Thursday, April 24, 2025

ಗೌಡ ಸಂಸ್ಕೃತಿ- ಮದುವೆ( ಎಣ್ಣೆ ಅರಶಿನ ಮತ್ತು ಮದರಂಗಿ ಶಾಸ್ತ್ರ (ಮೇಲ್ಕಟ್ಟಿನ ಅಡಿಯಲ್ಲಿ)

 ಎಣ್ಣೆ ಅರಶಿನ ಮತ್ತು ಮದರಂಗಿ ಶಾಸ್ತ್ರ (ಮೇಲ್ಕಟ್ಟಿನ ಅಡಿಯಲ್ಲಿ) :


ಪರಿಕರಗಳು : ಕಾಲುದೀಪ, ತೂಗುದೀಪ, ಹರಿವಾಣ 2. ಬೆಳ್ಳಿಗೆ ಅಕ್ಕಿ. ವೀಳ್ಯದೆಲೆ 5 ಅಡಿಕೆ 1. ತೆಂಗಿನ ಕಾಯಿಯ ಹಾಲು, ಎಣ್ಣೆ, ಅರಶಿನ, ಗರಿಕೆ.

ಊರುಗೌಡರು ಬಂದಾಗ ಮನೆಯ ಯಜಮಾನ ತಂಬಿಗೆ ನೀರು ಕೊಟ್ಟು ಕುಳ್ಳಿರಿ ಉಪಚರಿಸಿ ನಂತರ ಸೂಡಿ ಎಲೆ, 5 ಅಡಿಕೆಯೊಂದಿಗೆ ಕಾರಕ್ರಮ ನಡೆಸಿಕೊಡು ಕೇಳಿಕೊಳ್ಳಬೇಕು. (ವಧುವಿನ ಮನೆಯಲ್ಲಿ ವರನ ಮನೆಯ ಕೊಡಿಯಾಳು ಬಂದುದನ ಖಾತರಿಪಡಿಸಿಕೊಳ್ಳುತ್ತಾರೆ.)

ವಧು/ವರರು ಭೋಜನ ಸ್ವೀಕರಿಸಿದ ನಂತರ ಮದರಂಗಿ ಶಾಸ್ತ್ರ ಮಾಡಬೇಕು. ಆಮೇಲೆ ಫಲಾಹಾರ ಮಾತ್ರ ಮಾಡಬಹುದು. (ಶೇಷೋಪಚಾರ) ಪಟ್ಟ ಭಾಸಿಂಗ ತೆಗೆದ ಮೇಲೆನೇ ಭೋಜನ ಮಾಡಬೇಕು.

ಗೌಡ ಸಂಸ್ಕೃತಿ- ಮದುವೆ( ಗುರುಕಾರಣರಿಗೆ ಬಡಿಸುವುದು ಮತ್ತು ಮದುಮಗನ ಮುಖ ಕ್ಷೌರ)

 ಗುರುಕಾರಣರಿಗೆ ಬಡಿಸುವುದು : ವೀಳ್ಯ ಶಾಸ್ತ್ರದ ನಂತರ ನಿಶ್ಚಯಿಸಿದ ದಿನದಂದು ವಧು/ವರರ ತಳಮನೆಯಲ್ಲಿ ಗುರು ಕಾರಣರಿಗೆ ಬಡಿಸುವ ಕ್ರಮವಿದೆ.


ಮದುಮಗನ ಮುಖ ಕ್ಷೌರ : ಮದರಂಗಿ ಶಾಸ್ತ್ರದ ಮೊದಲು ಕ್ಷೌರ ಮಾಡಿಸುವುದು ಕ್ರಮ. ಕ್ಷೌರಿಕನಿಗೆ ಹೇಳಿಕೆ ಕೊಟ್ಟು ಮದರಂಗಿ ಶಾಸ್ತ್ರ ದಿನ ಬರಲು ಹೇಳುವುದು ಪದ್ಧತಿ. ಮುಖ ಕ್ಷೌರ ಮಾಡಿದ ಮೇಲೆ ಕ್ಷೌರಿಕನಿಗೆ ಕೊಡುವ ಮರ್ಯಾದೆ ಕೊಟ್ಟು ಕಳುಹಿಸುವುದು ಪದ್ಧತಿ.

Tuesday, April 22, 2025

ಗೌಡ ಸಂಸ್ಕೃತಿ- ಮದುವೆ( ಮದುಮಗಳಿಗೆ ಬಳೆ ತೊಡಿಸುವ ಶಾಸ್ತ್ರ )

 ಮದುಮಗಳಿಗೆ ಬಳೆ ತೊಡಿಸುವ ಶಾಸ್ತ್ರ (ಮದರಂಗಿ ಶಾಸ್ತ್ರದ ಮೊದಲ ದಿನ) : ವಧುವಿನ

ಮನೆಯಲ್ಲಿ ಬಳೆ ತೊಡಿಸುವ ಪದ್ಧತಿಯಿರುತ್ತದೆ. ಈ ಮೊದಲೇ ಹೇಳಿಕೆ ಕೊಟ್ಟಂತೆ ಬಂದಿರುವ ಬಳೆಗಾರ್ತಿ ಚಪ್ಪರದಡಿಯಲ್ಲಿ ಹಸಿರು ಮತ್ತು ಕೆಂಪು ಬಳೆಗಳನ್ನು ತಂದು ಮದುಮಗಳಿಗೆ ತೊಡಿಸುವುದು. ಸೇರಿದ ಇಷ್ಟಪಟ್ಟ ಎಲ್ಲಾ ಹೆಂಗಳೆಯರಿಗೂ ಬಳೆ ತೊಡಿಸುವುದು ಪದ್ಧತಿ.

ಗೌಡ ಸಂಸ್ಕೃತಿ- ಮದುವೆ(ಧಾರಾ ಮಂಟಪ )

 ಧಾರಾ ಮಂಟಪ : ಮನೆಯ ಮುಂಭಾಗದಲ್ಲಿ ಪೂರ್ವಾಭಿಮುಖವಾಗಿ ನಾಲ್ಕು ಅಡಿಕೆ ಮರದ ಕಂಬಗಳನ್ನು ಉಪಯೋಗಿಸಿ ಧಾರಾ ಮಂಟಪ ರಚಿಸುವುದು. ಮಡಿವಾಳ ಮಣೆಯಿಟ್ಟ ದೀಪ ಹಚ್ಚಿ  ಬೆಂಡು ಕುಕ್ಕೆಯಲ್ಲಿ 1 ಸೇರು ಅಕ್ಕಿ, 1 ತೆಂಗಿನ ಕಾಯಿ, 5 ವೀಳ್ಯದೆಲೆ, ಅಡಿಕೆ 1 ಪಾವಲಿ ಇಟ್ಟು ಕೈ ಮುಗಿದು ಮೇಲ್ಕಟ್ಟು ಕಟ್ಟುತ್ತಾನೆ. ಮೇಲ್ಕಟ್ಟು ಕಟ್ಟಿದ ಮಧ್ಯಭಾಗಕ್ಕೆ 5 ವೀಳ್ಯದೆಲೆ, 1 ಅಡಿಕೆಯಲ್ಲಿ ನಿಯಮನುಸಾರವಾಗಿ ಒಗ್ಗಿ ಹಾಕಿದ ಜೋಡು ತೆಂಗಿನ ಕಾಯಿಯೊಂದಿಗೆ ಪೋಣಿಸಿ ಕಟ್ಟುವನು. ನಾಲ್ಕು ಕಂಬಗಳಿಗೆ ಬಿಳಿ ವಸ್ತ್ರವನ್ನು ಕಟ್ಟುವನು (ಎಣ್ಣೆ ಅರಿಶಿನ ಮಾಡಿದ ಕೈ ಉಜ್ಜಲು)

ಗೌಡ ಸಂಸ್ಕೃತಿ- ಮದುವೆ(ಚಪ್ಪರ ಹಾಕುವ ಕ್ರಮ)

 ಚಪ್ಪರ ಹಾಕುವ ಕ್ರಮ : ಮದುವೆಗೆ 4 ಅಥವಾ 5 ದಿನಗಳಿಗೆ ಮುಂಚಿತವಾಗಿ ಕುಟುಂಬಸ್ಥರಿಗೆ, ನೆರೆಕರೆಯವರಿಗೆ ಹೇಳಿಕೆ ಕೊಟ್ಟು ಚಪ್ಪರ ಹಾಕಲು ಕೇಳಿಕೊಳ್ಳುವುದು. ಊರುಗೌಡರ ನೇತೃತ್ವದಲ್ಲಿ ಮನೆಯ ಮುಂಭಾಗದಲ್ಲಿ ಚಪ್ಪರ ಹಾಕುವುದು. ಚಪ್ಪರದ ಕಂಬಗಳು ಸಮ ಸಂಖ್ಯೆಯಲ್ಲಿರಬೇಕು. ಮದುವೆಯ ಹಿಂದಿನ ದಿನ, ಮದರಂಗಿಯಂದು ವಿಶ್ವಕರ್ಮರು ನಿರ್ಮಿಸಿಕೊಟ್ಟ ಹಾಲೆಮರದ ಪಾದುಕೆಗಳನ್ನು ಪ್ರವೇಶ ದ್ವಾರದ ಅಡಿಯಲ್ಲಿ ನೆಲಕ್ಕೆ ಮರದ ಮೊಳೆಯಿಂದ ಅಳವಡಿಸುವುದು. ಚಪ್ಪರದ ಮುಖ ತೋರಣವನ್ನು ವಿಶ್ವಕರ್ಮರಿಂದ ಮಾಡಿಸಬೇಕು. ಪೂರ್ವ ಈಶಾನ್ಯದಲ್ಲಿ ದ್ವಾರ ನಿರ್ಮಿಸಿ, ಗೊನೆ ಹಾಕಿದ 2 ಕದಳಿ ಬಾಳೆ ಕಟ್ಟಿ ತಳಿರು ತೋರಣಗಳಿಂದ ಶೃಂಗರಿಸಬೇಕು. (ಚಪ್ಪರದ ನಾಲ್ಕು ಮೂಲೆಗಳಿಗೆ ಊರುಗೌಡರು ನಾನೇಲು ಸೊಪ್ಪು ಸುತ್ತಿ ಮನೆಯವರಿಗೆ ಚಪ್ಪರವನ್ನು ಒಪ್ಪಿಸುವುದು ಕ್ರಮ)

ಗೌಡ ಸಂಸ್ಕೃತಿ- ಮದುವೆ(ಗುರು ವೀಳ್ಯ ,ಸಲಾವಳಿ ವೀಳ್ಯ ಮತ್ತಿತರ ವೀಳ್ಯಗಳು)

 3) ಗುರು ವೀಳ್ಯ: 7 ಕವಳೆ ವೀಳ್ಯದೆಲೆ, 7 ಅಡಿಕೆ, ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ವೀಳ್ಯ ಬದಲಾಯಿಸಿಕೊಳ್ಳಬೇಕು. (ಒಕ್ಕಣೆಯೊಂದಿಗೆ ಹೇಳಿ ವೀಳ್ಯ ಬದಲಾಯಿಸಿಕೊಳ್ಳಬೇಕು).


4) ಸಲಾವಳಿ ವೀಳ್ಯ : 9 ಕವಳೆ ವೀಳ್ಯದೆಲೆ, 9 ಅಡಿಕೆ ಹಾಗೂ ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ಒಕ್ಕಣೆಯೊಂದಿಗೆ ವೀಳ್ಯ ಬದಲಾಯಿಸಿಕೊಳ್ಳಬೇಕು. (ಸಲಾವಳಿ ಎಂದರೆ ವಧು ವರರ ಜಾತಕಾದಿಗಳು, ಗೋತ್ರಗಳು, ನಕ್ಷತ್ರಗಳು, ದಶಕೂಟಗಳು, ಸಂಖ್ಯಾಶಾಸ್ತ್ರ ಮುಂತಾದುವುಗಳು ಒಳಗೊಂಡಿರುತ್ತವೆ.)

5) ಮಾತು ಕರಾರು ವೀಳ್ಯ : 9 ಕವಳೆ ವೀಳ್ಯದೆಲೆ, 9 ಅಡಿಕೆ ಹಾಗೂ ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ಒಕ್ಕಣೆಯೊಂದಿಗೆ ವೀಳ್ಯ ಬದಲಾಯಿಸಿಕೊಳ್ಳಬೇಕು. (ಕರಾರು ಪತ್ರ ಮಾಡಿಕೊಳ್ಳಬೇಕು. )

6) ವೀಳ್ಯ ಶಾಸ್ತ್ರದ ವೀಳ್ಯ: 9 ಅಡಿಕೆ 9ಕವಳೆ ವೀಳ್ಯದೆಲೆ ಸ್ವಲ್ಪ ಅಡಿಕೆ ಹೋಳು ಇಟ್ಟು ಮೇಲಿನಂತೆ ಒಕ್ಕಣೆಯೊಂದಿಗೆ ವೀಳ್ಯ ಬದಲಾಯಿಸಿಕೊಳ್ಳಬೇಕು. 5 ವೀಳ್ಯದೆಲೆ 1 ಅಡಿಕೆ ವರನಿಗಾಗಿ, ವರನ ಮನೆಯವರಿಗೂ, 5 ವೀಳ್ಯದೆಲೆ 1 ಅಡಿಕೆ ವಧುವಿಗಾಗಿ ವಧುವಿನ ಕಡೆಯವರಿಗೂ ಹರಿವಾಣದಲ್ಲಿಟ್ಟು ಕೊಡಬೇಕು.

7) ಲಗ್ನ ವೀಳ್ಯ : 9 ಕವಳೆ ವೀಳ್ಯದೆಲೆ, 9 ಅಡಿಕೆಯೊಂದಿಗೆ ಮಾತು ಕರಾರು ಪತ್ರ ಇಟ್ಟು ಒಕ್ಕಣೆಯೊಂದಿಗೆ ಮೇಲಿನಂತೆ ವೀಳ್ಯ ಬದಲಿಸಿಕೊಳ್ಳಬೇಕು.

8,9) ತಾಯಿ ತಂದೆ ವೀಳ್ಯ (2 ಹರಿವಾಣಗಳಿರಬೇಕು) : 9 ಕವಳೆ ವೀಳ್ಯದೆಲೆ, 9 ಅಡಿಕೆ ಹಾಗೂ ಅಡಿಕೆ ಹೋಳು ಇಟ್ಟಿರಬೇಕು. ಉಭಯ ಕಡೆಯಿಂದಲೂ ಊರುಗೌಡರ ಜೊತೆ ಒಬ್ಬರು ಎದ್ದು ಒಕ್ಕಣೆಯೊಂದಿಗೆ ವೀಳ್ಯ ಕೊಡುವುದು ಹಾಗೂ ತೆಗೆದುಕೊಳ್ಳುವುದು ಮಾಡಬೇಕು. ತಂದೆಯ ವೀಳ್ಯದಿಂದ ತಂದೆಯ ಕುಟುಂಬದವರಿಗೂ, ತಾಯಿ ವೀಳ್ಯದಿಂದ ತಾಯಿ ಕುಟುಂಬದವರಿಗೂ ಹಂಚಬೇಕು. ಹಿಂದಿನ ಕಾಲದಲ್ಲಿ ಉಭಯ ಕಡೆಯ ಕುಟುಂಬಸ್ಥರಿಗೆ ಹೀಗೆ ವೀಳ್ಯ ಕೊಟ್ಟು ಆಹ್ವಾನಿಸುತ್ತಿದ್ದರು.

ಚೌಕಿ ವೀಳ್ಯ : ಚೌಕಿ ವೀಳ್ಯವನ್ನು ಎತ್ತಿ ವಧುವಿನ ಕಡೆಯ ಊರುಗೌಡರಿಗೆ ಕಾರ್ಯಕ್ರಮ
ಚೆನ್ನಾಗಿ ಸುಧಾರಿಸಿಕೊಟ್ಟಿದ್ದೀರಿ ಎಂದು ಹೇಳಿ ವರನ ಕಡೆಯ ಊರುಗೌಡರು ನೀಡುವರು. ಹರಿವಾಣವನ್ನು ಆರಂಭದಲ್ಲಿ ಚೌಕಿ ವೀಳ್ಯದಂತೆ ಪ್ರದಕ್ಷಿಣೆ ತಂದು (ಸಾಂಕೇತಿಕವಾಗಿ ಚೌಕಿಯಲ್ಲಿರುವವರು 1 ವೀಳ್ಯದೆಲೆ, 1 ಅಡಿಕೆ ಹೋಳನ್ನು ತೆಗೆದುಕೊಳ್ಳುವರು) ವಧುವಿನ ಕಡೆಯ ಊರು ಗೌಡರು ಮಣೆಯ ಮೇಲಿಡಬೇಕು. (ಈಗ ಊರುಗೌಡರು ಸ್ಥಳ ಬದಲಾವಣೆ ಮಾಡಿಕೊಳ್ಳುವರು). ವೀಳ್ಯ ತಿನ್ನುತ್ತಾ ಮದುವೆಯ ಮುಂದಿನ ವ್ಯವಸ್ಥೆಯ ಬಗ್ಗೆ ಮಾತುಕತೆಯಾಗುತ್ತದೆ. ಮಾತುಕತೆ ಮುಗಿದ ನಂತರ ಕೈಮುಗಿದು ಎಲ್ಲರೂ ಚೌಕಿಯಿಂದ ಏಳುತ್ತಾರೆ. ಭೋಜನ ವ್ಯವಸ್ಥೆಯಾದ ನಂತರ ಹುಡುಗಿ ಮನೆಯವರ ಒಪ್ಪಿಗೆ ಪಡೆದು ವರನ ಮನೆಯವರು ತೆರಳುವರು.

Monday, April 14, 2025

ಗೌಡ ಸಂಸ್ಕೃತಿ- ಮದುವೆ(ದೇವರ ವೀಳ್ಯ )

 2) ದೇವರ ವೀಳ್ಯ :

5 ಕವಳೆ ವೀಳ್ಯದೆಲೆ 5 ಅಡಿಕೆ, ಸ್ವಲ್ಪ ಅಡಿಕೆ ಹೋಳು ಹಾಕಿ ವರನ ಕಡೆಯ ಊರುಗೌಡರು, ನೀರಿನ ತಂಬಿಗೆ ಮುಟ್ಟಿ ಎದ್ದು ನಿಂತು ವೀಳ್ಯದ ತಟ್ಟೆಯನ್ನು ಕೈಯಲ್ಲಿ ಹಿಡಿದು ಹತ್ತು ಕುಟುಂಬ ಹದಿನೆಂಟು ಗೋತ್ರದ ಬಂಧು-ಬಾಂಧವರು, ನೆಂಟರಿಷ್ಟರು, ಗುರುಮನೆ, ಕಟ್ಟೆಮನೆ, ಸೀಮೆಮನೆ, ಮಾಗಣೆಮನೆ.........ಗೋತ್ರದ..............ಹೆಸರಿನ  ವರನಿಂದ ಸ್ವಜಾತಿ ಬಾಂಧವರ ಸಮ್ಮುಖದಲ್ಲಿ .......ಗೋತ್ರದ ........ವಧುವಿಗೆ ದೇವರ ವೀಳ್ಯವನ್ನು ಎತ್ತಿ ಕೊಡುತ್ತೇವೆ ಎಂದು ಹೆಣ್ಣಿನ ಕಡೆಯ ಊರುಗೌಡರಿಗೆ ಒಪ್ಪಿಸುವರು. ಅದೇ ರೀತಿಯ ಒಕ್ಕಣೆಯೊಂದಿಗೆ ವಧುವಿನ ಕಡೆಯ ಊರುಗೌಡರು ಸ್ವೀಕರಿಸುವರು (3 ಸಲ ಒಕ್ಕಣೆ ಹೇಳಬೇಕು). ಆಗ ಸಭೆಯಲ್ಲಿದ್ದವರು ಒಪ್ಪಿಗೆಯಾಗಿ ಒಳ್ಳೆ ಕಾರ್ಯಂತ ಗಟ್ಟಿಯಾಗಿ ಹೇಳಬೇಕು.


Friday, April 11, 2025

ಗೌಡ ಸಂಸ್ಕೃತಿ- ಮದುವೆ(ಚೌಕಿ ವೀಳ್ಯ)

 ಚೌಕಿ ವೀಳ್ಯ


ಚೌಕಿಯಲ್ಲಿ ಕುಳಿತವರೆಲ್ಲ ಗಂಧವನ್ನು ಹಚ್ಚಿಕೊಳ್ಳಬೇಕು. ವರನ ಕಡೆಯ ಊರುಗೌಡರು. ಒಂದು ಹರಿವಾಣದಲ್ಲಿ ಸೂಡಿ ಎಲೆ, 5 ಅಡಿಕೆ ಇಟ್ಟು ವಧುವಿನ ಕಡೆಯ ಊರುಗೌಡರಿಗೆ ಅವರು ಬಂದ ಜಿಲ್ಲೆ, ತಾಲೂಕು, ನಾಡು, ಗ್ರಾಮ ಮತ್ತು ಇಂತವರ ಅನುಮತಿ ಮೇರೆಗೆ ಹುಡುಗನ ಮನೆಯ ಯಜಮಾನನ ಹೆಸರು ಹೇಳುವುದು.. ..ಹುಡುಗಿಯ ಕಡೆಯ ಪೂರ್ಣ ವಿವರ ಮತ್ತು ಯಜಮಾನನ ಹೆಸರು ಹೇಳಿ ಅವರ ಅನುಮತಿ ಮೇರೆಗೆ ವೀಳ್ಯಶಾಸ್ತ್ರ ನಡೆಸುವುದಕ್ಕೆ ಬಂದ ನೆಂಟರು ನಾವು. ನಮ್ಮ ಸಂಸ್ಕೃತಿ, ಪದ್ಧತಿ, ಕಟ್ಟಳೆಗಳಿಗೆ ಸರಿಯಾಗಿ ನಮ್ಮ ಇಂದಿನ ವೀಳ್ಯಶಾಸ್ತ್ರವನ್ನು ಮುಂದಿನ ದಿಬ್ಬಣ, ಮದುವೆ ಕಾಠ್ಯಕ್ರಮವನ್ನೆಲ್ಲಾ ಮನೆಯವರ ಒಪ್ಪಿಗೆ ಮೇರೆಗೆ ಸುಧಾರಿಸಿ ಕೊಡಬೇಕು ಅಂತ ಕೇಳಿಕೊಳ್ಳುತ್ತಾರೆ. ಊರು ಗೌಡರು ಮನೆಯ ಯಜಮಾನರ ಒಪ್ಪಿಗೆ ಪಡೆದು ಕಾರ್ಯಕ್ರಮ ಮುಂದುವರಿಸುತ್ತಾರೆ. ಕುಟುಂಬದ ಸರ್ವರಲ್ಲಿಯೂ, ಸೋದರದವರಲ್ಲಿಯೂ ಒಪ್ಪಿಗೆ ಇದೆಯೋ ಎಂದು ಕೇಳುವರು. ಎಲ್ಲರೂ ಒಪ್ಪಿಗೆ ಸೂಚಿಸುವರು.

1. ಚೌಕಿ ವೀಳ್ಯ ಜೋಡಿಸಿಡುವ ಕ್ರಮ : ವಧುವಿನ ಕಡೆಯವರು ಮಣೆಯ ಮೇಲೆ ಇರಿಸಿದ ಹರಿವಾಣದಲ್ಲಿ-ವರನ ಕಡೆಯವರು ಹರಿವಾಣದ ಸುತ್ತಲೂ ವೀಳ್ಯದ ಎಲೆಯ ಕವಳೆಯ ತುದಿ ಹೊರಗೆ ಬರುವಂತೆ ಇಡಬೇಕು. (ಸಾಮಾನ್ಯವಾಗಿ 5 ಕವಳೆ ಅಥವಾ ಕವಳೆ ವಿಷಮ ಸಂಖ್ಯೆಯಲ್ಲಿರಬೇಕು) ಮಧ್ಯದಲ್ಲಿ ಕವಳೆ ಸಂಖ್ಯೆಯಷ್ಟೆ ಅಡಿಕೆಯಿರಬೇಕು ಹಾಗೂ ಅಡಿಕೆ ಹೋಳು ಹಾಗೂ ಸ್ವಲ್ಪ ಬೆಳ್ತಿಗೆ ಅಕ್ಕಿ ಇರಬೇಕು.

ಚೌಕಿ ವೀಳ್ಯ ಕೊಡುವ ಕ್ರಮ : ವರನ ಕಡೆಯ ಗುರುಮನೆ, ಕಟ್ಟೆಮನೆ, ಸೀಮೆಮನೆ, ಮಾಗಣೆಮನೆ ಊರುಗೌಡರು ಎದ್ದು ನಿಂತು ಗೋತ್ರದ ಹೆಸರಿನ ವರನಿಂದ ಸ್ವಜಾತಿ ಬಾಂಧವರ ಸಮ್ಮುಖದಲ್ಲಿ ಚೌಕಿ ವೀಳ್ಯ ಎತ್ತಿ ಕೊಡುತ್ತೇವೆ ಎಂದು ಹೇಳಿ ವಧುವಿನ ಕಡೆಯ ಊರುಗೌಡರಿಗೆ ಕೊಟ್ಟಾಗ ಅವರು ಕೂಡ ಹಾಗೇನೆ ಎದ್ದು ನಿಂತು ಒಕ್ಕಣೆಯೊಂದಿಗೆ ಸ್ವೀಕಾರ ಮಾಡುತ್ತಾರೆ. (ಪ್ರತಿಯೊಬ್ಬರು ವೀಳ್ಯ ಬದಲಾಯಿಸಿಕೊಳ್ಳುವಾಗ ಇತ್ತಂಡದವರು ತಂಬಿಗೆಯಲ್ಲಿರುವ ನೀರನ್ನು ಮುಟ್ಟಿಕೊಳ್ಳಬೇಕು) ನಂತರ ಇದನ್ನು ಬಳಿಯಲ್ಲಿ ಕುಳಿತವರಿಗೆ ಪ್ರದಕ್ಷಿಣೆ ಬರುವಂತೆ ಕೊಡಬೇಕು. ಎಲ್ಲರೂ ಗೌರವಸೂಚಕವಾಗಿ ನಮಸ್ಕರಿಸಿ ವಧುವಿನ ಕಡೆಯ ಊರುಗೌಡರು ಮಣೆಯ ಮೇಲಿಡುತ್ತಾರೆ.

ಗೌಡ ಸಂಸ್ಕೃತಿ- ಮದುವೆ(ವೀಳ್ಯ ಕೊಡುವ ಕ್ರಮ)

ವೀಳ್ಯ ಕೊಡುವ ಕ್ರಮ :

ಹರಿವಾಣದಲ್ಲಿ ವೀಳ್ಯ ಕೊಡುವಾಗ ವೀಳ್ಯದೆಲೆಯ ತುದಿ ಹಾಗು ಅಡಿಕೆ ತೊಟ್ಟು ತೆಗೆದುಕೊಳ್ಳುವ ಭಾಗಕ್ಕಿರಬೇಕು. ತೆಗೆದುಕೊಂಡ ಮೇಲೆ ಅದರಲ್ಲಿ ವೀಳ್ಯದೆಲೆ ಹಾಗೂ ಅಡಿಕೆ ಹೋಳು ಶಾಸ್ತ್ರಕ್ಕೆ ತೆಗೆದುಕೊಂಡು ಮತ್ತೆ ಅವರು ಕೂಡಾ ತಿರುಗಿಸಿ ಕೊಡಬೇಕು

ವೀಳ್ಯ ಶಾಸ್ತ್ರ ದಿನದ ವೀಳ್ಯಗಳು


2. ದೇವರ ವೀಳ್ಯ

3. ಗುರು ವೀಳ್ಯ

4. ಸಲಾವಳಿ ವೀಳ್ಯ

5. ಮಾತು ಕರಾರು ವೀಳ್ಯ

6. ವೀಳ್ಯ ಶಾಸ್ತ್ರದ ವೀಳ್ಯ

7. ಲಗ್ನ ವೀಳ್ಯ

8. ತಾಯಿ ವೀಳ್ಯ

9 ತಂದೆ ವೀಳ್ಯ

ಪರಿಚಯಾತ್ಮಾಕ ವೀಳ್ಯ:

Thursday, April 10, 2025

ಗೌಡ ಸಂಸ್ಕೃತಿ- ಮದುವೆ( ಊರು ಗೌಡರ((ದಿಬ್ಬಣದ ಮುಖ್ಯಸ್ಥ) ಉಡುಗೆ ತೊಡುಗೆಗಳು)

 ಊರು ಗೌಡರ ಉಡುಗೆ ತೊಡುಗೆಗಳು :

ಬಿಳಿ ಶರ್ಟ್, ಬಿಳಿ ಮುಂಡು, ಬಿಳಿ ಶಾಲು ಧರಿಸಿರಬೇಕು. ಕಾರ್ಯಕ್ರಮ ನಡೆಸಿಕೊಡುವಾಗ ಮುಂಡಾಸು ಕಟ್ಟಿರಲೇಬೇಕು. (ಪ್ರತೀ ಬೈಲಿಗೊಬ್ಬ ಊರುಗೌಡ, ಒತ್ತು ಗೌಡ ಇರುತ್ತಾರೆ. ಊರು ಗೌಡರ ನಂತರ ಅವರ ಮಕ್ಕಳ ಕಾಲಕ್ಕಾಗುವಾಗ ಊರುಗೌಡತ್ತಿಗೆ ಮಾಡಲು ಸಾಧ್ಯವಾಗದ ಪಕ್ಷದಲ್ಲಿ ಸಂಪ್ರದಾಯ ರೀತಿ ರಿವಾಜುಗಳ ಬಗ್ಗೆ ತಿಳಿದವರನ್ನು ಆಯಾ ಊರಿನ ಹಿರಿಯರು ಚರ್ಚಿಸಿ ನೇಮಕ ಮಾಡಬಹುದು.)

ಮದುವೆ ಕಾರ್ಯಕ್ಕೆ ಸಂಬಂದಪಟ್ಟಂತೆ ಊರು ಗೌಡರಿಗೆ ಅವರ ಮನೆಗೆ ಹೋಗಿ ! ಸೂಡಿ ವೀಳ್ಯದೆಲೆ, 5 ಅಡಿಕೆ, ಅಡಿಕೆಹೋಳು ಹರಿವಾಣದಲ್ಲಿ ಇಟ್ಟು ಮದುವೆ ಕಾರ್ಯವನ್ನುಬಂದು ಸುಧಾರಿಸಿಕೊಡಲು ಕೇಳಿಕೊಳ್ಳಬೇಕು.

Wednesday, April 9, 2025

ಗೌಡ ಸಂಸ್ಕೃತಿ- ಮದುವೆ(ವೀಳ್ಯಶಾಸ್ತ್ರ (ವಧುವಿನ ಮನೆಯಲ್ಲಿ))

 ವೀಳ್ಯಶಾಸ್ತ್ರ (ವಧುವಿನ ಮನೆಯಲ್ಲಿ)


ಪರಿಕರಗಳು : ಕಾಲುದೀಪ,ಎಳ್ಳೆಣ್ಣೆ, ನೆಣೆಬತ್ತಿ, ಅಗರಬತ್ತಿ. ಚಾಪೆ 4, ಮಣೆ 2, ತಂಬಿಗೆ ನೀರು, ಹರಿವಾಣ 1, ವೀಳ್ಯದೆಲೆ 5, ಅಡಿಕೆ 1, ಹಿಡಿ ಬೆಳ್ಳಿಗೆ ಅಕ್ಕಿ, ತೇದ ಗಂಧ ಹಾಗೂ ತುಂಬೆ ಹೂ, ತುದಿ ಬಾಳೆಲ, ಉದ್ದಕ್ಕೆ ಒಡೆದ ಸ್ವಲ್ಪ ಅಡಿಕೆಹೋಳು

ಮದುವೆಗೆ ಸುಮಾರು ಒಂದು ವಾರ ಅಥವಾ ಹದಿನೈದು ದಿನಗಳ ಒಳಗೆ ವೀಳ್ಯಶಾಸ್ತ್ರವನ್ನು ಊರು ಗೌಡರ ಗಮನಕ್ಕೆ ತಂದು ನಿಶ್ಚಯ ಮಾಡಿಕೊಳ್ಳಬೇಕು. (ಅನಿವಾರ್ಯ ಕಾರಣಗಳಲ್ಲಿ ಮದರಂಗಿ ಶಾಸ್ತ್ರದ ದಿನ ವೀಳ್ಯಶಾಸ್ತ್ರ ಇಟ್ಟುಕೊಳ್ಳಬಹುದು. ವೀಳ್ಯಶಾಸ್ತ್ರವನ್ನು ಬೆಳಗಿನ ಸಮಯ ಮಾಡುವುದು ಸೂಕ್ತ)

ಉಭಯಸ್ತರು ನಿಶ್ಚಯಿಸಿದ ದಿನ ವಧುವಿನ ಮನೆಯಲ್ಲಿ ವೀಳ್ಯ ಶಾಸ್ತ್ರಕ್ಕೆ ಏರ್ಪಾಡು ಮಾಡಬೇಕು. ವಧುವಿನ ಮನೆಯವರು ಬಂಧು-ಬಾಂಧವರಿಗೆ, ಊರುಗೌಡರಿಗೆ 1 ಸೂಡಿ ವೀಳ್ಯದೆಲೆ, 5 ಅಡಿಕೆ ಹರಿವಾಣದಲ್ಲಿಟ್ಟು ವೀಳ್ಯಶಾಸ್ತ್ರಕ್ಕೆ ಕೇಳಿಕೊಳ್ಳಬೇಕು. ಅದರಂತೆ ವರನ ಕಡೆಯಿಂದಲೂ ಅವರ ಬಂಧು-ಬಾಂಧವರಿಗೆ, ಊರು ಗೌಡರಿಗೆ ವೀಳ್ಯ ಕೊಟ್ಟು ವೀಳ್ಯ ಶಾಸ್ತ್ರಕ್ಕೆ ಬರುವಂತೆ ಹೇಳಬೇಕು. (ವೀಳ್ಯಶಾಸ್ತ್ರಕ್ಕೆ ಹುಡುಗ ಹೋಗುವ ಕ್ರಮವಿರಲಿಲ್ಲ)

ವೀಳ್ಯಶಾಸ್ತ್ರದ ದಿನ ಸೋದರಮಾವ, ಊರು ಗೌಡರು, ಕುಟುಂಬಸ್ಥರು, ನೆಂಟರು ಇವರೆಲ್ಲ ಸಮಯಕ್ಕೆ ಮುಂಚಿತವಾಗಿ ಬಂದು ವರನ ಮನೆಯಲ್ಲಿ ಸೇರುತ್ತಾರೆ. ವೀಳ್ಯ ಕಟ್ಟಲು ಒಂದು ಕೈ ಚೀಲದಲ್ಲಿ ವೀಳ್ಯದೆಲೆ ಅದಕ್ಕೆ ನೀಟವಾಗಿ ಒಡೆದ ಅಡಕೆ ಹೋಳು, 2 ಹರಿವಾಣಗಳಿರಬೇಕು. ಹೊರಡುವ ಮೊದಲು ಮನೆಯ ಹಿರಿಯರು ದೇವರಿಗೆ ದೀಪ ಹಚ್ಚಿ ಕೈ ಮುಗಿದು ಮನೆಯಿಂದ ಹೊರಡಬೇಕು.

ವಧುವಿನ ಮನೆಯಲ್ಲಿ ಆಗಮಿಸಿದ ನೆಂಟರಿಗೆ ಕೈಕಾಲು ಮುಖ ತೊಳೆಯಲು ನೀರುಕೊಟ್ಟು ಸತ್ಕರಿಸುತ್ತಾರೆ. ನಂತರ ವೀಳ್ಯ ಶಾಸ್ತ್ರಕ್ಕೆ ತಯಾರಿ ಮಾಡುತ್ತಾರೆ. ವಧುವಿನ ಕಡೆಯ ಊರುಗೌಡರ ಉಸ್ತುವಾರಿಯಲ್ಲಿ ಚೌಕಿ ಹಾಸಿ (ಚೌಕಾಕಾರವಾಗಿ ನಾಲ್ಕು ದಿಕ್ಕಿನಿಂದ ನಾಲ್ಕು ಚಾಪೆ ಹಾಸುವುದು) ಮಧ್ಯೆ 2 ಮಣೆ, ತಂಬಿಗೆ ನೀರು, 1 ಹರಿವಾಣದಲ್ಲಿ 5 ವೀಳ್ಯದೆಲೆ 1 ಅಡಿಕೆ ಒಂದು ಹಿಡಿ ಬೆಳ್ತಿಗೆ ಅಕ್ಕಿ ಹಾಕಿಡಬೇಕು. ಕಾಲುದೀಪವನ್ನು ಪೂರ್ವಾಭಿಮುಖವಾಗಿ ಒಂದು ಹಿಡಿ ಬೆಳಗಿಸಬೇಕು. ತೇದ ಗಂಧ ಮತ್ತು ತುಂಬೆ ಹೂ ಕೊಡಿ (ತುದಿ) ಬಾಳೆ ಎಲೆಯಲ್ಲಿಡಬೇಕು. ಇದಾದ ನಂತರ ವಧುವಿನ ಮನೆಯ ಹಿರಿಯರು ಮತ್ತು ಊರುಗೌಡರು ತಂಬಿಗೆ ನೀರು ಹಿಡಿದು ವರನ ಕಡೆಯವರನ್ನು ಚೌಕಿಗೆ ಕುಳಿತುಕೊಳ್ಳಲು ಆಹ್ವಾನಿಸಿ ವಧುವಿನ ಕಡೆಯ ಊರು ಗೌಡರ ಸಮೇತ ಪೂರ್ವಾಭಿಮುಖವಾಗಿ ಕುಳಿತುಕೊಳ್ಳುವರು. ವರನ ಕಡೆಯ ಊರುಗೌಡರು ಚೌಕಿ ಬಳಿ ಬಂದು ಸೀಮೆ, ಗ್ರಾಮ ಮತ್ತು ಊರು, ಮನೆ ಹಾಗೂ ಮನೆ ಯಜಮಾನನ ಹೆಸರು ಹೇಳಿ ಇತ್ತಂಡದವರ ಒಪ್ಪಿಗೆ ಮೇರೆಗೆ ನಾವು ವೀಳ್ಯಶಾಸ್ತ್ರಕ್ಕಾಗಿ ಬಂದಿರುತ್ತೇವೆ, ಚೌಕಿಗೆ ಬರಲು ಮತ್ತು ಕುಳಿತುಕೊಳ್ಳಲು ಅನುಮತಿ ಕೊಡಿ ಎಂದು ಕೇಳುತ್ತಾರೆ. ಒಪ್ಪಿಗೆ ಪಡೆದು ತಂಬಿಗೆ ನೀರು ಮುಟ್ಟಿ ದೀಪಕ್ಕೆ ನಮಸ್ಕರಿಸಿ ಪಶ್ಚಿಮ ಭಾಗಕ್ಕೆ ಮುಖ ಮಾಡಿ ಕುಳಿತುಕೊಳ್ಳುವರು. ಉಳಿದವರು ಅವರವರ ಭಾಗಕ್ಕೆ ತಕ್ಕಂತೆ ಚೌಕಿ ಸುತ್ತ ಕುಳಿತುಕೊಳ್ಳುವರು. (ಉಭಯ ಕಡೆಗಳಿಂದ ಕನಿಷ್ಠ 5 ಜನರಿರಬೇಕು; ಮತ್ತು ಎಲ್ಲರೂ ತಲೆಗೆ ರುಮಾಲು ಸುತ್ತಬೇಕು. ತೇದ ಗಂಧವನ್ನು ಹಾಕಿಕೊಳ್ಳಬೇಕು).

1) ಕುಟುಂಬದ ಯಜಮಾನ, 2) ಸೋದರ ಮಾವ, 3) ಊರುಗೌಡರು 4) ಒತ್ತುಗೌಡರು ಇಲ್ಲದ ಪಕ್ಷದಲ್ಲಿ ಯಾರಾದರು. 5) ಊರಿನವರು. 

Thursday, April 3, 2025

ಗೌಡ ಸಂಸ್ಕೃತಿ-ದೀಪಾವಳಿ ಹಬ್ಬದ ಆಚರಣೆಗಳು

 ನರಕ ಚತುರ್ದಶಿ:

ಆಶ್ವಯುಜ ಮಾಸದ ಅಮಾವಾಸ್ಯೆಯ ಮೊದಲ ದಿನ ದೀಪಾವಳಿ ಹಬ್ಬ ಆರಂಭವಾಗುತ್ತದೆ. ಅಂದು ನರಕ ಚತುರ್ದಶಿ ದಿನ. ಬಿಸಿ ನೀರ ಹಂಡೆಯನ್ನು ತೊಳೆದು ಅದರ ಮೇಲೆ ಚಿತ್ತಾರ ಬಿಡಿಸಿ ನೀರು ತುಂಬಿಸಿಡಬೇಕು. ಮರುದಿನ ಮುಂಜಾನೆ ಎದ್ದು ನೀರು ಬಿಸಿ ಮಾಡಿ ಮನೆ ಮಂದಿಯೆಲ್ಲಾ ತಲೆಗೆ ಮೈಗೆ ಎಣ್ಣೆ ಹಾಕಿ ಸ್ಥಾನ ಮಾಡಬೇಕು. ನಂತರ ಬಾಳೆಹಣ್ಣು ರಸಾಯನ ಮತ್ತು ಹುಳಿ ದೋಸೆ ತಯಾರಿಸಿ ತಿನ್ನುತ್ತಾರೆ.

ಮನೆಯಲ್ಲಿನ ಕೃಷಿ ಸಾಮಾಗ್ರಿಗಳನ್ನೆಲ್ಲಾ ತೊಳೆದು ಶುದ್ಧಗೊಳಿಸಿ ಮನೆಯಂಗಳದ ನಿರ್ದಿಷ್ಟ ಸ್ಥಳದಲ್ಲಿ ಓರಣವಾಗಿ ಜೋಡಿಸಿಡುತ್ತಾರೆ. ದನಗಳ ಹಟ್ಟಿ, ತುಳಸಿಕಟ್ಟೆ, ಅಂಗಳದ ಕಡೆಯೆಲ್ಲಾ ಗುಡಿಸಿ ಸ್ವಚ್ಛಗೊಳಿಸಬೇಕು.

ಅಮಾವಾಸ್ಯೆಯ ದಿನ ಬೆಳಿಗ್ಗೆ ಎದ್ದು ಬಾಳೆಹಣ್ಣು ರಸಾಯನದೊಂದಿಗೆ ಹುಳಿ ದೋಸೆ ತಿಂದು ಮನೆಯ ಯಜಮಾನ ಮತ್ತು ಇತರರು ಹಾಲೆಮರದ (ಪಾಲೆಮರ) 3 ಕಂಬಗಳನ್ನು ಮತ್ತು ಅದರೊಟ್ಟಿಗೆ 2-3 ಸಣ್ಣ ಸಣ್ಣ ಕಂಬಗಳನ್ನು ಕಡಿದು ತರುತ್ತಾರೆ.

ಅಮಾವಾಸ್ಯೆ ರಾತ್ರಿ ಮನೆಯ ಯಜಮಾನ ಅಥವಾ ಹಿರಿಯರು ಅಂಗಳದ ನಿರ್ಧಿಷ್ಟ ಸ್ಥಳದಲ್ಲಿ (ಅಥವಾ ತುಳಸಿ ಕಟ್ಟೆಯ ಹತ್ತಿರ ಅಥವಾ ಕೆಲವು ಭಾಗದಲ್ಲಿ ದೈವಸ್ಥಾನದ ಎದುರು ಹಾಕುತ್ತಾರೆ.) 3 ಗುಂಡಿಗಳನ್ನು ತೆಗೆದು ತಂದಿಟ್ಟ ಹಾಲೆಮರದ 3 ಕಂಬಗಳನ್ನು ಹಾಕಬೇಕು. ಕೆಲವು ಭಾಗಗಳಲ್ಲಿ 1 ಅಥವಾ 2 ಕಂಬಗಳನ್ನು ಹಾಕಿ ಶ್ರಂಗರಿಸುತ್ತಾರೆ. ನಂತರ ಸ್ನಾನ ಮಾಡಿ ಮರದ ತುದಿಭಾಗದಲ್ಲಿ ದೀಪ ಇಟ್ಟು ನೆನೆಬತ್ತಿ ಹಚ್ಚಬೇಕು. 1 ವೀಳ್ಯದೆಲೆ, 1 ಅಡಿಕೆ ಹೋಳು ಇಡಬೇಕು. ನೆನೆಬತ್ತಿ ಆರತಿ ಬಾಳೆಲೆ ತುದಿಯಲ್ಲಿಡಬೇಕು ಹಾಗೂ ಕೈಮುಗಿಯಬೇಕು. ಮಾರನೆ ದಿನ ಬೆಳಗ್ಗೆ ಅಂದರೆ ಪಾಡ್ಯದ ದಿನ ಬಾಳೆಲೆ ತೆಗೆದು ಫಲಬರುವ ಮರದ ಬುಡಕ್ಕೆ ಹಾಕಿ ಸ್ಥಳ ಸ್ವಚ್ಛಮಾಡಬೇಕು.

ಪಾಡ್ಯ :

ಪಾಡ್ಯದಿನ ಬೆಳಿಗ್ಗೆ ಅಥವಾ ಮಧ್ಯಾಹ್ನದ ಒಳಗೆ ಧರ್ಮದೈವ ಮತ್ತು ಇತರ ದೈವಗಳ ತಂಬಿಲ ನಡೆಯುತ್ತದೆ. ಆ ದಿನ ಬೆಳಿಗ್ಗೆ ದೇವಸ್ಥಾನದಿಂದ ಪುಣ್ಯಾರ್ಚನೆ ತಂದು ದೈವಸ್ಥಾನ ಮತ್ತು ತರವಾಡು ಮನೆಗಳಿಗೆ ಹಾಕಿ ಶುದ್ಧ ಮಾಡಬೇಕು. ಕುಟುಂಬದವರೆಲ್ಲಾ ಸೇರಿದ ಮೇಲೆ ದೈವಸ್ಥಾನದಲ್ಲಿ ಸ್ವಸ್ತಿಕ ಇಟ್ಟು ಪ್ರತಿ ದೈವಗಳಿಗೆ ಅಗಲು ಬಡಿಸುವ ಕ್ರಮವಿದೆ. ತಂಬಿಲದ ಬಾಬು 8 ದಿನ ಮೊದಲು ಗೊನೆ ಕಡಿಯುವ ಕ್ರಮವಿದೆ. ಅಗಲು ಬಡಿಸಲು ಅವಲಕ್ಕಿ, ಹೊದಳು (ಅರಳು), ಬಾಳೆಹಣ್ಣು ಉಪಯೋಗಿಸಬೇಕು. ತೆಂಗಿನಕಾಯಿ ಒಡೆಯುವ ಕ್ರಮವಿದೆ. ಇದಾದನಂತರ ತಿಳಿದವರು ಪ್ರಾರ್ಥನೆ ಮಾಡಿಕೊಳ್ಳಬೇಕು. ತರವಾಡು ಮನೆಗಳಲ್ಲಿ ಲಕ್ಷ್ಮೀಪೂಜೆ ಮಾಡುವ ಕ್ರಮವಿದೆ.

ಗೋಪೂಜೆ :
ಸಂಜೆಯಾಗುತ್ತಿದಂತೆ ದನಕರುಗಳಿಗೆ ಸ್ನಾನಮಾಡಿಸಬೇಕು. ಹಟ್ಟಿಯಲ್ಲಿ ಗೋಪೂಜೆ ಮಾಡಬೇಕು.
ಕ್ರಮ : ಒಂದು ಹರಿವಾಣಕ್ಕೆ ಬೆಳ್ತಿಗೆ ಅಕ್ಕಿ ಹಾಕಿ ಅದರೊಂದಿಗೆ ಸಣ್ಣ ದೀಪ ಹಚ್ಚಿಡಬೇಕು. ತೇದಗಂಧ, 5 ಎಲೆ, 1ಅಡಿಕೆ, ಇಟ್ಟಿರಬೇಕು. ಒಂದು ಬೆಂಡು ಕುಕ್ಕೆಯಲ್ಲಿ ಸಂಗ್ರಹಿಸಿದ ಕಾಡುಹೂಗಳಿಂದ (ಗೋವಿಂದ ಹೂ, ಕುರುಡೂ ಹೂ, ಹಿಂಗಾರ ಇತ್ಯಾದಿ) ಗೋವುಗಳಿಗೆ ಅರ್ಚನೆ ಮಾಡಬೇಕು. ಕುತ್ತಿಗೆಗೆ ಹೂಮಾಲೆ ಹಾಕಬೇಕು. ಅರ್ಚನೆ ಮಾಡುವಾಗ ಪ್ರತಿ ದನಗಳ ಹೆಸರು ಹೇಳಿ ಬಾಳು..... ಬಾಳು.... ಎಂದು ಹೇಳಿ ಕೊನೆಯದಾಗಿ ಕೂ ಹೇಳಿ ಅರ್ಚನೆ ಮಾಡಬೇಕು. ಕೆಲವು ಭಾಗಗಳಲ್ಲಿ ತಡೆಯಲ್ಲಿ (ಗೆರಸೆ) ಬೆಳ್ತಿಗೆ ಅಕ್ಕಿ, ಭತ್ತ, ಅವಲಕ್ಕಿಯನ್ನು 3 ಸಾಲು ಹಾಕಿ 5 ಚಿಬಲಿ ದೀಪ (ಮಣ್ಣಿನ ಚಿಬಲಿ) ಇಟ್ಟು ಗೋವಿಂದ ಹೂ, ಕುರುಡೂ ಹೂ, ಹಿಂಗಾರ ಇಟ್ಟು ಆರತಿ ಮಾಡುತ್ತಾರೆ. ಗಂಧ ಕುಂಕುಮ ಗೋವುಗಳಿಗೆ ಇಟ್ಟು ಹೂ ಮಾಲೆ ಹಾಕುತ್ತಾರೆ. ದನಗಳಿಗೆ ತಿನ್ನಲು ಹಿಟ್ಟು, ಬಾಳೆಹಣ್ಣು ಕೊಡಬೇಕು. ಗೋಪೂಜೆ ಮುಗಿಸಿ ಹೊರ ಬಂದ ಮೇಲೆ ಹಾಲೆ ಮರದ ಸಣ್ಣ ಕೋಲನ್ನು ಗೊಬ್ಬರದ ಮೇಲೆ ಊರಬೇಕು. ಅಲ್ಲಿಗೂ ಅಗೇಲು ಹಾಕಿ ನೆನೆಬತ್ತಿ ಹಚ್ಚಿಡಬೇಕು. (ಗದ್ದೆಗೆ ಕೂಡ ಹಾಲೆಮರದ ಕಂಬ ಹಾಕುವ ಕ್ರಮವಿದೆ)

ಮರದ ಶೃಂಗಾರ :
ಬಲಿಯೇಂದ್ರ ಮರಕ್ಕೆ ಬಿದಿರು ಅಥವಾ ಸಲಾಕೆಗಳನ್ನಿಟ್ಟು ಪೋಣಿಸಿ ಕಟ್ಟಬೇಕು. ಸಲಾಕೆಗಳು ವಿಷಮ ಸಂಖ್ಯೆಯಲ್ಲಿರಬೇಕು. (5 ಅಥವಾ 7) 2 ಉದ್ದವಾದ ಸಲಾಕೆಗಳನ್ನು ಗುಣಿತಾಕಾರ ಬರುವಂತೆ ಕಂಬಗಳಿಗೆ ಕಟ್ಟಬೇಕು. ನಂತರ ಬಲಿಯೇಂದ್ರ ಮರವನ್ನು ಕಾಡು ಹೂಗಳಿಂದ ಅಲಂಕರಿಸುವರು. (ಗೋವಿಂದ ಹೂ, ತುಂಬೆ ಹೂ, ಕುರುಡು ಹೂ, ಅಂಬಳಕಾಯಿ, ಪಾರೆ ಹೂ, ಹಿಂಗಾರ, ಎಕ್ಕೆಹೂ, ಕಾಡುಕೇನೆ ಇತ್ಯಾದಿ) ನಾಯಿ ಕಬ್ಬನ್ನು ಗುಣಿತಾಕಾರದಲ್ಲಿ ಕಟ್ಟಿರುವ ಸಲಾಕೆಯ 4 ಮೂಲೆಗಳಿಗೂ ಚುಚ್ಚಿರಬೇಕು. ಚೆಂಡು ಹೂ, ಮಲ್ಲಿಗೆ ಹೂ ಗಳನ್ನು ಕೂಡ ಇಟ್ಟು ಮರವನ್ನು
ಶೃಂಗರಿಸಬೇಕು. ಮರದ ಮೇಲೆ ಒಂದು ಕೊಡೆಯನ್ನು ಕಟ್ಟಬೇಕು. ಕೊಡೆಯ ಪ್ರತೀ ಕಡ್ಡಿಗೆ ಒಂದು ವೀಳ್ಯದೆಲೆ, 1 ಅಡಿಕೆಯನ್ನು ನೂಲಿನ ಸಹಾಯದಿಂದ ಪೋಣಿಸಬೇಕು. ಆಗೇಲು ಬಡಿಸಲು ಮರದಿಂದ ಒಂದು ಅಡಿಯಷ್ಟು ಎದುರು 2 ಸಣ್ಣ ಕಂಬ ಹಾಕಿ ಅದರ ಮೇಲೆ ಹಲಗೆ ಇಡಬೇಕು. (ಅಗಲು ನೆಲದಲ್ಲಿ ಕೂಡ ಹಾಕಬಹುದು) ಕೃಷಿ ಸಾಮಾಗ್ರಿ ಹಾಗೂ ಕೋವಿಯನ್ನು ಕೂಡ ತಂದಿಡಬೇಕು. ಹಲಗೆಯ ಮೇಲೆ ಅಥವಾ ನೆಲದಲ್ಲಿ ತುದಿ ಬಾಳೆಲೆಯಲ್ಲಿ 3 ಅಗೇಲು ಹಾಕಬೇಕು. ಅದರ ಮೇಲೆ ಅವಲಕ್ಕಿ, ಹೊದುಳು ಬಡಿಸಬೇಕು. ಬಾಳೆ ಹಣ್ಣು ಸುಲಿದು ಇಡಬೇಕು. 1 ವೀಳ್ಯದೆಲೆ, 1 ಅಡಿಕೆ ಹೋಳು ಬಾಳೆಲೆ ತುದಿಯಲ್ಲಿಡಬೇಕು. ಅದಕ್ಕೆ ತೇದ ಗಂಧ ಹಚ್ಚಬೇಕು.. ಊದುಬತ್ತಿ ಹಚ್ಚಿಡಬೇಕು. 2 ತೆಂಗಿನಕಾಯಿ ಒಡೆದು ಬಲಿಯೇಂದ್ರ ಮರಕ್ಕೆ ಆರತಿ ಮಾಡಬೇಕು. ಕೃಷಿ ಸಾಮಾಗ್ರಿಗಳನ್ನಿಟ್ಟ ಸ್ಥಳದಲ್ಲಿ ಕೂಡ ಒಂದು ಅಗೇಲು ಹಾಕಿ ಅದಕ್ಕೂ ತೆಂಗಿನಕಾಯಿ ಒಡೆದು ಆರತಿ ಮಾಡಬೇಕು. ಕೊನೆಯದಾಗಿ ದೀಪದಾರತಿ ಮಾಡಬೇಕು

ಬಲಿಯೇಂದ್ರ ಪೂಜೆ ಮಾಡುವಾಗ ಹೇಳುವ ಕ್ರಮಗಳು : ಪ್ರತೀಯೊಬ್ಬರಿಗೂ ಅವಲಕ್ಕಿ ಹೊದುಳು ಕೊಡಬೇಕು, ನಂತರ 
ಹರ ಹರ ಬಲಿಯೇಂದ್ರ 
ಸಿರಿ ಸಿರಿ ಬಲಿಯೇಂದ್ರ 
ಕೂ ಬಲಿಯೇಂದ್ರ ಕೂ ಬಲಿಯೇಂದ್ರ 
ಈ ಊರ ಕಲಿ ಕೊಂಡು ಪೋ ಬಲೀಂದ್ರ 
ಆ ಊರ ಪೊಲಿ ಕೊಂಡು ಬಾ ಬಲೀಂದ್ರ
ಕೂ....... ಕೂ...... ಕೂ.......ಎಂದು ಹೇಳಬೇಕು

ನಂತರ ಎಲ್ಲರಿಗೂ ತೇದ ಗಂಧ ವಿತರಿಸಬೇಕು. ಬರುವ ಹುಣ್ಣಿಮೆ ದಿನ ಹಾಲೆಮರವನ್ನು ಕಿತ್ತು ಹರಿಯುವ ನೀರಿನ ಬದಿಯಲ್ಲಿಡಬೇಕು. ಕೆಲವು ಭಾಗಗಳಲ್ಲಿ 3 ದಿನಗಳ ನಂತರ ಮರ ತೆಗೆಯುತ್ತಾರೆ. ದೀಪಾವಳಿಯಲ್ಲಿ ಸೂತಕ ಬಂದರೆ ಬರುವ ಹುಣ್ಣಿಮೆಗೆ ದೀಪಾವಳಿ ಆಚರಣೆ ಮಾಡಬಹುದು

                               ******************************