Saturday, September 7, 2024

ದಿಬ್ಬಣದ ಮುಖ್ಯಸ್ಥರಿಗೆ ಹೆಣ್ಣನ್ನು ವಹಿಸಿ ಕೊಡುವುದು(ಹೆಣ್ಣು-ಗಂಡು ವಹಿಸಿಕೊಡುವುದು)

 ಪರಮ ವೈಭವದಿಂದ ತಮ್ಮ ಇಷ್ಟ ಮಿತ್ರರಿಂದೊಡಗೂಡಿ ಪುರುಷನ ಕಡೆಯಿಂದ ಆಗಮಿಸಲ್ಪಟ್ಟ ದಿಬ್ಬಣದ ಮುಖ್ಯಸ್ಥರಾದ ಮಹನೀಯರು ಯಾರಯ್ಯ?

ನಾವಯ್ಯ

ಹಾಗಾದರೆ ನಾವು ನಮ್ಮ ಪೂರ್ವ ಪದ್ಧತಿಯಂತೆ ವಿಜ್ಞಾಪನೆ ಯನ್ನು ಸ್ವೀಕರಿಸಿ, ಚಂದ್ರರಾಜನೆಂಬ ಪುರುಷನಿಗೆ ಪದ್ಮಾವತಿಯೆಂಬ ಕನ್ನಿಕೆಯನ್ನು ವಧು-ವರರನ್ನಾಗಿ ಮಾಡುವುದೆಂದು ಈ ಮೊದಲು
ಮನದತ್ತ ಮಾಡಿ, ಆ ಮೇಲೆ ವಾಗ್ದಾತ್ತ ಮಾಡೋಣಾಯ್ತು ಅಲ್ಲವೊ? 

ಹೌದು 

ವಾಗ್ದಾನದ ಮೇರೆಗೆ ನಾವು ಉಭಯ ಸಮಸ್ತರು ಕೂಡಿ, ಆಕಾಶದಷ್ಟು ದೊಡ್ಡ ಚಪ್ಪರವನ್ನು ಹಾಕಿ, ಭೂಮಿಯಷ್ಟು ದೊಡ್ಡ ಹಸೆಯನ್ನು ಬರೆದು, ರತ್ನ ಖಚಿತವಾದ ಮಂಟಪದಡಿಯಲ್ಲಿ ಸಮಸ್ತ ಬಂಧು ಬಾಂಧವರ ಸಮಕ್ಷಮದಲ್ಲಿ-ಅಗ್ನಿಸಾಕ್ಷಿಯಾಗಿ ನಮ್ಮ ಕನ್ಯಾರತ್ನವನ್ನು ಧಾರೆಯೆರೆದು ಕೊಟ್ಟಿದ್ದೇವಷ್ಟೆ?

ಹೌದು 

ಹಾಗಾದರೆ ನಿನ್ನೆಯ ದಿವಸ ಪುರುಷನನ್ನು ಮನ್ಮಥ- ನಂತೆಯೂ, ಕನ್ನಿಕೆಯನ್ನು ರತಿದೇವಿಯಂತೆಯೂ- ಶೃಂಗರಿಸಿ-ದಲ್ಲಾಗಲಿ, ರೂಪು ಲಾವಣ್ಯದಲ್ಲಾಗಲೀ ಏನೊಂದು-ಕುಂದು ಕೊರತೆಯಿಲ್ಲದೆ ಕಾಮ ಚಕ್ರೇಶ್ವರ ನನ್ನು ಹೋಲುವ ಪುರುಷನ ದಿವ್ಯ ಹಸ್ತಗಳಿಗೆ- ಚಾರುಹಸ್ತಗಳನ್ನಾಗಿ ಮಾಡಿದ್ದರಲ್ಲಾಗಲೀ ಯಾವ ಲೋಪ-ದೋಷಗಳು ಕಂಡಿಲ್ಲವಷ್ಟೆ?

ಹೌದು 

ಹಾಗಾದರೆ ನಮ್ಮ ಮುದ್ದು ಬಾಲಕಿಯನ್ನು ನಿಮ್ಮ ಸ್ವಾಧೀನಕ್ಕೆ ಒಪ್ಪಿಸಿ ಕೊಡುತ್ತೇವೆ. ಹಾಗೆ ಒಪ್ಪಿಸಿ ಕೊಡುವಾಗ ಬಾಲಕಿಗೆ ಹನ್ನೆರಡು, ಹನ್ನೆರಡು ಇಪ್ಪತ್ತನಾಲ್ಕು ವರಹಗಳನ್ನೂ-ಉಡಲು ವಸ್ತ್ರವನ್ನೂ ತೊಡಲು ಚಿನ್ನಾಭರಣಗಳನ್ನೂ ಊಟ ಮಾಡಲು ಬೆಳ್ಳಿ ಬಟ್ಟಲನ್ನು, ಕೈ ತೊಳೆಯಲು-ಬೆಳ್ಳಿಗಿಂಡಿಯನ್ನೂ ಕರೆದುಣ್ಣಲು ಗೋವಿನ ಹಿಂಡನ್ನೂ, ಬಳುವಳಿಯಾಗಿ ಕೊಟ್ಟಿರುತ್ತೇವೆ.
ಹೀಗೆ ನಾವು ಕೊಟ್ಟ ಅಲ್ಪ ಐಶ್ವರವನ್ನು ಒಂದಕ್ಕೆ ಹತ್ತು ಹತ್ತಕ್ಕೆ ನೂರು ನೂರಕ್ಕೆ ಸಾವಿರಗಟ್ಟೆ ಅಭಿವೃದ್ಧಿ ಮಾಡಿ ಕೀರ್ತಿ ಗಳಿಸುವಂತೆ ಮಾಡುವವರು ಯಾರಯ್ಯ?

ವರನಯ್ಯ

ನಮ್ಮ ಬಾಲಕಿಗೆ ಕಡೆ ಬಾಯಿ ಹಲ್ಲು ಬರಲಿಲ್ಲ-ನೆತ್ತಿ ಎಣ್ಣೆ ಆರಲಿಲ್ಲ-ಅಂಗೈ ಗೆರೆ ಮಾಸಲಿಲ್ಲ-ಬುದ್ಧಿ ಜ್ಞಾನ ಬರಲಿಲ್ಲ- ಹೆತ್ತ ತಂದೆ ತಾಯಿಯರ ನೆನಪು ಮರೆಯಲಿಲ್ಲ. ಹಸಿ ಕಡಿಯಲರಿಯಳು ಒಣಗಿಲು ಮುರಿಯಲರಿಯಲು ಅಂಗಳದಲ್ಲಿ ಆಡಿ ಹಾಲನ್ನವನ್ನು ಉಂಡು ಮೆಟ್ಟಲಲ್ಲಿ ಓಡಿ ತೊಟ್ಟಿಲಲ್ಲಿ ಮಲಗಬೇಕೆಂದು ಇಚ್ಛಿಸುವ ಬಾಲಕಿಗೆ ತಕ್ಕ ಬುದ್ಧಿವಾದವನ್ನು ಬೋಧಿಸುವಂತಹ ಬೋಧಕರು ಯಾರಯ್ಯ?

ವರನಯ್ಯ

ನಮ್ಮ ಬಾಲಕಿಯು ಚಿಕ್ಕದಾಗಿರುವ ಕಾಲದಿಂದಲೂ ಮಾವನ ಮನಗುಣವನ್ನರಿಯಳು; ಅತ್ತೆಯ ಅತಿ ಕೆಲಸವನ್ನು ತಿಳಿಯಳು. ಭಾವ ಮೈದುನರ ಭಾವನೆ ಗೊತ್ತಿಲ್ಲ. ಕುಟುಂಬದ ಕೂಟ ಕೂಡಿದವಳಲ್ಲಾ- ಹೀಗಿರುವಲ್ಲಿ ಏನಾದರೂ ಮಾತಿನಲ್ಲಿ ಕಲಹಗಳು ಉಂಟಾದರೆ ಇಂತಹ ಕಲಹಗಳನ್ನು ಉಪಶಮನ ಮಾಡು ವಂತಹ ಉಪಶಯಕರು ಯಾರಯ್ಯಾ?

ವರನಯ್ಯ

ಹಾಗಾದರೆ ದಿಬ್ಬಣದ ಮಹಾಶಯರೇ ನಾವು ಹೇಳಿದ ಮಾತಿಗೆ ಎರಡೆನ್ನದೆ ನಾವು ಕೊಡುವ ಕನ್ಯಾರತ್ನವನ್ನು ಭಕ್ತವತ್ಸಲನು ಭಕ್ತರನ್ನು ಪ್ರೀತಿಸುವಂತೆಯೂ ನರಹರಿಯು ಕೂರ್ಮೇಶನನ್ನು ಕಾಯುವಂತೆಯೂ ಹಸು ತನ್ನ ಎಳೆಗರುವನ್ನು ಪ್ರೀತಿಸುವಂತೆಯೂ ಪ್ರೀತಿಸುವಿರಾಗಿ ನಂಬುತ್ತೇವೆ.

ಹೌದು 


ಇನ್ನು ಮುಂದೆ ಈ ನವ-ದಂಪತಿಗಳನ್ನು ಭಕ್ತವತ್ಸಲನು ನಾಭಿ ಕಮಲದಲ್ಲಿ ಬ್ರಹ್ಮನಿಗೆ ಸ್ಥಾನವಿತ್ತವನಾದ ಆ ಕ್ಷೀರ ಶಯನ ಶ್ರೀಮನ್ನಾರಾಯಣನೇ ಕಾಪಾಡಲೆಂದು ನಾವೆಲ್ಲರೂ ವಂದಿಸೋಣಾ।

ಹತ್ತು ಕುಟುಂಬ ಹದಿನೆಂಟು ಗೋತ್ರ ದೇವ ಸಭೆ-ಸಂಸಾರ ಸಂಗಡ ಕೇಳಿ ಮದುಮಕ್ಕಳನ್ನು ದಿಬ್ಬಣದ ಮುಖ್ಯಸ್ಥರಿಗೆ ವಹಿಸಿ ಕೊಡುವಂತೆಯೇ. ವಾದ್ಯ.



No comments:

Post a Comment