ವೀಳ್ಯಶಾಸ್ತ್ರ (ವಧುವಿನ ಮನೆಯಲ್ಲಿ)
ಪರಿಕರಗಳು : ಕಾಲುದೀಪ,ಎಳ್ಳೆಣ್ಣೆ, ನೆಣೆಬತ್ತಿ, ಅಗರಬತ್ತಿ. ಚಾಪೆ 4, ಮಣೆ 2, ತಂಬಿಗೆ ನೀರು, ಹರಿವಾಣ 1, ವೀಳ್ಯದೆಲೆ 5, ಅಡಿಕೆ 1, ಹಿಡಿ ಬೆಳ್ಳಿಗೆ ಅಕ್ಕಿ, ತೇದ ಗಂಧ ಹಾಗೂ ತುಂಬೆ ಹೂ, ತುದಿ ಬಾಳೆಲ, ಉದ್ದಕ್ಕೆ ಒಡೆದ ಸ್ವಲ್ಪ ಅಡಿಕೆಹೋಳು
ಮದುವೆಗೆ ಸುಮಾರು ಒಂದು ವಾರ ಅಥವಾ ಹದಿನೈದು ದಿನಗಳ ಒಳಗೆ ವೀಳ್ಯಶಾಸ್ತ್ರವನ್ನು ಊರು ಗೌಡರ ಗಮನಕ್ಕೆ ತಂದು ನಿಶ್ಚಯ ಮಾಡಿಕೊಳ್ಳಬೇಕು. (ಅನಿವಾರ್ಯ ಕಾರಣಗಳಲ್ಲಿ ಮದರಂಗಿ ಶಾಸ್ತ್ರದ ದಿನ ವೀಳ್ಯಶಾಸ್ತ್ರ ಇಟ್ಟುಕೊಳ್ಳಬಹುದು. ವೀಳ್ಯಶಾಸ್ತ್ರವನ್ನು ಬೆಳಗಿನ ಸಮಯ ಮಾಡುವುದು ಸೂಕ್ತ)
ಉಭಯಸ್ತರು ನಿಶ್ಚಯಿಸಿದ ದಿನ ವಧುವಿನ ಮನೆಯಲ್ಲಿ ವೀಳ್ಯ ಶಾಸ್ತ್ರಕ್ಕೆ ಏರ್ಪಾಡು ಮಾಡಬೇಕು. ವಧುವಿನ ಮನೆಯವರು ಬಂಧು-ಬಾಂಧವರಿಗೆ, ಊರುಗೌಡರಿಗೆ 1 ಸೂಡಿ ವೀಳ್ಯದೆಲೆ, 5 ಅಡಿಕೆ ಹರಿವಾಣದಲ್ಲಿಟ್ಟು ವೀಳ್ಯಶಾಸ್ತ್ರಕ್ಕೆ ಕೇಳಿಕೊಳ್ಳಬೇಕು. ಅದರಂತೆ ವರನ ಕಡೆಯಿಂದಲೂ ಅವರ ಬಂಧು-ಬಾಂಧವರಿಗೆ, ಊರು ಗೌಡರಿಗೆ ವೀಳ್ಯ ಕೊಟ್ಟು ವೀಳ್ಯ ಶಾಸ್ತ್ರಕ್ಕೆ ಬರುವಂತೆ ಹೇಳಬೇಕು. (ವೀಳ್ಯಶಾಸ್ತ್ರಕ್ಕೆ ಹುಡುಗ ಹೋಗುವ ಕ್ರಮವಿರಲಿಲ್ಲ)
ವೀಳ್ಯಶಾಸ್ತ್ರದ ದಿನ ಸೋದರಮಾವ, ಊರು ಗೌಡರು, ಕುಟುಂಬಸ್ಥರು, ನೆಂಟರು ಇವರೆಲ್ಲ ಸಮಯಕ್ಕೆ ಮುಂಚಿತವಾಗಿ ಬಂದು ವರನ ಮನೆಯಲ್ಲಿ ಸೇರುತ್ತಾರೆ. ವೀಳ್ಯ ಕಟ್ಟಲು ಒಂದು ಕೈ ಚೀಲದಲ್ಲಿ ವೀಳ್ಯದೆಲೆ ಅದಕ್ಕೆ ನೀಟವಾಗಿ ಒಡೆದ ಅಡಕೆ ಹೋಳು, 2 ಹರಿವಾಣಗಳಿರಬೇಕು. ಹೊರಡುವ ಮೊದಲು ಮನೆಯ ಹಿರಿಯರು ದೇವರಿಗೆ ದೀಪ ಹಚ್ಚಿ ಕೈ ಮುಗಿದು ಮನೆಯಿಂದ ಹೊರಡಬೇಕು.
ವಧುವಿನ ಮನೆಯಲ್ಲಿ ಆಗಮಿಸಿದ ನೆಂಟರಿಗೆ ಕೈಕಾಲು ಮುಖ ತೊಳೆಯಲು ನೀರುಕೊಟ್ಟು ಸತ್ಕರಿಸುತ್ತಾರೆ. ನಂತರ ವೀಳ್ಯ ಶಾಸ್ತ್ರಕ್ಕೆ ತಯಾರಿ ಮಾಡುತ್ತಾರೆ. ವಧುವಿನ ಕಡೆಯ ಊರುಗೌಡರ ಉಸ್ತುವಾರಿಯಲ್ಲಿ ಚೌಕಿ ಹಾಸಿ (ಚೌಕಾಕಾರವಾಗಿ ನಾಲ್ಕು ದಿಕ್ಕಿನಿಂದ ನಾಲ್ಕು ಚಾಪೆ ಹಾಸುವುದು) ಮಧ್ಯೆ 2 ಮಣೆ, ತಂಬಿಗೆ ನೀರು, 1 ಹರಿವಾಣದಲ್ಲಿ 5 ವೀಳ್ಯದೆಲೆ 1 ಅಡಿಕೆ ಒಂದು ಹಿಡಿ ಬೆಳ್ತಿಗೆ ಅಕ್ಕಿ ಹಾಕಿಡಬೇಕು. ಕಾಲುದೀಪವನ್ನು ಪೂರ್ವಾಭಿಮುಖವಾಗಿ ಒಂದು ಹಿಡಿ ಬೆಳಗಿಸಬೇಕು. ತೇದ ಗಂಧ ಮತ್ತು ತುಂಬೆ ಹೂ ಕೊಡಿ (ತುದಿ) ಬಾಳೆ ಎಲೆಯಲ್ಲಿಡಬೇಕು. ಇದಾದ ನಂತರ ವಧುವಿನ ಮನೆಯ ಹಿರಿಯರು ಮತ್ತು ಊರುಗೌಡರು ತಂಬಿಗೆ ನೀರು ಹಿಡಿದು ವರನ ಕಡೆಯವರನ್ನು ಚೌಕಿಗೆ ಕುಳಿತುಕೊಳ್ಳಲು ಆಹ್ವಾನಿಸಿ ವಧುವಿನ ಕಡೆಯ ಊರು ಗೌಡರ ಸಮೇತ ಪೂರ್ವಾಭಿಮುಖವಾಗಿ ಕುಳಿತುಕೊಳ್ಳುವರು. ವರನ ಕಡೆಯ ಊರುಗೌಡರು ಚೌಕಿ ಬಳಿ ಬಂದು ಸೀಮೆ, ಗ್ರಾಮ ಮತ್ತು ಊರು, ಮನೆ ಹಾಗೂ ಮನೆ ಯಜಮಾನನ ಹೆಸರು ಹೇಳಿ ಇತ್ತಂಡದವರ ಒಪ್ಪಿಗೆ ಮೇರೆಗೆ ನಾವು ವೀಳ್ಯಶಾಸ್ತ್ರಕ್ಕಾಗಿ ಬಂದಿರುತ್ತೇವೆ, ಚೌಕಿಗೆ ಬರಲು ಮತ್ತು ಕುಳಿತುಕೊಳ್ಳಲು ಅನುಮತಿ ಕೊಡಿ ಎಂದು ಕೇಳುತ್ತಾರೆ. ಒಪ್ಪಿಗೆ ಪಡೆದು ತಂಬಿಗೆ ನೀರು ಮುಟ್ಟಿ ದೀಪಕ್ಕೆ ನಮಸ್ಕರಿಸಿ ಪಶ್ಚಿಮ ಭಾಗಕ್ಕೆ ಮುಖ ಮಾಡಿ ಕುಳಿತುಕೊಳ್ಳುವರು. ಉಳಿದವರು ಅವರವರ ಭಾಗಕ್ಕೆ ತಕ್ಕಂತೆ ಚೌಕಿ ಸುತ್ತ ಕುಳಿತುಕೊಳ್ಳುವರು. (ಉಭಯ ಕಡೆಗಳಿಂದ ಕನಿಷ್ಠ 5 ಜನರಿರಬೇಕು; ಮತ್ತು ಎಲ್ಲರೂ ತಲೆಗೆ ರುಮಾಲು ಸುತ್ತಬೇಕು. ತೇದ ಗಂಧವನ್ನು ಹಾಕಿಕೊಳ್ಳಬೇಕು).
1) ಕುಟುಂಬದ ಯಜಮಾನ, 2) ಸೋದರ ಮಾವ, 3) ಊರುಗೌಡರು 4) ಒತ್ತುಗೌಡರು ಇಲ್ಲದ ಪಕ್ಷದಲ್ಲಿ ಯಾರಾದರು. 5) ಊರಿನವರು.
No comments:
Post a Comment