Sunday, September 15, 2024

ಬಾಗಿಲ ತಡೆಯುವ ಹಾಡುಗಳು-3

 ಮಾವಿನ ತೋರಣಕಾಗಿ ಬಂದ-ಗಂಡನ ತಂಗಿ।
ತೆಂಗು ಬಾಳೆ-ಯಾ ಅಡಕೇಯಾ॥
ವನಕಾಗಿ ಬಂದು ಬಾಗಿಲನು ತಡೆದಾಳು||
ಜಗಲೀಲಿ ನಿಂದು ಹತ್ತು ಬೆರಳು ನೊಂದಾವು 
ನೆತ್ತೀಯಾ ದಂಡೆ-ಜರಿದಾವು| ತಂಗ್ಯಮ್ಮಾ ನೀ 
ತಡೆದಾ ಬಾಗಿಲನು ಬಿಡು ನಮಗೆ||
ಆನೆಗಾನೆ ಕೊಡುವೆ ಆನೆ ಮರಿಗಳ-ಕೊಡುವೇ
 ಕಂಠೀಸರ ಕೊಡುವೆ ಜೊರಳಿಗೆ|| ತಂಗ್ಯಮ್ಮ ನೀ 
ತಡೆದಾ ಬಾಗಿಲನು ಬಿಡು ನಮಗೆ||
ಆನೆಗಳು ನಮಗುಂಟು ಆನೆಮರಿಗಳು ಉಂಟು 
ಕಂಠೀಸರವುಂಟು-ಕೊರಳಿಗೆ ಅಣ್ಣಯ್ಯ ನಾ 
ತಡೆದಾ-ಬಾಗಿಲ ಬಿಡಲಾರೆ||
ಕಲ್ಮೇಲೆ ಕಲ್ಲೊಡ್ಡಿ-ಹೂವ ಬಿಡಿಸುವ ಜಾಣೆ! 
ತಂಗ್ಯಮ್ಮ ಬಾಗಿಲ ಬಿಡಲಾರ-ಳು|| ಅವಳೊಂದು 
ಮಾತಿಗೆ ಬಾಗಿಲ ತಡೆದವಳೆ||
ಅತ್ತಿಗೆ-ಅತ್ತಿಗೆ ಅಡಿಕೆ ಜೂಜಾಡೊವೆರಡು 
ಮುತ್ತೀನ ಜೂಜು ಸರಜೂಜು॥ ಅತ್ತಿಗೆ
 ಹೆತ್ತಹೆಣ್ಣಾ ಜೂಜು ಮಗನೀಗೆ||
ನಾನು ಹೆಣ್ಣೆತ್ತಾಗ ನೀನು ಗಂಡ್ಡೆತ್ತಾಗ 
ಸಣ್ಣಕ್ಕಿ ಬಯಲು ಬೆಳೆದಾಗ-ನಾದುನಿ- 
ಮಾಡಿಕೊಳ್ಳೋಣಾ-ಮದುವೇಯಾ॥
ಶ್ರೀ ಗಿರಿ ಪರ್ವತಕೆ ಹೋದೋದೊಂದುಂಟಾದ್ರೆ
 ಶಿವ-ನ ದಯದಿಂದಾ ಮಗನಾದ್ರೆ|| 
ನಾದುನಿ ಮಗನಿಗೆ ಧಾರೆ ಎರೆವೇನು||
ಮನೆಯಾ ಮುಂದಿರುವಾ- ಹೊನ್ನರಳಿಮರವೆ
ಅಣ್ಣಾನ ಮನೆಗೆ ಹೆಣ್ಣಿಗೆ ಬರುತ್ತೇನೆ–ಅತ್ತಿಗಮ್ಮಾ- 
ನಿನ್ನ ಸಾಕ್ಷಿಯಾಗಿ ಬಾಗೀಲ ಬಿಡುತೇನೆ-ಅತ್ತಿಗಮ್ಮಾ 
ಬಾಗಿ-ದಾಟಿ-ಒಳಗೋಗು||

Saturday, September 14, 2024

ಬಾಗಿಲ ತಡೆಯುವ ಹಾಡುಗಳು-2

 ಅಂಗನ ಮಣಿಯೆ ರಂಗ ಬಂದಾ। 
ಬಿಡಿರೆ ಬಾಗಿಲಾ- ತೆಗೆಯಿರಿ ಕದಗಳಾ| 
ರಂಗ ರುಕ್ಕಿಣಿ ಬಂದಾಗಾಯ್ತು! 
ಬಿಡಿರೆ ಬಾಗಿಲಾ ತೆಗೆಯಿರಿ ಕದಗಳಾ|
ತಂದೆ ತಾಯರ ಬಿಟ್ಟು ಬಂದೆ. 
ಅಣ್ಣ ತಮ್ಮಂದಿರಾ ಆಟ ಬಿಟ್ಟು-ಬಂದೆ  ನಾ ಬಿಡಿರೆ ಬಾಗಿಲಾ- 
ಅಕ್ಕತಂಗಿಯರ ಕೂಟ ಬಿಟ್ಟು-ಬಂದೆ-II 
ಬಂದೆ ನಾ ಬಿಡಿರಿ ಬಾಗಿಲಾ-ತೆಗೆಯಿರಿ ಕದಗಳಾ-1

ರಂಗ ರುಕ್ಕಿಣಿ ಬಂದಾಗಾಯ್ತು-ಬಿಡಿರಿ ಬಾಗಿಲಾ|| 
ಅತ್ತೆ ಮಾವರ ಗುಣ ಕಂಡು| 
ಬಾವ ಮೈದುನರ ಆಟ ಕಂಡು|
 ಅತ್ತಿಗೆ ನಾದಿನಿಯರ ಹಿತ ಕಂಡು!
 ಬಂದೆ ನಾ ಬಿಡಿರಿ ಬಾಗಿಲಾ-ತೆಗೆಯಿರಿ ಕದಗಳಾ||

ಬಾಗಿಲ ತಡೆಯುವ ಹಾಡುಗಳು-1

 ಅಂದು ಗೋಕುಲದಿಂದಾ-ಬಂದ-ನಾರಾಯಣ ಕೃಷ್ಣಾ-1
ಮಂಟಪದ ನಡುಗಾಗಿ-ಬರುವ ಹಾಗೆನಣ್ಣಯ್ಯಾ!
 ಮಡದಿ ಬೆಡಗೆಂದು ಬರುತಾರೆ||
 ಮಡದಿ ಬೆಡಗೆಂದು ಬರುವಾಗ ಅಣ್ಣಯ್ಯಾ-I
 ತಂಗಿಯ ಕದಗಳಾ ತಡೆದಾಳು-–ತಂಗ್ಯಮ್ಮ
ನೀ-ತಡೆದಾ ಕದವಾ-ಬಿಡುಬೇಗಾ॥ ನಾ ತಡೆ ಕದಾ ಬಿಡಲಾರೆ! ಪ್ರತಿಯೊಂದು-ಮಾತು ನುಡಿಬೇಗಾ|| 
ದೇಶ ಉಂಬಳಿ ಕೊಡುವೆ! ಶೇಷ-ಉಪ್ಪರಿಗೆ ಕೊಡುವೆ- 
ನೀ ತಡೆದ ಕದಗಳಾ-ಬಿಡು ಬೇಗಾ||
ದೇಶ ಉಂಬಳಿ ನನಗುಂಟು! ಶೇಷ ಉಪ್ಪರಿಗೆ
 ನನಗುಂಟು! ಎನ್ನುವ ನೀನ ನನಗೆ-ಕೊಡುವೆನ್ನಮ್ಮಾ
 ಪ್ರೀತಿಗೊಂದು ಮಾತು ನುಡಿಬೇಗಾ||

Thursday, September 12, 2024

ತುಪ್ಪ ತೆಗೆದುಕೊಂಡು ಬರುವಾಗ (ಶೋಭಾನೆ ಹಾಡು) -2

 ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದ ಶ್ರೀಗಂಧ ಪರಿಮಳವು 
ಲೇಸಾಗಿ ಪದ್ಮ ಹಾವಿಗೆಯನ್ನು ಧರಿಸಿದ ವಾಸುದೇವನಿಗೂ
ಕಾಲಲ್ಲಿ ಕಿರುಗೆಜ್ಜೆ ನೀಲದ ಬಾವುಲಿ ನೀಲವರ್ಣದ 
ನಾಟಕಳ್ಹಾಕುವ ನಮ್ಮ ಭಾವಜನಯ್ಯ ಬಾಲ ಗೋಪಾಗೆ 
ನೀಲವರ್ಣನಿಗೆ ವನಿತೆ ಶ್ರೀಲಕ್ಷ್ಮೀಗೂ ನೀಲದಾರತೀಯಾ ಬೆಳಗೀರೆ ಶೋಭಾನೆ 
ಕುಂಕುಮ ಕಸ್ತೂರಿ ಪರಿ ಪರಿ ನಾಮ ಶಂಕ ಚಕ್ರವನ್ನೇ ಧರಿಸಿದ
 ನಮ್ಮ ಬಿಂಕದಿಂದಲಿ ನಾಟ್ಯವ ನಾಡುತಾಡುವ 
ಪಂಕಜ ನಾಭಗೆ ವನಿತೆ ಶ್ರೀಲಕ್ಷ್ಮೀಗೆ ಕುಂಕುಮಧಾರತೀಯಾ ಬೆಳಗೀರೆ ಶೋಭಾನೆ.
 ಹದಿನಾರು ಸಾವಿರ ಸ್ತ್ರೀಯರನೊಡಗೊಂಡು 
ಚದುರಂಗ ಪಗಡೆಯ ನಾಡಿದ ನಮ್ಮ ಮದನ ಮೋಹನ 
ದೇವ ಎಡೆಯಲಿ ಕೌಸ್ತುಭ ಮಧುಸೂದನನಿಗೆ 
ವನಿತೆ ಶ್ರೀಲಕ್ಷ್ಮೀ ಸುದತಿಯಾರತಿಯಾ ಬೆಳಗೀರೆ ಶೋಭಾನೆ 
ತೆತ್ತಿಸಕೋಟ ದೇವರ್ಕಳ ನೋಡಗೊಂಡು ಹಸ್ತವ 
ತಾರದೊಳಾಡಿದ ನಮ್ಮ ಸತ್ಯಭಾಮೆ ಪ್ರಿಯ ಪುರಂಧರ ವಿಠಲಗೆ 
ನಿತ್ಯೋತಮನಿಗೆ ವನಿತೆ ಶ್ರೀಲಕ್ಷ್ಮೀಗೆ ಮುತ್ತಿನಾರತಿಯಾ ಬೆಳಗೀರೆ ಶೋಭಾನೆ.
 ವನಿತೆ ಶ್ರೀಲಕ್ಷ್ಮೀಗೂ ಬಾಸಿಂಗದಾರತಿಯಾ ಬೆಳಗೀರೆ ಶೋಭಾನೆ 


Tuesday, September 10, 2024

ತುಪ್ಪ ತೆಗೆದುಕೊಂಡು ಬರುವಾಗ (ಶೋಭಾನೆ ಹಾಡು) -1

ಅರತಿ ಎತ್ತುವೆ ನಂದಗೋಕುಲದೊಳಗೆ ಆಡುವ ನಂದ ಗೋಪಿಯ
 ಕಂದನಿಗೆ ಬಂದು ಮಧುರೆಯಲ್ಲಿ ಮಾವನ ಕೊಂದು ಮಂಧರ ದರ ಗೋಪಾಲಗೆ 
ಕಂಕಣದಾರತಿಯಾ ಬೆಳಗೀರೆ ಶೋಭಾನೆ.
 ಚೆನ್ನಯ ಮನೆ ಮನೆ ಹಾಲು ಮೊಸರನು
 ಕದ್ದು ಕಣ್ಣ ಸನ್ನೆಯ ಮಾಡಿ ಕರೆದ ಕೃಷ್ಣಯ್ಯಗೆ 
ಹೊನ್ನಿನಾರತಿಯಾ ಬೆಳಗೀರೆ ಶೋಭಾನೆ
 ಜಲಜಾಕ್ಷಿಯರೆಲ್ಲರೂ ಜಲಕ್ರೀಡೆಯಾಡುವ ಸಮಯದೊಳು 
ಉಡುವ ಸೀರೆಯ ಕದ್ದು ಕಡಹದ ಮರವೇರಿ ಹುಡುಕು ಮಾಡುವ
 ನಮ್ಮ ಒಡೆಯ ಶ್ರೀಕೃಷ್ಣಯ್ಯಂಗೆ ಜಡಜದಾರತಿಯಾ ಬೆಳಗೀರೆ ಶೋಭಾನೆ.

ಹೆಣ್ಣನ್ನು ಮನೆಗೆ ಹತ್ತಿಸುವಾಗ ಹೇಳುವ ಹಾಡು

ಶುಕ್ರವಾರದ ದಿವಸ -ಹೂವ ತೋರಣ ಕಟ್ಟಿ ದೇವರ 
ಅರಮನೆಗೆ-ತಾಯವ್ವಾ। ಹನ್ನೆರಡು ದೀವಿಗೆ ಉರಿಯಾಲಿ।।
ಮುಂದೆ ಗುಡಿಹೊಯ್ದು ಕಲ್ಯಾಣ ಮಾಡಿ| ದೇವಿ ಬರುತಾಳೆ 







ಶನಿವಾರದ ದಿವಸ ಹೂವ ತೋರಣ ಕಟ್ಟಿ ದೇವರ 
ಮುಂದೆ ಗುಡಿ ಹೊಯ್ದು ಕಲ್ಯಾಣಮಾಡಿ| ದೇವಿ ಬರುತಾಳೆ 
ಅರಮನೆಗೆ-ತಾಯವ್ವಾ। ನೂರೊಂದು ದೀವಿಗೆ ಉರಿಯಾಳಿ|







ನೂರೊಂದು ದೀವಿಗೆ ಉರಿಯಲಿ ತಾಯವ್ವಾ| ನಿಮ್ಮ ಮಗ- 
ಬರುತಾನೆ ಹೊಳೆದಾಟಿ! ಸುತ್ತೇಳು ಸಮುದ್ರವ ಸುತ್ತಿ- 
ರಾಣೆ ರಾಯರೊಳಗೊಂಡು ಬರುವಾಗ ದೃಷ್ಟಿಗಾರತಿಯಾ ಬೆಳ-ಗೀರೆ






ಅಕ್ಕಯ್ಯ ತರುತಾಳೆ ಆಯುಳ್ಳದಾರತಿಯಾ- ಆರಲಿ 
ಕೇದಿಗೆ ಗೆರೆಮುಚ್ಚಿ ಹರಿವಾಣದೊಳಗೆ 
ದೃಷ್ಟಿಗಾರತಿಯಾ ಬೆಳಗ್ಯಾರು||





ಅತ್ತಿಗೆ ತಂದಾರು ಚಿತ್ತರದಾರತಿಯಾ-I 
ಏಳು ಕೇದಿಗೆ ಗೆರೆಮುಚ್ಚಿ ಹರಿವಾಣದೊಳಗೆ 
ಹೂವಿನಾರತಿಯಾ ಬೆಳಾಗಿರೆ||





ಅಪ್ಪನ-ಅರಮನೆಲಿ-ತುಪ್ಪ ಬೀಜನವನುಂಡ ಮಡಿವಾಳ
ಪಟ್ಟೆ ತಂದ್ಲಾಸು ನಡೆ-ಮಡಿ-ಯಾ|| ರಾಣಿ ರಾಯರೊಳಗೊಂಡು 
ಬರುವಾಗ ನಡೆವ ಕಾಲಡಿಗೆ ಮಡಿಹಾಸು॥






ಅಣ್ಣನ ಅರಮನೆಲಿ ಹಾಲುಂಡ-ಮಡಿವಾಳ 
ಪಟ್ಟೆ ತಂದ್ದಾಸು ನಡೆ-ಮಡಿ-ಯಾ-1ರಾಣಿ ರಾಯರೊಳಗೊಂಡು
ಬರುವಾಗ ನಡೆಮಡಿ-ತಂದ್ಲಾಸು ಮಡಿವಾಳ||





ಒಳಗಿರುವ ತಾಯವ್ವಾ। ಒಳಗೇನು ಗೈದೀರಿ? ನಿಮ್ಮ 
ಸೊಸೆ ಬರುತಾಳೆ ಮನೆಯೊಳಗೆ ನಿಮ್ಮ ಸೊಸೆ ಬರುತಾಳೆ- 
ನೆಲ್ಲಕ್ಕಿ ನಡುಬಾಡೆಗೆ ಹನ್ನೆರಡು ದೀವಿಗೆ ಉರಿಯಾಲಿ...!


Saturday, September 7, 2024

ದಿಬ್ಬಣದ ಮುಖ್ಯಸ್ಥರಿಗೆ ಹೆಣ್ಣನ್ನು ವಹಿಸಿ ಕೊಡುವುದು(ಹೆಣ್ಣು-ಗಂಡು ವಹಿಸಿಕೊಡುವುದು)

 ಪರಮ ವೈಭವದಿಂದ ತಮ್ಮ ಇಷ್ಟ ಮಿತ್ರರಿಂದೊಡಗೂಡಿ ಪುರುಷನ ಕಡೆಯಿಂದ ಆಗಮಿಸಲ್ಪಟ್ಟ ದಿಬ್ಬಣದ ಮುಖ್ಯಸ್ಥರಾದ ಮಹನೀಯರು ಯಾರಯ್ಯ?

ನಾವಯ್ಯ

ಹಾಗಾದರೆ ನಾವು ನಮ್ಮ ಪೂರ್ವ ಪದ್ಧತಿಯಂತೆ ವಿಜ್ಞಾಪನೆ ಯನ್ನು ಸ್ವೀಕರಿಸಿ, ಚಂದ್ರರಾಜನೆಂಬ ಪುರುಷನಿಗೆ ಪದ್ಮಾವತಿಯೆಂಬ ಕನ್ನಿಕೆಯನ್ನು ವಧು-ವರರನ್ನಾಗಿ ಮಾಡುವುದೆಂದು ಈ ಮೊದಲು
ಮನದತ್ತ ಮಾಡಿ, ಆ ಮೇಲೆ ವಾಗ್ದಾತ್ತ ಮಾಡೋಣಾಯ್ತು ಅಲ್ಲವೊ? 

ಹೌದು 

ವಾಗ್ದಾನದ ಮೇರೆಗೆ ನಾವು ಉಭಯ ಸಮಸ್ತರು ಕೂಡಿ, ಆಕಾಶದಷ್ಟು ದೊಡ್ಡ ಚಪ್ಪರವನ್ನು ಹಾಕಿ, ಭೂಮಿಯಷ್ಟು ದೊಡ್ಡ ಹಸೆಯನ್ನು ಬರೆದು, ರತ್ನ ಖಚಿತವಾದ ಮಂಟಪದಡಿಯಲ್ಲಿ ಸಮಸ್ತ ಬಂಧು ಬಾಂಧವರ ಸಮಕ್ಷಮದಲ್ಲಿ-ಅಗ್ನಿಸಾಕ್ಷಿಯಾಗಿ ನಮ್ಮ ಕನ್ಯಾರತ್ನವನ್ನು ಧಾರೆಯೆರೆದು ಕೊಟ್ಟಿದ್ದೇವಷ್ಟೆ?

ಹೌದು 

ಹಾಗಾದರೆ ನಿನ್ನೆಯ ದಿವಸ ಪುರುಷನನ್ನು ಮನ್ಮಥ- ನಂತೆಯೂ, ಕನ್ನಿಕೆಯನ್ನು ರತಿದೇವಿಯಂತೆಯೂ- ಶೃಂಗರಿಸಿ-ದಲ್ಲಾಗಲಿ, ರೂಪು ಲಾವಣ್ಯದಲ್ಲಾಗಲೀ ಏನೊಂದು-ಕುಂದು ಕೊರತೆಯಿಲ್ಲದೆ ಕಾಮ ಚಕ್ರೇಶ್ವರ ನನ್ನು ಹೋಲುವ ಪುರುಷನ ದಿವ್ಯ ಹಸ್ತಗಳಿಗೆ- ಚಾರುಹಸ್ತಗಳನ್ನಾಗಿ ಮಾಡಿದ್ದರಲ್ಲಾಗಲೀ ಯಾವ ಲೋಪ-ದೋಷಗಳು ಕಂಡಿಲ್ಲವಷ್ಟೆ?

ಹೌದು 

ಹಾಗಾದರೆ ನಮ್ಮ ಮುದ್ದು ಬಾಲಕಿಯನ್ನು ನಿಮ್ಮ ಸ್ವಾಧೀನಕ್ಕೆ ಒಪ್ಪಿಸಿ ಕೊಡುತ್ತೇವೆ. ಹಾಗೆ ಒಪ್ಪಿಸಿ ಕೊಡುವಾಗ ಬಾಲಕಿಗೆ ಹನ್ನೆರಡು, ಹನ್ನೆರಡು ಇಪ್ಪತ್ತನಾಲ್ಕು ವರಹಗಳನ್ನೂ-ಉಡಲು ವಸ್ತ್ರವನ್ನೂ ತೊಡಲು ಚಿನ್ನಾಭರಣಗಳನ್ನೂ ಊಟ ಮಾಡಲು ಬೆಳ್ಳಿ ಬಟ್ಟಲನ್ನು, ಕೈ ತೊಳೆಯಲು-ಬೆಳ್ಳಿಗಿಂಡಿಯನ್ನೂ ಕರೆದುಣ್ಣಲು ಗೋವಿನ ಹಿಂಡನ್ನೂ, ಬಳುವಳಿಯಾಗಿ ಕೊಟ್ಟಿರುತ್ತೇವೆ.
ಹೀಗೆ ನಾವು ಕೊಟ್ಟ ಅಲ್ಪ ಐಶ್ವರವನ್ನು ಒಂದಕ್ಕೆ ಹತ್ತು ಹತ್ತಕ್ಕೆ ನೂರು ನೂರಕ್ಕೆ ಸಾವಿರಗಟ್ಟೆ ಅಭಿವೃದ್ಧಿ ಮಾಡಿ ಕೀರ್ತಿ ಗಳಿಸುವಂತೆ ಮಾಡುವವರು ಯಾರಯ್ಯ?

ವರನಯ್ಯ

ನಮ್ಮ ಬಾಲಕಿಗೆ ಕಡೆ ಬಾಯಿ ಹಲ್ಲು ಬರಲಿಲ್ಲ-ನೆತ್ತಿ ಎಣ್ಣೆ ಆರಲಿಲ್ಲ-ಅಂಗೈ ಗೆರೆ ಮಾಸಲಿಲ್ಲ-ಬುದ್ಧಿ ಜ್ಞಾನ ಬರಲಿಲ್ಲ- ಹೆತ್ತ ತಂದೆ ತಾಯಿಯರ ನೆನಪು ಮರೆಯಲಿಲ್ಲ. ಹಸಿ ಕಡಿಯಲರಿಯಳು ಒಣಗಿಲು ಮುರಿಯಲರಿಯಲು ಅಂಗಳದಲ್ಲಿ ಆಡಿ ಹಾಲನ್ನವನ್ನು ಉಂಡು ಮೆಟ್ಟಲಲ್ಲಿ ಓಡಿ ತೊಟ್ಟಿಲಲ್ಲಿ ಮಲಗಬೇಕೆಂದು ಇಚ್ಛಿಸುವ ಬಾಲಕಿಗೆ ತಕ್ಕ ಬುದ್ಧಿವಾದವನ್ನು ಬೋಧಿಸುವಂತಹ ಬೋಧಕರು ಯಾರಯ್ಯ?

ವರನಯ್ಯ

ನಮ್ಮ ಬಾಲಕಿಯು ಚಿಕ್ಕದಾಗಿರುವ ಕಾಲದಿಂದಲೂ ಮಾವನ ಮನಗುಣವನ್ನರಿಯಳು; ಅತ್ತೆಯ ಅತಿ ಕೆಲಸವನ್ನು ತಿಳಿಯಳು. ಭಾವ ಮೈದುನರ ಭಾವನೆ ಗೊತ್ತಿಲ್ಲ. ಕುಟುಂಬದ ಕೂಟ ಕೂಡಿದವಳಲ್ಲಾ- ಹೀಗಿರುವಲ್ಲಿ ಏನಾದರೂ ಮಾತಿನಲ್ಲಿ ಕಲಹಗಳು ಉಂಟಾದರೆ ಇಂತಹ ಕಲಹಗಳನ್ನು ಉಪಶಮನ ಮಾಡು ವಂತಹ ಉಪಶಯಕರು ಯಾರಯ್ಯಾ?

ವರನಯ್ಯ

ಹಾಗಾದರೆ ದಿಬ್ಬಣದ ಮಹಾಶಯರೇ ನಾವು ಹೇಳಿದ ಮಾತಿಗೆ ಎರಡೆನ್ನದೆ ನಾವು ಕೊಡುವ ಕನ್ಯಾರತ್ನವನ್ನು ಭಕ್ತವತ್ಸಲನು ಭಕ್ತರನ್ನು ಪ್ರೀತಿಸುವಂತೆಯೂ ನರಹರಿಯು ಕೂರ್ಮೇಶನನ್ನು ಕಾಯುವಂತೆಯೂ ಹಸು ತನ್ನ ಎಳೆಗರುವನ್ನು ಪ್ರೀತಿಸುವಂತೆಯೂ ಪ್ರೀತಿಸುವಿರಾಗಿ ನಂಬುತ್ತೇವೆ.

ಹೌದು 


ಇನ್ನು ಮುಂದೆ ಈ ನವ-ದಂಪತಿಗಳನ್ನು ಭಕ್ತವತ್ಸಲನು ನಾಭಿ ಕಮಲದಲ್ಲಿ ಬ್ರಹ್ಮನಿಗೆ ಸ್ಥಾನವಿತ್ತವನಾದ ಆ ಕ್ಷೀರ ಶಯನ ಶ್ರೀಮನ್ನಾರಾಯಣನೇ ಕಾಪಾಡಲೆಂದು ನಾವೆಲ್ಲರೂ ವಂದಿಸೋಣಾ।

ಹತ್ತು ಕುಟುಂಬ ಹದಿನೆಂಟು ಗೋತ್ರ ದೇವ ಸಭೆ-ಸಂಸಾರ ಸಂಗಡ ಕೇಳಿ ಮದುಮಕ್ಕಳನ್ನು ದಿಬ್ಬಣದ ಮುಖ್ಯಸ್ಥರಿಗೆ ವಹಿಸಿ ಕೊಡುವಂತೆಯೇ. ವಾದ್ಯ.



Friday, September 6, 2024

ಹೆಣ್ಣು ವಹಿಸಿ ಕೊಡುವ ಹಾಡು (ಶೋಭಾನೆ ಹಾಡು)

ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು | 
ನಿಮ್ಮ ಮುಡಿಯೊಳಗಿಡಲು ತಂದಿರುವೆವು ॥.
ಕೊಳ್ಳಿರಿ ಮಗುವನ್ನು ಎಮ್ಮ ಮನೆ ಬೆಳಕನ್ನು|
ನಿಮ್ಮ ಮನೆಯನ್ನು ತುಂಬಿಸಲೊಪ್ಪಿಸುವೆವು||
ಮರೆ ಮೋಸ ಕೊಂಕುಗಳನ್ನರಿಯಳಿವಳು |
ಇನಿತು ವಿಶ್ವಾಸವನು ಕಂಡರಿಯಳಿವಳು||
ಕಷ್ಟಗಳ ಸಹಿಸದೆಯೆ ಕಾಣದೆಯೆ ಬೆಳೆದವಳು!
ಸಹಿಸಿಕೊಳ್ಳಿರಿ ಮಗುವನ್ನು ನೊಪ್ಪಿಸುವೆವು. ॥

ಕಠಿಣಗಳ ನೆಳಲ್ ಸುಳಿಯಲದುರಿ ಬಾಡುವಳು
ಹಿರಿಮಂಜು ಬಳಲಿದ ಹೂವಿನಂತೆ||
ಸುಖದಲಿ ದುಖಃದಲ್ಲಿ ಎಲ್ಲ ದೆಸೆವಿನರಲಿ! 
ನಿಮ್ಮ ಪಾಲಿಗೆ ನಿಲ್ಲುವ ಕುವರಿಯಿವಳು॥
ನಿಮಗಿವಳು ನೀಡುತಿಹ ಹಾಲು ಹಣ್ಣುಗಳೂ ಸವಿ।
ಎಂದೆಂದಿಗೂ ಇವಳ ನಡೆ ನಿಮ್ಮ ಪರವಾಗಿ!
ನಿಮ್ಮ ಕೀರುತಿ ಬೆಳೆಯುವಳಿವಳು ಸೌಜನ್ಯದಲಿ|
ನಿಮ್ಮ ಕುಲಶೀಲಗಳು ಮರುಕಳಿಸಲಿ 
ನಿನ್ನ ಮಡದಿಯ ಕೊ೦ಡು ಸುಖವಾಗಿರು ಮಗುವೇ। 
ನಿಮ್ಮ ಸೊಸೆ ಸೋದರಿಯಾ ಕೊಳ್ಳಿರಿವಳಾ||

ಜೀವನದಿ ಸಾಗರದಿ ಸಂಸಾರ ನೌಕೆಯನು 
ಆಧರಿಪ ಹುಟ್ಟಿದಂತಹ ಜೀವಿಯಿವಳೂ॥ 
ಕೈ ಬಿಡದೇ ಕಾವುದೈಪ್ರೇಮದಿಂದನುದಿನವೂ | 
ಇಂದಿನಿಂದೆಂದಿಗೂ ನಿಮ್ಮವಳೂ ಇವಳು|| 
ಅತ್ತೆ ಮಾವಂದಿರನು ತಾಯಿ ತಂದೆಯೆಂದರಿತು! 
ನಿತ್ಯ ನಿರ್ಮಲೆಯಾಗಿಸೇವೆಯನು ಮಾಡು || 
ಪತಿಯೇ ದೇವರು ನಿನಗೆ ಬೇರೆ ದೇವರು ಇಲ್ಲ! 
ಪತಿಯೆಗತಿ ನಿನಗೆ ಪತಿಯೇ ಸರ್ವಸ್ವವೂ॥ 
ಪಾದಸೇವೆಯ ಮಾಡು ದಾಸಿಯಂತಿರು 
ನೀನು ಪತಿ ಗೃಹಕೃತ್ಯದೊಳು ಮಂತ್ರಿ ನೀನವಗೆ ||
ಊಣಿಸುಗಳ ನೀಡಲಾತನಮಾತೆಯೆ 
ನೀನು ಪ್ರೀತಿಯಿಂದೊಡಗೂಡಿ ಸಂತಸದಿ ಬಾಳು||

ಹೆತ್ತವರ ಮನೆಗಿಂದು ಹೊರಗಾದೆ ನೀ ಮಗಳೇ।
ಆ ಮನೆಯ ಅವರು ನಿನ್ನವರು ಮುಂದೆ 
ಅವರೇ ತಾಯ್ಗಳು ಸುಖರು ಭಾಗ್ಯವನ್ನು ಬೆಳೆಸುವವರು ॥ 
ಅವರೇ ದೇವರು ನಿನ್ನ ದೇವರುಗಳು |
ಆವ ಬಳುವಳಿ ಕೊಡಲಿ ಮಗಳೇ ನಾ ನಿನಗೆ||
ಆವ ವಸ್ತುವನಿತ್ತು ಕಳುಹಿಸಲಿ ಮನಗೇ।
ದೇವರಿತಹ ವಸ್ತು ವಾಹನವೇ ಕೊಡಲೇ
ಬಡತನದಿ ಬೆಂದು ಬಡವಾಗಿರುತಿರ್ದುI
ತೊಡರುಗಳ ಸಹಿಸ ಬಡತನದ ಕಡಲಿನಲಿ ದಡ ಸೇರುತಿದೆ|

ಮಗಳೇ ನಾನೇನು ಕೊಡಲಿ ನಿನಗೇ।
ಹೋಗುವಾಗ ಅಗಲಿಕೆಯ ಉಪದೇಶ ನಿನಗೆ||
ಪತಿಗೆ ಸತಿಯೆಂಬ ಶೃತ ವಚನವನ್ನು!
ಮತಿಯವಳೇ ನೀ ನಡೆಸುತ್ತಾ ಬಾಳು!
ಪತಿಯ ಮಾತುಗಳ ಅಲ್ಲಗಳೆಯದಿರು ನೀನು|
ಪತಿಯೇ ಪರದೈವವವೆಂದು ನಂಬು ವಧುವೇ।
 ನಿಲ್ಲು ಕಣ್ಮರೊಸಿಕೊ ಮುದ್ದು ನೀನಳದಿರು||
ತಾಯಿಯಿರಾ ತಂದೆಯಿರಾ ಪಡೆಯಿರಿವಳಾ ಎರಡು ಮನೆಗಳು
ಹೆಸರು ಖ್ಯಾತಿಗಳು ಉಳಿವಂತೆ ತುಂಬಿದಾಯುಷ್ಯದಲಿ ಬಾಳಿ ಬದುಕು ನೀ ಮಗಳೇ||

ಶೇಷೋಪಚಾರದಿಂದ ಎಬ್ಬಿಸುವಾಗಿನ ಸೋಭಾನೆ

ರಾಜಿಪ ಮಣಿಮಯ ರತ್ನಪೀಠದಲ್ಲಿ ರಾಜಾಧಿರಾಜ ಶ್ರೀರಾಮ ಕುಳ್ಳಿರಲೂ 




ರಾಜೀವಾಂಬಕಿ ಸೀತೆಯಡದೊಪ್ಪಿರಲೂ

ರಾಜವದನೆಯರು ಹರಿವಾಣದಲ್ಲಿ ರಾಜೀಸುವಾರತಿಯ ಬೆಳಗೀರೆ ಶೋಭಾನೆ

ಕನಕ ಕುಂಡಲ ಕುಂಡಲಾ ಲಂಕೃತೆಗೆ ಕನಕಧರಣಾದಿ 

ಕಮಲ ನಯನನಿಗೆ ಕನಕದಾರಿತಿಯ ಬೆಳಗೀರೆ ಶೋಭಾನೆ

ಮುತ್ತಿನೋಲೆಯ ಹಾರ ಪಾದಕವಿಟ್ಟವಳೂ

ಮುತ್ತಿನ ಬೊಟ್ಟು ಮೂಗುತಿ ಇಟ್ಟವಳೂ

ಮುತ್ತಿನ ಕಡಗ ಮುಂಗೈಯೊಪ್ಪಿರಲೂ 

ಮುತ್ತೈದೆಯರು ರಘುತ್ತಮ ಸೀತೆಗೆ ಮುತ್ತಿನಾರತಿಯ 

ಬೆಳಗಿರೆ ಶೋಬಾನೇ


ದಶರಥರಾಯನ ಶಿಶುವೆನಿಸಿದಗೆ ದಶಶಿರನ ಕೊರಳನೂ ಕತ್ತರಿಸದವಗೆ
ಚತುರ್ದಶ ಭುವನವಾಳಿದಾತಗೆ ದಶ ವಿಧದಲಿ ಸೀತಾರಾಮನ
ಚರಣಕೆ ಕಳಸದಾರತಿಯಾ ಬೆಳಗೀರೆ ಶೋಭಾನೆ
ನಾರದ ವಂದ್ಯಗೆ ನಂದನ ಕಂದನಿಗೆ ನಾರಿ ದೌಪದಿ ದಕ್ಷಯನಿತವಗೆ
ನಾರದ ಮುಖ ಜಾಮಿಳನ ರಕ್ಷಿಸಿದವಗೆ
ನಾರಾಯಣ ನಮೋ ನಮೋ ಸ್ತುತಿಸಿದ
ನಾರಿಯರು ಆರತಿಯ ಬೆಳಗೀರೆ ಶೋಭಾ







Thursday, September 5, 2024

ಸೇಸೆ ಅಕ್ಕಿ ಹಾಕುವಾಗ ಸೋಬಾನೆ

 ಮೂಡಂದ ಬಂದಾವು ಮೂರು ಸಾವಿರ ಗಿಳಿಗಳು
 ಅವರ ಪುಕ್ಕನ್ನೆ-ನೋಡಿ ಹುಸಿನಗೆ ಆಡುವ 
 ರಾಯಗು ರಂಭೆಗು ಹಸೆ ಒಂದೇ- ರಾಯಗು
 ರಂಭೆಗೂ ಹಸೆ ಒಂದೆನಾದರೆ ಪದ್ಮಾ-ದ ಸೇಸೆ 
ತಳಿಯಾ-ಬನ್ನಿ|| ಸೋಬಾನವೇ।।

ಪಡುವಂದ ಬಂದಾವು ಆರು ಸಾವಿರ ಗಿಳಿಗಳು
 ಅವರ ರೆಕ್ಕೆನ್ನೆ ಹೂಯಿಸಿ ಹುಸಿ ನಗೆ ಆಡುವ 
ಅಕ್ಕಾಗು ಭಾವಗು ಹಸೆ ಒಂದೇ-ನಾದರೆ ಮುತ್ತೀನ
 ಸೇಸೆ ತಳಿಯ ಬನ್ನಿ||

ಹಣ್ಣು-ತಿನ್ನುವ ಗಿಳಿ ಹಾಲು ಕುಡಿಯುವಗಿಳಿ|
ಹಾಲೇರಿ ನಾಡಿಗೆ ಹೋದ ಗಿಳಿಗಳು ಜಿಲ್ಲೆಯ 
ಭಾಗಕ್ಕೆ ನಡೆದಾವು-II ಹಾಲು ಕುಡಿಯುವ 
ಗಿಳಿ ಹಣ್ಣು ತಿನ್ನು ಗಿಳಿ-ಹಾಲೇರಿ ಸೀಮೆಗೆ
ಹೋದ-ಗಿಳಿಗಳು ಕೊಪ್ಪಿನ ಭಾಗಕ್ಕೆ ನಡೆದಾವು

ಬಾಳೆ ಹಣ್ಣಿನ ಮೇಲೆ ದಾಯನಾಡುತ 
ಬಂದಾ-ದಾಯ ಕಾಣತ್ತೆ ನಿಮ್ಮಳಿಯಾ।
 ಮದು ಮಕ್ಕಳಿಬ್ಬರು ಕಿತ್ತಳೆ-ಹಣ್ಣಿನ-ಮೇಲೆ
ಚಂಡನಾಡುತ ಬಂದಾ-ಚಂದ್ರ 
ಕಾಣತ್ತೆ-ನಿಮ್ಮಳಿಯಾ॥ ನಿಂಬೆ ಹಣ್ಣಿನ ಮೇಲೆ
 ಸರಸವಾಡುತ ಬಂದಾ-ಚಂದ್ರ ಕಾಣತ್ತ 
ನಿಮ್ಮಳಿಯಾ|| ಸೋಬಾನವೇ।

ದಾಯ-ದಾಯವ ತನ್ನಿ। ದಾಯಾ-ದೋಲೆಯ ತನ್ನಿ
 ಭಾವ-ತಂಗೀನ ಕರೆತನ್ನಿ||
ದೊಡ್ಡ-ಬಟ್ಟಲಲ್ಲಿ ದೊಡ್ಡಕ್ಕಿ ತಂದಿರಿಸಿ। 
ರಾಯಾಗು ರಂಭೆಗು ಕೈಯಿರಿಸಿ ವಜ್ರ-ದುಂಗುರಾ-ಗಿಲಿರೆಂದೂ

ಮಾವನವರ ಮನೇಲಿ ಮುತ್ತೀನ ದಾರಂದ-ಮುಟ್ಟಿ
 ಹೋದರೆ ಮಗಳನ್ನು-
ಕೊಡಲಾರೆ ಮದುವಣ್ಣಾ॥ ಸೋಬಾನವೇ|| 
ಮುಟ್ಟಿ ಹೋದರೆ ಮಗಳನ್ನು ಕೊಡದಿದ್ದರೆ ಬೇರೊಬ್ಬರ ಮಗಳನ್ನು
ಕೊಡ-ಬೇಕು||
ಬಾವನವರ ಮನೆಲಿ ಚಿನ್ನಾದ-ದಾರಂದ-ಮುಟ್ಟಾದೆ 
ಹೋಗು ಮದುವಣ್ಣಾ

ಉಪ್ಪರಿಗೆ ಒಳಗೆ ಹತ್ತಡಿಕೆ ಹೋಳೆಣ್ಣೆ 
ಮಾವನ ಕಂಡಲ್ಲಿ ಅತಿರಂಭ
ಮೂಡಣ ಜಗುಲಲ್ಲಿ ಮುತ್ತೈದೆನಾಡುವ ಗಿಳಿಗಳು-
ಪುರುಷನಾ ಕಂಡಲ್ಲಿ ಅತಿರಂಬೆ|| ಸೋಬಾನವೇ|

Tuesday, September 3, 2024

ಧಾರೆ ಎರೆವಾಗ ಹೇಳುವ ಸೋಬಾನೆ


ಜನಕರಾಯನ ಮಗಳು ಜಾನಕಿಯ ಮದುವೆಯೆಂದು! 
ದಶರಥನಲ್ಲಿಗೆ ತೆರಳಿ-ಬರಾ-ಹೇಳಿ||
ಮದುವೆಯ ಸುದ್ದಿಯ ಲಿಖಿಯವನೆ ಬರೆದು-ಕಳುಹಿದ
ಪಟ್ಟಣದ ಪುರಜನರು ವಿಸ್ತಾರದ ಬಂಧುಗಳು ರಾಯವಣ್ಣಯ್ಯನಾ
ಮದು-ವೇಗೆ-
ಆರು ಜೋಡಿನ ಕೊಳಲು ಮೂರು ಜೋಡಿನ ವಾದ್ಯಗಳು 
ರಾಯವಣ್ಣಯ್ಯನಾ ಮದು-ವೇಗೆ-||
ಸೂರ್ಯ ಮಂಡಲದ ಕೊಡೆಯು ಹೊಳೆಯುವಂತೆಯುಳ್ಳ-ಬಂಡಿಯ 
ಮೇಲೇರಿ| ಹೆಬ್ಬಾಗಿಲ ಮುಂದೆ ಗುಬ್ಬಿ ಓಲೆಯಾ-ಬರೆದು 
ಜೋಜೋಂತ ಹಾರಾಡುತ ಬರುತದೆ ನಮ ದಿಬ್ಬಣ ಚಂದದಲಿ
ನೀನು ಇರು ಗೊಂಬೆ

ಚಪ್ಪರದ ಮುಂದುಗಡೆ ಗುಬ್ಬಿ ಓಲೆಯಾ-ಬರೆದಿರುಸಿ
ಜೋಜೋಂತಾ ಹಾರಾಡುತ ಬರುತದೆ ನಮ್ಮ ದಿಬ್ಬಣ-ಚಂದದಲಿ 
ನೀನು ಇರುಗೊಂಬೆ|

ಚಿಕ್ಕ-ಚಿಕ್ಕ-ಕೈಯಲ್ಲಿ-ಚಿಕ್ಕ ವರಹವನಿರಿಸಿ ಚಿಕ್ಕ ಶ್ರೀ ತುಳಸೀ 
ಬಳಲೂಡಿ-ಮಾವಯ್ಯಾ ಸೊಸೆ ಮುದ್ದಿಗೆ ಧಾರೆ ಎರೆಯಾ ಬನ್ನಿ!
ಸಣ್ಣಾ ಸಣ್ಣಾ ಕೈಯಲ್ಲಿ-ಸಣ್ಣ ವರಹವನಿರಿಸಿ ಸಣ್ಣ ಶ್ರೀ ತುಳಸಿ 
ದಳಲೂಡಿ ಅಪ್ಪಯ್ಯ ಮಗಳಿಗೆ-ಧಾರೆ ಎರೆಯಾ-ಬನ್ನಿ||
ಸಣ್ಣಾ ಸಣ್ಣಾ ಕೈಯಲ್ಲಿ-ಸಣ್ಣ ವರಹವನಿರಿಸಿ ಸಣ್ಣ ಶ್ರೀ ತುಳಸಿ 
ದಳಲೂಡಿ ಅಣ್ಣಯ್ಯ-ಧಾರೆ ಎರೆಯುವಾಗ-ಅಣ್ಣಯ್ಯನ 
ಅತ್ರಾವು ನಡುಗಿದೋ-ತಂಗ್ಯಮ್ಮನ-ಕಣ್ಣಾ ಜಲಕಂಡು|| 
ಮೂಗುತಿ ಇಟ್ಟೋನು ಬಿಡೋನಲ್ಲಾ-ಇನ್ನೇನು ತಂಗ್ಯಮ್ಮ
ನಿಮ್ಮೂರಿಗೋಗನಾ||

ತಾಳಿ ಕಟ್ಟಿದವನು ಬಿಡೋನಲ್ಲಾ-ಇನ್ನೇನು ಏಳೀ-ಪರದೇಶಕ್ಕೆ-1
 ಆರು ಜೋಡಿನ ಕೊಳಲು-ಮೂರು ಜೋಡಿನ
 ವಾದ್ಯಗಳೊಂದಿಗೆ-ಏಳೀ-ಪರದೇಶ-ಕೆ||

ಹಾಲು ತುಪ್ಪ ಕುಡಿಸುವ ಸೋಬಾನೆ ಹಾಡುಗಳು-3

 ಚೆಲ್ಲೀರೆ ಮಲ್ಲಿಗೆಯಾ-ನೀವೆಲ್ಲರೂ ಸೇರಿ ಚೆಲ್ಲಿ-ರೆ-ಮಲ್ಲಿಗೆಯ 
ಮದುಮಕ್ಕಳ ತುಂಬಾ ಚೆಲ್ಲಿರೆ ಮಲ್ಲಿಗೆಯಾ॥
ವಲ್ಲಾಕ್ಷಿಯರೆಲ್ಲರೂ ಸೇರಿ-ಉಲ್ಲಾಸನ ಮೇಲೆ ಚೆಲ್ಲಿ-ರೆ ಮಲ್ಲಿಗೆಯ
 ಕಡಗ ಕಂಕಣದಿಂದ ಬಂದಾ- ಉಡುಪಿ ಕೃಷ್ಣನಾ-ಮೇಲೆ ಚೆಲ್ಲಿರೆ
 ಮಲ್ಲಿಗೆಯಾ||
ಗಂಧ ಪರಿಮಳದಿಂದ ತುಂಬಿದ ಸುಂದರ ಬಾಲಯ್ಯನ 
ಮೇಲೆ ಚೆಲ್ಲಿರೆ ಮಲ್ಲಿಗೆಯಾ। ನೀವೆಲ್ಲರೂ ಸೇರಿ ಚೆಲ್ಲಿ-ರೆ 
ಮಲ್ಲಿಗೆಯಾ|

ಹಾಲು ತುಪ್ಪ ಕುಡಿಸುವ ಸೋಬಾನೆ ಹಾಡುಗಳು-2

 ಹಾಲಾ-ಕೊ-ಡಮ್ಮಾ| ಬಾಲಾ-ಕೃಷ್ಣಗೆ ಬೇಗಾ। ತಂದು
 ಕೊ-ಡಮ್ಮಾ ಮುದ್ದುರಂಗಗೆ ಬೇಗಾ|ಹಾಲಾ ಕುಡಿದನೆ ರಂಗಾ। 
 ಹೇಳ-ಬಾರದೆ ಗೋಪೀ-॥

ಮೂರಡಿ ಭೂಮಿಯ ಬೇಡಿ ನಿಂದ-ನೆ ಕೃಷ್ಣಾ-1 ಹಾಲಾ 
ಕೊ-ಡಮ್ಮಾ-ಮುದ್ದು ರಂಗಗೆ ಬೇಗಾ-1
ಐದಡಿ ಭೂಮಿಯ ಬೇಡಿ-ನಿಂದ-ನೆ ಕೃಷ್ಣಾ-1 
ಹಾಲಾ ಕೊ-ಡಮ್ಮ| ಬಾಲಾ-ಕೃಷ್ಣಗೆ ಬೇಗಾ। ತಂದು 
ಕೊ-ಡಮ್ಮ ಮುದ್ದು ರಂಗಗೆ ಬೇಗಾ-11


Sunday, September 1, 2024

ಹಾಲು ತುಪ್ಪ ಕುಡಿಸುವ ಸೋಬಾನೆ ಹಾಡುಗಳು-1

ಗುರು ಗಣಪತಿಗಾಗಿ ನಮಿಸಿ ಶಾರದೆಯ ಕರುಣಾಜನಾಭವ 
ಮಾಡುವೆ ಗೊತ್ತಾಗಿ ಹರುಷದಿ ಸತಿಯವರು ಸಮೇತದಲಿ 
ಕೌಶಲ್ಯ ಸುತೆಯವರು ವರವಾ ರಚಿಸಿದರು 

ಕ್ಷೀರ ಸಮುದ್ರದೊಳಗಿರುವ ಬಾಲೆಯರುಗಾರುಣಿಯೊಳಗು 
ಅತಿ ಚೆಲುವೆಯರು ರಾಯರಿಗೂ ಮಹಾಲಕ್ಷ್ಮಿಗೂ ಹಸ್ತದಿ
 ಹಾಲು ತುಪ್ಪಾ ಎರೆದಾರು

ಮುತ್ತಿನದನ್ನೆಯರು ರಚಿಸಿದರಂದು! ನಿಸ್ತೆಯವರೆಲ್ಲರೂ ಸೇರಿ
ಎದ್ದು ಬಂದು ಸತ್ಯಲೋಕದ ಸ್ತ್ರೀಯರು ಬರಲಾಗ
 ಅಚ್ಯುತ ಸ್ವಾಮಿಗೂ-ನಿಸ್ತ್ರೆ-ಮಹಾಲಕ್ಷ್ಮಿಗೂ ಹಸ್ತದಿ
 ಹಾಲು ತುಪ್ಪಾ-ಎರೆದಾರು

ಮಡದಿಯರೆಲ್ಲರೂ ಸೇರಿ ಸಡಗರದಿಂದಲಿ ಕಡಗವನ್ನಿಟ್ಟಿದ್ದ 
ಕೈಗಳ ಚಂದದಿ ಬಡನಡು ಬಳುಕು
ಬಿಡಿಸಿದರಂದು ಉಡುಪಿ ಶ್ರೀಕೃಷ್ಣಗು-ಮಡದಿ ಮಹಾಲಕ್ಷ್ಮಿಗೂ ಮಡದಿಯರು 
ಹಾಲುತುಪ್ಪಾ-ಎರೆದಾರು॥

ಮುತ್ತಿನ ಉರುಳಿಯ ತಂದಿರುಸಿ|ನವರತ್ನದ ಸೇವಂಟುಗಳಾ 
ಹಿಡಿ ಎನ್ನುತಾ-ತೊಡಿಗೆಯ ತಿನ್ನುತಾ-ಪ್ರಾಜ್ವಲವು ಸರಸನ್ನ
 ಮೂರುತಿ-ರಾಮಂಗೂ-ಸೀತೆಗೂ ಬಾಲೆಯರು 
ಹಾಲುತುಪ್ಪಾ-ಎರೆದಾರು॥

ಚಿನ್ನದ ಮಣೆಗಳ ತಂದಿರುಸಿ। ನಿಸ್ತೇವರು ಮಗನಾ 
ಕುಳ್ಳಿರಿಸಿ ಮುತ್ತಿನ ಜನ್ನೆಯರ ರಚಿಸಿದಾಗ ಕನ್ಯಾ 
 ಮಹಾಲಕ್ಷ್ಮಿಗೂ ನಾರಾಯಣ ಕೃಷ್ಣಗೂ ಪ್ರೇಮದಿಂದಲಿ
 ಹಾಲು ತುಪ್ಪಾ-ಎರೆದಾರು|