್ಯದೆಲೆ ಒಂದು ಅಡಿಕೆಯೊಂದಿಗೆ ಗೌರವ ನೀಡಬೇಕು. ವಧುವಿನ ಮನೆಯ ಹಿರಿಯ ಮುತ್ತೈದೆಯರು ವಧು-ವರರನ್ನು ಕೈಹಿಡಿದು ಪದ್ಧತಿಯಂತೆ ಮನೆ ಒಳಗೆ ಕರೆದುಕೊಂಡು ಹೋಗಿ, ಹಸೆ ಚಾಪೆಯ ಪಕ್ಕ ಇರಿಸಿದ ಮಣೆಯ ಮೇಲೆ ಉರಿಯುತ್ತಿರುವ ನಂದಾದೀಪದ ಎಡಬಲದಲ್ಲಿ ತುಪ್ಪದ ತಂಬಿಗೆ ಹಾಗೂ ತೆಂಗಿನಕಾಯಿ ಇರಿಸುವರು. ಒಕ್ಕಣೆಯೊಂದಿಗೆ ಊರು ಗೌಡರು ಹಸೆ ಚಾಪೆಯಲ್ಲಿ ಕುಳ್ಳಿರಿಸಿದ ನಂತರ ವಧು-ವರರ ಕೈಗೆ 5 ಎಲೆ, 1 ಅಡಿಕೆ ಕೊಡಬೇಕು. ವಧು-ವರರಿಗೆ ಕನಿಷ್ಟ 5 ಜನ ಮುತ್ತದೆಯರು ಹಾಲು ತುಪ್ಪ ಕುಡಿಸಿದ ನಂತರ ವಧುವಿನ ತಾಯಿ ಅಥವಾ ಮನೆಯ ಹಿರಿಯ ಮುತ್ತೈದೆ ಅವರಿಗೆ ಕುಡಿಯಲು ಹಾಲನ್ನು ನೀಡುವರು. ಈ ಪಾತ್ರೆಗೆ ವಧು- ವರರು 5 ವೀಳ್ಯದೆಲೆ ಅಡಿಕೆ ಹಾಕಿ ಗೌರವದೊಂದಿಗೆ ಹಿಂತಿರುಗಿಸುವರು. ಕುಳಿತಲ್ಲಿಂದಲೇ ಪಾದ ಮುಟ್ಟಿ ನಮಸ್ಕರಿಸುವರು. ಈಗ ಊರುಗೌಡರ ಒಕ್ಕಣೆಯೊಂದಿಗೆ ಎಬ್ಬಿಸುವರು. ನಂತರ ವಧುವಿನ ಕಡೆಯ ಊರುಗೌಡರು ವರನ ಕಡೆಯ ಊರುಗೌಡರಿಗೆ ಮನೆಯ ಯಜಮನರಿಂದ ನೀರು ಕೊಡಿಸಿ ತುಪ್ಪದ ತಂಬಿಗೆ ಬಿಚ್ಚಲು ಕರೆಯುವರು. ಇಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಕಟ್ಟಿದ ತುಪ್ಪದ ತಂಬಿಗೆಯನ್ನು ಬಿಚ್ಚುವರು. (ತಂಬಿಗೆ ಕಟ್ಟಿದ ರೀತಿ ತಪ್ಪಿದಲ್ಲಿ ತಪ್ಪು ಕೇಳಿಸುತ್ತಾರೆ) ಬಿಚ್ಚಿದ ತುಪ್ಪವನ್ನು ವಧು/ವರರು ನಂದಾದೀಪಕ್ಕೆ ಹಾಕಿ ಕೈ ಮುಗಿಯುವರು.ಉಳಿದ ತುಪ್ಪವನ್ನು ಮನೆಯ ಒಡತಿ ಖಾಲಿ ಮಾಡಿ ಹೊದುಳು ಬಾಳೆಹಣ್ಣು, ಬೆಲ್ಲ, ವೀಳ್ಯದೆಲೆ, 1ಅಡಿಕೆ ಹಾಕಿ ಯಥಾ ಪ್ರಕಾರ ತಂಬಿಗೆಯ ಬಾಯಿ ಕಟ್ಟಿ ಮಣೆಯ ಮೇಲಿಡುತ್ತಾರೆ. ಹೊರಡುವ ಮೊದಲು ವರನ ಮನೆಯಲ್ಲಿ ನಡೆಯುವ ನಾಗೋಳಿಶಾಸ್ತ್ರಕ್ಕೆ ವಧುವಿನ ಕಡೆಯ ನಂಟರಿಷ್ಟರಿಗೆ ವರನ ಕಡೆಯವರು ಹರಿವಾಣದಲ್ಲಿ ಸೂಡಿ ವೀಳ್ಯದೆಲೆ, 10 ಅಡಿಕೆ ಇಟ್ಟು ಹೇಳಿಕೆ ಕೊಡಬೇಕು. ವಧು-ವರರು ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ, ತಾಯಿ ಎತ್ತಿ ಕೊಟ್ಟ ತುಪ್ಪದ ತಂಬಿಗೆಯನ್ನು ಬಲಕೈಯಲ್ಲಿ ಪಡಕೊಂಡು ಹೆಗಲಲ್ಲಿ ಧಾರೆ ಸೀರೆ ಹಾಕಿಕೊಂಡು ವರನೊಂದಿಗೆ ಮನೆಯಿಂದ ಹೊರಡುವರು. ಮನೆಯವರು ಸೂಚಿಸಿದ ಕುರುಂಟುವನ್ನು ಊರುಗೌಡರು ವರನ ಕಡೆಯ ಊರುಗೌಡರಿಗೆ ಹಸ್ತಾಂತರಿಸುವರು. ಈಗ ಊರುಗೌಡರ ನೇತೃತ್ವದಲ್ಲಿ ವರನ ದಿಬ್ಬಣ ಹಿಂತಿರುಗುವುದು (ದಿಬ್ಬಣ ಹೊರಡುವಾಗ ತಿಂಡಿ ತಿನಿಸುಗಳಿರುವ ಬುತ್ತಿ ಕೊಟ್ಟು ಕಳಿಸುವರು)

ಕುರುಂಟು (ಸಂಗಾತಿ) ಕಳುಹಿಸುವುದು
ವರನ ಮನೆಗೆ ದಿಬ್ಬಣ ಹೊರಡುವಾಗ ವಧುವಿನೊಂದಿಗೆ ಕಳುಹಿಸಿ ಕೊಡುವ ಪ್ರಾಯದ ಹೆಂಗಸು ಅಥವಾ ಸಣ್ಣ ವಯಸ್ಸಿನ ಹುಡುಗಿಯನ್ನು ಕುರುಂಟು ಎಂದು ಕರೆಯುವರು.

ವರನ ಮನೆ ಪ್ರವೇಶ :
ವಧುವಿನ ಮನೆಯಿಂದ ವರನ ಮನೆಯ ಚಪ್ಪರದಡಿಗೆ ಬಂದಾಗ (ವಧುವಿನ ಕೈಯಲ್ಲಿ ಒಗ್ಗಿ ಹಾಕಿದ ಜೋಡು ತೆಂಗಿನಕಾಯಿ ಹಾಗೂ ಧಾರಾ ಸೀರೆ ಹೆಗಲಲ್ಲಿ ಇರಬೇಕು) ಮುತ್ತೈದೆಯರು ಸೋಬಾನೆಯೊಂದಿಗೆ ಕುರ್ದಿ ಆರತಿ ಎತ್ತಿ ದೃಷ್ಟಿ ತೆಗೆಯುವರು. ಕಿರಿಯರು ಕಾಲಿಗೆ ನೀರು ಹೊಯ್ದು ಕಾಲು ತೊಳೆಯುವುದು ಕ್ರಮ. ಈ ಸಂದರ್ಭದಲ್ಲಿ ಮದುಮಗ 5 ವೀಳ್ಯದೆಲೆ, 1 ಅಡಿಕೆ ಹಾಗೂ ಪಾವಲಿಯನ್ನು ಇಬ್ಬರಿಗೂ ಕಾಣಿಕೆ ಕೊಡಬೇಕು. ಅಲ್ಲಿಂದ ಮೇಲ್ಕಟ್ಟಿನಡಿಗೆ ಬಂದು ಊರುಗೌಡರು ವಧು-ವರರನ್ನು ಹಾಗೂ ಕುರುಂಟುವನ್ನು ಮನೆಯ ಯಜಮಾನರಿಗೆ ಒಪ್ಪಿಸುವರು. ಮನೆಯ ಹಿರಿಯ ಮುತ್ತೈದೆಯರು ವಧು- ವರರನ್ನು ಸಾಂಪ್ರದಾಯಿಕವಾಗಿ ಮನೆಯ ಒಳಗೆ ಬರಮಾಡಿಕೊಂಡು ಊರುಗೌಡರು ಒಕ್ಕಣೆಯೊಂದಿಗೆ ಹಸೆ ಚಾಪೆ ಮೇಲೆ ಕುಳ್ಳಿರಿಸುವರು. 5 ಜನ ಮುತ್ತೈದೆಯರಿಂದ ಹಾಲು ತುಪ್ಪದ ಶಾಸ್ತ್ರ ಮುಗಿಸಿ ಮನೆಯ ಹಿರಿಯ ಮುತ್ತೈದೆ ಕೊಟ್ಟಂತ ಹಾಲನ್ನು ಕುಡಿದು ವಧು-ವರರು 5 ವೀಳ್ಯದೆಲೆ, 1 ಅಡಿಕೆಯ ಗೌರವದೊಂದಿಗೆ ಲೋಟವನ್ನು ಹಿಂತಿರುಗಿಸುವರು. ನಂತರ ಊರುಗೌಡರು ಒಕ್ಕಣೆಯೊಂದಿಗೆ ವಧು-ವರರನ್ನು ಎಬ್ಬಿಸುವರು. ತದನಂತರ ವಧು-ವರರು ಹಿರಿಯರ ಆಶೀರ್ವಾದ ಪಡೆಯುವರು.
ನಾಗೋಳಿ ಶಾಸ್ತ್ರ : ಕುರ್ದಿ ನೀರಿನಿಂದ ತುಂಬಿಸಿದ ಹಂಡೆಯೊಳಗೆ ಹಾಕಿದ ಉಂಗುರವನ್ನು ವಧು-ವರರು ಅನ್ವೇಷಿಸಿ ಮೊದಲು ಪಡೆದವರು ಗೆದ್ದಂತೆ ಎಂದು ಭಾವಿಸುವುದು. ಆ ನಂತರ ಕುರ್ದಿ ನೀರನ್ನು ಪರಸ್ಪರ ಎರಚಿಕೊಳ್ಳುವರು. ಇದಾದ ನಂತರ ಮನೆಯ ಪಕ್ಕದಲ್ಲಿರುವ ಹಟ್ಟಿಗೆ ತೆರಳಿ ಗೊಬ್ಬರದ ಬುಟ್ಟಿಯನ್ನು ವರನು ತುಂಬಿಸಿ ವಧುವಿನ ತಲೆಯ ಮೇಲೆ ಇಡುವರು. ಅಲ್ಲೇ ಇಟ್ಟಂತ ಹಾಲೆ ಮರದ ಅಥವಾ ಮಾವಿನ ಮರದ ಗೆಲ್ಲನ್ನು ಹುಡುಗ ಹೆಗಲ ಮೇಲಿರಿಸಿಕೊಂಡು ಮುಂದೆ ಸಾಗುವರು ಹಿಂಬಾಲಿಸಿ ಬಂದಂತಹ ವಧುವು, ವರನು ಗದ್ದೆಯಲ್ಲಿ ಹಾಕಿದಂತಹ ಸೊಪ್ಪು ಗೆಲ್ಲಿನ ಮೇಲೆ ಗೊಬ್ಬರವನ್ನು ಹಾಕುವಳು.ಬರುವಾಗ ಬಾವಿಯಿಂದ ನೀರುಸೇದಿ ವಧು ತಲೆಯ ಮೇಲೆ ಹೊತ್ತುಕೊಂಡು ಬರುವಳು. ದಾರಿಯುದ್ದಕ್ಕೂ ನೆಂಟರಿಷ್ಟರು ಸೇರಿ ವಧು ತಡೆಯೊಡ್ಡಲ್ಪಟ್ಟಲ್ಲಿ ಅದನ್ನು ಬೇಧಿಸುತ್ತಾ ವರನು ವಧುವನ್ನು ಮನೆಗೆ ಕರೆತರುವನು. ವಧುವು ತಂದ ನೀರನ್ನು ಅಂದಿನ ಭೋಜನಕ್ಕೆ ಉಪಯೋಗಿಸುವರು.

ಪೆಟ್ಟಿಗೆ ತೆರೆಯುವ ಕ್ರಮ : ಮನೆಯವರು ಹತ್ತಿರದ ನೆಂಟರಿಷ್ಟರೆಲ್ಲ ಸೇರಿ ಪೆಟ್ಟಿಗೆ ತೆರೆದು ವಧುವಿನ ಮನೆಯಿಂದ ಏನೇನು ಕೊಟ್ಟಿರುತ್ತಾರೆಂಬ ಬಗ್ಗೆ ವೀಕ್ಷಿಸುವುದು ಕ್ರಮ.


ಮರು(ಮರಿ)ದಿಬ್ಬಣ : ಮದುವೆ ಶಾಸ್ತ್ರ ಮಗಿದ ಬಳಿಕ ವರನ ಕಡೆಯವರ ಆಹ್ವಾನದ ಮೇರೆಗೆ ವಧುವಿನ ಕಡೆಯ ನೆಂಟರಿಷ್ಟರು ಸೇರಿಕೊಂಡು ವರನ ಮನೆಗೆ ಸಮ್ಮಾನಕ್ಕೆಂದು ದಿಬ್ಬಣದಲ್ಲಿ ತೆರೆಳುವರು. ಹೀಗೆ ಬಂದ ದಿಬ್ಬಣವು ಮನೆ ಸಮೀಪ ತಲುವ ಸೂಚನೆ ದೊರೆತ ಕೂಡಲೇ ವರನ ಕಡೆಯ ಊರು ಗೌಡರ ಸಮೇತ ವರನ ಕಡೆಯವರು ಹೋಗಿ ದಿಬ್ಬಣವನ್ನು ಎದುರ್ಗೊಂಡು ಮನೆಗೆ ಬರಮಾಡಿಕೊಂಡು ಚಪ್ಪರದಡಿಯಲ್ಲಿ ಕುಳ್ಳಿರಿಸಿ ಸಿಯಾಳ, ಬೆಲ್ಲ-ನೀರು ಕೊಟ್ಟು ಸತ್ಕರಿಸುತ್ತಾರೆ. ನಂತರ ಸಮ್ಮಾನದ ಊಟ ನಡೆಯುತ್ತದೆ.

ತುಪ್ಪದ ಕಾರ್ಯಕ್ರಮ (ವಧುವಿನ ಮನೆಯಲ್ಲಿ) : 8ನೇ ದಿನದಲ್ಲಿ ಊರುಗೌಡರೊಂದಿಗೆ ವಧು-ವರರು ಪದ್ಧತಿಯಂತೆ ತುಪ್ಪದ ತಂಬಿಗೆ, ಒಗ್ಗಿ ಹಾಕಿದ 2 ತೆಂಗಿನಕಾಯಿ ಕನಿಷ್ಠ 5 ಜನ ಹಾಗೂ ಕುರುಂಟು, ನಿಶ್ಚಯಿಸಿದ ದಿನದಂದು ಮಧ್ಯಾಹ್ನದ ನಂತರ ವಧುವಿನ ಮನೆಗೆ ತೆರಳುವರು (ಕುರುಂಟುವಿಗೆ ಸಾಮಾನ್ಯವಾಗಿ ಬಟ್ಟೆ ಉಡುಗೊರೆಯನ್ನು ನೀಡುತ್ತಾರೆ) ವಧುವಿನ ಮನೆ ತಲುಪಿದ ತಕ್ಷಣ ಕುರ್ದಿ ಆರತಿಯೊಂದಿಗೆ ವಧುವಿನ ಮನೆಯವರು ಬರಮಾಡಿಕೊಳ್ಳುತ್ತಾರೆ. ಮನೆಯ ಹಿರಿಯ ಮುತ್ತೈದೆಯರು ಒಳ ಕರೆದುಕೊಂಡು ಹೋಗುತ್ತಾರೆ. ಹಸೆ ಚಾಪೆಯ ಬಲಬದಿಯಲ್ಲಿ ಇರಿಸಿದ ಮಣೆಯ ಮೇಲೆ ತುಪ್ಪದ ಚೆಂಬು, ತೆಂಗಿನಕಾಯಿ ಇರಿಸುವರು. ನಂತರ ಒಕ್ಕಣೆಯೊಂದಿಗೆ ಊರುಗೌಡರು ಹಸೆ ಚಾಪೆಯಲ್ಲಿ ಕುಳ್ಳಿರಿಸಿ ಇಬ್ಬರಿಗೂ 5 ವೀಳ್ಯದೆಲೆ, 1 ಅಡಿಕೆ ಕೊಡುವರು. ಕನಿಷ್ಠ 5 ಜನ ಮುತ್ತೈದೆಯರಿಂದ ಶೇಷ ಹಾಕಿಸಿ ಹಾಲು ತುಪ್ಪ ಕ್ರಮ ಮಾಡುತ್ತಾರೆ. ಮನೆಯ ಹಿರಿಯ ಯಜಮಾನಿ ಕುಡಿಯಲು ಹಾಲು ಕೊಡುವರು. ಹಾಲು ಕುಡಿದ ನಂತರ ಕೈಯಲ್ಲಿದ್ದ ವೀಳ್ಯದೆಲೆ, ಅಡಿಕೆಯನ್ನು ಹಾಲಿನ ಲೋಟಕ್ಕೆ ಹಾಕಿ ಹಿಂತಿರುಗಿಸಿ ಕುಳಿತಲ್ಲಿಂದಲೇ ಪಾದ ಮುಟ್ಟಿ ನಮಸ್ಕರಿಸುವರು. ಊರುಗೌಡರ ಒಕ್ಕಣೆಯೊಂದಿಗೆ ಹಸೆ ಚಾಪೆಯಿಂದ ಏಳಿಸುವರು. ನಂತರ ವಧುವಿಗೆ ಕಟ್ಟಿದ ಮುಹೂರ್ತದ ಮಣಿಯನ್ನು ಕಟ್ಟಿದವರು ಬಿಚ್ಚುವರು. ಹಿರಿಯರ ಕಾಲುಮುಟ್ಟಿ ನಮಸ್ಕರಿಸುವರು.
ಬಾಗಿಲು ತಡೆಯುವ ಕ್ರಮ:
ಹೊರಗೆ ಬರುವಾಗ ಮದುಮಗನ ಭಾವ ಮೈದುನರು ಬಾಗಿಲು ತಡೆಯುವ ಕ್ರಮವಿದೆ. ಇಲ್ಲಿ ಸೋಬಾನೆಯೊಂದಿಗೆ ಇತ್ತಂಡದಲ್ಲಿ ಪೈಪೋಟಿ ನಡೆಯುತ್ತದೆ. ಇಲ್ಲಿ ಮದುಮಗ, ಹೆಣ್ಣು ಹುಟ್ಟಿದರೆ ನಾನು ನಿಮಗೆ ಕೊಡುತ್ತೇನೆ. ಗಂಡು ಹುಟ್ಟಿದರೆ ನಿಮ್ಮ ಹುಡುಗಿಯನ್ನು ಮನೆ ತುಂಬಿಸಿಕೊಳ್ಳುತ್ತೇವೆ ಎಂದು ವಾಗ್ದಾನ ಕೊಡುವನು. ಬಾಗಿಲು ತಡೆಯುವ ಕ್ರಮ ಮುಗಿಸಿ ಹೊರಗೆ ಬಂದ ನಂತರ ಔಪಚಾರಿಕವಾಗಿ ಬಾಯಾರಿಕೆಯ ವ್ಯವಸ್ಥೆ ನಡೆಯುತ್ತದೆ.
ಕುರುಂಟು ಒಪ್ಪಿಸುವುದು:
ಕುರುಂಟುವನ್ನು ವಧುವಿನ ಊರುಗೌಡರಿಗೆ ವರನ ಕಡೆಯ ಊರುಗೌಡರು ಒಪ್ಪಿಸುವರು.ಆ ನಂತರ ಮನೆ ಯಜಮಾನ ವರನ ಕಡೆಯ ಊರುಗೌಡರಿಗೆ ತುಪ್ಪದ ತಂಬಿಗೆ ಬಿಚ್ಚಲು ಆಹ್ವಾನಿಸುತ್ತಾರೆ. ಕ್ರಮಬದ್ಧವಾಗಿ ಕಟ್ಟಿದ ತುಪ್ಪದ ತಂಬಿಗೆಯನ್ನು ವಧುವಿನ ಕಡೆಯ ಊರುಗೌಡರು ಬಿಚ್ಚಿ ವಧು-ವರರಿಂದ ನಂದಾದೀಪಕ್ಕೆ ತುಪ್ಪ ಹಾಕಿಸುವರು (ತುಪ್ಪದ ಬಾಯಿ ಕಟ್ಟಿದ್ದು ತಪ್ಪಿದಲ್ಲಿ ವರನ ಕಡೆಯಿಂದ ತಪ್ಪು ಕೇಳುವರು) ಉಳಿದ ತುಪ್ಪವನ್ನು ಆ ದಿವಸದ ಊಟಕ್ಕೆ ಬಡಿಸುವುದು ಕ್ರಮ.
ಊಟಕ್ಕೆ ವಧು-ವರರು ಹಾಗೂ ವರನ ಕಡೆಯ ಊರುಗೌಡರು, ಅಡೋಳಿ, ಕಂಚಿಮಿ ಸಹಿತ ಪೂರ್ವಾಭಿಮುಖವಾಗಿ ಚಪ್ಪರದಡಿಯಲ್ಲಿ ಕುಳಿತುಕೊಳ್ಳುವರು. ಊಟಕ್ಕೆ ಇವರಿಗೆ ವಿಶೇಷವಾಗಿ ತುದಿ ಬಾಳೆಲೆಯನ್ನು ಕೊಡಬೇಕು. ಇವರ ಎಲೆಯ ತುದಿ ಭಾಗಕ್ಕೆ ಆ ದಿನ ತಯಾರಿಸಿದ ವಿಶೇಷ ಚಟ್ನಿಯನ್ನು ಬಡಿಸಿ, ವಧುವಿನ ಸಹೋದರರು ಹಾಗೂ ಬಳಗದವರು ಒಂದು ತಂಬಿಗೆ ನೀರನ್ನು ಇಟ್ಟು ಚಟ್ನಿಯ ಹೆಸರು ಹೇಳಿ ಊಟದಿಂದ ಏಳಬೇಕು ಎಂದು ಹೇಳುವರು. ಭೋಜನವಾಗುತ್ತಿರುವಾಗಲೇ ವರನ ಕಡೆಯವರು ಚಟ್ನಿಗೆ ಬಳಕೆ ಮಾಡಿದ ಹೆಚ್ಚುವರಿ ವಸ್ತುವಿನ ಹೆಸರು ಹೇಳುವುದು ಸಾಗುತ್ತದೆ. ಹೆಸರು ಹೇಳದಿದ್ದಲ್ಲಿ ವರನ ಕಡೆಯವರು ತಪ್ರೊಪ್ಪಿಕೊಂಡು ಬೋಜನದಿಂದ ಏಳುವರು. ಹಿಂದಿನ ಕಾಲದಲ್ಲಿ ಆ ದಿನ ರಾತ್ರಿ ಅಲ್ಲೇ ತಂಗಿದ್ದು ಮರುದಿನ ಹೊರಡುವುದು ಕ್ರಮ.
ವರನ ಮನೆಗೆ ಹೊರಡುವ ಮೊದಲು ಊರುಗೌಡರು ವಧು-ವರರನ್ನು ಮನೆಯ ಒಳಗಡೆ ಹಸೆ ಚಾಪೆಯ ಮೇಲೆ ಕುಳ್ಳಿರಿಸುತ್ತಾರೆ. [ತುಪ್ಪದ ತಂಬಿಗೆಗೆ ಕಲಸಿದ ಸಿಹಿ ಅವಲಕ್ಕಿ (ಅವಲಕ್ಕಿ+ಬಾಳೆಹಣ್ಣು+ಬೆಲ್ಲ) ಮತ್ತು 5 ವೀಳ್ಯದೆಲೆ, 1 ಅಡಿಕೆ ಹಾಕಿ ಬಾಯಿ ಕಟ್ಟಬೇಕು. (ತುಪ್ಪದ ತಂಬಿಗೆ ಕಟ್ಟುವುದು ತಾಯಿ ಅಥವಾ ಹಿರಿಯ ಮುತ್ತೈದೆ) ] ಊರುಗೌಡ ಮನೆ ದೈವ ದೇವರುಗಳಿಗೆ ಬಿನ್ನಹ ಮಾಡಿಯಾದ ಮೇಲೆ ವಧು-ವರರು ದೀಪಕ್ಕೆ ಕೈಮುಗಿದು ಹಿರಿಯರ ಆಶೀರ್ವಾದ ಪಡೆಯುವರು. ತಾಯಿ (ಹಿರಿಯ ಮುತ್ತೈದೆಯರು) ತಂಬಿಗೆ ಎತ್ತಿ ಕೊಡುವರು. ಆನಂತರ ವಧು-ವರರನ್ನು ಮನೆಯಿಂದ ಬೀಳ್ಕೊಡುವರು ಮನೆಗೆ ಬಂದ ಮೇಲೆ ವಧು-ವರರನ್ನು ಹಸೆ ಚಾಪೆಯಲ್ಲಿ ಕುಳ್ಳಿರಿಸಿ ವರನ ಮುಹೂರ್ತದ ಮಣಿಯನ್ನು ಕಟ್ಟಿದವರು ಬಿಚ್ಚುವರು. ವರನ ಕಾಲುಂಗುರವನ್ನು ಅಡೋಳಿ ತೆಗೆಯಬೇಕು.

ಎಂಟು ಉಳಿಯುವುದು (ಕಾಲು ಬಚ್ಚೇಲು) (ಪೂರ್ವ ಪದ್ಧತಿ ಪ್ರಕಾರ ಮದುಮಗಳು ತವರು ಮನೆಯಲ್ಲಿ ಉಳಿಯುವುದು) : ವಧುವಿನ ಬಂಧು-ಬಳಗದವರು ನಿಶ್ಚಸಿದ ದಿನ ವರನ ಮನೆಗೆ ಹೋಗಿ ಅಂದು ರಾತ್ರಿ ಉಳಿದು ಮಾರನೆ ದಿನ ಮದುಮಗಳನ್ನು ಕರೆದುಕೊಂಡು ಬರುವರು. 7ನೇ ದಿನದ ನಂತರ ವರ ಮತ್ತು ವರನ ಕಡೆಯ ಸಂಬಂಧಿಕರು ಹುಡುಗಿ ಮನೆಗೆ ಬಂದು ಒಂದು ರಾತ್ರಿ ಉಳಿದುಕೊಂಡು ಹುಡುಗಿಯನ್ನು ಕರೆದುಕೊಂಡು ಹೋಗುವರು. ಉಳಿದು ಹೋಗುವಾಗ ವಧು-ವರರು ದೀಪಹಚ್ಚಿ ಕೈಮುಗಿದು ಅನುಗ್ರಹ ಬೇಡಿ ಹೋಗುವುದು ವಾಡಿಕೆ.

ಆಟಿ ಕುಳಿತುಕೊಳ್ಳುವ ಕ್ರಮ (ಕರ್ಕಾಟಕ ಮಾಸ) : ನಿಗದಿಪಡಿಸಿದ ದಿನ ವಧುವಿನ ಮನೆಯವರು ವರನ ಮನೆಗೆ ಬಂದು ಅಂದು ರಾತ್ರಿ ಉಳಿದುಕೊಂಡು ಮಾರನೇ ದಿನ ವಧುವನ್ನು ಕಳುಹಿಸಿಕೊಡುವರು. ಹೊರಡುವಾಗ ದೇವರಿಗೆ ಕೈ ಮುಗಿದು ಹಿರಿಯರ ಆಶೀರ್ವಾದ ಪಡೆಯಬೇಕು. ಮತ್ತೆ ಆಟಿ ತಿಂಗಳು ಕಳೆದ ನಂತರ ವರನ ಕಡೆಯವರು ವರನ ಸಮೇತ ದಿನ ಮುಂಚಿತವಾಗಿ ಬಂದು ಉಳಿದು ಮಾರನೇ ದಿನ ಹುಡುಗಿಯನ್ನು ಕರೆದುಕೊಂಡು ಹೋಗುವರು. (ಪೂರ್ವ ಪದ್ಧತಿ ಪ್ರಕಾರ ಈ ಮಾಸದಲ್ಲಿ ಹುಡುಗ ಹುಡುಗಿ ಮುಖ ನೋಡಬಾರದು ಎಂಬ ನಂಬಿಕೆಯಿದೆ).

ಹೊಸ ಅಕ್ಕಿ ಊಟದ ಕ್ರಮ : ವಧುವಿನ ಮನೆಯಲ್ಲಿ ಹೊಸ ಅಕ್ಕಿ ಊಟದ ಆಹ್ವಾನದ ಮೇರೆಗೆ ವಧು-ವರರು ತುಪ್ಪದ ತಂಬಿಗೆಯೊಂದಿಗೆ ವಧುವಿನ ಮನೆಗೆ ಹೋಗುವರು. ಆ ರಾತ್ರಿ ಅಲ್ಲೇ ಉಳಿದು ಹೊಸ ಅಕ್ಕಿ (ಕಾಯಿಗಂಜಿ) ಊಟದ ಕ್ರಮ ಮಾಡುತ್ತಾರೆ. ಮಾರನೇ ದಿನ ಬೆಳಿಗ್ಗೆ ಕೋಳಿ ಪದಾರ್ಥ, ನೀರು ದೋಸೆಯ ಸಮ್ಮಾನ ಉಂಡು 5 ವೀಳ್ಯದೆಲೆ. ಒಂದು ಅಡಿಕೆ ಹಾಕಿ ಇರಿಸಿದ ತುಪ್ಪದ ತಂಬಿಗೆಯೊಂದಿಗೆ ಹಿರಿಯರ ಆಶೀರ್ವಾದ ಪಡೆದು ವರನ ಮನೆಗೆ ಹಿಂತಿರುಗುವರು.

ದೀಪಾವಳಿ ಹಬ್ಬಕ್ಕೆ ಬರುವುದು :
ವಧುವಿನ ಮನೆಯಲ್ಲಿ ನಡೆಯುವ ದೀಪಾವಳಿ ಹಬ್ಬದ ಆಹ್ವಾನದ ಪ್ರಕಾರ ವಧು- ವರರು ತುಪ್ಪದ ತಂಬಿಗೆಯೊಂದಿಗೆ ವಧುವಿನ ಮನೆಗೆ ಹೋಗುವರು. ದೀಪಾವಳಿ ಹಬ್ಬದ ಆಚರಣೆಯಲ್ಲಿ ಭಾಗವಹಿಸಿ ಮಾರನೇ ದಿನ ಬೆಳಿಗ್ಗೆ 5 ವೀಳ್ಯದೆಲೆ, 1 ಅಡಿಕೆ ಹಾಕಿ ಇರಿಸಿ ತುಪ್ಪದ ತಂಬಿಗೆಯೊಂದಿಗೆ ಹಿರಿಯರ ಆಶೀರ್ವಾದ ಪಡೆದು ವರನ ಮನೆಗೆ ಹಿಂತಿರುಗುವರು. (ವಧುವರರಿಗೆ ಉಡುಗೊರೆ ನೀಡುವರು)

ಮದುವೆಗೆ ಸಂಬಂದಿಸಿದ ವಿವರಗಳು

ಹಾಲುತುಪ್ಪ ಕುಡಿಸುವ ಕ್ರಮ : (ಹಾಲು ತುಪ್ಪ ಕುಡಿಸುವವರ ಸಂಖ್ಯೆ ಬೆಸವಾಗಿರಬೇಕು) ಮೊದಲು ದೀಪಕ್ಕೆ ಅಕ್ಕಿ ಹಾಕಿ ಕೈಮುಗಿಯುವರು. ವಧು/ವರರಿಗೆ ಅಕ್ಕಿ ಶೇಷೆ ಹಾಕಿ ಅವರ ಕೈಯಲ್ಲಿದ್ದ ವೀಳ್ಯವನ್ನು ಅಕ್ಕಿ ಹರಿವಾಣದಲ್ಲಿಡಬೇಕು. ಬಲಗೈ ಉಂಗುರ ಬೆರಳನ್ನು ಒಂದು ಸಲ ನೀರಿಗೆ ಮತ್ತೊಂದು ಸಲ ಹಾಲಿಗೆ ಮುಟ್ಟಿಸಬೇಕು. (5 ಬಾರಿ ಹೀಗೆ ಮಾಡಬೇಕು) ಆಮೇಲೆ ವೀಳ್ಯವನ್ನು ತೆಗೆದು ಕೈಯಲ್ಲಿ ಕೊಡುವರು. ಹೀಗೆ ಉಳಿದ ಮುತ್ತೈದೆಯರು ಮಾಡಬೇಕು. ತಾಯಿ ಅಥವಾ ಹಿರಿಯ ಮುತ್ತೈದೆಯರು ಕುಡಿಯಲು ಹಾಲು ಕೊಡಬೇಕು. ಹಾಲು ಕುಡಿದ ಲೋಟಕ್ಕೆ ವಧುವರರು ಕೈಯಲ್ಲಿದ್ದ ಎಲೆ ಅಡಿಕೆಯನ್ನು ಎಲೆಯ ತುದಿ ಮೇಲಿರುವಂತೆ ಹಾಕಬೇಕು. ನಂತರ ಊರುಗೌಡರು ಒಕ್ಕಣೆಯೊಂದಿಗೆ...... ಹಸೆ ಚಾಪೆಯಿಂದ ಎಬ್ಬಿಸುವರು.
ಕಂಚಿನ ಅಕ್ಕಿ (ಕಲಶಗನ್ನಡಿ) : ಕಂಚಿನ ಬಟ್ಟಲಲ್ಲಿ 5 ಕುಡ್ಲೆ ಬೆಳ್ತಿಗೆ ಅಕ್ಕಿ, ಕೊಂಬಿನಗಿಂಡಿ, 5 ವೀಳ್ಯದೆಲೆ, ಒಂದು ಅಡಿಕೆ ಒಂದು ನಾಣ್ಯ, ಸುಲಿದ ಜುಟ್ಟು ಇದ್ದ ತೆಂಗಿನಕಾಯಿ, ಮರದ ಬಾಚಣಿಗೆ, ಬಿಟ್ಟೋಲೆ (ತಾಳೆಮರದ ಓಲೆಯ ಸುರುಳಿ), ಕರಿಮಣಿ, ಕನ್ನಡಿ ಇದ್ದ ಕುಂಕುಮ ಸಹಿತ ಕರಡಿಗೆ, ಸಣ್ಣ ಹಣತೆ (ದೀಪ ಉರಿಸಿರಬೇಕು) ಹಿಂಗಾರ, ಹೂ, ಮಾವಿನ ತುದಿಯನ್ನು ಇರಿಸಬೇಕು
ಕೊಂಬಿನಗಿಂಡಿ (ಕಲಶ) : ಗಿಂಡಿ ಒಳಗಡೆ ಹಾಲು, ನೀರು, ತುಪ್ಪ ಇರಬೇಕು. ಮಾವಿನ ಎಲೆ ತುದಿಯ ಮೇಲೆ ಬರುವಂತೆ ಹಿಂಗಾರ ಮತ್ತು ತೆಂಗಿನ ಕಾಯಿಯೊಂದಿಗೆ ಗಿಂಡಿಯಲ್ಲಿಡುವುದು.
ಕಂಚಿಮೆ :- ವಧು-ವರನ ಸಹೋದರಿಯರು ಕಂಚಿಮೆಯಾಗಿರುತ್ತಾರೆ. ಕೈ ತುಂಬಾ ಬಳೆ ತೊಟ್ಟು ಹಣೆಗೆ ತಿಲಕವಿಟ್ಟು, ಹೂ ಮುಡಿದು ಸಿಂಗಾರದೊಂದಿಗೆ ಹಿಂದೂ ಸಂಸ್ಕೃತಿಯ ಉಡುಗೆ ತೊಡುಗೆಯೊಂದಿಗೆ ಕಂಚಿಮೆ ಇರಬೇಕು. ಕಂಚಿನ ಅಕ್ಕಿಯನ್ನು (ಕಳಶಕನ್ನಡಿ) ಬಹಳ ಜಾಗೃತೆಯಿಂದ ಹಿಡಿದುಕೊಳ್ಳಬೇಕು, ಉರಿಸಿದ ದೀಪ ನಂದದಂತೆ ನೋಡಿಕೊಳ್ಳಬೇಕು.
ಮುಹೂರ್ತದ ಮಣಿ (ಚಿನ್ನದ ಸರ) : ಮುಹೂರ್ತದ ಮಣಿಯನ್ನು ಎಣ್ಣೆ ಅರಶಿನಕ್ಕೆ ಮೊದಲು ಊರುಗೌಡರು/ ಸೋದರಮಾವ ಕಟ್ಟಬೇಕು. ಮುಹೂರ್ತದ ಮಣಿಯನ್ನುಗುರುಹಿರಿಯರ ನೆನಪಿಸಿಕೊಂಡು ಮೇಲ್ಕಟ್ಟಿನಡಿಯಲ್ಲಿ ಕಟ್ಟಬೇಕು. ಮುಹೂರ್ತದ ಮಣಿಯನ್ನು ಕಟ್ಟುವುದು ಮದುವೆ ಕಾರ್ಯದ  ಆರಂಭದ ಸಂಕೇತವಾಗಿರುತ್ತದೆ. ಮಣಿಕಟ್ಟಿದ ಮೇಲೆ ವಧು-ವರರು ಮದ್ದುಮಾಂಸಾದಿಗಳನ್ನು ಸೇವನೆ ಮಾಡಬಾರದು. ಪೂರ್ವ ಪದ್ಧತಿ ಪ್ರಕಾರ ಮದುವೆಯ ನಂತರ 8 ದಿನಕ್ಕೆ ಸರಿಯಾಗಿ ವಧುವಿನ ಮನೆಗೆ ತುಪ್ಪ ತೆಗೆದುಕೊಂಡು ಹೋಗಿ  ಹಸೆ ಚಾಪೆಯಲ್ಲಿ ಕುಳ್ಳಿರಿಸಿ ಹಾಲು ತುಪ್ಪ ಶಾಸ್ತ್ರ ಮುಗಿಸಿ ಹಸೆ ಚಾಪೆಯಿಂದ ಏಳುವ ಮೊದಲು ವಧುವಿನ ಮುಹೂರ್ತದ ಮಣಿಯನ್ನು ಬಿಚ್ಚಿಸುವರು. ವರನ ಮುಹೂರ್ತದ ಮಣಿಯನ್ನು ವಧುವಿನ ಮನೆಯ ತುಪ್ಪ ಶಾಸ್ತ್ರ ಮುಗಿಸಿ ವರನ ಮನೆಗೆ ಬಂದ ಮೇಲೆ ಹಸೆ ಚಾಪೆಯಲ್ಲಿ ಕುಳ್ಳಿರಿಸಿ ಮುಹೂರ್ತದ ಮಣಿಯನ್ನು ಮತ್ತು ವರನ ಕಾಲುಂಗುರವನ್ನು ಅಡೋಳಿ ತೆಗೆಯಬೇಕು. ಅಲ್ಲಿವರೆಗೆ ವಧು-ವರರ ಪ್ರಥಮ ಸಮಾಗಮ ಆಗುವಂತಿಲ್ಲ.

ಬಾಸಿಂಗ :

1 ಎಸಳು ಪಿಂಗಾರವನ್ನು 8ರ ಆಕೃತಿಯಲ್ಲಿ ಮಡಚಿ ನೂಲಿನಿಂದ ಸುತ್ತಿ ಕಟ್ಟಿ ಸುವುದು.

ಪಟ್ಟ : (ತೆಂಗಿನ ಅಥವಾ ತಾಳೆಯ ಒಂದು ಗರಿ) ಒಲಿಯ 8 ರ ಆಕೃತಿಯಲ್ಲಿ ನೂಲಿನ ಎರಡೂ ಬದಿಗೆ ಕಟ್ಟಬೇಕು .ಬಲ ಬದಿಯಲ್ಲಿ ಸೂರ್ಯ, ಎಡಬದಿಯಲ್ಲಿ ಚಂದ್ರನ ಚಿತ್ರವಿರಬೇಕು.

ಕುರುಂಟು:
ಹೆಣ್ಣು ಒಪ್ಪಿಸಿ ಕಳಿಸುವಾಗ ಮದುಮಗಳ ಜೊತೆ ತುಪ್ಪ ತರುವಲ್ಲಿವರೆಗೆ ಇರುವ ಸಂಗಾತಿ. (ಮದುಮಗಳ ಕಿರಿಯ ಸಹೋದರಿ ಅಥವಾ ಸಹೋದರ, ಯಾರೂ ಇಲ್ಲದ ಪಕ್ಷದಲ್ಲಿ ಪ್ರಾಯದ ಹೆಂಗಸರು ಹೋಗಬಹುದು) ಕುರುಂಟುವಿಗೆ ವರನ ಮನೆಯಲ್ಲಿ ಸಾಮನ್ಯವಾಗಿ ಹೊಸಬಟ್ಟೆ ಉಡುಗೊರೆ ನೀಡಬೇಕು.

ಕೊಡಿಯಾಳು : ವರನ ಕಡೆಯ ಪ್ರತಿನಿಧಿ

ಗಂಗೆ ಪೂಜೆ ಕ್ರಮ : ಒಲಿಯ ಹೊಸ ಚಾಪೆ, 5 ತುದಿ ಬಾಳೆ ಎಲೆ, ಒಂದು ತೆಂಗಿನಕಾಯಿ, ಒಂದು ಚಿಪ್ಪು ಬಾಳೆಹಣ್ಣು, ಒಂದು ಅಚ್ಚು ಬೆಲ್ಲ, ಅವಲಕ್ಕಿ. ಕತ್ತಿ, 5 ಕಲಶದ ಚೆಂಬು, ಒಂದು ಬಿಂದಿಗೆ, ನೀರು, ಸಿದ್ಧಪಡಿಸಿದ ಕಂಚಿನಕ್ಕಿ, ಊದುಬತ್ತಿ.

ಕಲಶ : ಕಲಶದ ಒಳಗೆ ನೀರಿರಬೇಕು. 3 ಎಲೆಯಿರುವ ಹಲಸು ಹಾಗೂ ಮಾವಿನ ತುದಿಗಳು ಮತ್ತು ಅದರೊಳಗೆ 5 ವೀಳ್ಯದೆಲೆ, 1 ಅಡಿಕೆ ಇರಬೇಕು.

ಮದುಮಗ (ಳು) ಎಣ್ಣೆ ಅರಸಿನ ನಂತರ ಸ್ನಾನ ಮಾಡಿ ಸಿಂಗರಿಸಿಕೊಂಡು ಕಂಚಿನಕ್ಕಿ ಸಮೇತ ಮೊದಲೇ ಗೊತ್ತುಪಡಿಸಿದ ಬಾವಿಕಟ್ಟೆ ಅಥವಾ ತೆಂಗಿನಮರ (ಫಲಬರುವ ಮರ)ಕ್ಕೆ ಪೂರ್ವಾಭಿಮುಖವಾಗಿ ಚಾಪೆ ಹಾಸಿ ಅದರ ಮೇಲೆ ಕಂಚಿನಕ್ಕಿ ಇಟ್ಟು ಕೊಡಿ ಬಾಳೆ ಎಲೆ ಹಾಕಿ ಅವಲಕ್ಕಿಯನ್ನು ಸಿದ್ಧಪಡಿಸಿ ನಂತರ ಮದುಮಗ(ಳು) 5 ಎಲೆ ಹಾಕಿ ಸಿದ್ಧಪಡಿಸಿದೆ ಅವಲಕ್ಕಿ, ಬೆಲ್ಲವನ್ನು ಬಡಿಸಿ. ಬಾಳೆಹಣ್ಣು ಇಟ್ಟು, ಕಾಯಿ ಒಡೆದು ಎರಡು ಎಲೆಗೂ ಕಾಯಿ ಗಡಿ ಇಟ್ಟು ಊದುಬತ್ತಿಯಿಂದ ಆರತಿ ಮಾಡಿ ಕೈಮುಗಿದು ಎಲ್ಲರೂ ಮೂರು ಅಥವಾ ಐದು ಸುತ್ತು ಬಂದು ಮದುಮಗ(ಳು) ಕಾಯಿ ಗಡಿ ಇದ್ದ ಎಲೆಯನ್ನು ಗಂಡು ಮಗುವಿಗೂ ಇನ್ನೊಂದನ್ನು ಹೆಣ್ಣುಮಗುವಿಗೆ ಕೊಡುವುದು ಮತ್ತೆ ಎಲ್ಲರೂ ಪ್ರಸಾದ ಹಂಚಿ ತೆಂಗಿನ ಮರಕ್ಕೆ ನೀರು ಹೊಯ್ದು ಚಪ್ಪರದ ಅಡಿಗೆ ಬರುವುದು. (ಸೋಬಾನೆ ಹೇಳಬೇಕು)

ವೀಳ್ಯ ಶಾಸ್ತ್ರದ ಕಾರ್ಯದಲ್ಲಿ ಸಮಸ್ತರಲ್ಲಿ ಕೇಳಿ ವೀಳ್ಯ ಕಟ್ಟುವಾಗ ಹೇಳುವ ಕ್ರಮ

ಹತ್ತು ಕುಟುಂಬ ಹದಿನೆಂಟು ಗೋತ್ರದ ಬಂಧು, ಬಾಂಧವರು, ನೆಂಟರಿಷ್ಟರು, ಗುರುಮನೆ ಕಟ್ಟೆಮನೆ, ಸೀಮೆಮನೆ, ಮಾಗಣೆಮನೆ ಸಮಸ್ತರಲ್ಲಿ ಕೇಳಿ ...... ಗೋತ್ರದ ಹೆಸರಿನ ವರನಿಂದ------ ಗೋತ್ರದ----- ಹೆಸರಿನ ವಧುವಿಗೆ ಸ್ವಜಾತಿ ಬಾಂಧವರ ಸಮ್ಮುಖದಲ್ಲಿ ವೀಳ್ಯ ಎತ್ತಿ ಕೊಡುತ್ತೇವೆ (ಕಟ್ಟುತ್ತೇವೆ)) ಎಂದು ಹೇಳುವರು. ಆಗ ಉಳಿದವರು ಒಳ್ಳೆ ಕಾರ್ಯ ಎಂದು ಗಟ್ಟಿಯಾಗಿ ಹೇಳುವರು.

{ಅರಮನೆತಕಲ್, ಕಿರುಮನೆತಕ್‌ಲ್ ಶೃಂಗೇರಿ ಗುರುಮಠತಕುಲೆಡ ಪಡ್ಡಾಯಿ ಒರುಂಬೊ ಮಾಗಣೆ ಮೂಡಾಯಿ ಒರುಂಬೊ ಮಾಗಣೆ ಪತ್ತಪ್ಪೆ ಬಾಲೆಲು ಪದಿನೆಣ್ಣ ಬರಿ ಬಂದಿಲೆಡಲ ಇತ್ತಿ ದಿಬ್ಬಣೆರೆಡಲ ಬತ್ತಿ ದಿಬ್ಬಣೆರೆಡಲ ಸಕಲ ಸಮಸ್ತರೆಡಲ ಆಣ್‌ಗ್ಲ- ಪೊಣ್ಣಗ್‌ಲ ವೀಳ್ಯ ಕಟ್ಟಿಪೆ ಪನ್ಸೆ‌ರ್ ಆಗ ಉಳಿದವರು ಎಡ್ಡೆ ಪನ್ನೆರೆ ಎಂದು ತುಳುವಿನಲ್ಲಿ ಹೇಳುವರು.}

ಗುರು ಕಾರಣಕ್ಕೆ ಬಡಿಸುವ ಕ್ರಮ

ಮದುವೆಗೆ ಮೊದಲು ಗುರು ಕಾರಣಕ್ಕೆ ಬಡಿಸುವ ಕ್ರಮವಿದೆ. ತರವಾಡು ಮನೆಗಳಲ್ಲಿ ಕಾರಣಕ್ಕೆ ವಾರ ಮುಂಚಿತವಾಗಿ ಮಾಡಬಹುದು.

ಮಣೆ ಮೇಲೆ ದೀಪ ಹಚ್ಚಿಡಬೇಕು. ಕಡ್ಡಿ ಉರಿಸಿಟ್ಟು ತೇದ ಗಂಧವನ್ನು ಬಾಳೆಲೆಯಲ್ಲಿಡಬೇಕು. ಬಾಳೆಲೆಯನ್ನು ಒಂದರ ಮೇಲೊಂದು ಇಟ್ಟು ನೀರು ಹಾಕಿ ಬಾಳೆಲೆ ಉಜ್ಜಿ 5 ನೀರು ದೋಸೆ ಮತ್ತು ಹೆಂಟೆ ಕೋಳಿ ಸಾಂಬಾರಿನ ಮುಖ್ಯ ಭಾಗಗಳನ್ನು ಬಡಿಸಬೇಕು. ಅದಕ್ಕೆ 5 ವೀಳ್ಯದೆಲೆ 1 ಅಡಿಕೆ ನೆನೆಬತ್ತಿ ಉರಿಸಿ ಗಂಧ ಸಿಂಪಡಿಸಿ ಬಳಿಕ ಪ್ರಾರ್ಥನೆ ಮಾಡಿಕೊಳ್ಳಬೇಕು ಭಿನ್ನ ಮಾಡುವುದು.

"ನಾವು ಮದುವೆ ಕಾರ್ಯದಲ್ಲಿ ಇದ್ದೇವೆ. ಈ ಶುಭ ಕಾರ್ಯ ಮಾಡುವಂತಹ ಸಂದರ್ಭದಲ್ಲಿ ನಾವು ನಮ್ಮ ಹಿರಿಯರು ನಂಬಿಕೊಂಡು ಬಂದ ಪದ್ಧತಿ ಪ್ರಕಾರ ಮದುವೆ ಕಾರ್ಯಕ್ಕೆ ಮೊದಲು ಗುರು ಕಾರಣರನ್ನು ನಂಬಿ ಅಗೇಲು ಹಾಕಿ ಕೈ ಮುಗಿದು ಬೇಡಿಕೊಳ್ಳುವ ಪದ್ದತಿ


"ನಾವು ಮದುವೆ ಕಾರ್ಯದಲ್ಲಿ ಇದ್ದೇವೆ. ಈ ಶುಭ ಕಾರ್ಯ ಮಾಡುವಂತಹ ಸಂದರ್ಭದಲ್ಲಿ ನಾವು ನಮ್ಮ ಹಿರಿಯರು ನಂಬಿಕೊಂಡು ಬಂದ ಪದ್ಧತಿ ಪ್ರಕಾರ ಮದುವೆ ಮೊದಲು ಗುರು ಕಾರ್ನೂರನ್ನು ನಂಬಿ ಅಗೇಲು ಹಾಕಿ ಕೈ ಮುಗಿದು ಬೇಡಿಕೊಳ್ಳುವ ಪದ್ದತಿ

ಹಾಗೆ ಇಂದು ಮಿಂದು, ಕೋಳಿ ಕೊಂದು ಅಡಿಗೆ ಮಾಡಿ ಅಗೇಲು ಹಾಕಿದ್ದೇವೆ. ಮಿಂದ ನೀರಿನಲ್ಲಿ ಕೊಂದ ಕೋಳಿಯಲ್ಲಾಗಲಿ ಮಾಡಿದ ಅಡಿಗೆಯಲ್ಲಿ ಹಾಕಿದ ಅಗೇಲಿನಲ್ಲಿ ಸಾವಿರ ತಪ್ಪುಗಳಿದ್ದರೂ ಅದನ್ನೆಲ್ಲ ಒಪ್ಪು ಮಾಡಿಕೊಂಡು ಈ ಮದುವೆ ಕಾರ್ಯದಲ್ಲಿ ಏನೊಂದು ಕುಂದು ಕೊರತೆಗಳು ಬಾರದಂತೆ ಈ ಮದುಮಕ್ಕಳ ಮುಂದಿನ ದಾಂಪತ್ಯ ಜೀವನವು ಸುಖಮಯವಾಗಿಯೂ ಬಂದಂತಹ ಕನ್ಯೆ ನಮ್ಮ ಹಿರಿಯರ ಉತ್ತಮ ಆಚಾರ ವಿಚಾರಳಿಗೆ ಹೊಂದಿಕೊಂಡು ಉತ್ತಮ ಗಂಡು ಹೆಣ್ಣು ಮಕ್ಕಳನ್ನು ಪಡೆದು ಮನೆಯ ಶ್ರೇಯಸ್ಸಿಗಾಗಿ ಎಲ್ಲರೊಂದಿಗೆ ಸಹಕರಿಸಿಕೊಂಡು ಈ ಸಂಸಾರ ಉತ್ತರೋತ್ತರ ಅಭಿವೃದ್ಧಿಗೆ ಕಾರಣವಾಗಿರುವ ಸತ್ಯ ಕೀರ್ತಿ ನಾವು ನಂಬಿ ಬ೦ದ ಗುರು ಕಾರಣರಿಗೂ 
ಮನೆದೇವರಿಗೂ ಗ್ರಾಮದೇವತೆಗೂ ಸೇರಿದ್ದು ಅಂತ ನಾವೆಲ್ಲ ಇದ್ದುಬೇಡಿಕೊಳ್ಳುವುದು

ಕುರ್ದಿನೀರು: ನೀರಿಗೆ ಸುಣ್ಣ ಮತ್ತು ಅರಸಿನ ಹುಡಿ ಹಾಕಿ ಬೆರೆಸಿದ ನೀರು



























No comments:

Post a Comment